Friday 3 February 2012

ನೋವುಂಡು ಜಗವ ನಗಿಸಿದ ಕರಿಬಸವಯ್ಯ



" ಛೇ, ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಪ್ರತಿಭಾವಂತನ ಬದುಕಿನಲ್ಲಿ ಮಾತ್ರ ಎಂಥಾ ದುರ್ವಿಧಿ ! ’
ಕನ್ನಡ ಚಿತ್ರರಂಗದ, ರಂಗಭೂಮಿಯ ನೆಚ್ಚಿನ ಹಾಸ್ಯನಟ ಶ್ರೀ. ಕರಿಬಸವಯ್ಯ ಅವರ ಅಕಾಲ ಮೃತ್ಯು ರಾಜ್ಯದ ಜನತೆಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಎಲ್ಲರ ಬಾಯಲ್ಲೂ ನೋವಿನ ನುಡಿಗಳು, " ಛೇ, ಕರಿಬಸವಯ್ಯನವರಿಗೆ ಹೀಗಾಗಬಾರದಿತ್ತು. ಪಾಪ, ಮಗಳನ್ನೂ ಇತ್ತೀಚೆಗೆ ಕಳೆದುಕೊಂಡಿದ್ರು.."
ಹೌದು, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕರಿಬಸವಯ್ಯ, ತಮ್ಮ ನಟನೆ, ನಡೆ ನುಡಿಯಿಂದ ಜನಮಾನಸದಲ್ಲಿ ಮರೆಯಲಾಗದ ವ್ಯಕ್ತಿತ್ವವಾಗಿದ್ದರು. ಕೆಲ ತಿಂಗಳಿನ ಹಿಂದ ಖಾಸಗಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಬಾಳ ಪಯಣದ ಕಥೆಯನ್ನು ಎಳೆಎಳೆಯಾಗಿ ವಿವರಿಸಿದ್ದರು ಕರಿಬಸವಯ್ಯ. ಅಲ್ಲಿ ನೋವಿನ ಮಡುವಿತ್ತು. ಒಂದು ಹಂತದಲ್ಲಿ ತಮ್ಮ ಪ್ರೀತಿಯ ಮಗಳು ಆತ್ಮಹತ್ಯೆ ಮಾಡಿಕೊಂಡ ದುರಂತವನ್ನು ಹೇಳುತ್ತ ಕಣ್ಣೀರಿಟ್ಟರು ಕರಿಬಸವಯ್ಯ. " ಯಾವುದೇ ಹೆಣ್ಣು ಮಕ್ಕಳನ್ನು ನೋಯಿಸದಿರಿ, ಅವರ ಹೆತ್ತವರಿಗೆ ತುಂಬ ನೋವಾಗುತ್ತದೆ. ಅದನ್ನು ಸಹಿಸಲು ಅವರಿಗೆ ಆಗುವುದಿಲ್ಲ. ನಾನು ಅಭಿನಯಿಸುವಾಗ ಪಾತ್ರವಾಗುತ್ತೇನೆ. ಎಲ್ಲ ನೋವುಗಳು ಮರೆಯಾಗುತ್ತವೆ. ಪಾತ್ರ ಮುಗಿದಾಗ ಮತ್ತೆ ದುಃಖ ಮರುಕಳಿಸುತ್ತದೆ. ಯಾವ ತಂದೆ ತಾಯಿಗೂ ಇಂತಹ ಆಘಾತ ಬರಬಾರದು. ಒಂದು ವೇಳೆ ಬಂದರೂ ಅದನ್ನು ತಡೆಯುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ’ ಎಂದು ಕರಿಬಸವಯ್ಯ ಕಣ್ಣೀರಿಡುತ್ತ ಹೇಳಿದಾಗ ನನ್ನ ಕಣ್ಣಾಲಿಗಳು ತುಂಬಿತ್ತು.
ಅಂತಹ ಕರಿಬಸವಯ್ಯನವರು ಆಡಿದ ಮನಮುಟ್ಟುವ ಮಾತುಗಳಲ್ಲಿ ಕೆಲವು ಇಲ್ಲಿದೆ.
-ನಮ್ಮ ಕಷ್ಟವನ್ನು ನಾವೇ ಅನುಭವಿಸಬೇಕು.
-ನಾನು ಹೋರಾಟದಿಂದ ಬೆಳೆದು ಬಂದವನು. ಅನೇಕ ಸ್ನೇಹಿತರಿದ್ದಾರೆ. ನನ್ನ ಕೊನೆಯುಸಿರಿನ ತನಕ ಕನ್ನಡ ಸೇವೆ ಮಾಡುತ್ತೇನೆ.
-ನಾನು ಸುಮಾರು ೨೦೦ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಗತಿಹಳ್ಳಿ ಚಂದ್ರಶೇಖರ್, ಉಮಾಶ್ರಿ, ಬರಗೂರು ರಾಮಚಂದ್ರಪ್ಪ ಮುಂತಾದವರ ಪ್ರೀತಿ, ವಿಶ್ವಾಸ, ಸಹಕಾರವನ್ನು ಅನುಗಾಲ ನೆನೆಯುತ್ತೇನೆ. ನಾನು ಯಾರಿಗೂ ದ್ವೇಷಿಯಲ್ಲ..
ನಿಜ. ಇಷ್ಟೆಲ್ಲ ನೋವನ್ನುಂಡ ಕಥೆಯನ್ನು ಹೇಳುವಾಗಲೂ ಕರಿಬಸವಯ್ಯ ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳನ್ನು ಸಿಡಿಸುತ್ತಿದ್ದರು ! ಅಲ್ಲೂ ಇತರರನ್ನು ರಂಜಿಸಲು ಅವರು ಮರೆತಂತಿರಲಿಲ್ಲ !!
ಜಗದ ನೋವು ನನಗಿರಲಿ, ಜಗವೆಲ್ಲ ನಗುತಿರಲಿ ಎಂಬ ಮಾತಿನಂತೆ ನಡೆದಿದ್ದರು ಕರಿಬಸವಯ್ಯ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
-ಕೇಶವ ಪ್ರಸಾದ್.ಬಿ,ಕಿದೂರು

No comments:

Post a Comment