Wednesday, 30 September 2009

ಆರ್ಕಿಟೆಕ್ಟ್ ಎಂದರೆ ಯಾರು ?

( ಆರ್ಕಿಟೆಕ್ಟ್ ವಿಲ್‌ಫ್ರೆಡ್ ಬೇಕರ್ ಅವರ ನೀತಿ, ನಿಲುವು, ಪರಿಸರ ಪ್ರೇಮ ಸ್ವಾರಸ್ಯಕರ. ಅವರ ಅನಿಸಿಕೆಗಳು ಇಲ್ಲಿವೆ)
ಈ ಪ್ರಶ್ನೆಗೆ ನಾನಾ ಉತ್ತರಗಳು ಇರಬಹುದು.
ನಿಘಂಟುಗಳ ಪ್ರಕಾರ ಆರ್ಕಿಟೆಕ್ಚರ್ ಅನ್ನು ಪ್ರಾಕ್ಟೀಸ್ ಮಾಡುವ ವ್ಯಕ್ತಿಯೇ ಆರ್ಕಿಟೆಕ್ಟ್. ಕಟ್ಟಡಗಳನ್ನು ನಿರ್ಮಾಣ ಮಾಡುವ ಕಲೆ ಮತ್ತು ವಿಜ್ಞಾನವೇ ಆರ್ಕಿಟೆಕ್ಚರ್ !
ನಾನೂ ಆರ್ಕಿಟೆಕ್ಟ್ ಅಂತ ಪ್ರಮಾಣ ಪತ್ರ ಪಡೆದ ನಂತರ ಎರಡರಿಂದ ಮೂರು ಆಫೀಸ್‌ನಲ್ಲಿ ಕೆಲಸ ಮಾಡಿದ್ದೆ. ಆದರೆ ಅದು ಡೆಡ್ಲಿ ಡಲ್ ಆಗಿತ್ತು. ಎರಡನೇ ಜಾಗತಿಕ ಯುದ್ಧದ ವೇಳೆ ನನಗೆ ಅದರಿಂದ ಮುಕ್ತಿ ದೊರೆಯಿತು. ಆಗ ಬ್ರಿಟನ್‌ನಿಂದ ಚೀನಾಗೆ ತೆರಳಿದ್ದೆ. ಕೆಲವು ವರ್ಷಗಳ ಕಾಲ ವೈದ್ಯಕೀಯ ತಂಡದಲ್ಲಿ ದುಡಿದ ನಂತರ ಭಾರತದ ಮಾರ್ಗವಾಗಿ ಇಂಗ್ಲೆಂಡ್‌ಗೆ ಹಿಂತಿರುಗಲು ಯತ್ನಿಸಿದೆ. ಹಡಗಿಗಾಗಿ ಮೂರು ತಿಂಗಳು ಕಾಯುವಂತಾಯಿತು. ಪ್ರತಿಯೊಬ್ಬರೂ ಭಾರತವನ್ನು ಬಿಡುವಂತೆ ನನಗೆ ಸಲಹೆ ನೀಡುತ್ತಿದ್ದರು. ಆದರೆ ಯಾರು ಏನೇ ಹೇಳಿದರೂ, ಭಾರತವನ್ನು ತೊರೆಯಲು ಮನಸ್ಸಿರಲಿಲ್ಲ. ಕೊನೆಗೆ ಇಲ್ಲಿಯೇ ನಿಂತೆ.
ಬ್ರಿಟನ್‌ನಲ್ಲಿ ನಾನು ಕಲಿತಿದ್ದ ಆರ್ಕಿಟೆಕ್ಚರಲ್ ಶಿಕ್ಷಣಕ್ಕೂ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ ಪಠ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದುವು. ನನ್ನ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸ್ಕೂಲ್ ಆಫ್ ಆರ್ಟ್ ಕೂಡ ಅವಿಭಾಜ್ಯವಾಗಿತ್ತು. ಬಣ್ಣ ಬಳಿಯುವವರು, ಶಿಲ್ಪಿಗಳು, ಕುಂಬಾರರು, ಮರದ ಕೆತ್ತನೆ ಕೆಲಸಗಾರರು, ಕುಸುರಿ ಕೆತ್ತನೆಯ ಗ್ಲಾಸ್‌ಗಳ ಕಿಟಿಕಿ ರಚಿಸುವವರ ಕಲಾವಿದರ ಜತೆ ಬೆರೆತು ಕಲಿಯುತ್ತಿದ್ದೆವು. ಸಾಯಂಕಾಲ ಕಲಾ ತರಗತಿಗೂ ಹಾಜರಾಗಬೇಕಿತ್ತು. ಮಣ್ಣಿನ ಮಡಕೆ, ಪಿಂಗಾಣಿ ಪಾತ್ರಗೆಳನ್ನು ರಚಿಸಲು ಕಲಿತಿದ್ದೆ. ಆದರೆ ತಿರುವನಂತಪುರಂನಲ್ಲಿ ಆರ್ಕಿಟೆಕ್ಚರ್ ಎನ್ನುವುದು ಎಂಜಿನಿಯರಿಂಗ್ ಕಾಲೇಜಿನ ಒಂದು ಶಾಖೆಯಾಗಿತ್ತು. ನನಗೆ ತಿಳಿದಂತೆ ಕಲಾ ಕಾಲೇಜಿಗೂ ಇದಕ್ಕೂ ಸಂಬಂಧ ಇರಲಿಲ್ಲ.
ನಾನು ನನ್ನದೇ ಮರ್ಗ ಹುಡುಕಲು ಯತ್ನಿಸಿದೆ. ಸೂಕ್ತವಾದ ಕಚೇರಿ ನಡೆಸಲಿಲ್ಲ. ನನ್ನ ಮಂಚದ ಪಕ್ಕದಲ್ಲಿ ಹಳೆಯ ಡ್ರಾಯಿಂಗ್ ಬೋರ್ಡ್ ಇತ್ತು. ನಾನು ಶಾಲೆಯಲ್ಲಿ ಕಲಿಯುವಾಗ ನನ್ನ ಜತೆಗಿದ್ದ ಬೋರ್ಡ್ ಅದಾಗಿತ್ತು. ಶಾಲೆಗೆ ಸೇರಿದ ಸಂದರ್ಭ ಅಣ್ಣ ಕೊಟ್ಟಿದ್ದ ಹಳೆಯ ಕಂಪಾಸ್ ಜೋಪಾನವಾಗಿತ್ತು. ನನ್ನ ಮಟ್ಟಿಗೆ ಗ್ರಾಹಕರ ಜತೆ ಕೂತು ವಿನ್ಯಾಸದ ಬಗ್ಗೆ ಚರ್ಚಿಸುವುದು ಹಾಗೂ ಅವರ ಬಗ್ಗೆ ಅರಿತುಕೊಳ್ಳುವುದು ಅತ್ಯಂತ ಆಸಕ್ತಿದಾಯಕವಾಗಿತ್ತು. ಗ್ರಾಹಕರು ಹೇಗೆ ಬದುಕುತ್ತಿದ್ದಾರೆ ? ಅವರ ಉದ್ಯೋಗ ಯಾವುದು ? ಅವರ ಕನಸಿನ ಮನೆ ಎಂತಹುದು ? ಎಂದು ತಿಳಿಯಲು ಯತ್ನಿಸುತ್ತಿದ್ದೆ. ಅವರ ಯೋಚನೆಯನ್ನು ಗ್ರಹಿಸಿಕೊಂಡು ವಿನ್ಯಾಸವನ್ನು ಕಾಗದದ ಮೇಲೆ ಬಿಡಿಸುವುದು ಥ್ರಿಲ್ ಅನ್ನಿಸುತ್ತಿತ್ತು. ನಂತರ ಅವರ ಬೇಕು, ಬೇಡಗಳನ್ನು ಗಮನಿಸಿ ಬದಲಾವಣೆ ಮಾಡುತ್ತಿದ್ದೆ. ಗ್ರಾಹಕನ ತೃಪ್ತಿಯೇ ಮೊದಲ ಗುರಿಯಾಗಿತ್ತು. ಕೆಲಸಕ್ಕೆ ಪ್ರೇರಣೆಯಾಗಿತ್ತು. ನೀವು ಗ್ರಾಹಕರ ಬಯಕೆಯ ಮನೆಯನ್ನು ಕಟ್ಟಬೇಕು. ನಿಮ್ಮ ಮನೆಯನ್ನಲ್ಲ ಎಂಬುದು ಗುರುಗಳ ಪಾಠವಾಗಿತ್ತು. ಟೂ-ಡೈಮೆನ್ಶನ್ ಡ್ರಾಯಿಂಗ್ಸ್ ಅನ್ನು ತ್ರೀ-ಡೈಮೆನ್ಶನ್ ಬಿಲ್ಡಿಂಗ್‌ಗೆ ಪರಿವರ್ತಿಸುವುದು ಅಷ್ಟೇ ಸ್ವಾರಸ್ಯಕರವಾಗಿತ್ತು. ರೇಖಾ ವಿನ್ಯಾಸ ಕಟ್ಟಡವಾಗಿ ರೂಪಾಂತರವಾಗುವ ವೇಳೆ ಸ್ಥಳದಲ್ಲಿ ನಾನಿದ್ದು ಆಸ್ವಾದಿಸುತ್ತಿದ್ದೆ. ಕ್ಯಾಮೆರಾದಲ್ಲಿ ಎಲ್ಲ ಪ್ರಕ್ರಿಯೆಗಳನ್ನುನ ಕ್ಲಿಕ್ಕಿಸುತ್ತಿದ್ದೆ. ನೆಗೆಟಿವ್ ತೆಗೆಯುತ್ತಿದ್ದೆ. ಆದರೆ ಪ್ರಿಂಟ್ ಹಾಕುತ್ತಿರಲಿಲ್ಲ. ಇದೊಂದು ಮೂರ್ಖತನದಂತೆ ಕಾಣಿಸುತ್ತಿತ್ತು. ಕೆಲವು ಸಲ ಏಣಿಯನ್ನು ಹತ್ತುವಾಗ ಹೆಚ್ಚು ವ್ಯೂ ಸಿಗುತ್ತಿತ್ತು. ಸಾಮಗ್ರಿಗಳ ಮೇಲೆ ಬಣ್ಣ ಬಳಿಯುವುದರ ಬದಲಿಗೆ ಸಾಮಗ್ರಿಗಳದ್ದೇ ಬಣ್ಣವನ್ನು ಅಧ್ಯಯನ ಮಾಡುತ್ತಿದ್ದೆ. ಇದಕ್ಕಾಗಿ ಕಲ್ಲು ಕೆತ್ತುವವರು ಹಾಗೂ ಇತರ ಕಾರ್ಮಿಕರ ಜತೆ ಕೆಲಸ ಮಾಡುತ್ತಿದ್ದೆ. ಸಾಮಗ್ರಿಗಳನ್ನು ಹೇಗೆ ಬಳಸಲು ಬಯಸುತ್ತಿದ್ದೇನೆ ಅಂತ ಅವರಿಗೆ ವಿವರಿಸುತ್ತಿದ್ದೆ. ಆದ್ದರಿಂದ ನನಗೆ ಡೆಸ್ಕ್ ವರ್ಕ್‌ಗಿಂತ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಭಾಗವಹಿಸುವುದು ಹೆಚ್ಚು ಮಹತ್ವಪೂರ್ಣವಾಗಿತ್ತು.
ವಿದ್ಯಾರ್ಥಿಯಾಗಿದ್ದಾಗ ಅದೊಂದು ಅಂಶವನ್ನು ನಮ್ಮ ಪ್ರೊಫೆಸರ್‌ಗಳು ನಾಟುವಂತೆ ಹೇಳಿದ್ದರು : ‘ ಆರ್ಕಿಟೆಕ್ಟ್ ಅನ್ನಿಸಿಕೊಂಡವನ ಮನಸ್ಸಿನಲ್ಲಿ ಕಟ್ಟಡದ ಪರಿಪೂರ್ಣ ಚಿತ್ರಣ ಇರಬೇಕು. ಕೇವಲ ವಿನ್ಯಾಸ ಸಿದ್ಧಪಡಿಸುವುದು ಮಾತ್ರ ಆತನ ಕೆಲಸವಲ್ಲ, ನಿರ್ಮಿಸಿದ ಮನೆಯಲ್ಲಿ ಗ್ರಾಹಕ ಹೇಗೆ ಸಂತೃಪ್ತಿಯಿಂದ ಬದುಕಬಲ್ಲ ಎಂಬುದನ್ನೂ ತಿಳಿದಿರಬೇಕು ’
ನಮ್ಮನ್ನು ಆರ್ಕೆಸ್ಟ್ರಾದ ಕಂಡಕ್ಟರ್ ಎಂದು ಅವರು ಬಣ್ಣಿಸುತ್ತಿದ್ದರು. ಆತನಿಗೆ ತನ್ನ ಸಂಗೀತ ತಂಡದ ಪ್ರತಿಯೊಂದೂ ಗೊತ್ತಿರಬೇಕು. ಪ್ರಸಿದ್ಧನಾದ ಕಂಡಕ್ಟರ್‌ಗೆ ತಂಡದ ಪ್ರತಿಯೊಂದು ಸಂಗೀತ ಸಾಧನವನ್ನೂ ಸಮಯಕ್ಕೆ ತಕ್ಕಂತೆ ನುಡಿಸಲು ತಿಳಿದಿರಬೇಕು. ನನ್ನ ಪ್ರಕಾರ ಆರ್ಕಿಟೆಕ್ಟ್ ಉತ್ತಮ ವ್ಯಕ್ತಿತ್ವವನ್ನು ಹೊಂದಿರಬೇಕು. ಆಗ ಆತನ ಕೆಲಸ ಕೂಡ ಪರಿಪೂರ್ಣವಾಗುತ್ತದೆ. ಚಿತ್ರ ಕಲಾಕಾರ ಅಥವಾ ಶಿಲ್ಪಿಯ ಕಲಾಕೃತಿಯನ್ನು ಆಸಕ್ತಿ ಇರುವವರು ಖರೀದಿಸಿ ತಮ್ಮ ಕೊಠಡಿಯಲ್ಲಿ ಇಡುತ್ತಾರೆ. ಬೇಕಾದವರು ಮಾತ್ರ ನೋಡಬಹುದು. ಆದರೆ ಆರ್ಕಿಟೆಕ್ಟ್ ಕಟ್ಟುವ ಮನೆ ದಾರಿಯಲ್ಲಿ ಸಂಚರಿಸುವ ಎಲ್ಲರಿಗೂ ಕಾಣುತ್ತದೆ. ಆದ್ದರಿಂದ ಆರ್ಕಿಟೆಕ್ಟ್ ತಮ್ಮ ಕೃತಿ ಇತರರಿಗೆ ಆನಂದದಾಯಕವಾಗಿರುತ್ತದೆಯೇ ? ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿದೆಯೇ ಎಂದು ತಮ್ಮನ್ನೇ ಕೇಳಿಕೊಳ್ಳಬೇಕು. ವ್ಯಕ್ತಿತ್ವ ವ್ಯಕ್ತಿಯನ್ನು ರೂಪಿಸುತ್ತದೆ ಅಂತ ವಾಡಿಕೆಯ ಮಾತಿದೆ. ಆದರೆ ವ್ಯಕ್ತಿತ್ವ ಉತ್ತಮ ಆರ್ಕಿಟೆಕ್ಚರ್ ಅನ್ನೂ ರೂಪಿಸುತ್ತದೆ -ವಿಲ್‌ಫ್ರೆಡ್ ಬೇಕರ್.

Tuesday, 29 September 2009

ವಾಟ್ ಆನ್ ಐಡಿಯಾ...ನೀವೇಕೆ ಸೈಕಲ್ ಟೂರಿಸಂ ಮಾಡಬಾರದು ?

ಊಟಿಯಲ್ಲಿ ನಿಸರ್ಗದ ವಿಹಂಗಮ ದೃಶ್ಯವನ್ನು ಸವಿಯಲು ಸೈಕಲ್ ಬೇಕು ಎಂದು ಎಷ್ಟೋ ಸಲ ಅನ್ನಿಸುತ್ತದೆ. ಅಲ್ಲಿನ ವಿಶಾಲ ಕೆರೆಗಳ ಬದಿಯಲ್ಲಿ ಸಾಯಂಕಾಲದ ಹೊತ್ತು ಬಾಡಿಗೆಗೆ ಸುಲಭವಾಗಿ ಸಿಗುವ ಸೈಕಲನ್ನೇರಿ ಒಂದು ಸುತ್ತಾಟ ಬಂದರೆ ಅನುಭವವನ್ನು ಜೀವಮಾನದಲ್ಲಿ ಮರೆಯಲು ಸಾಧ್ಯವಾಗುವುದಿಲ್ಲ. ಪ್ರದೇಶ ಅಪರಿಚಿತವಾಗಿದ್ದರೂ, ನಮ್ಮೂರಿನಲ್ಲೇ ಸೈಕಲ್ ಹೊಡೆದಂತಾಗುತ್ತದೆ. ಬಾಲ್ಯದ ದಿನಗಳಿಗೆ ನೆನಪು ಜಾರುತ್ತದೆ..ನಿಸರ್ಗದೊಡನೆ ಒಂದಾಗಿ ರಸ ನಿಮಿಷಗಳನ್ನು ಕಳೆಯಬೇಕಾದರೆ ಸೈಕಲ್‌ಗಿಂತ ಉತ್ತಮ ವಾಹನ ಮತ್ತೊಂದಿಲ್ಲ. ಶರೀರಕ್ಕೂ ವ್ಯಾಯಾಮ ಸಿಗುತ್ತದೆ..ಹಾಗಾದರೆ ಕೇವಲ ಊಟಿಯಲ್ಲಿ ಮಾತ್ರ ಇಂತಹ ಅನುಕೂಲ ಯಾಕೆ ? ಮೈಸೂರಿನ ಚಾಮುಂಡಿಬೆಟ್ಟ, ಮಂಡ್ಯದ ಕೃಷ್ಣ ರಾಜಸಾಗರ, ಶಿವನ ಸಮುದ್ರದಲ್ಲಿ ಇಂಥ ಅನುಕೂಲ ಯಾಕಿಲ್ಲ ? ಯಾಕೆಂದರೆ ಸೈಕಲ್ ಟೂರಿಸಂ ಅನ್ನುವುದು ಇನ್ನೂ ನಮ್ಮಲ್ಲಿ ಬೆಳೆದಿಲ್ಲ. ಅಪವಾದಕ್ಕೆಂಬಂತೆ ಎಲ್ಲೋ ಒಂದೆರಡು ಕಡೆ ಇರಬಹುದು, ಅಷ್ಟೇ. ಆದರೆ ಪ್ರತಿಯೊಂದು ಊರಿನಲ್ಲಿಯೂ ವೈವಿಧ್ಯಮಯ, ವೀಕ್ಷಣೆಗೆ ಸೂಕ್ತವಾದ ತಾಣಗಳು ನಮ್ಮಲ್ಲಿವೆ. ಅಲ್ಲೆಲ್ಲ ಸೈಕಲ್ ಟೂರಿಸಂ ಅನ್ನು ಉದ್ಯಮದಂತೆ ಬೆಳೆಸಲು ವಿಪುಲ ಅವಕಾಶವಿದೆ. ಆದರೆ ಇಂಥ ಐಡಿಯಾವನ್ನು ಜನಪ್ರಿಯಗೊಳಿಸಬೇಕಷ್ಟೇ.
ರಾಜ್ಯದ ವೈಶಿಷ್ಟ್ಯವೇನೆಂದರೆ ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಒಂದೆರಡು ಗಂಟೆ ಪ್ರಯಾಣಿಸಿದರೆ, ಆಯಾ ಭಾಗದಲ್ಲಿನ ಹಳ್ಳಿಗಳ ಲೋಕ ತೆರೆದುಕೊಳ್ಳುತ್ತದೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿ ನಿಜಕ್ಕೂ ಪರಿಸರವನ್ನು, ವೈವಿಧ್ಯಮಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಸೈಕಲ್ ಸವಾರಿ ಮಾಡಬೇಕು. ನಿಸ್ಸಂದೇಹವಾಗಿ ಸೈಕಲ್ ಟೂರಿಸಂ ಅನ್ನು ಬೆಳೆಸಲು ಸಮೃದ್ಧ ಅವಕಾಶ ನಮ್ಮಲ್ಲಿದೆ. ಇದರಿಂದ ಪ್ರವಾಸಿ ತಾಣಗಳ ಸುತ್ತುಮುತ್ತಲಿನ ಹಳ್ಳಿಗರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಪ್ರವಾಸಿಗರಿಗೆ ಹೊಸ ಮಿತವ್ಯಯದಲ್ಲಿ ಹೊಸ ಅನುಭವವಾಗುತ್ತದೆ. ವಿದೇಶಗಳ ಪ್ರವಾಸೋದ್ಯಮ ವಲಯದಲ್ಲಿ ಇಂತಹ ಸೈಕಲ್ ಪ್ರವಾಸವೇ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಮುಖ್ಯವಾದ ಲಕ್ಷಣವೇ ವಿನೂತನ ಅನುಭವ, ಮೋಜು ಮತ್ತು ಸ್ವಾರಸ್ಯಕರ. ಉದಾಹರಣೆಗೆ ಬೆಂಗಳೂರಿನಲ್ಲಿ ಸಮಾ ದುಡಿಯುವ ಮಂದಿ ವಾರಾಂತ್ಯದಲ್ಲಿ ಸುತ್ತುಮುತ್ತಲಿನ ಪ್ರವಾಸಿ ತಾಣಗಳಿಗೆ ಹಾಗೂ ಸಮೀಪದ ಹಳ್ಳಿಗಳಿಗೆ ಹೋಗುತ್ತಾರೆ. ಎಷ್ಟೋ ಮಂದಿ ಬೈಕನ್ನೇರಿ ಗುಂಪಾಗಿ ಮಂಡ್ಯ, ಶ್ರೀರಂಗಪಟ್ಟಣ, ಶಿವನ ಸಮುದ್ರ, ಮಧುಗಿರಿ ಅಂತ ತೆರಳುತ್ತಾರೆ. ಅಲ್ಲಿನ ಹಳ್ಳಿಗರು ಸೈಕಲ್ ಪ್ರವಾಸವನ್ನು ಆಯೋಜಿಸಿದರೆ ಆದಾಯ ಖಚಿತ.
ಸೈಕಲ್ ಜತೆಗೆ : ಅಂದಹಾಗೆ ಬರೀ ಸೈಕಲ್ ಮಾತ್ರ ಕೊಟ್ಟು ಬಿಡುವುದು ಸರಿಯಲ್ಲ. ಆ ಸೈಕಲಿನಲ್ಲಿ ಸವಾರಿ ಸುಲಭವಾಗಲು ಗೇರ್ ಇರಲಿ. ಕುಡಿಯುವ ನೀರು ಅಥವಾ ತಂಪು ಪಾನೀಯ ಇಡಲು ಚೌಕಟ್ಟಿರಲಿ. ಕುರುಕಲು ತಿಂಡಿ, ಊಟ, ತಿನಿಸನ್ನು ಇಡಲು ಜಾಗವಿರಲಿ. ಸೈಕಲ್‌ನಲ್ಲೇ ನೋಡಬಹುದಾದ ಸ್ಥಳಗಳ ಪಟ್ಟಿ ತಯಾರಿಸಿ. ವೆಬ್‌ಸೈಟ್, ಬ್ಲಾಗ್, ಮೊಬೈಲ್, ಎಸ್ಸೆಮ್ಮೆಸ್ ಮೂಲಕ ಬಿಸಿನೆಸ್ ಅನ್ನು ಪ್ರಚಾರ ಮಾಡಿ. ಬೇಕಾದರೆ ಟ್ರಾವೆಲ್ ಏಜೆಂಟ್, ಬ್ರೋಕರ್‌ಗಳ ಸಹಯೋಗವನ್ನು ಪಡೆದು ಮಾರುಕಟ್ಟೆಯನ್ನು ಸೃಷ್ಟಿಸಿ. ಕೆಲವರಿಗೆ ಬೆಟ್ಟ ಗುಡ್ಡಗಳನ್ನು ಸೈಕಲ್‌ಮೂಲಕ ಹತ್ತುವ ಸಾಹಸ ಪ್ರವೃತ್ತಿ ಇರುತ್ತದೆ. ಇನ್ನು ಕೆಲವರಿಗೆ ಸುಮ್ಮನೆ ಅಲೆಯುವುದೇ ಮುದ ಕೊಡುತ್ತದೆ. ಅಂತಹವರನ್ನೆಲ್ಲ ಆಕರ್ಷಿಸುತ್ತದೆ ಸೈಕಲ್..

Monday, 28 September 2009

ವಾಟ್ ಆನ್ ಐಡಿಯಾ !ಏಸಿ ಕಾರನ್ನು ಹಂಚಿಕೊಳ್ಳಿ..ಆಟೊ ದರದಲ್ಲಿ ಪ್ರಯಾಣಿಸಿ..

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ. ನಗರವೇ ಆಗಲಿ, ಹಳ್ಳಿಯೇ ಆಗಲಿ, ನಮ್ಮ ಸುತ್ತಮುತ್ತ ಬಿಸಿನೆಸ್ ಮಾಡಲು ಸಾಕಷ್ಟು ಐಡಿಯಾಗಳಿವೆ. ಅವುಗಳನ್ನೇಕೆ ಹಂಚಿಕೊಳ್ಳಬಾರದು ? ಈ ಏಕೈಕ ಉದ್ದೇಶದಿಂದ ಇನ್ನು ಮುಂದೆ ‘ ವಾಟೆನ್ ಐಡಿಯಾ ’ ಶೀರ್ಷಿಕೆಯ ಅಡಿಯಲ್ಲಿ ಲೇಖನ ಮಾಲೆ ಬರೆಯುತ್ತೇನೆ. ನಿಮ್ಮ ಅನಿಸಿಕೆಯನ್ನು ದಯವಿಟ್ಟು ತಿಳಿಸುವಿರಾ. ಬನ್ನಿ, ನಿರುದ್ಯೋಗ ಅಂತ ನಿರಾಶೆಯಲ್ಲಿರುವ ಸಹೋದರ, ಸಹೋದರಿಯರ ನೋವಿಗೆ ಸ್ಪಂದಿಸೋಣ. ಕೆಲವು ಐಡಿಯಾಗಳನ್ನು ಹಂಚೋಣ. ಕೆಲಸದಲ್ಲಿ ಮೇಲು-ಕೀಳೆಂಬ ತಾರತಮ್ಯವನ್ನು ಹೋಗಲಾಡಿಸೋಣ...)

ದೀಪೇಶ್ ಅಗರವಾಲ್ (೩೦) ಮೊಟೊರೊಲಾ ಇಂಡಿಯಾದಲ್ಲಿ ಎಂಜಿನಿಯರಿಂಗ್ ಮ್ಯಾನೇಜರ್ ಆಗಿದ್ದರು. ಆದರೆ ಹೊಸತೊಂದು ಐಡಿಯಾ ಹೊಳೆದ ನಂತರ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಕಾರನ್ನು ಹಂಚಿಕೊಳ್ಳಿ, ಉಳಿತಾಯ ಮಾಡಿರಿ ಎನ್ನುವುದೇ ಅಗರವಾಲ್ ಸೂತ್ರವಾಗಿತ್ತು.
ಬಾಡಿಗೆಯ ಕಾರುಗಳು ದುಬಾರಿ. ಆಟೊ ರಿಕ್ಷಾಗಳು ಸುಲಿಯುತ್ತವೆ. ಬಸ್ಸುಗಳು ಕಿಕ್ಕಿರಿದು ಕಿರಿಕಿರಿ ಎನಿಸುತ್ತವೆ. ಸ್ವಂತ ಕಾರಿನಲ್ಲಿ ಹೋಗುವುದಿದ್ದರೂ ಟ್ರಾಫಿಕ್ ಇದ್ದರೆ ಏನು ಮಾಡಬಹುದು ? ಎಷ್ಟೋ ಕಡೆ ಪಾರ್ಕಿಂಗ್ ಸಮಸ್ಯೆ ಬೇರೆ ಕಾಡುತ್ತದೆ. ಹಾಗಾದರೆ ಇನ್ನೋವಾದಂತ ಹವಾನಿಯಂತ್ರಿತ ಕಾರಿನಲ್ಲಿ, ಆಟೊ ರಿಕ್ಷಾದ ದರದಲ್ಲಿ ಹೋಗಲು ಸಾಧ್ಯವಾದರೆ ? ಇದು ಸಾಧ್ಯ ಎನ್ನುತ್ತಾರೆ ಅಗರವಾಲ್.
ಭಾರತದ ನಗರಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗುತ್ತಿದೆ. ಜತೆಗೆ ಪರಿಸರ ಮಾಲಿನ್ಯ, ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿದೆ. ಹೀಗಿರುವಾಗ ಕ್ಯಾಬ್ ಅನ್ನು ಹಂಚಿಕೊಂಡರೆ ಲಾಭದಾಯಕವಾಗಬಹುದಲ್ಲವೇ ಎಂದು ಅಗರವಾಲ್ ಕಳೆದ ವರ್ಷ ಸ್ನೇಹಿತ ಅಮಿತ್ ಗುಪ್ತಾ ಜತೆ ಚರ್ಚಿಸಿದರು. ಅದರ ಫಲವಾಗಿ ಹುಟ್ಟಿಕೊಂಡಿದ್ದೇ ರೈಡ್‌ಇನ್‌ಸಿಂಕ್ ಕಂಪನಿ. ಕಳೆದ ಏಪ್ರಿಲ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನ (ಐಬಿಎಸ್ ) ವಿದ್ಯಾರ್ಥಿಗಳಿಗೆ ಸೇವೆ ಒದಗಿಸಿದರು. ೧೨೦ ವಿದ್ಯಾರ್ಥಿಗಳು ೬೦ ಕ್ಯಾಬ್‌ಗಳನ್ನು ಹಂಚಿಕೊಂಡರು. ಪರಿಣಾಮ ? ಒಂದೇ ದಿನ ೩೬ ಸಾವಿರ ರೂ. ಹಾಗೂ ೨೦೦ ಲೀಟರ್ ಪೆಟ್ರೋಲ್ ಉಳಿತಾಯವಾಯಿತು. ಈ ಪ್ರಯೋಗ ಯಶಸ್ವಿಯಾಗಿದ್ದೇ ತಡ, ಅಗರವಾಲ್ ಪೂರ್ಣ ಪ್ರಮಾಣದಲ್ಲಿ ಉದ್ಯಮಿಯಾಗಲು ನಿರ್ಧರಿಸಿದರು.
ಟ್ಯಾಕ್ಸಿ ಚಾಲಕರ ಜತೆ ಒಪ್ಪಂದ ಮಾಡಿಕೊಂಡಿರುವ ರೈಡ್‌ಇನ್‌ಸಿಂಕ್‌ಗೆ ಹೈದರಾಬಾದ್‌ನಲ್ಲಿ ೧೭೩ ಮಂದಿ ನೋಂದಾಯಿತ ಬಳಕೆದಾರರಿದ್ದಾರೆ. ವಿಮಾನ ನಿಲ್ದಾಣ ಮತ್ತು ನಗರದ ನಡುವೆ ಸಂಚಾರಕ್ಕೆ ಕಂಪನಿಯ ಸೇವೆ ಬಳಸುತ್ತಿದ್ದಾರೆ. ಕಂಪನಿಯ ಸೇವೆಯನ್ನು ಬೆಂಗಳೂರು, ದಿಲ್ಲಿ,ಮುಂಬಯಿ, ಪುಣೆಗೆ ವಿಸ್ತರಿಸುವ ಯೋಚನೆ ಅವರಿಗಿದೆ.
ಒಂದು ಕಾರಿನಲ್ಲಿ ಇಬ್ಬರು ಹಂಚಿಕೊಂಡು ಹೋದಾಗ ವೆಚ್ಚ ಅರ್ಧಕ್ಕಿಳಿಯುತ್ತದೆ. ಆದರೆ ತನ್ನದೇ ಮಾರ್ಗದಲ್ಲಿ, ಅದೇ ಸಮಯದಲ್ಲಿ ಹೋಗುವ ಮತ್ತೊಬ್ಬ ಸಹ ಯಾತ್ರಿಕನನ್ನು ಪತ್ತೆ ಹಚ್ಚಬೇಕು. ಕಾರಿನ ವ್ಯವಸ್ಥೆ ಹಾಗೂ ಇಬ್ಬರಿಗೂ ಮಾಹಿತಿ ಒದಗಿಸುವ ಅನುಕೂಲ ಇರಬೇಕು. ಅಂತಹ ವ್ಯವಸ್ಥೆಯನ್ನು ರೈಡ್‌ಇನ್‌ಸಿಂಕ್ ಒದಗಿಸುತ್ತದೆ.
ಇದು ಹೇಗೆ ? ಕಂಪನಿ ಮೊಬೈಲ್/ ವೆಬ್ ಆಧಾರಿತ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಸಹ ಪ್ರಯಾಣಿಕರನ್ನು ಗುರುತಿಸಿ, ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸಿ ಪ್ರಯಾಣ ವೆಚ್ಚವನ್ನು ಅರ್ಧಕ್ಕಿಳಿಸುತ್ತದೆ. ಒಂದು ವೇಳೆ ಗ್ರಾಹಕನಿಗೆ ಸಹ ಪ್ರಯಾಣಿಕ ಸಿಗದೇ ಇದ್ದಲ್ಲಿ ಡಿಸ್ಕೌಂಟ್ ದರದಲ್ಲಿ ಪ್ರತ್ಯೇಕ ಕ್ಯಾಬ್ (ಟೊಯೊಟಾ ಇನ್ನೋವಾ ) ಅನ್ನು ಕಂಪನಿ ನೀಡುತ್ತದೆ. ಇದರಿಂದ ಬಳಕೆದಾರನಿಗೆ ಪ್ರಯಾಣದ ವೆಚ್ಚ ಶೇ.೫೦ಕ್ಕೆ ಇಳಿಯುತ್ತದೆ. ಉದಾಹರಣೆಗೆ ಏರ್‌ಪೋರ್ಟ್-ಹೈದರಾಬಾದ್/ಸಿಕೆಂದರಾಬಾದ್ ಮಧ್ಯೆ ಕ್ಯಾಬ್ ಹಂಚಿಕೆಯಲ್ಲಿ- ೨೫೦ ರೂ. ಸಾಕು. ಆದರೆ ಪ್ರತ್ಯೇಕ ಕ್ಯಾಬ್‌ನಲ್ಲಿ- ೩೯೦ ರೂ. ಮತ್ತು ೩೯ ಕಿ.ಮೀ ನಂತರ ಪ್ರತಿ.ಕಿ.ಮೀಗೆ ರೂ. ೧೦. ನೀಡಬೇಕಾಗುತ್ತದೆ. ಇಬ್ಬರು ವ್ಯಕ್ತಿಗಳು ಮಾತ್ರ ಕ್ಯಾಬ್ ಹಂಚಿಕೊಳ್ಳುವುದರಿಂದ ಆರಾಮದಾಯಕ. ಟ್ರಾಫಿಕ್ ಹಾಗೂ ಪರಿಸರ ಮಾಲಿನ್ಯ ಶಮನ ನಿಟ್ಟಿನಲ್ಲಿ ಕೊಡುಗೆ ಸಲ್ಲಿಸಿದಂತಾಗುತ್ತದೆ. ಬೆಂಗಳೂರಿನಲ್ಲೇಕೆ ಇಂಥ ಪದ್ಧತಿ ಜಾರಿಯಾಗಕೂಡದು ? ಹಾಗೆ ನೋಡಿದರೆ ಎಲ್ಲ ಕಡೆಗಳಲ್ಲೂ ಸಾರಿಗೆಯಲ್ಲಿ ಇಂಥ ಪ್ರಯೋಗ ಸಾಧ್ಯವಿದೆಯಲ್ಲವೇ.


Thursday, 24 September 2009

ಬೈಲೈನ್ ಬಗ್ಗೆ ವೊಡಾಫೋನ್ ನಾರಾಯಣನ್ ಹೇಳಿದ್ದು ಮತ್ತು ಕಪಾಡಿಯಾ

ಕೆಲವು ದಿನಗಳ ಹಿಂದೆ ಕೋರಮಂಗಲಕ್ಕೆ ಹೋಗಿದ್ದೆ. ಮಾರುತಿ ಇನ್ಫೋಟೆಕ್ ಸೆಂಟರ್‌ನಲ್ಲಿರುವ ವೊಡಾಫೋನ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಕೆ ಶಂಕರ ನಾರಾಯಣನ್ ಅವರನ್ನು ಭೇಟಿಯಾಗಿದ್ದೆ. ತಮಿಳುನಾಡಿನ ಅವರು ಚೆನ್ನಾಗಿ ಮಾತನಾಡುತ್ತಾರೆ. ತಿಳಿಯಾದ ಹಾಸ್ಯ ಬೆರೆತ ದನಿಯಲ್ಲಿ. ಕಂಪನಿಯ ಸುದ್ದಿ ಸಮಾಚಾರದ ಬಗ್ಗೆ ಹೇಳಿದರು. ಮಾತಿನ ಮಧ್ಯೆ ಹೇಳಿದ್ರು- ನೀವು ಚೆನ್ನಾಗಿ ಮನಮುಟ್ಟುವಂತೆ ಬರೆದರೆ ಲಕ್ಷಾಂತರ ಓದುಗರಿಗೆ ಸರಳವಾಗಿ ಅರ್ಥವಾಗುತ್ತೆ. ನಿಮಗೆ ಬಿಟ್ಟರೆ ಬೇರೆ ಯಾರಿಗೂ ಸುದ್ದಿ ಹೇಳಿಲ್ಲ. ಇಡೀ ಇಂಡಿಯಾದಲ್ಲಿ ಇನ್ನುಮುಂದೆ ಕೇವಲ ನಿಮಿಷಕ್ಕೆ ೫೦ ಪೈಸೆ ವೆಚ್ಚದಲ್ಲಿ ವೊಡಾಫೋನ್‌ನಿಂದ ಮೊಬೈಲ್/ಸ್ಥಿರವಾಣಿಗೆ ಕಾಲ್ ಮಾಡಬಹುದು...ನಾಳೆ ಜಾಹೀರಾತು ಕೊಡುತ್ತೇವೆ. ಈವತ್ತೇ ಬರೆದು ನೀವು ಬೈ ಲೈನ್ ಪಡೆದುಕೊಳ್ಳಬಹುದು ಅಲ್ಲವಾ... ಎಂದರು.
ಅದೇ ಕಚೇರಿಯಲ್ಲಿ ಧ್ರುತಿ ಕಪಾಡಿಯಾ ಕೃಷ್ಣನ್ ಎಂಬ ಗುಜರಾತ್ ಮೂಲದ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಅವರು ಕಂಪನಿಯ ಮಾರ್ಕೆಟಿಂಗ್ ಕಮ್ಯುನಿಕೇಶನ್ ವಿಭಾಗದಲ್ಲಿ ಡೆಪ್ಯುಟಿ ಮ್ಯಾನೇಜರ್. ಸದಾ ಹಸನ್ಮುಖಿ. ಕಾರ್ಪೊರೇಟ್ ಕಂಪನಿಯಲ್ಲಿ ಕನ್ನಡ ಗೊತ್ತಿದ್ದವರೂ ಮಾತನಾಡುವುದಿಲ್ಲ. ಹೀಗಿರುವಾಗ ಕಪಾಡಿಯಾ ಕನ್ನಡದಲ್ಲಿ ಮಾತನಾಡಿದ್ದು ಖುಷಿಗೆ ಕಾರಣವಾಯಿತು.

ಒಂದು ಶಾಲೆಯ ಮಕ್ಕಳ ಬ್ಲಾಗು..

ಕಾಸರಗೋಡಿನ ನೀರ್ಚಾಲಿನಲ್ಲಿರುವ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ನನ್ನ ಮಿತ್ರ ರವಿ ಶಂಕರ ದೊಡ್ಡ ಮಾಣಿ ಅಧ್ಯಾಪಕನಾಗಿದ್ದಾನೆ. ಸಲೀಸಾಗಿ ಓದಿಸಿಕೊಂಡು ಹೋಗುವ ಬರವಣಿಗೆಯ ಕಲೆ ಕೂಡ ಅವರಿಗೆ ಇದೆ. ಶಾಲೆಯಲ್ಲಿ ಬ್ಲಾಗ್ ರಚಿಸಿ ಉಪಯುಕ್ತ ಹಾಗೂ ಸ್ವಾರಸ್ಯಕರ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ನಾಡಿನ ಅನೇಕ ಪತ್ರಿಕೆಗಳು, ಕೇರಳದ ಪತ್ರಿಕೆಗಳು, ಟಿ.ವಿ ಚಾನೆಲ್‌ಗಳ ಗಮನವನ್ನು ಈ ಬ್ಲಾಗ್ ಸೆಳೆದಿದೆ. ಮನಸ್ಸು ಮಾಡಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಬ್ಲಾಗನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ತಾಜಾ ನಿದರ್ಶನವಿದು. ಬಯಲು ಪ್ರವಾಸದ ಅಂಗವಾಗಿ ಇತ್ತೀಚೆಗೆ ಶಾಲೆಯ ಮಕ್ಕಳು ನೀರ್ಚಾಲು ವಾಷೆ ಸತ್ಯ ನಾರಾಯಣ ಭಟ್ಟರ ಮನೆಗೆ ಹೋಗಿ ಹಳೆಯ ಕಾಲದ ಅಳತೆ ಮಾನಗಳ ಬಗ್ಗೆ ಮಾಹಿತಿ ಪಡೆದಿದ್ದರು. ಆ ಚಿತ್ರವನ್ನು ಕಂಡು ನನಗೂ ಬಾಲ್ಯದ ಶಾಲೆಯ ದಿನಗಳು ಮತ್ತು ಆವಾಗ ಕೈಗೊಳ್ಳುತ್ತಿದ್ದ ಚುಟುಕು ಪ್ರವಾಸಗಳು ನೆನಪಾದವು...ಬಿಡುವಿದ್ದಾಗ ಭೇಟಿ ಕೊಡಿ http://mschsnirchal.blogspot.com

Wednesday, 23 September 2009

ಲೈಫ್‌ಸ್ಟೈಲ್‌ನಲ್ಲಿ ಮಾಡೆಲ್‌ಗಳ ನಗು..

ಬೆಂಗಳೂರಿನ ಗರುಡಾ ಮಾಲ್ ಸಮೀಪ ಲೈಫ್ ಸ್ಟೈಲ್ ಇದೆಯಲ್ಲವೇ, ನಿನ್ನೆ ಅಲ್ಲಿಗೆ ಹೋಗಿದ್ದೆ. ಭಾರತಕ್ಕೆ ಪದಾರ್ಪಣೆ ಮಾಡಿ ೧೦ ವರ್ಷ ಭರ್ತಿಯಾದ್ದರಿಂದ ಸಂಭ್ರಮದ ವರ್ಣರಂಜಿತ ಸಮಾರಂಭವನ್ನು ಆಯೋಜಿಸಿದ್ದರು. ಸೌಂದರ್ಯವರ್ಧಕ ಸಾಧನಗಳು, ಫ್ಯಾಷನ್ ಉಡುಪು, ಪಾದರಕ್ಷೆ, ಸೆಂಟು, ಮಕ್ಕಳ ಆಟಿಕೆ, ಉಡುಗೊರೆ, ಗೃಹಾಲಂಕಾರದ ವಸ್ತುಗಳು, ಪೀಠೋಪಕರಣಗಳ ಮಾರಾಟ ಮಳಿಗೆಯದು. ೧೦ನೇ ವರ್ಷಾಚರಣೆಯ ಪ್ರಯುಕ್ತ ಗ್ರಾಹಕರಿಗೆ ನಾನಾ ಬಗೆಯ ಉಡುಗೊರೆಗಳನ್ನೂ ಕಂಪನಿ ಪ್ರಕಟಿಸಿದೆ. ಆದರೂ ಕೈಯಲ್ಲಿ ಸಾವಿರಾರು ರೂಪಾಯಿ ದುಡ್ಡಿದ್ದರೆ ಮಾತ್ರ ಏನಾದರೂ ಶಾಪಿಂಗ್ ಮಾಡಬಹುದು. ಆದರೂ ವಿಂಡೋ ಶಾಪಿಂಗ್ ಮಾಡಬಹುದು. ಇರಲಿ. ಕಾರ್ಯಕ್ರಮದಲ್ಲಿ ಸೂಟು ಬೂಟುಧಾರಿಗಳಾದ ಕಂಪನಿಯ ಪ್ರತಿನಿಗಳು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಇದಕ್ಕೂ ಮುನ್ನ ವೇದಿಕೆಯ ಮೇಲೆ ಪರದೆಯಂತಹ ರಚನೆ ಸರಿಯಿತು. ಆಗ ಬಿಗಿಯಾದ ಉಡುಪು ಧರಿಸಿದ್ದ ಮಾಡೆಲ್‌ಗಳು ನಗುತ್ತಾ ಲೈಫ್‌ಸ್ಟೈಲ್‌ನ ೧೦ನೇ ವರ್ಷಾಚರಣೆಯ ಲಾಂಛನವನ್ನು ಪ್ರದರ್ಶಿಸಿದರು. ಕಂಪನಿ ಪ್ರತಿನಿಗಳ ಪಕ್ಕ ವೈಯಾರದಲ್ಲಿ ಕ್ರಮಬದ್ಧವಾಗಿ ನಗುತ್ತ ನಿಂತರು. ಇವರನ್ನು ಕಂಡು ಫೊಟೋಗ್ರಾಫರುಗಳಂತೂ ತಾ ಮುಂದು ತಾಮುಂದು ಎಂಬಂತೆ ಕ್ಯಾಮರಾಗಳನ್ನು ಕ್ಲಿಕ್ಕಿಸಿದರು. ಕೆಲವು ನಿಮಿಷಗಳ ನಂತರ ರೂಪದರ್ಶಿಗಳು ನಗುವುದನ್ನು ನಿಲ್ಲಿಸಿ ತೆರೆಯ ಮರೆಯಲ್ಲಿ ಕುರ್ಚಿಯಲ್ಲಿ ಆಸೀನರಾದರು. ಭಾಷಣಗಳೆಲ್ಲ ಮುಕ್ತಾಯವಾಗುವ ಹೊತ್ತಿನಲ್ಲಿ ಮತ್ತಿಬ್ಬರು ಟಿ.ವಿ ಚಾನೆಲ್‌ನವರು ಬಂದರು. ಅವರಿಗೂ ಚಿತ್ರ ಬೇಕಿತ್ತು. ಸರಿ, ಮಾಡೆಲ್‌ಗಳಿಗೆ ಬುಲಾವ್ ಹೋಯಿತು. ತಟ್ಟನೆ ಕುರ್ಚಿಯಿಂದ ಎದ್ದ ಮಾಡೆಲ್‌ಗಳು ಲಾಂಛನವನ್ನು ಮುಟ್ಟುತ್ತ ಮತ್ತೆ ಪಳ ಪಳ ಹಲ್ಲುಗಳನ್ನು ಪ್ರದರ್ಶಿಸಿ ನಕ್ಕರು. ಕ್ಯಾಮರಾ ಸುಮ್ಮನಾದ ನಂತರ ಅವರ ನಗು ಕೂಡ ಮಾಯ. ಇಂತಹ ಕೃತಕ ನಗುವಿಗೆ ಥಳಕುಬಳುಕಿನ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬೆಲೆ ಇದೆ ಎಂದು ಅನ್ನಿಸಿತು.
(ಮೇಲ್ಕಂಡ ಚಿತ್ರ ಸಾಂದರ್ಭಿಕ)

Tuesday, 22 September 2009

ಗ್ರಾಮೀಣರಿಗೆ ಸರಕಾರಿ ಉದ್ಯೋಗ, ಸಂಬಳ ಮಾತ್ರ ಕೇಳಬೇಡಿ

ಉತ್ತರಕರ್ನಾಟಕದ ಕೃಷಿ ಕಾರ್ಮಿಕರು ದಿನಕ್ಕೆ ೩೦ ರೂ. ಕೊಟ್ಟರೆ ಒಪ್ಪುತ್ತಾರೆ.
ಹಾಗಂತ ಕರಾವಳಿ ಕರ್ನಾಟಕದಲ್ಲಿ ನೂರು ಅಂದರೆ ನೂರು ಸಲ ಉಗಿದಾರು. ತೆಂಗಿನ ಕಾಯಿ ಕೊಯ್ಯಬೇಕಿದ್ದರೆ ಮರಕ್ಕೆ ಏಳರಿಂದ ೧೦ ರೂ. ನೀಡಲೇಬೇಕು. ಅಡಿಕೆ ಮರ ಹತ್ತಬೇಕಾದರಂತೂ ಮುನ್ನೂರು ಮುಂದಿಡಲೇಬೇಕು. ಅಷ್ಟೇ..
ಊರಿನಿಂದ ಊರಿಗೆ ಕಾರ್ಮಿಕರ ವೇತನದಲ್ಲಿ ವ್ಯತ್ಯಾಸ ಇದೆ. ಆದರೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದೇಶದ ಉದ್ದಗಲಕ್ಕೂ ದಿನದ ಸಂಬಳ ೮೨ ರೂಪಾಯಿ ಮಾತ್ರ ಓದುಗ ದೊರೆಯೇ...
ಪರಿಣಾಮ ?
ಸದ್ಯಕ್ಕೆ ದೇಶದಲ್ಲಿ ನಿರುದ್ಯೋಗದ ದರ ಶೇ.೭.೮ರಷ್ಟಿದೆ. ಅದೃಷ್ಟವಶಾತ್ ಕೌಟುಂಬಿಕ ವ್ಯವಸ್ಥೆ ಅನ್ನುವುದು ಈ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿರುವುದರಿಂದ ನಿರುದ್ಯೋಗಿಗಳು ಬೀದಿಪಾಲಾಗುತ್ತಿಲ್ಲ. ಹೀಗಿದ್ದರೂ ಗತ್ಯಂತರವಿಲ್ಲದೆ ಗ್ರಾಮೀಣ ಪ್ರದೇಶಗಳಿಂದ ಭಾರಿ ಸಂಖ್ಯೆಯ ಜನ ಕೆಲಸ ಹುಡುಕುತ್ತ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಅದು ಅವರ ತಪ್ಪಲ್ಲ ಬಿಡಿ. ದೇಶದಲ್ಲಿ ಶೇ.೬೫ಕ್ಕಿಂತ ಹೆಚ್ಚು ಮಂದಿ ೩೫ ವರ್ಷಕ್ಕಿಂತ ಕೆಳಗಿನವರು ಇದ್ದಾರೆ. ನಿರುದ್ಯೋಗದ ದರವನ್ನು ನಿಯಂತ್ರಿಸಬೇಕಾದರೆ ಮುಂದಿನ ಐದು ವರ್ಷಗಳಲ್ಲಿ ೬ ಕೋಟಿ ಉದ್ಯೋಗವನ್ನು ಸೃಷ್ಟಿಸಿದರೂ ಕಡಿಮೆಯೇ. ನಗರಗಳಿಂದ ಮಾತ್ರ ಇದು ಆಗುವ ಹೋಗುವ ಮಾತಲ್ಲ. ಆದ್ದರಿಂದ ಉದ್ಯೋಗ ಖಾತರಿಗೊಂದು ಯೋಜನೆ ಬೇಕು. ಆದರೆ ಈಗೇನಾಗಿದೆ ?
ಕಳೆದ ಅಕ್ಟೋಬರ್ ತನಕ ಬಳ್ಳಾರಿಯಂತಹ ಜಿಲ್ಲೆಯಲ್ಲಿ ಯೋಜನೆಗೆ ಮೀಸಲಾಗಿರುವ ೧೮ ಕೋಟಿ ರೂ.ಗಳ ಪೈಕಿ ೧೫ ಕೋಟಿ ರೂಪಾಯಿ ಖರ್ಚಾಗಿದೆ. ದಕ್ಷಿಣ ಕನ್ನಡ, ಉಡುಪಿ ಮುಂತಾದ ಕಡೆ ರೂಪಾಯಿ ಖರ್ಚಾಗಿಲ್ಲ. ಕೆಲವು ಕಡೆ ರಾಮ, ದೂಮ ಚೋಮ ಅಂತ ಯಾರ್‍ಯಾರದ್ದೋ ಹೆಸರಿನಲ್ಲಿ ಗ್ರಾಮಪಂಚಾಯಿತಿಯ ಪಿಆರ್‌ಐ, ಮೇಸ್ತ್ರಿ ಅಥವಾ ಮಧ್ಯವರ್ತಿಗಳು, ಬ್ಲಾಕ್ ಲೆವೆಲ್‌ನ ಕಾರ್ಯಕ್ರಮ ಅಕಾರಿ ಹಾಗೂ ಅವರನ್ನು ಚೆಕ್ ಮಾಡಬೇಕಿದ್ದ ಪ್ರತಿನಿಗಳು ತಿನ್ನುತ್ತಿದ್ದಾರೆ.
ವಿಪರ್ಯಾಸ ಏನೆಂದರೆ ಕೆಲವೆಡೆ ಇದು ಸರಕಾರಿ ಕೆಲಸ ಅಂತ ಭಾವಿಸಿಕೊಂಡು ಲೋಕೋಪಯೋಗಿ ಇಲಾಖೆಯ ಕೆಲಸಗಳಲ್ಲಿ ನಿರತರಾಗುವ ಮಂದಿ, ಕೃಷಿ ಚಟುವಟಿಕೆಯಲ್ಲಿ ಪ್ರೆಸ್ಟೀಜು ಕಡಿಮೆ ಎಂದು ಹಿಂದೇಟು ಹಾಕುತ್ತಾರೆ. ಯಾವುದಾದರೂ ಕಂಪನಿಗೆ ಸಿಕ್ಕಾಪಟ್ಟೆ ಬ್ರ್ಯಾಂಡ್ ನೇಮ್ ಇದ್ದಲ್ಲಿ ಸಂಬಳ ಕಡಿಮೆ ಇದ್ದರೂ ಹೋಗುತ್ತಾರಲ್ವಾ ಹಾಗೆ ! ಇರಲಿ. ನೋವಿನ ಸಂಗತಿ ಏನೆಂದರೆ ನೂರಾರು ಊರುಗಳಲ್ಲಿ ತೀರಾ ಅಗತ್ಯ ಇದ್ದರೂ, ಇಂತಹದೊಂದು ಕಾರ್ಯಕ್ರಮ ಇದೆ ಎಂಬುದೇ ಯಾರಿಗೂ ಗೊತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ,, ಅಂತ ಯಾವುದೇ ರಾಜ್ಯದಲ್ಲಿ ಯೋಜನೆಗಿಂತ ಅದರಲ್ಲಿ ನಡೆದಿರುವ ಅವ್ಯವಹಾರದ್ದೇ ಸುದ್ದಿ.
ರಾಜ್ಯದಲ್ಲಿ ಎನ್‌ಆರ್‌ಇಜಿಎಸ್‌ನಲ್ಲಿ ೫೮,೬೦೦ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅದರಲ್ಲಿ ಎಷ್ಟು ಖೊಟ್ಟಿ ಅಂತ ತಿಳಿಸಿಲ್ಲ. ಆಗಸ್ಟ್ ವೇಳೆಗೆ ಗ್ರಾಮೀಣ ಕರ್ನಾಟಕದ ೩೧ ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿವೆ. ಆದರೆ ಎಷ್ಟು ಮಂದಿಗೆ ವೇತನ ನೀಡಲಾಗಿದೆ ಎಂಬ ವಿವರ ಸಿಗುವುದಿಲ್ಲ. ವೇತನವನ್ನು ಬ್ಯಾಂಕ್ ಮೂಲಕ ಬಟವಾಡೆ ಮಾಡಿದರೆ ಸಾಲದು ಮುಖ್ಯಮಂತ್ರಿಯವರೇ, ನೀಡುವ ವೇತನ ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿರಬೇಕು. ಪುತ್ತೂರಿನಲ್ಲಿ ದಿನಕ್ಕೆ ೮೨ ರೂಪಾಯಿ ಕೊಡುತ್ತೇವೆ ಅಂದರೆ ಸ್ವಂತ ಬುದ್ದಿ ಇರುವ ಯಾರೊಬ್ಬರೂ ಒಪ್ಪಲಾರರು.
ದೇಶಾದ್ಯಂತ ಬಡ ಕಾರ್ಮಿಕರಿಗೆ ವರ್ಷಕ್ಕೆ ನೂರು ದಿನ ಉದ್ಯೋಗ ಖಾತರಿಯನ್ನು ಕೊಟ್ಟು ನೆರವಾಗುವುದು ಈ ಯೋಜನೆಯ ಉದ್ದೇಶ. ಆದರೆ ಹೆಬ್ಬೆಟ್ಟು ಒತ್ತುವವರನ್ನು ವಂಚಿಸುವುದು ಸುಲಭ. ಆಂಧ್ರಪ್ರದೇಶದ ಅನಂತಪುರದಲ್ಲಿ ಜಮೀನ್ದಾರರು ತಮ್ಮ ಹೊಲದಲ್ಲಿ ಇವರನ್ನು ದುಡಿಸಿ ಯೋಜನೆಯ ನೆರವನ್ನು ನುಂಗಿದ್ದಾರೆ. ಪ್ರತಿ ವರ್ಷ ಕುಟುಂಬಕ್ಕೆ ೧೦೦ ದಿನ ಉದ್ಯೋಗ ಖಾತ್ರಿ ಎಂಬುದು ಯೋಜನೆಯ ಸೂತ್ರ. ಒಂದೇ ಜಾಬ್ ಕಾರ್ಡ್‌ನ್ನು ಕುಟುಂಬದ ಇತರ ಸದಸ್ಯರೂ ಬಳಸಬಹುದು. ಆದರೆ ಕಾಸರಗೋಡಿನ ನೀರ್ಚಾಲಿನಲ್ಲಿ ಯೋಜನೆಯನ್ವಯ ಕೆಲಸ ಮಾಡಿಸಿದ ನಂತರ ನಡೆದ ಕತೆಯೇ ಬೇರೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕಾರ್ಮಿಕರು ಕೆಲಸ ಮಾಡಿದ್ದಾರೆ ಎಂಬ ನೆಪ ಒಡ್ಡಿ ಯಾರಿಗೂ ನಿಗದಿತ ವೇತನ ಕೊಡದೆ ಕೈ ತೊಳೆದರು.
ನಿಜಕ್ಕೂ ಉಪಯೋಗವಾಗಬೇಕಿದ್ದರೆ ಮೊದಲು ಉದ್ಯೋಗ ಖಾತರಿಯಲ್ಲಿರುವ ವೇತನ ಪದ್ಧತಿಯನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿಗದಿಪಡಿಸಬೇಕು. ಎರಡನೆಯದಾಗಿ ಕಾಮಗಾರಿ ಮುಕ್ತಾಯವಾದ ಕೂಡಲೇ ಸಂಬಳ ಕೊಡಬೇಕು. ಕೊಡದೆ ತಿಂಗಳುಗಟ್ಟಲೆ ಸತಾಯಿಸಕೂಡದು. ಕಾಯಿದೆಯ ಪ್ರಕಾರ ಅದೂ ಅಪರಾಧವೇ. ಅವ್ಯವಹಾರ ನಡೆಯುತ್ತಿದ್ದಲ್ಲಿ ಅಥವಾ ಕೈಲಾಗದ ಸಿಬ್ಬಂದಿ ಇದ್ದಲ್ಲಿ ಮಾತ್ರ ಇಂತಹ ಯಡವಟ್ಟು ನಡೆಯುತ್ತದೆ. ಮೂರನೆಯದಾಗಿ ನೂರು ದಿನಗಳಲ್ಲಿ ರಸ್ತೆ ಅಗೆಯುವುದು, ಹೊಂಡ ತೋಡುವುದು, ಚರಂಡಿ ನಿರ್ಮಿಸುವುದು ಮಾತ್ರ ಕೆಲಸವಲ್ಲ. ಕೃಷಿ ಚಟುವಟಿಕೆಗೆ ಒತ್ತು ನೀಡಬೇಕಿದ್ದ ಸಂದರ್ಭ ಕಾರ್ಮಿಕರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ರೈತರು ಕೊಯ್ಲಿಗೆ ಜನ ಸಿಗುತ್ತಿಲ್ಲ ಅಂತ ಪರದಾಡುವಾಗ ಉದ್ಯೋಗ ಖಾತರಿ ಅಂತ ರಸ್ತೆ ಅಗೆಸುತ್ತ ದಿನ ಕಳೆಯಕೂಡದು. ನಿಜವಾಗಿಯೂ ಕೆಲಸ ನಡೆಯುತ್ತಿದೆಯೇ ಇಲ್ಲವೇ ಹಾಗೂ ಯಾವ ಹಂತದಲ್ಲಿದೆ ಎಂಬುದನ್ನು ವಿಡಿಯೊ ಮೂಲಕ ದಾಖಲಿಸಬೇಕು ಅಂತ ಸಿಎಂ ಸಲಹೆ ನೀಡಿದ್ದಾರೆ. ಆದರೆ ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಕೂಲಿ ಸಿಗುವಂತೆ ನಿಗಾ ವಹಿಸಬೇಕಾದ್ದು ಅದಕ್ಕಿಂತ ಮುಖ್ಯವಲ್ಲವೇ.
ಮಾನ್ಯ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರೇ, ಎನ್‌ಆರ್‌ಇಜಿಯ ದಕ್ಷಿಣ ಭಾರತ ವಿಭಾಗದ ಸಮ್ಮೇಳನದಲ್ಲಿ ಉದ್ಯೋಗ ಖಾತರಿಯ ವೈಫಲ್ಯವನ್ನು ಬಣ್ಣಿಸಿದ್ದೀರಿ. ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಅಗತ್ಯವನ್ನು ತಿಳಿಸಿದ್ದೀರಿ. ಆದರೆ ಸೋಲನ್ನು ಗೆಲುವಾಗಿ ಪರಿವರ್ತಿಸಬೇಕಾದ್ದು ಯಾರ ಹೊಣೆ ? ನಿಮ್ಮ ಸರಕಾರದ್ದಲ್ಲವೇ ? ಪಂಚಾಯತ್ ರಾಜ್ ವ್ಯವಸ್ಥೆಯದ್ದಲ್ಲವೇ ? ಅದನ್ನೆಲ್ಲ ಬಿಟ್ಟು ಅಮ್ಮಾ.. ನಾ ಫೇಲಾದೆ..ವರ್ತನೆ ತೋರುವುದೇ ?
ವರ್ಷಕ್ಕೆ ೪೦ ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯ ವಿನ್ಯಾಸವನ್ನು ಬೆಲ್ಜಿಯಂ ಮೂಲದ ಆರ್ಥಿಕ ತಜ್ಞ ಜಿಯಾನ್ ಡ್ರೆಜ್ ಸಿದ್ಧಪಡಿಸಿದ ಎಂದ ಮಾತ್ರಕ್ಕೇ ಎಲ್ಲವೂ ಸರಿಯಿರುವುದಿಲ್ಲ. ಪ್ರತಿ ದಿನ ೮೨ ರೂ.ನಂತೆ ೧೦೦ ದಿನ ಕೊಟ್ಟರೆ ಪ್ರತಿ ತಿಂಗಳ ಲೆಕ್ಕದಲ್ಲಿ ಸುಮಾರು ೬೮೩ ರೂ ಆಗುತ್ತದೆ. ಇದು ಬಡತನ ದೂರ ಮಾಡುತ್ತದೆ ಎನ್ನುವುದು ಅವಿವೇಕದ ಮಾತು ಅಲ್ವಾ ಠಾಕೂರರೇ. ಅಷ್ಟಕ್ಕೂ ಉದ್ಯೋಗ ಖಾತರಿಯಲ್ಲಿ ಸಿಗುವ ಕೂಲಿಗಿಂತ ಇಮ್ಮಡಿ ಮೊತ್ತ ( ತಿಂಡಿ-ಊಟ ಹೊರತಾಗಿ) ತಮ್ಮದೇ ಗ್ರಾಮದಲ್ಲಿ ಸಿಕ್ಕಿದರೆ ಈ ಯೋಜನೆಯನ್ನು ಯಾವ ಸೀಮೆಯ ಜನ ಕೇಳ್ತಾರೆ ಮಾರಾಯ್ರೇ ?
ಇನ್ನು ಎನ್‌ಆರ್‌ಇಜಿಇ ಮೂಲಕ ರಸ್ತೆ ನಿರ್ಮಾಣ, ಬಾವಿ, ಚರಂಡಿ ನಿರ್ಮಾಣದಂತಹ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇವುಗಳನ್ನು ವರ್ಷದ ಯಾವುದೇ ಸಂದರ್ಭದಲ್ಲಿ ಕೈಗೊಳ್ಳಬಹುದು. ಎಷ್ಟೋ ಕಡೆಗಳಲ್ಲಿ ಇಂತಹ ಕೆಲಸಗಳಿಗೆ ಕೃಷಿ ಕಾರ್ಮಿಕರು ತೆರಳುವುದರಿಂದ ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ಒಬ್ಬರೂ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಒರಿಸ್ಸಾ, ಜಾರ್ಖಂಡ್ ಉತ್ತರಪ್ರದೇಶದಂತಹ ರಾಜ್ಯಗಳ ಕತೆ ಕೇಳದಿರುವುದು ಲೇಸು. ಎನ್‌ಆರ್‌ಇಜಿಎ ಉದ್ಯೋಗದ ಕಾರ್ಡ್ ಪಡೆಯಲು ಲಂಚ ಕೊಡುವ ಪರಿಸ್ಥಿತಿ. ಊಳಿಗಮಾನ್ಯ ಪದ್ಧತಿಯಡಿಯಲ್ಲಿ ನರಳುವ ಅಲ್ಲಿನ ಗ್ರಾಮಗಳಲ್ಲ್ಲಿ ಬಡಪಾಯಿ ಕಾರ್ಮಿಕರಿಗೆ ಉದ್ಯೋಗ ಖಾತರಿ ನೀಡುವರಿಲ್ಲ.
ಅಂದಹಾಗೆ ಉದ್ಯೋಗ ಖಾತರಿ ಕಾಯಿದೆಯನ್ನು ಓದುವಾಗ ತುಂಬ ಸಂತಸವಾಗಬಹುದು. ವೇತನವನ್ನು ದಿನಗೂಲಿ ದರದಲ್ಲಿ ನೀಡಬೇಕು. ಸಂಬಳ ಬಟವಾಡೆಯನ್ನು ವಾರದ ಲೆಕ್ಕದಲ್ಲಿ ವಿತರಿಸಬೇಕು. ಯಾವುದೇ ಕಾರಣಕ್ಕೂ ೧೫ ದಿನದಿಂದ ಹೆಚ್ಚು ತಡ ಮಾಡಬಾರದು. ಫಲಾನುಭವಿಗಳ ಪೈಕಿ ಮೂರನೇ ಒಂದರಷ್ಟು ಮಂದಿ ಮಹಿಳೆಯರಿರಬೇಕು. ಕೆಲಸದ ಸ್ಥಳದಲ್ಲಿ ಬಿಸಿಲು, ಮಳೆಯಿಂದ ರಕ್ಷಣೆಗೆ ತಂಗುದಾಣ ಅಥವಾ ಆಶ್ರಯ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಅನುಕೂಲ ಕೊಡಬೇಕು. ಕನಿಷ್ಠ ಶೇ.೫೦ರಷ್ಟು ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಬೇಕು. ಜಲ ಸಂವರ್ಧನೆ, ಭೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. (ಎಲ್ಲಾದರೂ ಇವರಿಗೆ ಗಿಡ ನೆಡಲು ಕೆಲಸ ಕೊಟ್ಟಿದ್ದನ್ನು ನೋಡಿದ್ದೀರಾ ?) ಗುತ್ತಿಗೆದಾರರು ಮತ್ತು ಯಂತ್ರೋಪಕರಣಗಳಿಗೆ ಅವಕಾಶ ಇಲ್ಲ. ಗ್ರಾಮಸಭೆಯ ಮೂಲಕ ನಿಯಮಿತವಾಗಿ ಕಾಮಗಾರಿ ಕುರಿತ ಲೆಕ್ಕ ಪರಿಶೋಧನೆ ನಡೆಸಬೇಕು. ಯೋಜನೆ ಕುರಿತ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು.
ಯಾವುದೇ ವಿಶೇಷ ಕೌಶಲ್ಯದ ಅಗತ್ಯ ಬೀಳದ ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಕುಟುಂಬದಿಂದ ಬಂದ ವ್ಯಕ್ತಿ ಭಾಗವಹಿಸಬಹುದು. ಇದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಲಿಖಿತ ಇಲ್ಲವೇ ಮೌಖಿಕವಾಗಿ ತಿಳಿಸಿ ಹೆಸರು ನೋಂದಣಿ ಮಾಡಿದರೆ ಸಾಕು. ತಪಾಸಣೆಯ ನಂತರ ಗ್ರಾಮ ಪಂಚಾಯಿತಿ ಗುರುತಿನ ಚೀಟಿಯನ್ನು ನೀಡುತ್ತದೆ. ಇದಕ್ಕೆ ಯಾವುದೇ ಶುಲ್ಕ ನೀಡಬೇಕಿಲ್ಲ. ಅರ್ಜಿ ಸಲ್ಲಿಸಿದ ೧೫ ದಿನದೊಳಗೆ ಜಾಬ್ ಕಾರ್ಡ್ ನೀಡಬೇಕು. ತನಗೆ ಎಷ್ಟು ದಿನ ಕೆಲಸ ಮಾಡುವ ಇಚ್ಛೆ ಇದೆ ಎಂದು ವ್ಯಕ್ತಿ ಅರ್ಜಿಯಲ್ಲಿ ತಿಳಿಸಬೇಕು. ಕನಿಷ್ಠ ೧೪ ದಿನ ಕೆಲಸ ಮಾಡಬಹುದು. ನಂತರ ಬೇಕಾದರೆ ಬಿಡಬಹುದು. ಅರ್ಜಿ ಓ.ಕೆ ಆದ ನಂತರ ಗ್ರಾಮಪಂಚಾಯಿತಿ ಖಾತರಿಯ ರಶೀದಿ ನೀಡಬೇಕು. ಅರ್ಜಿ ಅನುಮೋದನೆಯಾದ ೧೫ ದಿನಗಳೊಳಗೆ ಕೆಲಸ ಕೊಡಬೇಕು. ಇಲ್ಲವಾದಲ್ಲಿ ಅರ್ಜಿದಾರನಿಗೆ ಸರಕಾರ ಕಾಯಿದೆಯ ಪ್ರಕಾರ ನಿರುದ್ಯೋಗ ಭತ್ಯೆಯನ್ನು ಕೊಡಬೇಕು. ಗ್ರಾಮದ ೫ ಕಿ.ಮೀ ವ್ಯಾಪ್ತಿಯಲ್ಲಿ ಉದ್ಯೋಗ ಕೊಡಬೇಕು. ಅದಕ್ಕಿಂತ ಆಚೆಗೆ ಇದ್ದಲ್ಲಿ ಶೇ.೧೦ರಷ್ಟು ಹೆಚ್ಚುವರಿ ವೇತನ ನೀಡಬೇಕು. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಬೇಕು. ಕೆಲಸ ಕೂಡಾ.
ಉದ್ಯೋಗ ಖಾತರಿ ಯೋಜನೆ ಶಾಸನ ಬದ್ಧ ರೀತಿಯಲ್ಲಿ ಗ್ಯಾರಂಟಿಯಾಗಿ ಉದ್ಯೋಗ ಕೊಡುತ್ತದೆ. ಹಕ್ಕಿನಂತೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವುದು, ಜಾಬ್ ಕಾರ್ಡ್ ಪಡೆಯುವುದು, ತನಗೆ ಬೇಕಾದಷ್ಟು ದಿನ ಕೆಲಸ ಮಾಡುವುದು ಮತ್ತು ಸಂಬಳ ಪಡೆಯುವುದು ! ಎಲ್ಲ ಚೆನ್ನಾಗಿದೆ.
ಹಾಗಾದರೆ ಇದಕ್ಕೆಲ್ಲ ಹೊಣೆ ಯಾರು ?
ಗ್ರಾಮಸಭೆ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ್, ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾವೆಲ್ಲ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ಗ್ರಾಮಸಭೆ ನಿರ್ಧರಿಸಬೇಕು.
ಗ್ರಾಮೀಣ ಮಟ್ಟದಲ್ಲಿ ಯೋಜನೆಯ ಅನುಷ್ಠಾನ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯೇ ಆಧಾರ ಸ್ಥಂಭ. ಕಾಮಗಾರಿಯ ನೀಲನಕ್ಷೆ, ಅರ್ಜಿ ಸ್ವೀಕಾರ, ಅರ್ಜಿಗಳ ಪರಿಶೀಲನೆ, ನೋಂದಣಿ, ಜಾಬ್ ಕಾರ್ಡ್ ವಿತರಣೆ, ರಶೀದಿ ವಿತರಣೆ, ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಉದ್ಯೋಗ, ಕಾಮಗಾರಿಯ ನಿರ್ವಹಣೆ, ದಾಖಲೆಗಳ ನಿರ್ವಹಣೆ, ಯೋಜನೆ ಸಂಬಂಧ ಗ್ರಾಮಸಭೆ, ಹೊಣೆ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಗ್ರಾಮ ಮಟ್ಟದಲ್ಲಿ ಕಾಮಗಾರಿಯ ಉಸ್ತುವಾರಿ ಕೂಡ ಗ್ರಾಮ ಪಂಚಾಯಿತಿಗೆ ಸೇರುತ್ತದೆ.
ಇನ್ನು ಬ್ಲಾಕ್ ಮಟ್ಟದಲ್ಲಿ ಪ್ರೋಗ್ರಾಮ್ ಆಫೀಸರ್ (ಪಿ.ಒ) ಸಮನ್ವಯಕಾರನಾಗಿ ಕಾರ್‍ಯನಿರ್ವಹಿಸಬೇಕು. ಅರ್ಜಿ ಸಲ್ಲಿಸಿದ ವ್ಯಕ್ತಿಗೆ ೧೫ ದಿವಸದೊಳಗೆ ಕೆಲಸ ಸಿಕ್ಕಿತೇ ಅಂತ ಈ ಅಕಾರಿ ಖಚಿತಪಡಿಸಿಕೊಳ್ಳಬೇಕು. ಕಾಮಗಾರಿಯ ಅಭಿವೃದ್ಧಿಯನ್ನು ತಪಾಸಣೆ ಮಾಡಬೇಕು. ದೂರು ದುಮ್ಮಾನಗಳನ್ನು ಆಲಿಸಿ ಇತ್ಯರ್ಥಪಡಿಸಬೇಕು. ಲೆಕ್ಕ ಸರಿಯಾಗಿದೆಯೇ ಅಂತ ಪರಿಶೀಲಿಸಬೇಕು. ತಪ್ಪಿದಲ್ಲಿ ಬ್ಲಾಕ್ ಮಟ್ಟದಲ್ಲಿ ಆತನೇ ಹೊಣೆಗಾರನಾಗುತ್ತಾನೆ.
ಮತ್ತೆ ಉದ್ಯೋಗ ಖಾತರಿಯ ಜಿಲ್ಲಾ ಯೋಜನೆಗಳನ್ನು ನಿರ್ವಹಿಸುವ ಹೊಣೆ ಜಿಲ್ಲಾ ಪಂಚಾಯತ್‌ಗೆ ಸೇರಿದೆ. ಕಾರ್ಮಿಕ ಬಜೆಟ್ ಮತ್ತು ಜಿಲ್ಲೆಯಲ್ಲಿ ಯೋಜನೆಯ ಉಸ್ತುವಾರಿ ಅದಕ್ಕಿರುತ್ತದೆ. ಯೋಜನೆಯ ಮಾಹಿತಿ ಪ್ರಚಾರ, ತರಬೇತಿ, ಬ್ಲಾಕ್ ಯೋಜನೆಗಳನ್ನು ಜಿಲ್ಲಾ ಮಟ್ಟದ ಯೋಜನೆಗಳಾಗಿ ಪರಿವರ್ತನೆ, ನಿ ಬಿಡುಗಡೆ ಮತ್ತು ಬಳಕೆ,ಮಾಸಿಕ ಪ್ರಗತಿಯ ವಿವರ ಸಲ್ಲಿಕೆ ಜಿ.ಪಂ. ಯೋಜನಾ ಸಮನ್ವಯಕಾರನ ಹೊಣೆ.
ರಾಜ್ಯ ಉದ್ಯೋಗ ಖಾತರಿ ಮಂಡಳಿ (ಎಸ್‌ಇಜಿಸಿ) ರಾಜ್ಯ ಸರಕಾರಕ್ಕೆ ಯೋಜನೆಗೆ ಸಂಬಂಸಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತದೆ. ಪರಿಶೀಲನೆಯ ಜವಾಬ್ದಾರಿಯೂ ಇದಕ್ಕಿದೆ. ರಾಜ್ಯದಲ್ಲಿ ಯೋಜನೆಯ ವಾರ್ಷಿಕ ಪ್ರಗತಿ ವರದಿಯನ್ನು ಸಿದ್ಧಪಡಿಸುವುದು ಕೂಡ ಇದರ ಜವಾಬ್ದಾರಿ. ಉದ್ಯೋಗ ಖಾತರಿ ನಿಯ ಸ್ಥಾಪನೆ, ಪೂರ್ಣಕಾಲಿಕ ಸಿಬ್ಬಂದಿ ನೇಮಕ (ಮುಖ್ಯವಾಗಿ ಗ್ರಾಮ ಪಂಚಾಯತಿ ಸಹಾಯಕ, ಪ್ರೋಗ್ರಾಮ್ ಆಫೀಸರ್, ತಾಂತ್ರಿಕ ಸಿಬ್ಬಂದಿ ನೇಮಕ ), ರಾಜ್ಯದ ಪಾಲಿನ ಬಜೆಟ್ ಬಿಡುಗಡೆ, ತರಬೇತಿ, ಗುಣಮಟ್ಟ ಕಾಪಾಡಲು ನೆರವು, ನಿಯಮಿತ ಪರಿಶೀಲನೆ,ಯೋಜನೆಯ ಎಲ್ಲಾ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಹೊಣೆ ರಾಜ್ಯ ಸರಕಾರದ್ದು.
ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಕೇಂದ್ರ ಮಂಡಳಿ ಕಾರ್ಯನಿರ್ವಹಿಸುತ್ತದೆ. ಯೋಜನೆಗೆ ಸಂಬಂಸಿ ರಾಜ್ಯ ಸರಕಾರಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು, ಸಂಸತ್ತಿನಲ್ಲಿ ಮಂಡಿಸಬೇಕಾದ ವರದಿಯ ಸಿದ್ಧತೆ, ಸಕಾಲದಲ್ಲಿ ರಾಜ್ಯಗಳಿಗೆ ಅನುದಾನ ಒದಗಿಸುವುದು, ಅನುಷ್ಠಾನದ ಪರಿಶೀಲನೆ, ಅಂಕಿ ಅಂಶಗಳ ದಾಖಲು, ಮಾಹಿತಿ ತಂತ್ರeನದ ಬಳಕೆ, ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಹೊಣೆ ಹೀಗೆ ನಾನಾ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಲಾಗಿದೆ.
ಉತ್ತರ ಪ್ರದೇಶ ಸರಕಾರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಜತ್ರೋಪ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ವೇತನ ವಿತರಣೆಗೆ ಸ್ಮಾರ್ಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯತನಕ ೮೭ ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿದ್ದಾರೆ. ಈ ಸಂಖ್ಯೆ ೨.೬ ಲಕ್ಷ ದಾಟುವ ನಿರೀಕ್ಷೆ ಇದೆ. ಇರಲಿ.
ಆದರೆ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತದ ಜತೆ ದೇಶ ಸುದೀರ್ಘಾವಯಿಂದ ಸೆಣಸುತ್ತಿದೆ...
ಮತ್ತದೇ ರಾಜಕೀಯದ ಲಾಭ ನಷ್ಟದ್ದೇ ಲೆಕ್ಕಾಚಾರ. ಯುಪಿಎ ಸರಕಾರದ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯನ್ನು ಮತಗಳಾಗಿ ಪರಿವರ್ತಿಸಲು ವಿಫಲವಾಗದಿರುವುದೂ ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ಕಾರಣಗಳಲ್ಲೊಂದು ಅಂತ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರು ಹಳಹಳಿಯುತ್ತಿದ್ದಾರೆ.
ಆದರೆ ಅಂತಿಮವಾಗಿ ಸಾಮಾನ್ಯ ಪ್ರಜೆ ಕೇಳುವುದಿಷ್ಟೇ. ಕೆಲಸ ಮಾಡಿದ್ದಕ್ಕೆ ತಕ್ಕ ನ್ಯಾಯ ಕೊಡಿ. ಕನಿಷ್ಠ ಸಂಬಳವನ್ನು ಸರಿಯಾಗಿ ಕೊಟ್ಟು ಪುಣ್ಯ ಕಟ್ಟಿ ಕೊಳ್ಳಿ