Wednesday 30 December 2009

ಹೊಸ ವರ್ಷ ಎಲ್ಲರಿಗೂ ಶುಭದಾಯಕವಾಗಿರಲಿ


ಹಿರಿಯ ಗಾಯಕ ಅಶ್ವಥ್ ಹಾಗೂ ನಟ ವಿಷ್ಣುವರ್ಧನ್ ಅವರ ನಿಧನದ ನೋವಿನೊಂದಿಗೆ ೨೦೦೯ ಮುಕ್ತಾಯವಾಗುತ್ತಿದೆ. ಹೊಸ ವರ್ಷ ೨೦೧೦ ಆರಂಭವಾಗಲು ಕೆಲವು ಕ್ಷಣಗಳು ಬಾಕಿ ಇವೆ. ಕಳೆದ ವರ್ಷ ಏನೆಲ್ಲಾ ಆಯಿತು, ಏನೆಲ್ಲಾ ಮಾಡಿದೆವು, ಕಳೆದ ವರ್ಷ ಆರಂಭದಲ್ಲಿ ಅಂದುಕೊಂಡಿದ್ದನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಿದ್ದೇವೆ ಎಂಬುದನ್ನೆಲ್ಲ ಅವಲೋಕಿಸಬೇಕಾದ ಕ್ಷಣವಿದು. ಪ್ರತಿಯೊಬ್ಬರೂ ಅಂತಹದೊಂದು ಆತ್ಮಾವಲೋಕನವನ್ನು ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗ ಮಾಡೋದು ಉತ್ತಮ ಎಂದನ್ನಿಸುತ್ತದೆ. ಮನೆಯ ಬಾಲ್ಕನಿಯಲ್ಲಿ ಏಳೆಂಟು ಪಾಟ್‌ಗಳಲ್ಲಿ ಗುಲಾಬಿ, ಗೌರಿ ಹೂವಿನ ಗಿಡ, ಡೇಲ್ಯ, ತುಳಸಿ ಇತ್ಯಾದಿಯಾಗಿ ಕೆಲವು ಗಿಡಗಳಿವೆ. ಬಸಳೆಯ ಬಳ್ಳಿಯಿದೆ. ಪ್ರತಿ ದಿನ ಬೆಳಗ್ಗೆ ಇವುಗಳನ್ನು ಕಂಡು ಮಾತನಾಡಿಸಿ, ನೀರೆರೆಯಲು ಮರೆಯುವುದಿಲ್ಲ. ಹೊಸತಾಗಿ ಹೂವು ಬಿಟ್ಟಿದೆಯಾ, ಗುಲಾಬಿ ಮೊಗ್ಗು ಅರಳುತ್ತಿದೆಯಾ ಎಂದು ಗಮನಿಸುತ್ತೇನೆ. ಮನೆಯಲ್ಲಿ ತರಕಾರಿಗಳ ಸಿಪ್ಪೆಯನ್ನು ಒಂದು ಮುಚ್ಚಳವಿರುವ ಡಬ್ಬಕ್ಕೆ ಹಾಕಿ ಸಾವಯವ ಗೊಬ್ಬರ ತಯಾರಿಸುತ್ತಿದ್ದೇನೆ. ಆ ಕೆಲಸ ಸ್ವಲ್ಪ ಹೊತ್ತಿನದ್ದಾದರೂ, ಇಡೀ ದಿನ ಖುಷಿ ಕೊಡುತ್ತೆ. ಮೊನ್ನೆ ಯಾವುದೋ ಬಳ್ಳಿ ಹಬ್ಬಿ ಹೂವು ಬಿಟ್ಟಿತ್ತು. ಚಿತ್ರ ಇಲ್ಲಿದೆ. ಹೊಸ ವರ್ಷ ಎಲ್ಲರಿಗೂ ಶುಭದಾಯಕವಾಗಿರಲಿ ಅಂತ ಕಿದೂರು ಮಹದೇವನಲ್ಲಿ ಪ್ರಾರ್ಥನೆ ಮಾಡ್ತೇನೆ.

Tuesday 29 December 2009

ವಿಷ್ಣುವರ್ಧನ್ ಅಗಲಿದ್ದಾರೆ...


ನಿನ್ನೆ ತಾನೆ ನೆಚ್ಚಿನ ಗಾಯಕ ಅಶ್ವಥ್ ಅಗಲಿದರು. ಈವತ್ತು ಹಿರಿಯ ನಟ ಡಾ. ವಿಷ್ಣುವರ್ಧನ್ ಅಗಲಿದ್ದಾರೆ. ನಿಜಕ್ಕೂ ನೋವಿನ ಸಂಗತಿಯಿದು. ಬೆಳಗ್ಗೆ ಟಿ.ವಿ ನ್ಯೂಸ್ ಚಾನಲ್ ಹಾಕುತ್ತಿದ್ದಂತೆ ಒಂದು ಕ್ಷಣ ಶಾಕ್ ಆದಂತಾಯಿತು. ಡಾ. ರಾಜ್‌ಕುಮಾರ್ ನಿಧನದ ಸಂದರ್ಭ ಉಂಟಾಗಿದ್ದ ಗಲಭೆ ಈಗ ಸಂಭವಿಸದಿರಲಿ ಎಂದು ಮನದಲ್ಲೇ ಪ್ರಾರ್ಥಿಸಿದೆ. ಮತ್ತೊಂದು ಕಡೆ ಎಲ್ಲ ಸುದ್ದಿವಾಹಿನಿಗಳೂ, ಸುದ್ದಿಮನೆಗಳೂ ಬ್ಯುಸಿಯಾಗಿವೆ. ಡಾ. ವಿಷ್ಣುವರ್ಧನ್ ಅವರ ಬದುಕು, ಸಾಧನೆ, ಚಿತ್ರಗಳ ವಿವರ, ಅಪರೂಪದ ಛಾಯಾಚಿತ್ರಗಳನ್ನು ಕಲೆಹಾಕುವ ಕೆಲಸ, ಅವಸರ, ಗಡಿಬಿಡಿ ಕಂಡುಬರುತ್ತಿದೆ. ಕೆಲವು ವರದಿಗಾರರು ವಿಷ್ಣುವರ್ಧನ್ ನಿವಾಸದಲ್ಲಿದ್ದಾರೆ. ಅಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಅವರ ಅಂತಿಮ ದರ್ಶನಕ್ಕೆ ನೆರೆದಿದ್ದಾರೆ.
ಕೆಲವು ತಿಂಗಳಿನ ಹಿಂದೆ ವಿಜಯ ಕರ್ನಾಟಕಕ್ಕೆ ವಿಷ್ಣುವರ್ಧನ್ ಅತಿಥಿ ಸಂಪಾದಕರಾಗಿ ಬಂದಿದ್ದರು. ಅವರ ಸೌಮ್ಯ ಹಾಗೂ ಸೂಕ್ಷ್ಮ ಭಾವದ ಮೊಗವನ್ನು ಗಮನಿಸಿದ್ದೆ. ಒಬ್ಬ ಸಂತನಂತಹ ಕಳೆ ಅವರ ಮುಖದಲ್ಲಿತ್ತು. ನಡೆ ನುಡಿಯಲ್ಲಿತ್ತು. ಕಚೇರಿಯ ಸಹೋದ್ಯೋಗಿಗಳು ಅವರ ಪಕ್ಕ ನಿಂತು ಫೊಟೊ ತೆಗೆಸಿಕೊಂಡಿದ್ದರು. ಪ್ರತಿಯೊಬ್ಬರ ಜತೆ ವಿಷ್ಣು ಆತ್ಮೀಯವಾಗಿ ಮಾತನಾಡಿದ್ದರು. ಎಲ್ಲ ವಿಭಾಗಗಳ ಬಗ್ಗೆ ಕುತೂಹಲದಿಂದ ತಿಳಿದುಕೊಂಡಿದ್ದರು.

ಕರ್ನಾಟಕದ ಉದ್ಯಮ ವಲಯದ ೨೦೦೯ರ ಹಿನ್ನೋಟ


ಕರ್ನಾಟಕದ ಉದ್ಯಮ ವಲಯದ ೨೦೦೯ರ ಹಿನ್ನೋಟದ ಬಗ್ಗೆ ವಿಜಯ ಕರ್ನಾಟಕದ ವಾಣಿಜ್ಯ ವಿಭಾಗಕ್ಕೆ ಬರೆದ ಲೇಖನ ಇಲ್ಲಿದೆ. ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Monday 28 December 2009

ವರ್ಲ್ಡ್ ಸ್ಪೇಸ್ ವಿದಾಯ ಗೀತೆ






ಬಾನುಲಿಯಲ್ಲಿ ಸುಮಧುರ ಗೀತೆಗಳನ್ನು ಆಲಿಸುತ್ತ ಮೈಮರೆಯುವ ಲಕ್ಷಾಂತರ ಶ್ರೋತೃಗಳಿಗೆ ಇದೊಂದು ಕಹಿ ಸುದ್ದಿ. ಉಪಗ್ರಹ ಆಧಾರಿತ ರೇಡಿಯೊ ವರ್ಲ್ಡ್‌ಸ್ಪೇಸ್, ಕೇವಲ ಇನ್ನೆರಡು ದಿನಗಳಲ್ಲಿ ಸ್ತಬ್ಧವಾಗಲಿದೆ.
ಜಾಹೀರಾತುಗಳ ಬ್ರೇಕ್ ಇಲ್ಲದೆ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಕೇಳುಗರ ಮನತಣಿಸುತ್ತಿದ್ದ ವರ್ಲ್ಡ್ ಸ್ಪೇಸ್ ರೇಡಿಯೊದ ಪೆಟ್ಟಿಗೆಯನ್ನು ಇನ್ನುಮುಂದೆ ಷೋಕೇಸಿನಲ್ಲಿಡಬೇಕಷ್ಟೇ.
ಡಿಸೆಂಬರ್ ೩೧ರ ಮಧ್ಯರಾತ್ರಿಯಿಂದ ರೇಡಿಯೊ ವರ್ಲ್ಡ್ ಮೌನವಾಗಲಿದೆ. ಯಾಕೆಂದರೆ ವರ್ಲ್ಡ್ ಸ್ಪೇಸ್ ಇಂಡಿಯಾದ ಮಾತೃಸಂಸ್ಥೆ ವರ್ಲ್ಡ್ ಸ್ಪೇಸ್ ದಿವಾಳಿಯಾಗಿದೆ.
೨೦೦೮ರ ಅಕ್ಟೋಬರ್‌ನಿಂದ ದಿವಾಳಿ ಸ್ಥಿತಿಯಲ್ಲಿದ್ದ ವರ್ಲ್ಡ್ ಸ್ಪೇಸ್‌ನ್ನು ಖರೀದಿಸಲು ಮುಂದೆ ಬಂದಿರುವವರು, ಭಾರತದಲ್ಲಿರುವ ಕಂಪನಿಯ ಆಸ್ತಿ, ಬಿಸಿನೆಸ್ ಹಾಗೂ ಚಂದಾವನ್ನು ಖರೀದಿಸಲು ಸಿದ್ಧರಿಲ್ಲ. ಹೀಗಾಗಿ ಭಾರತದಲ್ಲಿ ತನ್ನೆಲ್ಲ ಪ್ರಸಾರವನ್ನು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಕಂಪನಿಯ ಅಕಾರಿಗಳು ಲಭ್ಯರಿಲ್ಲ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿರುವ ವರ್ಲ್ಡ್ ಸ್ಪೇಸ್ ಕಚೇರಿಯಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಕಾಣಿಸುತ್ತಿಲ್ಲ. ಬದಲಿಗೆ ಎಲ್ಲರ ಮುಖದಲ್ಲೂ ಅವ್ಯಕ್ತ ಚಿಂತೆ. ಅವರವರದ್ದೇ ಧಾವಂತ. ಇನ್ನು ಕೆಲವರ ಮೊಬೈಲ್‌ಗಳಿಗೆ ಬರುವ ಕರೆಗಳಲ್ಲಿ ಅದೇ ಪ್ರಶ್ನೆ. ‘ ಕಂಪ್ನಿ ಮುಚ್ಚಿಕೊಳ್ಳುತ್ತಿದೆಯಂತೆ ಹೌದಾ ? ಬೇರೆ ಯಾರಾದರೂ ಖರೀದಿಸುತ್ತಾರೆಯೇ ? ಅಂತ.
ಹೀಗಾಗಿ ಇಷ್ಟಪಟ್ಟು ಕೆಲಸ ಮಾಡುತ್ತಿದ್ದ ರೇಡಿಯೊ ನಿಲಯ, ಸ್ಟೂಡಿಯೊದಲ್ಲೀಗ ಭಣ ಭಣ. ಸ್ವಾಗತಕಾರಿಣಿಯ ಸ್ಥಾನ ಖಾಲಿ. ದ್ವಾರದಲ್ಲಿ ವಾಚ್‌ಮನ್ ನಿರ್ಲಿಪ್ತನಂತೆ ಬಂದವರನ್ನು ಹಿಂದಿಯಲ್ಲಿ ಮಾತನಾಡಿಸಿ ಕಳುಹಿಸುತ್ತಿದ್ದಾನೆ. ಗೋಡೆಗೆ ಹಚ್ಚಿದ ನೋಟಿಸ್‌ನ್ನು ತೋರಿಸ್ತಾನೆ..ಬೇಕಾದರೆ ಪರಿಹಾರಕ್ಕೆ ಸಲ್ಲಿಸುವ ಅರ್ಜಿಯನ್ನೂ ಉಚಿತವಾಗಿ ಕೊಡುತ್ತಾನೆ.
ಅಮೆರಿಕದಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತ ಬೆಂಗಳೂರಿನಲ್ಲಿ ರೇಡಿಯೊ ನಿಲಯವೊಂದರ ಶೆಟರ್‌ನ್ನು ಹೀಗೆ ಎಳೆದುಕೊಂಡಿತು ನೋಡಿ. ಡೀಲರ್‌ಗಳಲ್ಲಿ ಬಹುತೇಕ ಮಂದಿ ಈಗಾಗಲೇ ಈ ಸ್ಯಾಟಲೈಟ್ ರೇಡಿಯೊ ಜತೆಗಿನ ವ್ಯವಹಾರವನ್ನು ಕೈ ಬಿಟ್ಟಿದ್ದಾರೆ. ಅಳಿದುಳಿದವರಿಗೂ ಹೆಚ್ಚಿನ ಮಾಹಿತಿ ಇಲ್ಲ.
ಆ ದಿನಗಳ ಅಲೆ : ಆದರೆ ವರ್ಲ್ಡ್ ಸ್ಪೇಸ್‌ನ ಆರಂಭ ಬೆಂಗಳೂರು ಸೇರಿದಂತೆ ಎಲ್ಲೆಡೆ ಬಾನುಲಿ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಸುಮಾರು ೪೦ ಪ್ರತ್ಯೇಕ ಚಾನಲ್‌ಗಳೊಂದಿಗೆ ಪ್ರಸಾರವಾಗುತ್ತಿದ್ದ ಸಂಗೀತಮಯ ರೇಡಿಯೊ ಇದಾಗಿತ್ತು. ಲಕ್ಷಗಟ್ಟಲೆ ಚಂದಾದಾರರು ವರ್ಲ್ಡ್ ಸ್ಪೇಸ್‌ಗೆ ಆಕರ್ಷಿತರಾಗಿದ್ದರು. ಆದರೆ ಅವರನ್ನೆಲ್ಲ ನಡು ನೀರಿನಲ್ಲಿ ಕೈಬಿಟ್ಟಂತಾಗಿದೆ. ಇತ್ತೀಚೆಗೆ ಚಂದಾದಾರರಾದವರೂ ಇದ್ದಾರೆ. ಇವರಿಗೆಲ್ಲ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೆ ಒಳಿತಾಗುತ್ತಿತ್ತು ಅಲ್ಲವೇ. ಈಗ ಅತಂತ್ರರಾಗಿರುವ ಚಂದಾದಾರರಿಗೆ ಕಂಪನಿ ಇ-ಮೇಲ್ ಮಾಡಿ ಕೈತೊಳೆದುಕೊಂಡಿದೆ. ‘ ಅಮೆರಿಕದ ದಿವಾಳಿತನದ ಕಾನೂನಿನ ಅನ್ವಯ ಪರಿಹಾರ ಪಡೆದುಕೊಳ್ಳಬಹುದು ’ ಎಂದು ತಿಳಿಸಿದೆ. ಆದರೆ ಯಾವಾಗ ಹಾಗೂ ಎಷ್ಟು ಪರಿಹಾರ ಸಿಗಲಿದೆ ? ಹಾಗಾದರೆ ಸ್ತಬ್ಧವಾಗಲಿರುವ ರೇಡಿಯೊವನ್ನು ಕಂಪನಿ ಹಿಂತೆಗೆದುಕೊಳ್ಳಲಿದೆಯೇ ? ಈ ಪ್ರಶ್ನೆಗಳಿಗೆ ನಿಮಗೆಲ್ಲೂ ಉತ್ತರ ಸಿಗಲ್ಲ.
ಕನ್ನಡದಲ್ಲಿ ರೇಡಿಯೊ ಸ್ಪರ್ಶ, ಮರಾಠಿಯಲ್ಲಿ ಸುರಭಿ, ತೆಲುಗಿನಲ್ಲಿ ಸ್ಪಂದನ, ಮಲಯಾಳಂನಲ್ಲಿ ಮಾಧುರಿ, ತಮಿಳಿನಲ್ಲಿ ಕೆಎಲ್ ರೇಡಿಯೊ, ಬಿಬಿಸಿ ನ್ಯೂಸ್, ಭಾರತೀಯ ಶಾಸ್ತ್ರೀಯ ಸಂಗೀತ, ಹಿಂದಿ ಚಲನಚಿತ್ರ, ರೇಡಿಯೊ ಆರ್ಟ್ ಆಫ್ ಲಿವಿಂಗ್ ಆಧ್ಯಾತ್ಮ ಅಂತ ಹಲವು ಕಾರ್ಯಕ್ರಮಗಳನ್ನು ನಿಲಯ ನೀಡುತ್ತಿತ್ತು. ಕನ್ನಡದ ಚಾನಲ್ ಸ್ಪರ್ಶದಲ್ಲಿ ಕನ್ನಡ ಸಿನಿಮಾ, ಸಂಗೀತ ಲೋಕಕ್ಕೆ ಸಂಬಂಸಿ ವಿಶೇಷ ಸರಣಿ ಕಾರ್ಯಕ್ರಮಗಳು ಬಿತ್ತರವಾಗಿತ್ತು. ಚಂದಾದಾರರಾಗುವವರು ೧,೭೯೦ ರೂ.ಗಳಿಂದ ಅಂದಾಜು ೨ ಸಾವಿರ ರೂ.ತನಕ ಖರ್ಚು ಮಾಡಿ ಪ್ರತ್ಯೇಕ ರೇಡಿಯೊ ಖರೀದಿಸಿದರೆ ಸಾಕು. ದಿನವಿಡೀ ಸುಶ್ರಾವ್ಯ ನಾದಲೋಕದಲ್ಲಿ ವಿಹರಿಸಬಹುದಿತ್ತು. ಪಾಶ್ಚಾತ್ಯ ಸಂಗೀತವನ್ನೂ ಇದರಲ್ಲೇ ಆಸ್ವಾದಿಸಬಹುದಿತ್ತು. ಬಾನುಲಿ ಸಂಗೀತ ಪ್ರಿಯರಿಗಂತೂ ವರ್ಷಾಂತ್ಯಕ್ಕೆ ಬ್ಯಾಡ್ ನ್ಯೂಸ್.

Monday 21 December 2009

ವಂಡರ್ ಬಜಾರ್ ಆರಂಭ !

ಕೆ.ಆರ್.ಮಾರುಕಟ್ಟೇಲಿ ಕೇರ್ ಆಫ್ ಫುಟ್‌ಪಾತ್ ಆದೋರ್‍ಯಾರು ?


ಕೃಷ್ಣರಾಜೇಂದ್ರ ಮಾರುಕಟ್ಟೆ !
ಹೀಗಂದ್ರೆ ಯಾವ್ದಪ್ಪಾ ಅಂತ ಬಹುಶಃ ಯೋಚಿಸಬಹುದು. ಆದರೆ ಸಿಟಿ ಮಾರ್ಕೆಟ್ ಅಥವಾ ಕೆ.ಆರ್. ಮಾರುಕಟ್ಟೆ ಎಂದರೆ ಪ್ರತಿಯೊಬ್ಬ ಬೆಂಗಳೂರಿಗನೂ ತೋರಿಸ್ತಾನೆ. ಅದನ್ನು ಭಾರತದ ಸಾಂಪ್ರದಾಯಿಕ ಮಾರುಕಟ್ಟೆ ಅಂತಾರೆ. ಶತಮಾನಗಳಿಂದ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಕೆ.ಆರ್.ಮಾರುಕಟ್ಟೆ ನಿತ್ಯ ಲಕ್ಷಾಂತರ ಗ್ರಾಹಕರ ಆಕರ್ಷಕ ಸಂತೆ. ಇಲ್ಲಿಯೂ ಶಾಪಿಂಗ್ ಮಾಲ್‌ಗಳಲ್ಲಿಯೂ ನಡೆಯುವುದೊಂದೇ ವ್ಯಾಪಾರ ಆದ್ರೂ ಅಜಗಜಾಂತರ ವ್ಯತ್ಯಾಸ ಇದೆ. ಅದರ ಅನುಭವ ನಿಮಗೆಲ್ಲರಿಗೂ ಆಗಿರಬಹುದು. ಅಂತಹ ಟಿಪಿಕಲ್ ಇಂಡಿಯನ್ ಶೈಲಿಯ ಕೆ.ಆರ್. ಮಾರುಕಟ್ಟೆಯ ಒಳಗಿನ ಸುಳಿ ಮೇಲ್ನೋಟಕ್ಕೆ ಸರಳ, ಆದರೆ ಒಂದಕ್ಕೊಂದು ವಿಭಿನ್ನ. ನಂಬಲೂ ಕಷ್ಟವಾಗುವ ವೈಚಿತ್ರ್ಯಗಳ ಬಜಾರ್ ಇದು. ಒಂದು ಕಡೆ ಸ್ವಾದ, ಮತ್ತೊಂದು ಕಡೆ ಖೇದ..ಒಂದು ಮೂಲೆಯಲ್ಲಿ ಗಿಜಿಗಿಜಿ ಜನರಿದ್ದರೆ ಮತ್ತೊಂದು ಮೂಲೆಯಲ್ಲಿ ಏನಿಟ್ಟರೂ ಭಣ..ಭಣ....! ಏನಿದರ ರಹಸ್ಯ ? ಹಾಗಾದರೆ ಬನ್ನಿ ಬಜಾರ್ ಸುತ್ತಿ ಬರೋಣ...
ಕೆ.ಆರ್.ಮಾರುಕಟ್ಟೆ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರ ಮಾತ್ರವಲ್ಲ, ಇಲ್ಲಿನ ಫುಟ್‌ಪಾತುಗಳೇ ಸಾವಿರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಜೀವನಕ್ಕೊಂದು ದಾರಿ ಮಾಡಿಕೊಟ್ಟಿದೆ. ಈ ಸಂಕೀರ್ಣದಲ್ಲಿ ೧೮೮೧ ಅಂಗಡಿ ಮತ್ತು ಮಳಿಗೆಗಳಿವೆ. ಮೊದಲ ಮಹಡಿ, ನೆಲ ಅಂತಸ್ತು, ಮೇಲ್ಮಹಡಿ ಅಂತ ಮೂರು ಅಂತಸ್ತುಗಳಲ್ಲಿ ಇವು ಹರಡಿವೆ. ಪಕ್ಕದಲ್ಲೇ ಮಟನ್ ಮಾರ್ಕೆಟ್ ಇದೆ. ಅಂದಹಾಗೆ ಇಲ್ಲಿ ಅಂಗಡಿಗಳಿಗೆ ಬಾಡಿಗೆ ಎಷ್ಟಿರುತ್ತೆ ಗೊತ್ತೇ ?
೩೦೦ರೂ. ಬಾಡಿಗೆ, ಬಾಕಿ ೨.೫೯ ಕೋಟಿ !
ನೆನಪಿಡಿ..ಇದು ಬೆಂಗಳೂರಿನ ಹೃದಯ ಭಾಗ ಎನ್ನಿಸಿಕೊಂಡಿರುವ ಪ್ರದೇಶ. ಲಕ್ಷಾಂತರ ಜನ ನಿತ್ಯ ಇಲ್ಲಿ ಓಡಾಡುತ್ತಾರೆ. ಏನಿಟ್ಟರೂ ಸೇಲಾಗುವ ಮಹತ್ವದ ಬಿಸಿನೆಸ್ ಪಾಯಿಂಟ್. ಮೆಜೆಸ್ಟಿಕ್‌ನಿಂದ ಹದಿನೈದು ಕಿ.ಮೀ ಆಚೆಗೂ ಸಣ್ಣ ಸಂಗಡಿಗೆ ಮೂರ್‍ನಾಲ್ಕು ಸಾವಿರ ರೂ. ಬಾಡಿಗೆ ಇರುತ್ತೆ. ಹೀಗಿದ್ದರೂ ಕೆ.ಆರ್.ಮಾರುಕಟ್ಟೆಯಲ್ಲಿ ಮಾತ್ರ ಈಗಲೂ ಮುನ್ನೂರು ರೂ. ಬಾಡಿಗೆ ಚಾಲ್ತಿಯಲ್ಲಿದೆ ! ಅಂದರೆ ದಿನಕ್ಕೆ ಹತ್ತು ರೂಪಾಯಿ. ಮುನ್ನೂರು ರೂ.ಗಳಿಂದ ಆರಂಭವಾಗಿ ನಾನ್ನೂರು, ಐನೂರು, ಏಳು ನೂರು ಅಂತ ಸಾಗುತ್ತದೆ. ಮೂರು ಸಾವಿರ ರೂ.ಗಿಂತ ಹೆಚ್ಚಿನ ಬಾಡಿಗೆಯೇ ಇಲ್ಲಿಲ್ಲ. ಹೀಗಿದ್ದರೂ ಇಲ್ಲಿನ ವ್ಯಾಪಾರಿಗಳಲ್ಲಿ ಬಹುತೇಕ ಮಂದಿಗೆ ಬಾಡಿಗೆ ಕಟ್ಟಲೂ ದುಡ್ಡಿಲ್ಲವಂತೆ.ಬೇಕಾದರೆ ನೋಡಿ. ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಗೆ ಕೆ.ಆರ್.ಮಾರುಕಟ್ಟೆಯ ವರ್ತಕರಿಂದಲೇ ಬರಬೇಕಾಗಿರುವ ಬಾಡಿಗೆಯ ಬಾಕಿ ಮೊತ್ತ ೨.೫೯ ಕೋಟಿ ರೂ. !
ಅಂದಹಾಗೆ ಬಾಡಿಗೆ ಈ ರೀತಿ ಅತ್ಯಂತ ಅಗ್ಗವಾಗಲು ಕಾರಣ ? ಕಳೆದ ಹನ್ನೊಂದು ವರ್ಷಗಳಿಂದ ಬಾಡಿಗೆಯನ್ನೇ ಪರಿಷ್ಕರಿಸಿಲ್ಲ. ತಲ ತಲಾಂತರಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದ ಕುಟುಂಬಗಳಿಗೆ ಪುನರ್ವಸತಿ ಸಲುವಾಗಿ ಹೊಸ ಕಟ್ಟಡಗಳನ್ನು ಕಟ್ಟಿಸಿಕೊಟ್ಟು ಬಿಡಲಾಯಿತು. ಅಷ್ಟೇ. ನಂತರ ನಾಮ್‌ಕೇವಾಸ್ತೆ ಉಸ್ತುವಾರಿ ಮಾತ್ರ ಇಲ್ಲಿದೆ. ಅಕ್ಷರಶಃ ಸಂತೆಯೇ ಆಗಿರುವ ಮಾರುಕಟ್ಟೆಯಲ್ಲಿ ಶುಚಿತ್ವಕ್ಕೆ ಎಳ್ಳಷ್ಟೂ ಆಸ್ಪದವಿಲ್ಲ. ಒಳಗೊಮ್ಮೆ ಹೊಕ್ಕರೆ ಮನೆಗೆ ವಾಪಸಾಗುವ ಹೊತ್ತಿಗೆ ಇದ್ದಬದ್ದ ರೋಗಗಳೆಲ್ಲ ಮುತ್ತಿಕೊಳ್ಳುವ ಭೀತಿ ಯಾರಿಗಾದರೂ ಉಂಟಾಗದಿರದು. ಆದರೆ ಶಾಪಿಂಗ್ ಮಾಲ್‌ಗಳಲ್ಲಿ ನಿಮಗೆ ಯಾರೊಬ್ಬರ ಹತ್ತಿರ ಕೂಡ ಚೌಕಾಶಿ ಮಾಡಲು ಆಗುವುದಿಲ್ಲ. ಇಲ್ಲಾದರೆ ರೇಟೂ ಕಡಿಮೆ, ಮತ್ತೂ ಚೌಕಾಸಿಗೆ ಇಳಿಯಬಹುದು. ಇದೊಂದೇ ಕಾರಣಕ್ಕೆ ಮಧ್ಯಮವರ್ಗದ ಜನ ಇಲ್ಲಿಗೆ ದೌಡಾಯಿಸುತ್ತಾರೆ.
ಕಡಿಮೆ ಬಂಡ್ವಾಳ ಸಾಕು
ಹಾಗೆ ಧಾವಿಸುವ ಜನ ಸಾಗರ ಅತಿ ಹೆಚ್ಚು ವ್ಯಾಪಾರ ನಡೆಸುವುದು ಮಾತ್ರ ಕೆ.ಆರ್.ಮಾರುಕಟ್ಟೆಯ ಫುಟ್‌ಪಾತ್‌ಗಳಲ್ಲಿ ಕುಂತು ನಾನಾ ಅಗತ್ಯ ವಸ್ತುಗಳನ್ನು, ಕಾಯಿಪಲ್ಲೆಗಳನ್ನು ಹರವಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಿಗಳ ಬಳಿ ! ಹೀಗಾಗಿ ಒಳಗೆ ಕುಳಿತು ನೊಣ ಹೊಡೆಯುತ್ತಿರುವವರೂ ಫುಟ್‌ಪಾತಿಗೆ ಬಂದು ಸಾಮಾನುಗಳನ್ನು ಹರಡಿ ಭರ್ಜರಿ ವ್ಯಾಪಾರ ಮಾಡ್ತಾರೆ. ಯಾವ ಬಾಡಿಗೆ ಅಥವಾ ಸುಂಕದ ರಗಳೆಯೇ ಇಲ್ಲದೆ, ಮಾರುಕಟ್ಟೆಯ ಫುಟ್‌ಪಾತಿನಲ್ಲಿ ಮಾರಾಟಕ್ಕೆ ಕುಳಿತುಕೊಳ್ಳುವವರಿಗೆ ಇರುವ ಏಕೈಕ ಅನುಕೂಲ ಏನೆಂದರೆ, ಕಡಿಮೆ ಬಂಡವಾಳ ಸಾಕು. ವ್ಯಾಪಾರ ಅಂತೂ ಗ್ಯಾರಂಟಿ. ಹಾಗಾದರೆ ಅವರೆಷ್ಟು ಸಂಪಾದಿಸುತ್ತಾರೆ ? ಯಾವುದೇ ಸಾಮಾನಿಟ್ಟರೂ ದಿನಕ್ಕೆ ಮುನ್ನೂರು, ಐನೂರು ಅಥವಾ ಅದೃಷ್ಟ ಖುಲಾಯಿಸಿದರೆ ದಿನಕ್ಕೆ ಸಾವಿರ ರೂ. ಆದಾಯ ಮಾಡಿದವರಿದ್ದಾರೆ. ಇಲ್ಲಿ ತರಕಾರಿ ಮಾರಾಟ ಮಾಡುವವರಿಗೆ ಮಾತ್ರ ಅಂತಹ ಸಂಪಾದನೆಯಾಗುತ್ತಿಲ್ಲ. ಹಣ್ಣು ಹಣ್ಣು ಮುದುಕಿಯರೂ ಹಣ್ಣುಗಳನ್ನಿಟ್ಟು ಸುಡುಬಿಸಿಲಿಗೆ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅವರೆಲ್ಲರ ಹಿಂದೆ ಒಂದೊಂದು ನೋವು, ಯಾತನೆಯ ಕಥೆ,ವ್ಯಥೆಯಿದೆ. ಆದರೆ ಉಳಿದವರಿಗೆ ಮೋಸವಿಲ್ಲ. ಆದರೆ ಈ ಮಾರುಕಟ್ಟೆಯಲ್ಲೂ ಎಲ್ಲೆಡೆ ಕಾಣಸಿಗುವಂತೆ ಬೇಕಾದಂತೆ ಯಾಮಾರಿಸುವವರೂ ಇದ್ದಾರೆ. ಹುಷಾರ್.


ಮೊಬೈಲ್ ಕವರಿನಲ್ಲಿ ನೂರುಲ್ಲಾ ಡೋಂಟ್ ವರಿ


ಅವರ ಹೆಸರು ನೂರುಲ್ಲಾ ಮಹಮ್ಮದ್ ಅಂತ !
ಪ್ರತಿ ಭಾನುವಾರ ಕೆಲಸಕ್ಕೆ ರಜೆ ಹಾಕಲ್ಲ. ಸೀದಾ ಕೆ.ಆರ್.ಮಾರುಕಟ್ಟೆಗೆ ಬಂದು ಫುಟ್‌ಪಾತಲ್ಲಿ ಕುಂತು ತಮ್ಮ ಜೋಳಿಇಗೆ ಬಿಡಿಸುತ್ತಾರೆ. ಅದರೊಳಗಿನಿಂದ ಬಳೆಗಳನ್ನು ಇಡಲು ಹೆಂಗಳೆಯರು ಬಳಸುವ ತಂತಿಯ ಸ್ಟ್ಯಾಂಡ್‌ಗಳನ್ನು ಹೊರತೆಗೆದು ಒಂದಕ್ಕೊಂದು ಸಿಕ್ಕಿಸುತ್ತಾರೆ. ಮೊಬೈಲ್ ಕವರ್‌ಗಳ ಪ್ಯಾಕೆಟ್ಟುಗಳನ್ನು ತೆಗೆದು ಓರಣವಾಗಿ ಜೋಡಿಸುತ್ತಾರೆ. ಸೂಪರ್ ಸ್ಟಿಕ್‌ಗಳನ್ನು ಹರವಿಡುತ್ತಾರೆ. ಹಾಗಂದರೆ ಒಂದು ವಿಧದ ಗಮ್. ಪ್ಲಾಸ್ಟಿಕ್ ಬಕೆಟ್ ಒಡೆದರೆ, ಪಾತ್ರ ತೂತಾದರೆ ಅದನ್ನು ಮೆತ್ತಿ ಸರಿಪಡಿಸಬಹುದು. ಮತ್ತೆ ಮದ್ದು ಸಿಂಪಡಿಸುವ ಸ್ಪ್ರೇಯರ್‌ಗಳನ್ನು ತಂದಿಡುತ್ತಾರೆ.
ಅಂದಹಾಗೆ ನೂರುಲ್ಲಾ ರಾಮನಗರದವರು. ಕಳೆದ ಆರು ವರ್ಷಗಳಿಂದ ಮೈಸೂರು ಬ್ಯಾಂಕ್ ವೃತ್ತದ ಬಳಿ ಬೀದಿ ಬದಿಯ ವ್ಯಾಪಾರಿ. ಅದಕ್ಕೂ ಮುನ್ನ ಮಾಲೂರು ಮುಂತಾದ ಕಡೆ ಮಸೀದಿಗಳಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನಂತರ ಹೆಚ್ಚಿನ ಸಂಪಾದನೆ ಮಾಡುವ ದೃಷ್ಟಿಯಿಂದ ಸೀದಾ ಬೆಂಗಳೂರಿನ ಅವೆನ್ಯೂ ರಸ್ತೆಗೆ ಬಂದಿಳಿದು ಬೆಂಕಿಪೊಟ್ಟಣ ಮಾರಾಟ ಮಾಡಲು ಶುರು ಮಾಡಿದರು. ಆಗ ೩೦೦ ರೂ. ಬಂಡವಾಳ ಹಾಕಿದ್ದರಂತೆ. ಕ್ರಮೇಣ ಮೊಬೈಲ್ ಕವರ್, ಸೂಪರ್ ಸ್ಟಿಕ್, ಬೆಲ್ಟು, ಬಳೆ ಸ್ಟ್ಯಾಂಡ್ ಅಂತ ವ್ಯಾಪಾರ ಮಾಡಿದರು. ಈ ಆರು ವರ್ಷದಲ್ಲಿ ಆರಾಮವಾಗಿದ್ದೇನೆ. ಕನಿಷ್ಠ ೫೦ ಸಾವಿರ ರೂ. ಉಳಿತಾಯ ಮಾಡಿದ್ದೇನೆ..ಫುಟ್‌ಪಾತ್ ವ್ಯಾಪಾರ ಮಾಡೋವ್ರು ಹೆಚ್ಚು ಬಂಡವಾಳ ಹಾಕಬೇಕಿಲ್ಲ. ಬೆಂಗಳೂರಲ್ಲಿ ಫುಟ್‌ಪಾತಲ್ಲಿ ದಿನಕ್ಕೆ ಮುನ್ನೂರು ರೂಪಾಯಿ ಈಸಿಯಾಗಿ ಸಂಪಾದನೆ ಮಾಡಬಹುದು. ತರ್‍ಕಾರಿ ಮಾರೋವ್ರಿಗೆ ಅಷ್ಟೊಂದು ಇರ್‍ಲಿಕ್ಕಿಲ್ಲ..ಅಂತಾರೆ ನೂರುಲ್ಲ !

Tuesday 15 December 2009

ವೋಕ್ಸ್ ವ್ಯಾಗನ್ ಘಟಕದ ಒಳಭಾಗ
















ಇತ್ತೀಚೆಗೆ ಪುಣೆಯಲ್ಲಿ ಜರ್ಮನಿ ಮೂಲದ ವೋಕ್ಸ್ ವ್ಯಾಗನ್ ಕಾರು ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ ವೇಳೆ ಸೆರೆಹಿಡಿದ ಕೆಲವು ಚಿತ್ರಗಳು ಇಲ್ಲಿವೆ. ಘಟಕದ ಬಗ್ಗೆ ಈಗಾಗಲೇ ಲೇಖನ ಬರೆದು ನಿಮ್ಮ ಮುಂದಿಟ್ಟಿದ್ದೇನೆ. ಆದರೆ ಘಟಕದ ಒಳಭಾಗದ ನೋಟ ಇಲ್ಲಿದೆ..

Sunday 13 December 2009

ಅಂದು ಬಂಜರು, ಇಂದು ವೋಕ್ಸ್‌ವ್ಯಾಗನ್ ಕಾರು ಬಾರು !

ಸಾಮಾನ್ಯ ಮೇಲ್ಸೇತುವೆಯನ್ನು ಕಟ್ಟಲು ವರ್ಷಗಟ್ಟಲೆ ತಗಲುವ ಉದಾಹರಣೆಗಳು ನಮ್ಮಲ್ಲಿ ಧಾರಾಳ ಸಿಗುತ್ತವೆ. ಬೆಂಗಳೂರು ಮೆಟ್ರೊ ರೈಲಿನ ಕಾಮಗಾರಿ ಮೊದಲ ಹಂತವನ್ನು ಪೂರೈಸಲೂ ಇನ್ನೂ ಐದಾರು ವರ್ಷ ಕಾದು ಸುಸ್ತಾಗಬೇಕು. ಹೀಗಿರುವಾಗ ತಗ್ಗು ದಿಣ್ಣೆಗಳಿಂದ ಕೂಡಿದ ಬರಡು ಭೂಮಿಯಲ್ಲಿ ಪ್ರತಿ ವರ್ಷ ೧.೧ ಲಕ್ಷ ಕಾರುಗಳನ್ನು ಉತ್ಪಾದಿಸುವ ಅತ್ಯಾಧುನಿಕ ಘಟಕವನ್ನು ಸ್ಥಾಪಿಸಲು ಎಷ್ಟು ಸಮಯ ಬೇಕು ?
ಮನಸ್ಸು ಮಾಡಿದರೆ ಕೇವಲ ೧೭ ತಿಂಗಳು ಸಾಕು ಎಂಬುದನ್ನು ನಮಗೆ ಸಾಬೀತುಪಡಿಸಿರುವುದು ಭಾರತೀಯ ಕಂಪನಿಯಲ್ಲ, ಜರ್ಮನಿಯ ವೋಕ್ಸ್ ವ್ಯಾಗನ್ ! ವಾಸ್ತವವಾಗಿ ಯೋಜಿಸಿದ್ದಕ್ಕಿಂತ ಒಂಬತ್ತು ತಿಂಗಳು ಮೊದಲೇ ನಿಗದಿತ ಗುರಿಯನ್ನು ಮುಟ್ಟಿದೆ ಈ ಕಾರು ಕಂಪನಿ. ಹಾಗಾದರೆ ಜರ್ಮನಿಯ ಉದ್ಯಮಿಗಳಿಗೆ ಸಾಧ್ಯವಾಗುವ ಇಂಥ ದಾಖಲೆಯ ನಮ್ಮವರಿಗೇಕೆ ಸಾಧ್ಯವಾಗುತ್ತಿಲ್ಲ ?
ಬೇಕಾದರೆ ನೋಡಿ. ಜರ್ಮನಿಯ ವೋಕ್ಸ್‌ವ್ಯಾಗನ್ ಪುಣೆಯಲ್ಲಿ ಶನಿವಾರ ನೂತನ ಪೊಲೊ ಕಾರಿನ ಉತ್ಪಾದನೆಯನ್ನು ಆರಂಭಿಸಿತು. ಮೂಲಸೌಕರ್ಯಗಳ ನಿಟ್ಟಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ, ಬೋಳು ಗುಡ್ಡ ಹಾಗೂ ಬಟಾ ಬಯಲಿನಂತಿರುವ ಚಕಾನ್‌ನಲ್ಲಿ ಸುಮಾರು ೫೭೫ ಎಕರೆ ವ್ಯಾಪ್ತಿಯಲ್ಲಿ ಭಾರಿ ಘಟಕವನ್ನು ವೋಕ್ಸ್‌ವ್ಯಾಗನ್ ನಿರ್ಮಿಸಿದೆ. ಇಂಥ ನೆಲದಲ್ಲಿ ೩,೫೦೦ ಕೋಟಿ ರೂ.ಗಳನ್ನು ಕಂಪನಿ ಬಂಡವಾಳ ಹೂಡಿದೆ. ಸ್ಕೋಡಾ, ಆಡಿ ಮುಂತಾದ ಕಂಪನಿಯ ಕಾರುಗಳನ್ನೀಗ ಇಲ್ಲಿಯೇ ಉತ್ಪಾದಿಸಲಾಗುತ್ತಿದೆ. ಕೈ ತೊಳೆದು ಮುಟ್ಟಬೇಕೆನ್ನುವ, ಪಳಪಳನೆ ಮಿಂಚುತ್ತಿರುವ ಸ್ವಚ್ಛ, ಸುಸಜ್ಜಿತ, ವ್ಯವಸ್ಥಿತ ಕಾರ್ಖಾನೆಯಿದು.
ವೋಕ್ಸ್ ವ್ಯಾಗನ್‌ಗಿಂತಲೂ ಇದರ ನಾನಾ ಬ್ರಾಂಡ್‌ಗಳ ಕಾರುಗಳ ಹೆಸರು ಭಾರತದಲ್ಲಿ ಜನಪ್ರಿಯ. ಸಿಯೆಟ್, ಸ್ಕೋಡಾ, ಆಡಿ, ಬೆಂಟ್ಲಿ, ಲ್ಯಾಂಬೋರ್‍ಗಿನಿ, ಪೋರ್ಶೆ, ಬುಗಟ್ಟಿ, ಸ್ಕಾನಿಯಾ, ವೋಕ್ಸ್ ವ್ಯಾಗನ್ ಪ್ಯಾಸೆಂಜರ್ ಕಾರು, ವೋಕ್ಸ್ ವ್ಯಾಗನ್ ಕಮರ್ಶಿಯಲ್ ವಾಹನಗಳನ್ನು ಕಂಪನಿ ಉತ್ಪಾದಿಸುತ್ತಿದೆ. ವಿಶ್ವಾದ್ಯಂತ ೬೧ ರಾಷ್ಟ್ರಗಳಲ್ಲಿ ೩.೭ ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಪ್ರತಿ ದಿನ ೨೬,೬೦೦ ವಾಹನಗಳ ಉತ್ಪಾದನೆ ಅಥವಾ ಸಂಬಂಸಿದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ ಎನ್ನುತ್ತದೆ ಕಂಪನಿ.
ಭಾರತೀಯ ಮಾರುಕಟ್ಟೆಗೆ ವೋಕ್ಸ್‌ವ್ಯಾಗನ್‌ನ ಸ್ಕೋಡಾ ಕಾರು ೨೦೦೧ರಲ್ಲಿ ಪ್ರವೆಶಿಸಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ವೋಕ್ಸ್‌ವ್ಯಾಗನ್‌ನ ಆಡಿ, ಪಸ್ಯಾಟ್ , ಜೆಟ್ಟಾ ಸೇರಿದಂತೆ ೮ ಮಾದರಿಯ ಕಾರುಗಳನ್ನು ಅಸೆಂಬಲ್ ಮಾಡುತ್ತಾರೆ. ಕಾರನ್ನು ಪರಿಚಯಿಸುವುದರ ಮೂಲಕ. ಮರು ವರ್ಷವೇ ಜೆಟ್ಟಾ ಕಾರನ್ನು ಬಿಡುಗಡೆಗೊಳಿಸಿತು. ದೇಶದಲ್ಲಿ ತನ್ನ ಕಾರುಗಳು ಜನರ ಮನಸೂರೆಗೊಳ್ಳುತ್ತಿದ್ದಂತೆ ವೋಕ್ಸ್‌ವ್ಯಾಗನ್ ಇಲ್ಲಿಯೇ ಮೊದಲ ಉತ್ಪಾದನೆ ಘಟಕವನ್ನು ಆರಂಭಿಸಲು ತೀರ್ಮಾನಿಸಿತು. ಯಾಕೆಂದರೆ ಜರ್ಮನಿಯಲ್ಲೋ, ಬೇರೆಲ್ಲೊ ಬಿಡಿ ಭಾಗಗಳನ್ನು ಉತ್ಪಾದಿಸಿ ಭಾರತಕ್ಕೆ ತಂದು ಜೋಡಿಸಿ ಮಾರಾಟ ಮಾಡುವುದಕ್ಕಿಂತ ಇಲ್ಲಿಯೇ ಉತ್ಪಾದಿಸಿದರೆ ಖರ್ಚು ಉಳಿತಾಯವಾಗುತ್ತದೆ. ವ್ಯಾಪಾರ ಲಾಭದಾಯಕವಾಗುತ್ತದೆ. ಬೇಕಾದರೆ ರಫ್ತನ್ನೂ ಇಲ್ಲಿಂದಲೇ ಮಾಡಬಹುದು. ಹೀಗಾಗಿ ಸಾಕಷ್ಟು ಹುಡುಕಾಟ, ರಾಜ್ಯ ಸರಕಾರಗಳ ಜತೆ ಮಾತುಕತೆಯ ಕಸರತ್ತಿನ ನಂತರ ಮಹಾರಾಷ್ಟ್ರದ ಪುಣೆಯಲ್ಲಿನ ಚಕಾನ್‌ನ್ನು ವೋಕ್ಸ್ ವ್ಯಾಗನ್ ಆಯ್ಕೆ ಮಾಡಿಕೊಂಡಿತು. ಚಕಾನ್‌ನಲ್ಲಿ ವೋಕ್ಸ್‌ವ್ಯಾಗನ್‌ಗೆ ದಕ್ಕಿದ ಕೈಗಾರಿಕಾ ಪ್ರದೇಶ ವಿಸ್ತಾರವಾಗಿದ್ದರೂ ಬಹುತೇಕ ಬರಡು ನೆಲವಾಗಿತ್ತು.
ಅಂತೂ ೨೦೦೬ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಕಂಪನಿ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕೇವಲ ಮೂವತ್ತು ದಿನಗಳಲ್ಲಿ ನೆಲವನ್ನು ತಟ್ಟುಗೊಳಿಸಿ ಪೈಂಟ್ ಶಾಪ್, ಬಾಡಿ ಶಾಪ್, ಅಸೆಂಬ್ಲಿ ಮತ್ತು ಲಾಜಿಸ್ಟಿಕ್ ವಿಭಾಗವನ್ನು ನಿರ್ಮಿಸಲಾಯಿತು. ೨೦೦೮ರ ಅಕ್ಟೋಬರ್ ಹೊತ್ತಿಗೆ ಘಟಕದ ಎಲ್ಲ ವಿಭಾಗಗಳಿಗೆ ಬೇಕಾದ ಪರಿಕರಗಳನ್ನು ತಂದು ಜೋಡಿಸಲಾಯಿತು. ನವೆಂಬರ್‌ನಲ್ಲಿ ಮೊದಲ ಬಾರಿಗೆ ಬಾಡಿ ಶಾಪ್ ಮತ್ತು ಅಸೆಂಬ್ಲಿ ಕಾರ್ಯಾರಂಭ ಮಾಡಿತು. ಈ ವರ್ಷ ಜನವರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪೇಯಿಂಟ್ ಮಾಡಿದ ಕಾರಿನ ಬಾಡಿಯನ್ನು ಉತ್ಪಾದಿಸಲಾಯಿತು. ಮಾರ್ಚ್‌ನಲ್ಲಿ ಘಟಕವನ್ನು ಮಹಾರಾಷ್ಟ್ರದ ರಾಜ್ಯಪಾಲ ಎಸ್.ಸಿ ಜಮೀರ್ ಉದ್ಘಾಟಿಸಿದರು. ಮೊನ್ನೆ ಡಿ. ೧೨ರಂದು ಮಧ್ಯಮ ಶ್ರೇಣಿಯ ಪೊಲೊ ಕಾರಿನ ಉತ್ಪಾದನೆಯನ್ನು ಆರಂಭಿಸಲಾಯಿತು. ಹೊಸ ವರ್ಷದ ಜನವರಿಯಲ್ಲಿ ಪೊಲೊ ಕಾರು ಭಾರತದ ರಸ್ತೆಗಿಳಿಯಲಿದೆ. ನಿಜ. ಮಹಾರಾಷ್ಟ್ರ ಸರಕಾರ ವೋಕ್ಸ್ ವ್ಯಾಗನ್ ಕಂಪನಿಗೆ ನೆಲ, ನೀರು, ಕರೆಂಟು ಸೇರಿದಂತೆ ಸಕಲ ನೆರವನ್ನೂ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಆದರೆ ಅದೊಂದೇ ಕಂಪನಿಯ ಕಾರುಬಾರಿಗೆ ಸಾಕಾಗುವುದಿಲ್ಲ. ಗುಣಮಟ್ಟ ಕಾಯ್ದುಕೊಳ್ಳುವಿಕೆ, ಸತತ ಪರಿಶ್ರಮ, ಸಂಶೋಧನೆ ಮತ್ತು ತ್ವರಿತ ಅಭಿವೃದ್ಧಿ , ತಂತ್ರಗಾರಿಕೆ ಹಾಗೂ ನಾಯಕತ್ವದ ಪರಿಣಾಮವಾಗಿ ವೋಕ್ಸ್ ವ್ಯಾಗನ್ ಇವತ್ತು ಒಂದಾದ ಮೇಲೊಂದರಂತೆ ಮೈಲುಗಲ್ಲು ಸ್ಥಾಪಿಸುತ್ತಿದೆ.

ಬಜಾಜ್ ಸ್ಕೂಟರ್ ಯುಗಾಂತ್ಯ !

ಹಮಾರಾ ಬಜಾಜ್ !
ಈ ಹೆಸರು ಕೇಳಿದೊಡನೆ ೬೦,೭೦ ಮತ್ತು ಎಂಬತ್ತರ ದಶಕದ ಜನರ ಕಿವಿ ನಿಮಿರುತ್ತದೆ. ಭಾರತ ಉದಾರೀಕರಣ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ದೇಶಾದ್ಯಂತ ಮಧ್ಯಮವರ್ಗದ ಪ್ರತಿಷ್ಠೆಯ ಸಂಕೇತವೇ ಆಗಿತ್ತು ಬಜಾಜ್ ಸ್ಕೂಟರ್ ! ವರದಕ್ಷಿಣೆಯಾಗಿ ಸ್ಕೂಟರ್ ಕೊಟ್ಟರೆ ಅದರ ಗಮ್ಮತ್ತೇ ಬೇರೆ. ಇಡೀ ಸಂಸಾರ ಸ್ಕೂಟರ್ ಮೇಲೆ ತವರಿಗೆ ಜುಮ್ಮಂತ ಸವಾರಿ ಮಾಡುತ್ತಿದ್ದ ಕಾಲವದು. ಅಂತಹ ಸಂಚಲನ ಸೃಷ್ಟಿಸಿದ್ದ ಬಜಾಜ್ ಸ್ಕೂಟರ್‌ನ ಗತ ವೈಭವದತ್ತ ಒಂದು ನೋಟ..
ಪುಣೆಯಲ್ಲಿ ೧೯೪೫ರ ನವೆಂಬರ್ ೨೯ರಂದು ಅಸ್ತಿತ್ವಕ್ಕೆ ಬಂದ ಬಚಾರ್ಜ್‌ಟ್ರೇಡಿಂಗ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಮುಂದೆ ಬಜಾಜ್ ಆಟೊ ಎಂದು ಹೆಸರಾಯಿತು. ಆರಂಭದಲ್ಲಿ ಕಂಪನಿ ದ್ವಿಚಕ್ರ ವಾಹನಗಳನ್ನು ಆಮದು ಮಾಡಿ ದೇಶದಲ್ಲಿ ಮಾರಾಟ ಮಾಡುತ್ತಿತ್ತು. ೧೯೫೯ರಲ್ಲಿ ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನಗಳ ಉತ್ಪಾದನೆಗೆ ಭಾರತ ಸರಕಾರದಿಂದ ಕಂಪನಿ ಪರವಾನಗಿ ಪಡೆಯಿತು.
ಆರಂಭದಲ್ಲಿ ಬಜಾಜ್ ಕಂಪನಿಯು ಇಟಲಿ ಮೂಲದ ಪ್ಯಾಶಿಯೋ ಕಂಪನಿಯ ವೆಸ್ಪಾ ಸ್ಕೂಟರ್‌ನ್ನು ಆಮದು ಮಾಡಿಕೊಳ್ಳುತ್ತಿತ್ತು. ೧೯೬೦ರಲ್ಲಿ ಈ ಕಂಪನಿಯ ಸಹಭಾಗಿತ್ವದಲ್ಲಿ ಬಜಾಜ್ ಅದೇ ಗುಣಮಟ್ಟ ಮತ್ತು ತಾಂತ್ರಿಕತೆಯೊಂದಿಗೆ ಸ್ಕೂಟರನ್ನು ಉತ್ಪಾದಿಸಲಾರಂಭಿಸಿತು. ಆದರೆ ಇಂದಿರಾ ಗಾಂಯವರ ಖಾಸಗೀಕರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ಯಾಶಿಯೊ ಜತೆಗಿನ ಒಪ್ಪಂದ ನವೀಕರಣವಾಗಲಿಲ್ಲ. ಸಹಭಾಗಿತ್ವ ಮುಗಿದ ನಂತರ ಬಜಾಜ್ ತನ್ನದೇ ಬ್ರ್ಯಾಂಡ್, ವಿನ್ಯಾಸದಲ್ಲಿ ೧೯೭೨ರಲ್ಲಿ ಸ್ಕೂಟರ್ ಉತ್ಪಾದನೆ ಆರಂಭಿಸಿತು. ಅದರ ಹೆಸರೇ ಚೇತಕ್ !
ಬಜಾಜ್‌ನ ಸ್ವದೇಶಿ ನಿರ್ಮಿತ ಸ್ಕೂಟರ್‌ಗೆ ಆ ಚೇತಕ್ ಹೆಸರು ಬರಲು ಕಾರಣ ಮೇವಾಡದ ರಜಪೂತ ದೊರೆ, ಕದನಕಲಿ ರಾಣಾ ಪ್ರತಾಪ್ ಸಿಂಗ್‌ನ ನೆಚ್ಚಿನ ಕುದುರೆ ! ಸಮರಭೂಮಿಯಲ್ಲಿ ಒಡೆಯನಿಗೆ ಸದಾ ನೆರವಾಗುತ್ತಿದ್ದ ಕುದುರೆ ಅತ್ಯಂತ ಚುರುಕು ಮತ್ತು ಬಲಶಾಲಿಯಾಗಿತ್ತು. ಆರಂಭದಲ್ಲಿ ೨ ಸ್ಟ್ರೋಕ್, ನಂತರ ೪ ಸ್ಟ್ರೋಕ್ ಅಂತ ಸ್ಕೂಟರ್‌ನ ಸಾಮರ್ಥ್ಯ, ವಿನ್ಯಾಸ ಬದಲಾಯಿತು. ೧೯೮೦ರಲ್ಲಿ ಅಮೆರಿಕದಲ್ಲಿ ೪ ಸ್ಟ್ರೋಕ್ ಸ್ಕೂಟರನ್ನು ಮಾರಲು ಕಂಪನಿ ಯತ್ನಿಸಿದರೂ ಯಶ ಕಾಣಲಿಲ್ಲ.
೬೦ರ ದಶಕದಿಂದ ತೀರಾ ೨೦೦೦ರ ತನಕ ಕೂಡ ಬಜಾಜ್ ಸ್ಕೂಟರ್‌ನಲ್ಲಿ ನಾನಾ ವಿಧಗಳು ಮಾರುಕಟ್ಟೆಗೆ ಬಂದಿವೆ. ಬಜಾಜ್ ಚೇತಕ್‌ನಿಂದ (೧೯೭೨) ಮೊದಲ್ಗೊಂಡು ಬಜಾಜ್ ಸೂಪರ್ (೧೯೭೬), ಬಜಾಜ್ ಸನ್ನಿ (೧೯೯೦) ೨೦೦೦ದಲ್ಲಿ ಬಜಾಜ್ ಸಫಾರಿ ಎಂಬ ಗೇರ್ ರಹಿತ ಸ್ಕೂಟರ್ ಸೇರಿದಂತೆ ನಾನಾ ಬಗೆಯ, ಬಣ್ಣ ಹಾಗೂ ಸಾಮರ್ಥ್ಯದ ಸ್ಕೂಟರ್ ಮಾರುಕಟ್ಟೆಗೆ ಬಂದಿತ್ತು.
೧೯೭೦ರಲ್ಲಿ ಬಜಾಜ್ ಕಂಪನಿ ೧ ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ೧೯೮೬ರಲ್ಲಿ ೫ ಲಕ್ಷ ವಾಹನಗಳನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು. ೧೯೯೫ರಲ್ಲಿ ೧೦ ಲಕ್ಷ ವಾಹನಗಳನ್ನು ಮಾರಾಟ ಮಾಡಿತು. ಸ್ಕೂಟರ್‌ನ ಮಾರಾಟಕ್ಕೆ ‘ ಹಮಾರಾ ಬಜಾಜ್ ’ ಎಂಬ ಪ್ರಚಾರಾಂದೋಲನವನ್ನು ಕಂಪನಿ ನಡೆಸಿತ್ತು.
‘ ನಾನು ೧೫ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಜಾಜ್ ಚೇತಕ್ ಸ್ಕೂಟರ್ ಖರೀದಿಸಿದೆ. ಅಂದಿನಿಂದ ಇವತ್ತಿನ ತನಕ ಅದು ನನ್ನ ಸಂಗಾತಿಯಾಗಿದೆ. ಇದುವರೆಗೆ ನಾನೇ ಅದಕ್ಕೆ ಸಣ್ಣ ಪುಟ್ಟ ತೊಂದರೆ ಕೊಟ್ಟಿರಬಹುದೇ ವಿನಾ, ಅದರಿಂದ ನನಗೇ ಏನೂ ತೊಂದರೆಯಾಗಿಲ್ಲ..’
ಹಮಾರಾ ಬಜಾಜ್ ಸ್ಕೂಟರ್‌ನ ಮಹಿಮೆ ಬಗ್ಗೆ ಹೀಗೆನ್ನುತ್ತಾರೆ ನಾಗಲಿಂಗ ಬಡಿಗೇರ್. ಅವರು ೧೯೯೪ರಲ್ಲಿ ಸ್ಕೂಟರ್‌ನ್ನು ೨೨,೫೦೦ ರೂ.ಗೆ ಖರೀದಿಸಿದ್ದರು. ಆವತ್ತಿನ ದಿನಗಳಲ್ಲಿ ೫೩ ಕಿ.ಮೀ ಮೈಲೇಜ್ ಕೊಡುತ್ತಿತ್ತು. ಈಗಲೂ ೪೩ಕ್ಕೆ ಕೊರತೆ ಇಲ್ಲ ಎನ್ನುತ್ತಾರೆ ಬಡಿಗೇರ್. ನಾನು, ಪತ್ನಿ ಮತ್ತು ಇಬ್ಬರು ಮಕ್ಕಳು ಬಜಾಜ್ ಸ್ಕೂಟರ್‌ನಲ್ಲಿ ಓಡಾಡಿರುವುದಕ್ಕೆ ಲೆಕ್ಕ ಸಿಗುವುದಿಲ್ಲ. ಈಗಲೂ ಯಾರಿಗೂ ಸ್ಕೂಟರನ್ನು ಮಾರಲು ನಾನು ಸಿದ್ಧನಿಲ್ಲ. ಅಷ್ಟೊಂದು ಭಾವನಾತ್ಮಕ ಸಂಬಂಧ ಅದರ ಮೇಲಿದೆ. ಇನ್ನು ಮುಂದೆ ಸ್ಕೂಟರ್ ಉತ್ಪಾದನೆ ನಿಂತು ಹೋದರೆ ಬಿಡಿ ಭಾಗವಾದರೂ ಸಿಗುತ್ತಾ ? ಎನ್ನುತ್ತಾರೆ ಬಡಿಗೇರ್.
ಆದರೆ ೯೦ರ ದಶಕದ ನಂತರ ಉದಾರೀಕರಣ ನೀತಿಯಿಂದ ಆರ್ಥಿಕತೆ ಸುಧಾರಣೆಯತ್ತ ತಿರುಗಿತು. ಹೀಗಾಗಿ ಗ್ರಾಹಕರ ಆಯ್ಕೆಯಲ್ಲಿ ಮಹತ್ತರ ಬದಲಾವಣೆಯಾಯಿತು. ಸಾಲದ್ದಕ್ಕೆ ಬೈಕ್‌ಗಳು ಜನಪ್ರಿಯವಾಗತೊಡಗಿತು. ಸ್ಕೂಟರ್‌ನತ್ತ ಜನರ ಆಸಕ್ತಿ ಕಡಿಮೆಯಾಯಿತು. ಹೀರೊ ಹೊಂಡಾ, ಟಿವಿಎಸ್, ಯಮಾಹಾ ಮುಂತಾದ ಕಂಪನಿಗಳು ಮಾರುಕಟ್ಟೆಗೆ ದಾಂಗುಡಿಯಿಟ್ಟವು. ಕೊನೆಯ ದಿನಗಳಲ್ಲಿ ಬಜಾಜ್ ಕಂಪನಿ ತಿಂಗಳಿಗೆ ಅಂದಾಜು ೧ ಸಾವಿರ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿತ್ತು. ಅದೂ ಬಹುತೇಕ ರಫ್ತಿಗೆ ಸೀಮಿತವಾಗಿತ್ತು. ಹೀಗಾಗಿ ಇನ್ನು ಸ್ಕೂಟರ್ ಉತ್ಪಾದನೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಕಂಪನಿ ಭಾವಿಸಿತು. ಮುಂಬರುವ ಮಾರ್ಚ್‌ನಿಂದ ಸ್ಕೂಟರ್ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಬಜಾಜ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ. ಮೂರು ವರ್ಷಗಳ ಹಿಂದೆಯೇ ಬಜಾಜ್ ಚೇತಕ್ ಸ್ಕೂಟರ್ ಉತ್ಪಾದನೆ ನಿಂತು ಹೋಗಿತ್ತು.

Wednesday 9 December 2009

ಆರ್ಕುಟ್‌ನಲ್ಲಿ ಎನ್ನಾರ್ ನಾರಾಯಣ ಮೂರ್ತಿ

ಗೂಗಲ್ ಸರ್ಚ್ ಎಂಜಿನ್‌ನ ಅಂಗವಾದ ಆರ್ಕುಟ್ ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಇಷ್ಟೊಂದು ವೈವಿಧ್ಯತೆ ಹಾಗೂ ಸ್ವಾರಸ್ಯ ಇದೆ ಎಂದು ನನಗೆ ಈ ತನಕ ಗೊತ್ತೇ ಇರಲಿಲ್ಲ. ಕೆಲ ಸಹೋದ್ಯೋಗಿಗಳು, ಬಂಧು ಮಿತ್ರರು ಆರ್ಕುಟ್‌ನಲ್ಲಿ ಮುಳುಗಿರುವುದನ್ನು ನೋಡಿದಾಗ ಅವರ ಬಗ್ಗೆಯೇ ‘ ಇವರಿಗೆ ಬೇರೆ ಕೆಲ್ಸ ಇಲ್ಲಂತ ಕಾಣ್ಸುತ್ತೆ ’ ಎಂದು ತಪ್ಪಾಗಿ ಭಾವಿಸಿದ್ದುಂಟು. ಆದರೆ ನಿಜಕ್ಕೂ ಈ ಉಚಿತ ಆರ್ಕುಟ್ ನೆಟ್‌ವರ್ಕ್‌ನ ಉಪಯೋಗ ಸಾಕಷ್ಟಿದೆ.
ಅಂದಹಾಗೆ ಇನ್ನು ಮುಂದೆ ಆರ್ಕುಟ್‌ನೊಳಗೆ ವೀಕ್ಷಣೆಯ ವೇಳೆ ನನಗೆ ಕಂಡದ್ದನ್ನು ನಿಯಮಿತವಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ಇದು ನಿಮಗೆ ಇಷ್ಟವಾದೀತು ಎಂದು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆ, ಅನಿಸಿಕೆಯನ್ನೂ ನಂಗೆ ತಿಳಿಸುವಿರಾ..
ಇವತ್ತು ಇನೋಸಿಸ್‌ನ ಮುಖ್ಯ ಮಾರ್ಗದರ್ಶಕ ಎನ್‌ಆರ್ ನಾರಾಯಣ ಮೂರ್ತಿ ಅವರ ಅಭಿಮಾನಿಗಳು ಮೂರ್ತಿ ಬಗ್ಗೆ ರಚಿಸಿದ ಆರ್ಕುಟ್ ಪುಟವನ್ನು ವೀಕ್ಷಿಸಿದೆ. ನಾಗವಾರ ರಾಮರಾವ್ ನಾರಾಯಣ ಮೂರ್ತಿ - ಭಾರತದಲ್ಲಿ ಅತಿ ದೊಡ್ಡ ಐಟಿ ಸಾಮ್ರಾಜ್ಯವನ್ನು ಕಟ್ಟಿದ್ದಕ್ಕೆ ಮಾತ್ರವೇ ಅವರು ಪ್ರಸಿದ್ಧರಲ್ಲ, ಸರಳತೆಗೂ ಅವರು ಹೆಸರಾಗಿದ್ದಾರೆ ಎನ್ನುತ್ತದೆ ವಿವರಣೆ. ೨೦೦೪ರ ಡಿಸೆಂಬರ್ ೩ರಂದು ರಚನೆಯಾದ ಈ ತಾಣಕ್ಕೆ ೪,೯೩೬ ಸದಸ್ಯರಿದ್ದಾರೆ.
ಎನ್ನಾರ್ ನಾರಾಯಣ ಮೂರ್ತಿಯವರ ಸಂಕ್ಷಿಪ್ತ ಪರಿಚಯ ಹಾಗೂ ಅವರ ಬಗ್ಗೆ ನೂರಾರು ಮಂದಿ ಅಭಿಪ್ರಾಯಗಳನ್ನು ಬರೆದಿದ್ದಾರೆ. ೨೦೦೭ರ ಮೂರ್ತಿಯವರು ರಾಷ್ಟ್ರಪತಿಯಾದರೆ ಭಾರತ ಹೈಟೆಕ್ ದೇಶ ಆಗುತ್ತಾ ಎಂಬ ಪ್ರಶ್ನೆಯನ್ನು ಮತಕ್ಕೆ ಹಾಕಿದಾಗ ೩೦೭ ಮಂದಿ ಪ್ರತಿಕ್ರಿಯಿಸಿದ್ದು( ಈ ತನಕ ), ಅವರಲ್ಲಿ ೨೧೨ ಮಂದಿ ಹೌದು ಎಂದಿದ್ದಾರೆ. ೬೨ ಮಂದಿ ಮೂರ್ತಿ ರಾಷ್ಟ್ರಪತಿಯಾಗುತ್ತಾರೋ ಎಂದು ನೋಡೋಣ ಎಂದಿದ್ದಾರೆ. ೩೩ ಮಂದಿ ಏನನ್ನೂ ಹೇಳಲಾಗದು ಎಂದಿದ್ದಾರೆ.
ನಾರಾಯಣಮೂರ್ತಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದರೆ ಏನು ಗಿಫ್ಟ್ ಕೊಡುತ್ತೀರಿ ? ಎಂಬ ಪ್ರಶ್ನೆಗೆ, ಮೂರ್ತಿಯವರ ದೋಸ್ತಿಗಳಿಗೆ ಔತಣಕೂಟ ಏರ್ಪಡಿಸುತ್ತೇನೆ ಎನ್ನುತ್ತಾನೆ ಒಬ್ಬ. ಅದಕ್ಕೆ ಮತ್ತೊಬ್ಬ ‘ ಒಳ್ಳೆಯದೇ, ಆದರೆ ಗಿಫ್ಟ್ ಅಂತ ಏನಾದ್ರೂ ಕೊಟ್ಟರೆ ಒಳ್ಳೇದು ’ ಅಂತಾನೆ. ಮತ್ತೊಬ್ಬ ಎನ್ನಾರ್ ಮೂರ್ತಿಯವರ ಆತ್ಮಕಥೆ ಇದೆಯೇ ಎನ್ನುತ್ತಾನೆ. ನಾರಾಯಣ ಮೂರ್ತಿ, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಪೈಕಿ ಯಾರು ಬೆಸ್ಟ್ ಉದ್ಯಮಿ ಎಂಬ ಪ್ರಶ್ನೆಯನ್ನು ಮತಕ್ಕೆ ಹಾಕಲಾಗಿದೆ.
ಹೀಗಿದ್ದರೂ ತಾಣದಲ್ಲಿ ಗಂಭೀರ ಹಾಗೂ ಸಂಗ್ರಹಯೋಗ್ಯ ಚರ್ಚೆಯಾಗಲಿ, ವಿಚಾರ ವಿನಿಮಯವಾಗಲಿ ನಡೆದಿಲ್ಲ. ಆದರೆ ನಡೆಸಬಹುದಿತ್ತು ಎಂದು ನನಗನ್ನಿಸಿತು

( ಚಿತ್ರದಲ್ಲಿರುವವರು ಯಾರೆಂದು ಗೊತ್ತಾಯಿತೇ ?
ಸುಧಾ ಮೂರ್ತಿ, ನಾರಾಯಣ ಮೂರ್ತಿ, ನಂದನ್ ನೀಲೇಕಣಿ, ರೋಹಿಣಿ ನೀಲೇಕಣಿ )

Saturday 5 December 2009

೨.೧ ಕೋಟಿ ಮೊಬೈಲ್ ಡೆಡ್..ಮುಂದ ?

ದೇಶದಲ್ಲಿ ಒಟ್ಟು ೨.೧ ಕೋಟಿ ಮೊಬೈಲ್‌ಗಳ ಸದ್ದಡಗಿ ಮೂರು ದಿನಗಳು ಕಳೆದಿವೆ. ಇತ್ತ ಬೆಂಗಳೂರಿನ ಜಯನಗರದ ಒಂಬತ್ತನೇ ಬ್ಲಾಕ್‌ನಲ್ಲಿರುವ ಜೈ ಶಂಕರ್ ತಮ್ಮ ಮೊಬೈಲ್ ಫೋನ್ ಸರ್ವೀಸ್ ಸೆಂಟರ್‌ನಲ್ಲಿ ಹಗಲು ರಾತ್ರಿ ಎನ್ನದೆ ಬ್ಯುಸಿಯಾಗಿದ್ದಾರೆ. ಅವರ ಮೊಬೈಲ್ ನಿರಂತರ ರಿಂಗಣಿಸುತ್ತಿದೆ. ಅವರೆಲ್ಲರದ್ದೂ ಒಂದೇ ದೂರು.
ಸಾರ್, ನಮ್ಮ ಮೊಬೈಲ್ ನಿಂತು ಹೋಗಿದೆ. ಔಟ್ ಗೋಯಿಂಗ್ ಇಲ್ಲ, ಇನ್‌ಕಮಿಂಗೂ ಇಲ್ಲ. ಏನ್ ಮಾಡ್ಬೇಕು ಸಾ... ಮೊಬೈಲಿಲ್ಲದೆ ಯಾವ ಕೆಲ್ಸಾನೂ ನಡೀತಿಲ್ಲ... ಇತ್ತ ಕಡೆಯಿಂದ ಜೈ ಶಖರ್ ಇದಕ್ಕೆ ಏನು ಮಾಡಬೇಕು ಎನ್ನುತ್ತಾರೆ. ಮತ್ತೊಂದೆಡೆ ಚಕಚಕನೆ ಮೊಬೈಲ್‌ಗಳಿಗೆ ಹೊಸ ಗುರುತಿನ ಸಂಖ್ಯೆಯನ್ನು ನೀಡುತ್ತಾರೆ. ಇದು ಆನ್‌ಲೈನ್ ಮೂಲಕ ೨೦ ಸೆಕೆಂಡ್‌ನೊಳಗೆ ನಡೆಯುವ ಕೆಲಸ. ಆದರೂ ಗ್ರಾಹಕನ ಛಾಯಾಚಿತ್ರ, ಗುರುತಿನ ದಾಖಲೆಯನ್ನು ಪರಿಶೀಲಿಸಿ, ಬಿಲ್ ಪಡೆದು ಮೊಬೈಲನ್ನು ಹಿಂತಿರುಗಿಸುವ ಹೊತ್ತಿಗೆ ಕನಿಷ್ಠ ಹದಿನೈದು ನಿಮಿಷ ಬೇಕಾಗುತ್ತದೆ.
ಇನ್ನು ಮುಂದೆ ವಾಹನಗಳಿಗೆ ನಂಬರ್ ಪ್ಲೇಟ್ ಇರುವಂತೆ ಪ್ರತಿ ಮೊಬೈಲ್‌ಗೂ ಹದಿನೈದು ಅಂಕಿಗಳ ಐಎಂಇಐ (ಇಂಟರ್‌ನ್ಯಾಶನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ) ಕಡ್ಡಾಯ. ಇಲ್ಲವಾದಲ್ಲಿ ಅವುಗಳು ಯಾವ ಸಿಮ್ ಹಾಕಿದರೂ ಕೆಲಸ ಮಾಡಲ್ಲ. ಹೀಗಾಗಿ ಗೊತ್ತಿದ್ದೊ ಇಲ್ಲದೆಯೊ ಐಎಂಇಎ ಖರೀದಿಸಿದ್ದ ಲಕ್ಷಾಂತರ ಮಂದಿ, ಇದೀಗ ಮೊಬೈಲ್ ಸರಿ ಹೋದರೆ ಸಾಕೆಂದು ಮೊಬೈಲ್ ಮಳಿಗೆಗಳನ್ನು ಎಡತಾಕುತ್ತಿದ್ದಾರೆ. ಅನೇಕ ಮಂದಿ ಗೊಂದಲದಿಂದ ಪರದಾಡುತ್ತಿದ್ದಾರೆ.
ದೂರಸಂಪರ್ಕ ಇಲಾಖೆಯ ಆದೇಶದಂತೆ ನವೆಂಬರ್ ಮಧ್ಯರಾತ್ರಿಯಿಂದ ಐಎಂಇಎ ಸಂಖ್ಯೆ ಇಲ್ಲದ ಮೊಬೈಲ್‌ಗಳು ಸ್ಥಗಿತವಾಗಿವೆ. ಆದರೆ ಇದನ್ನು ಏನು ಮಾಡಬೇಕು ? ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಬಳಕೆದಾರರಲ್ಲಿ ಮಾಹಿತಿಯ ಕೊರತೆ ಇದೆ. ಉದಾಹರಣೆಗೆ ಸ್ಥಗಿತಗೊಂಡಿರುವ ಮೊಬೈಲ್ ಸಂಖ್ಯೆ ೨.೧ ಕೋಟಿ ಹಾಗೂ ಇದರಲ್ಲಿ ರಾಜ್ಯದಲ್ಲಿ ಶೇ.೪೦ರಷ್ಟಿದೆ ಎನ್ನುತ್ತಾರೆ ದಕ್ಷಿಣ ಭಾರತದಲ್ಲಿ ವಿಭಾಗದ ಐಎಂಇಐ ವಿತರಣೆಯನ್ನು ನಿರ್ವಹಿಸುತ್ತಿರುವ ಪ್ರಸಾದ್ ಎನ್.ವಿಎಸ್ ತಲೂರಿ.
ಆದರೆ ಬೆಂಗಳೂರಿನಲ್ಲಿ ಕೇವಲ ಐವತ್ತು ಚಿಲ್ಲರೆ ಐಎಂಇಐ ಗುರುತಿನ ಸಂಖ್ಯೆ ಕೊಡುತ್ತಾರೆ. ಇದನ್ನೆಲ್ಲ ಹೇಗೊ ಮ್ಯಾನೇಜ್ ಮಾಡಲಾಗುತ್ತಿದೆ. ಆದರೆ ಸ್ವಾರಸ್ಯ ಏನೆಂದರೆ ದೇಶದ ಭದ್ರತೆಯ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಈ ಪ್ರಕ್ರಿಯೆಯೇ ಕೋಟ್ಯಂತರ ರೂ. ವಹಿವಾಟಾಗಿ ಪರಿವರ್ತನೆಯಾಗಿದೆ.
ವಹಿವಾಟು ಕೋಟ್ಯಂತರ : ಪ್ರತಿ ಗ್ರಾಹಕ ಐಎಂಇಐ ಸಂಖ್ಯೆಯನ್ನು ಪಡೆಯಲು ೧೯೯ ರೂ. ಶುಲ್ಕ ನೀಡಬೇಕು. ಅಂದರೆ ಸಾವಿರಾರು ಕೋಟಿ ರೂ.ಗಳ ಬಿಸಿನೆಸ್ ಖಚಿತ. ಈ ಗುರುತಿನ ಸಂಖ್ಯೆ ಕೊಡುವವರು ಒಂದು ಪ್ರಿಂಟರ್, ಕ್ಯಾಮೆರಾ, ಇಂಟರ್‌ನೆಟ್ ಮತ್ತು ಕಂಪ್ಯೂಟರ್ ಹಾಗೂ ಇತರ ಸಣ್ಣ ಪುಟ್ಟ ಸಾಧನ ಹೊಂದಿದ್ದರೆ ಸಾಕು. ಹೀಗಾಗಿ ಲಾಭದಾಯಕಬಲ್ಲ ಈ ಬಿಸಿನೆಸ್‌ನ ಪರವಾನಗಿ ಪಡೆಯಲು ಮೊಬೈಲ್ ಸೇವೆ ನೀಡುವವರ ನಡುವೆ ಭಾರಿ ಪೈಪೋಟಿ ನಡೆದಿತ್ತು. ಕೊನೆಗೂ ಪರವಾನಗಿ ಪಡೆದವರು ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ. ಹೀಗಿದ್ದರೂ ಎಷ್ಟು ಸಾವಿರ ಕೋಟಿ ಬಿಸಿನೆಸ್ ನಡೆದೀತು ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಆದರೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಕನಿಷ್ಠ ೨೫ ಲಕ್ಷ ಮೊಬೈಲ್‌ಗಳು ಈಗ ನಿಷ್ಕ್ರಿಯವಾಗಿವೆ.
ಗೊಂದಲ : ದೂರಸಂಪರ್ಕ ಇಲಾಖೆಯು ಜಿಐಐ ಕಾರ್ಯಕ್ರಮವನ್ನು (ಜೀನೀನ್ ಐಎಂಇಐ ಇಂಪ್ಲಿಮೆಂಟ್ ಪ್ರೋಗ್ರಾಮ್ ) ನ.೩೦ಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಆರಂಭದಲ್ಲಿ ಆದೇಶ ಹೊರಡಿಸಿತ್ತು. ಆದರೆ ನ.೨೭ರಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ-ಸಿಇಎಐ ಜತೆ ಚರ್ಚಿಸಿದ ನಂತರ ಇಲಾಖೆ ಮತ್ತೊಂದು ನಿರ್ದೇಶನ ಹೊರಡಿಸಿತು. ಅದರ ಪ್ರಕಾರ ಐಎಂಇಐ ಇಲ್ಲದ ಮೊಬೈಲ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಐಎಂಇಐಯನ್ನು ನೀಡುವ ಕಾರ್ಯಕ್ರಮವನ್ನು ರದ್ದುಪಡಿಸಿಲ್ಲ. ಹೀಗಾಗಿ ಗ್ರಾಹಕರು ಪರದಾಡುವ ಆವಶ್ಯಕತೆ ಇಲ್ಲ. ಸಾವಿರಾರು ರೂ. ಕೊಟ್ಟು ಖರೀದಿಸಿದ ಚೀನಾದ ಮೊಬೈಲನ್ನು ಹೋಯ್ತಲ್ಲಪ್ಪಾ ಎಂದು ತಪ್ಪಾಗಿ ಭಾವಿಸಬೇಕಿಲ್ಲ.
ಯಾಕೆ ಹೀಗಾಯಿತು ? ಚೀನಾದ ಬಹುತೇಕ ಕಂಪನಿಗಳು ಸೇರಿದಂತೆ ಹಲವು ಮೊಬೈಲ್ ಬ್ರಾಂಡ್‌ಗಳಲ್ಲಿ ನಕಲಿ ಐಎಂಇಐ ಸಂಖ್ಯೆಯನ್ನು ಅಳವಡಿಸಲಾಗಿತ್ತು. ಒಂದೇ ರೀತಿಯ ಲಕ್ಷಗಟ್ಟಲೆ ಗುರುತಿನ ಸಂಖ್ಯೆಯನ್ನು ನೀಡಲಾಗಿತ್ತು. ಆದರೆ ಇದರಿಂದ ಭಯೋತ್ಪಾದನೆ ಮುಂತಾದ ಪ್ರಕರಣಗಳ ತನಿಖೆ ವೇಳೆ ಅಪರಾಧಿಗಳನ್ನು ಅವರ ಮೊಬೈಲ್ ಗುರುತಿನ ಆಧಾರದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಇದರಿಂದ ತನಿಖೆಯ ಹಾದಿಯೂ ತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಅಸಲಿ ಗುರುತಿನ ಸಂಖ್ಯೆ ನೀಡಲಾಗುತ್ತಿದೆ.
ಐಎಂಇಐ ಪತ್ತೆ ಹೇಗೆ ?
ನಿಮ್ಮ ಮೊಬೈಲ್‌ನಲ್ಲಿ ಅನುಕ್ರಮವಾಗಿ * #೦೬# ಒತ್ತಿರಿ. ತಕ್ಷಣ ೧೫ ಅಂಕಿಗಳ ಐಎಂಇಐ ಸಂಖ್ಯೆ ಕಾಣಿಸುತ್ತದೆ. ಅಕಸ್ಮಾತ್ ಇಲ್ಲವಾದಲ್ಲಿ ನಿಮ್ಮ ಮೊಬೈಲ್ ನಿಷ್ಕ್ರಿಯವಾಗಿರುತ್ತದೆ

Wednesday 2 December 2009

ಊರಿನ ಮತ್ತು ಬೆಂಗಳೂರಿನ ಹೊಗೆಯ ವ್ಯತ್ಯಾಸ !

ಕೆಲವು ದಿನಗಳಿಂದೀಚೆಗೆ ಬೆಳಗ್ಗೆ ಸ್ವಲ್ಪ ಚಳಿ ಜಾಸ್ತಿಯಾಗಿದೆ. ಎಂಟು ಗಂಟೆಗೆ ಆಕ್ಟಿವಾದಲ್ಲಿ ಕಚೇರಿಗೆ ತೆರಳುವಾಗ ಮೈಸೂರು ರಸ್ತೆಯಲ್ಲಿ ಮಂಜು ಕವಿದ ದೃಶ್ಯವನ್ನು ಕಾಣಬಹುದು. ಇವತ್ತು ನಾಯಂಡಹಳ್ಳಿಯ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿ ಟಯರನ್ನೋ, ಕಸಕಡ್ಡಿಯನ್ನೋ ಹೊತ್ತಿಸಿದ್ದ ಹೊಗೆ ಏಳುತ್ತಿತ್ತು. ಜತೆಗೆ ಮಂಜು ಕೂಡಾ ಇತ್ತು. ನನಗೇಕೊ ಪುತ್ತೂರಿನ ಊರಿನ ಪರಿಸರ ತಟ್ಟನೆ ನೆನಪಾಯಿತು.
ಆ ನೆನಪೇ ಆಹ್ಲಾದಮಯ. ಆರ್ಲಪದವು, ವಾಟೆಡ್ಕ ಮುಂತಾದ ಕಡೆಗಳಲ್ಲಿ ಅತ್ತ ದಟ್ಟ ಕಾನನವೂ ಅಲ್ಲದ, ಇತ್ತ ಕರಾವಳಿಯೂ ಅಲ್ಲದ ಅರೆ ಮಲೆನಾಡಿನ ಪರಿಸರ ಇದೆ. ಬೆಳಗ್ಗೆ ಮಂಜು ಹಿತವಾಗಿರುತ್ತದೆ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಬಚ್ಚಲುಮನೆಗಳಲ್ಲಿ ಹಂಡೆಯಲ್ಲಿ ನೀರು ಕಾಯಿಸುತ್ತಾರೆ. ತೆಂಗಿನ ಮಡಲು, ಕರಟ ಮತ್ತು ಅಡಿಕೆ ಸಿಪ್ಪೆ, ಸೋಗೆಯನ್ನು ಒಲೆಗೆ ತುರುಕುತ್ತಾರೆ. ಎರಡು ಚಮಚದಷ್ಟು ಸೀಮೆ ಎಣ್ಣೆಯನ್ನು ಎರೆದು ಬೆಂಕಿ ಕಡ್ಡಿ ಗೀರಿದರೆ ಭಗ್ಗನೆ ಬೆಂಕಿ ಹತ್ತಿಕೊಳ್ಳುತ್ತದೆ. ನಂತರ ಊದಬೇಕು. ಹೊಗೆ ಏಳುತ್ತದೆ. ಕೆಂಡವನ್ನು ಕೆದಕಿ ಬೆಂಕಿ ಎಬ್ಬಿಸಿ ಚಳಿ ಕಾಯಿಸುವ ಸುಖದೆದುರು ಇಡೀ ಜಗತ್ತೇ ತೃಣ ಸಮಾನವಾದಂತಾಗುತ್ತದೆ. ಆಗ ಕೈಯಲ್ಲಿ ಒಂದು ಕಪ್ಪು ಚಹಾ ಇಲ್ಲವೇ ಕಾಫಿ ಇದ್ದರಂತೂ ಪರಮಾನಂದ.
ಬೆಳಗ್ಗೆ ವಾಟೆಡ್ಕ, ಆರ್ಲಪದವು ಮುಂತಾದ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಚುಮುಚುಮು ಚಳಿಯಲ್ಲಿ ಒಂದು ವಾಕಿಂಗ್ ಹೋಗಬೇಕು. ಸಾಯಂಕಾಲವಾದರೆ ಗುಬ್ಬಚ್ಚಿಗಳ ಚಿಲಿಪಿಲಿ ಆಲಿಸುತ್ತ ಶುದ್ಧ ಗಾಳಿ ಸೇವಿಸುತ್ತ ಖುಷಿ ಪಡಬಹುದು. ಅಲ್ಲೊಂದು ಇಲ್ಲೊಂದು ಮನೆಗಳ ಮಾಡಿನಿಂದ ಏಳುತ್ತಿರುವ ಧೂಮ ರಾಶಿಯನ್ನೂ ಗಮನಿಸಬಹುದು. ಸಸ್ಯರಾಶಿಯ ಮಧ್ಯೆ ಬಿಳಿ ಹೊಗೆಯ ಚಿತ್ತಾರದಂತೆ ಕಾಣುತ್ತದೆ. ಹೊಗೆಯೂ ಇಲ್ಲಿ ಸಹ್ಯವಾಗುತ್ತದೆ. ಪರಿಸರ ಮಾಲಿನ್ಯದ ಭಾವ ಸುಳಿಯೋದೇ ಇಲ್ಲ. ಆದರೆ ಬೆಂಗಳೂರಿನಲ್ಲಿ ? ಇರುವ ಮರಗಳೂ ಮೆಟ್ರೊ ರೈಲಿಗೆ ಬಲಿಯಾಗುತ್ತಿವೆ. ಎಲ್ಲಿ ನೋಡಿದರೂ ಟ್ರಾಫಿಕ್ ಮತ್ತು ವಾಹನಗಳು ಉಗುಳುವ ಹೊಗೆ. ಶ್ವಾಸ ಕೆಟ್ಟು ಹೋಗುವ ಅನುಭವ. ಎರಡೂ ಕಡೆಗಳಲ್ಲಿ ಹೊಗೆಯೇ ಆದರೂ ಎಷ್ಟೊಂದು ವ್ಯತ್ಯಾಸ ನೋಡಿ.
ಕಳೆದ ಶಿವ ರಾತ್ರಿಗೆ ಊರಿಗೆ ಹೋಗಿದ್ದಾಗ ಅತ್ತೆ ಮನೆಯಲ್ಲಿ ಬಚ್ಚಲು ಮನೆಯಲ್ಲಿ ತೆಂಗಿನ ಮಡಲನ್ನು ಒಲೆಗೆ ಹಾಕಿ ರಟ್ಟಿನ ತುಂಡಿನಲ್ಲಿ ಗಾಳಿ ಬೀಸಿ ಕಿಚ್ಚು ಆರದಂತೆ ನೋಡಿ ಬಿಸಿ ನೀರು ಕಾಯಿಸಿ ಮಿಂದಿದ್ದೆ. ಆ ಸ್ನಾನವನ್ನು ಮರೆಯಲಾಗುತ್ತಿಲ್ಲ. ವಾಹ್..ತಕ್ಷಣ ಮಂಗಳೂರಿನ ಬಸ್ಸು ಹತ್ತಿ ಊರ ಕಡೆ ಹೋಗ್ಬೇಕು ಅನ್ಸುತ್ತೆ..ಮತ್ತೆ ಶಿವರಾತ್ರಿ ಸಮೀಪಿಸಿದೆ...ಆದರೆ ಮಾಡೋದೇನು..ಈ ಸಲ ರಜೆ ಸಿಗುತ್ತಾ ಇಲ್ವೋ ಗೊತ್ತಿಲ್ಲ.
ಚಿತ್ರ ಸಾಂದರ್ಭಿಕ

Tuesday 1 December 2009

ಮನೆಯೇ ಗ್ರಂಥಾಲಯ

ಜನ ಅಕ್ಕಿ ಬೇಳೆಯಂತೆ ಪುಸ್ತಕ ಕೊಳ್ಳಲಿ !
ಮನೆಯಲ್ಲಿ ಅಕ್ಕಿ , ಬೇಳೆ ಥರಾನೇ...ಪುಸ್ತಕ ಇರಬೇಕು. ಸಾಹಿತ್ಯ ಬಡವನ ಅನ್ನ. ಬದುಕಿನ ಸಂತೋಷದ ದಾರಿದೀಪಗಳೇ ಪುಸ್ತಕಗಳು.
ಮನೆಯಲ್ಲಿ ಪುಸ್ತಕ ಯಾಕಿರಬೇಕು ಎಂಬ ಪ್ರಶ್ನೆಗೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ವಿವರಿಸಿದ್ದು ಹೀಗೆ.

ಯಾವುದೇ ವಿಷಯ ಇರಬಹುದು. ಪುಸ್ತಕಗಳು ಮೌಲ್ಯಗಳ ಆಗರ. ಅಕ್ಕಿಯಲ್ಲಿ ಬೇರೆ ಬೇರೆ ವಿಧಗಳಿಲ್ಲವೇ. ಹಾಗೆ. ನಾವು ಗೋಕರ್ಣದಲ್ಲಿ ಇದ್ದಾಗಲೂ ಪುಸ್ತಕಗಳು ನಮ್ಮ ಆಸ್ತಿಯಾಗಿದ್ದವು.
ಪುಸ್ತಕ ಪ್ರೀತಿಯನ್ನು ಬಂಗಾಳದ ಜನರಿಂದ ನೋಡಿ ಕಲಿಯಬೇಕು. ಎಷ್ಟೇ ಬಡತನ ಇದ್ದರೂ ಸಾಲ ಮಾಡಿಯಾದರೂ ಅವರು ಪುಸ್ತಕಗಳನ್ನು ಖರೀದಿಸುತ್ತಾರೆ. ತಂದೆ ತಾಯಿಯರಿಗೆ ಆಸಕ್ತಿ ಇದ್ದರೆ ಮಕ್ಕಳಲ್ಲಿ ಸಹ ಅದು ಬೆಳೆಯುತ್ತದೆ. ಇಂದು ಇಂಟೀರಿಯರ್ ಡಿಸೈನರ್ ನಿಮ್ಮ ಮನೆಯಲ್ಲಿ ವಿಶ್ವಕೋಶಗಳನ್ನು ತಂದಿಡಿ. ಅದರಿಂದ ಮನೆ ನೀಟಾಗಿ ಕಾಣುವುದಲ್ಲದೆ ನಿಮ್ಮ ಘನತೆ ಹೆಚ್ಚುತ್ತದೆ ಎಂದು ಸಲಹೆ ನೀಡಬಹುದು. ಅಷ್ಟಾದರೆ ಏನು ಉಪಯೋಗ ? ಹಾಗಾದರೂ ಪುಸ್ತಕ ಮನೆಯಲ್ಲಿದ್ದರೆ ಮಕ್ಕಳ ಕಣ್ಣಿಗೆ ಬಿದ್ದು ಅವರು ಓದುವ ಸಾಧ್ಯತೆ ಇರುತ್ತದೆ ಎನ್ನಬಹುದು ಎನ್ನುತ್ತಾರೆ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ.

ಪುಸ್ತಕಗಳು ಮನೆಯ ಸಂಪತ್ತು
ಜನಸಂಖ್ಯೆ ಆಧರಿಸಿ ಹೇಳುವುದಾದರೆ ಮನೆಯಲ್ಲಿ ಗ್ರಂಥ ಸರಸ್ವತಿ ಇಟ್ಟುಕೊಂಡವರ ಸಂಖ್ಯೆ ಕಡಿಮೆ. ಓದಿನ ಬಗ್ಗೆ ಆಸಕ್ತಿ ಉಳ್ಳವರಿಗೆ ಮಾತ್ರ ಕೈಗೆ ಎಟಕುವಂತೆ ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ನೀಡುವ ಮೂಲಕ ಇನ್ನಷ್ಟು ಜನಪ್ರಿಯಗೊಳಿಸಬಹುದು. ಪುಸ್ತಕಗಳಲ್ಲಿ ಹಳೆಯ ಚಿರಂಜೀವಿ ಸ್ವರೂಪದ ಸಾಹಿತಿಗಳು, ಚಿಂತಕರು ಇರುತ್ತಾರೆ. ವರ್ತಮಾನದ ಖ್ಯಾತನಾಮರೂ ಇರುತ್ತಾರೆ. ಭವಿಷ್ಯವನ್ನು ನಿರ್ದೇಶಿಸುವ ಶಕ್ತಿ ಕೂಡ ಇವರ ಬರಹ, ಚಿಂತನೆಗಿರುತ್ತದೆ. ಏಕಾಂಗಿಯಾದವರಿಗೆ ಅತ್ಯಂತ ಹತ್ತಿರವಾದದ್ದು ಮತ್ತು ಮನೆಯ ಆಸ್ತಿ ಕೂಡ ಪುಸ್ತಕ ಎನ್ನುತ್ತಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ.

ಬಿ.ವಿ ಕಾರಂತರ ವಾಚನಾಲಯ
ಮನೆಯಲ್ಲಿ ಗ್ರಂಥಾಲಯ ಹೇಗಿರಬೇಕು ಎಂಬುದಕ್ಕೆ ರಂಗಕರ್ಮಿ, ದಿವಂಗತ ಬಿ.ವಿ ಕಾರಂತರ ಮನೆ ಉದಾಹರಣೆ. ಬೆಂಗಳೂರಿನ ಗಿರಿನಗರದಲ್ಲಿನ ಅವರ ನಿವಾಸದಲ್ಲಿ ಅತ್ಯಮೂಲ್ಯ ಪುಸ್ತಕಗಳ ಬೃಹತ್ ಭಂಡಾರವೇ ಇದೆ. ನಾಟಕ, ಸಿನಿಮಾ, ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ೧೫೦೦ಕ್ಕೂ ಹೆಚ್ಚು ಪುಸ್ತಕಗಳು ಅವರ ಮನೆಯನ್ನು ಅಲಂಕರಿಸಿವೆ. ಬಿ.ವಿ ಕಾರಂತ ರಂಗಪ್ರತಿಷ್ಠಾನದ ಅಡಿಯಲ್ಲಿ ಮನೆಯ ಎರಡು ಅಂತಸ್ತುಗಳ ತುಂಬ ಬೆಲೆ ಕಟ್ಟಲಾಗದ ಅಮೂಲ್ಯ ಗ್ರಂಥಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಗ್ರಂಥಾಲಯದ ಸದಸ್ಯರಾಗಿ ಯಾರು ಬೇಕಾದರೂ ಪುಸ್ತಕಗಳನ್ನು ಓದಿ ಉಪಯೋಗಪಡೆದುಕೊಳ್ಳಬಹುದು. ಆದರೆ ಮನೆಗೆ ಕೊಂಡೊಯ್ಯುವಂತಿಲ್ಲ.ಕಾರಂತರ ಪತ್ನಿ ಪ್ರೇಮಾ ಕಾರಂತ ಸರಕಾರ ಮಾಡದಿದ್ದ ಕೆಲಸವನ್ನು ಮಾಡಿದ್ದಾರೆ. ಅಧ್ಯಯನ ಸಂಶೋಧನೆ ಮಾಡಬಯಸುವವರಿಗೆ ಇದೊಂದು ಉಪಯುಕ್ತ ಕೇಂದ್ರ.ನಾಟಕಗಳು ಮತ್ತು ರಂಗಭೂಮಿಯ ಕಲೆಯ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ಸಿಗುತ್ತದೆ. ವಿಪರ್ಯಾಸ ಏನೆಂದರೆ ಒಂದು ನರಪಿಳ್ಳೆಯೂ ಈ ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುತ್ತಿಲ್ಲ ಎನ್ನುತ್ತಾರೆ ಪ್ರೇಮಾ ಕಾರಂತ.

( ೨೦೦೬ ಆಗಸ್ಟ್ ೧೨ರಂದು ವಿಜಯ ಕರ್ನಾಟಕದ ಗೃಹ ವಿಜಯ ವಿಭಾಗದಲ್ಲಿ ಪ್ರಕಟವಾದ ಮನೆಯೇ ಗ್ರಂಥಾಲಯ ಲೇಖನದ ಮೊದಲ ಕಂತು )

Monday 30 November 2009

ಬಾಟಲಿ ಪುತ್ರನ ಕಥೆ

ಇವತ್ತು ಯಾವುದೇ ಗಲ್ಲಿಯ ಅಂಗಡಿಗಳಿಂದ ಶಾಪಿಂಗ್ ಮಾಲ್ ತನಕ ಎಲ್ಲೆಡೆಗಳಲ್ಲಿ ಸದಾ ಲಭ್ಯವಿರುವ ಪೆಪ್ಸಿ , ಕೋಕಾಕೋಲ, ಬೂಸ್ಟ್, ಬೋರ್ನ್‌ವೀಟಾ,ಕಾಫಿ, ಟೀ ಪೌಡರ್, ಮೆಕ್‌ಡೊನಾಲ್ಡ್ ಕೆಚಪ್, ಹಾರ್ಲಿಕ್ಸ್, ಜಿಆರ್‌ಬಿ ತುಪ್ಪ, ಮಿಲ್ಮಾದ ನಾನಾ ಪಾನೀಯದ ಬಾಟಲಿಗಳನ್ನು ಗಮನಿಸಿ. ಎಲ್ಲವೂ ಪ್ಲಾಸ್ಟಿಕ್‌ಮಯ. ಮದ್ಯದ ಬಾಟಲಿಗಳೂ ಕುಪ್ಪಿಯದ್ದಲ್ಲ !

ಈ ಹಿಂದೆ ಗಾಜಿನ ಬಾಟಲಿಗಳಲ್ಲಿರುತ್ತಿದ್ದ ಪಾನೀಯಗಳೆಲ್ಲ ನಾನಾ ಆಕಾರ, ಗಾತ್ರ, ಬಣ್ಣಗಳಲ್ಲಿ ಪ್ಲಾಸ್ಟಿಕ್‌ನತ್ತ ತಿರುಗಿವೆ. ಟಿನ್ನುಗಳೂ ಮಂಗಮಾಯ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬುವ ಪಾನೀಯ, ಪುಡಿ, ಇತರ ಆಹಾರ ಪದಾರ್ಥಗಳೂ ಹಾಳಾಗದೆ ಸುದೀರ್ಘಾವ ಉಳಿದುಕೊಳ್ಳುತ್ತಿವೆ. ಇದು ಹೇಗೆ ಸಾಧ್ಯವಾಯಿತು ? ಇದರಲ್ಲಿಯೂ ಆಹಾರ ಹಾಳಾಗುವುದಿಲ್ಲ ಯಾಕೆ ? ಅಂದ ಹಾಗೆ ಪೆಪ್ಸಿಯ ಬಾಟಲಿಯ ಮೂಲ ಸ್ವರೂಪ ಒಂದು ಸಣ್ಣ ಟ್ಯೂಬಿನ ಆಕಾರದಲ್ಲಿರುತ್ತೆ ! ಬಲೂನಿಗೆ ಗಾಳಿ ತುಂಬುವಂತೆ ಇದನ್ನು ಯಂತ್ರಗಳಲ್ಲಿ ಸಾಲಾಗಿಟ್ಟು ಬ್ಲೋ ಮಾಡಿದಾಗ ಕ್ಷಣಾರ್ಧದಲ್ಲಿ ಬಾಟಲಿಯ ಆಕಾರಕ್ಕೆ ತಿರುಗುತ್ತದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಮಂಜುಶ್ರೀ ಪ್ಯಾಕೇಜಿಂಗ್ ಕಂಪನಿಯಲ್ಲಿ ಇದನ್ನೆಲ್ಲ ನೋಡಬಹುದು. ಪ್ಯಾಕೇಜಿಂಗ್ ಉದ್ಯಮದ ಇತಿಹಾಸವನ್ನು ಬಿಂಬಿಸುವ ಮ್ಯೂಸಿಯಂ ಕೂಡ ಕಂಪನಿಯ ಆವರಣದಲ್ಲಿದೆ. ಸುಮಾರು ೪ ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಪ್ಲಾಸಿಕ್ ಬಾಟಲಿಗಳ ಲೈಬ್ರೆರಿ ಕೂಡ ಇಲ್ಲಿದೆ ! ನಿಮಗೆ ಇಷ್ಟವಾದ ಬಾಟಲಿಯನ್ನು ಆರ್ಡರ್ ಮಾಡಬಹುದು.

ಅಸ್ಸಾಂನ ಗುವಾಹಟಿಯಲ್ಲಿ ೧೯೮೩ರಲ್ಲಿ ವಿಮಲ್ ಕೇಡಿಯಾ ಹಾಗೂ ಸೋದರ ಸುರೇಂದ್ರ ಕೇಡಿಯಾ ಸಣ್ಣ ಪ್ಯಾಕೇಜಿಂಗ್ ಘಟಕ ತೆರೆದರು. ಚಹಾ ಗಿಡಗಳ ಪೂರೈಕೆಗೆ ಬೇಕಾದ ಲಕೋಟೆಯನ್ನು ಇವರು ತಯಾರಿಸಿ ಮಾರುತ್ತಿದ್ದರು. ಆದರೆ ಉಗ್ರರ ಉಪಟಳಕ್ಕೆ ಬೇಸತ್ತು ೧೯೯೪ರಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿ ಕ್ಲಿಕ್ಕಾಯಿತು ಮಂಜುಶ್ರೀ. ನಿರಂತರ ಸಂಶೋಧನೆ, ಆರ್ಥಿಕ ಶಿಸ್ತು, ಪರಿಶ್ರಮದಿಂದ ಇವತ್ತು ಕಂಪನಿ ೧೫೦ ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುತ್ತಿದೆ. ಬೆಂಗಳೂರಿನಲ್ಲಿ ವಿಮಲ್ ಕೇಡಿಯಾ ೫ ಕೋಟಿ ರೂ.ಗಳನ್ನು ಹೂಡಿದ್ದರು. ಮಂಜುಶ್ರೀ ಪ್ರತಿ ವರ್ಷ ೨೦ ಸಾವಿರ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಪನಿ ಮಾರಾಟ ಮಾಡುತ್ತಿದೆ ಎಂದರೆ ಊಹಿಸಿ.

ಹೀಗೆ ಕಂಪನಿಗಳೆಲ್ಲ ಗಾಜು, ಟಿನ್ನುಗಳನ್ನು ಬಿಟ್ಟು ಪ್ಲಾಸ್ಟಿಕ್ ಬಾಟಲಿಗಳ ಮೊರೆ ಹೋಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಇವುಗಳಿಗೆ ತಗಲುವ ಖರ್ಚು ಕಡಿಮೆ. ಎರಡನೆಯದಾಗಿ ಗಾಜಿನಂತೆ ಒಡೆಯುವುದಿಲ್ಲ. ಹೀಗಾಗಿ ಸಾಗಣೆ ಸುಲಭ. ಪ್ರೀ ಫಾರ್ಮ್ ಹಂತದಲ್ಲಿ ಸಣ್ಣ ಟ್ಯೂಬ್‌ಗಳಂತಿರುವ ಬಾಟಲಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡೊಯ್ಯಬಹುದು. ಕೊನೆಯದಾಗಿ ಬಾಟಲಿಯಲ್ಲಿನ ೬ ಲೇಯರ್ ತಂತ್ರಜ್ಞಾನದ ಪರಿಣಾಮವಾಗಿ ಇವುಗಳಲ್ಲಿಡುವ ಆಹಾರ ಬೇಗನೆ ಕೆಡುವುದಿಲ್ಲ. ಯಾಕೆಂದರೆ ಈ ಬಾಟಲಿಯೊಳಗೆ ತೇವಾಂಶ ಹಾಗೂ ಗಾಳಿಯಾಡಲು ಅವಕಾಶ ಇರುವುದಿಲ್ಲ.

ಸಣ್ಣ ಟ್ಯೂಬಿನಾಕಾರದ ಪ್ಲಾಸ್ಟಿಕ್‌ನ್ನು ಪೆಟ್ ಪ್ರೀ ಫಾರ್ಮ್ ಎನ್ನುತ್ತಾರೆ. ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸುಲಭವಾಗಿ ತಂಪು ಪಾನೀಯ ಕಂಪನಿಗಳಿಗೆ ಸುಲಭವಾಗಿ ಸಾಗಿಸಬಹುದು. ಹಾಗೂ ಅಲ್ಲಿ ಈ ಟ್ಯೂಬ್‌ಗಳನ್ನು ೨ ಹಂತಗಳಲ್ಲಿ ಬ್ಲೋ ಮಾಡಿದಾಗ ಬಾಟಲಿಯಾಕಾರ ತಾಳುತ್ತದೆ. ನಂತರ ಬಾಟಲಿಯ ಮೇಲಿನ ಚಿತ್ರ, ಜಾಹೀರಾತುಗಳನ್ನು ಸಹ ಯಂತ್ರದ ಮೂಲಕ ಅಂಟಿಸುತ್ತಾರೆ. ಗಾಜಿನ ಬಾಟಲಿಯಾದರೆ ಹೀಗೆ ಊದಿಸಿಕೊಳ್ಳಲು ಅಸಾಧ್ಯ. ಅಲ್ಲದೆ ಸಾಗಣೆಯ ವೇಳೆ ಹಾನಿಯಾಗುವ ಸಾಧ್ಯತೆ ಹೆಚ್ಚು. ೧೫ ಎಂಎಲ್‌ನಿಂದ ೧೫ ಲೀಟರ್ ತನಕದ ಬಾಟಲಿಗಳನ್ನು ಕಂಪನಿ ಲೀಲಾಜಾಲವಾಗಿ ಉತ್ಪಾದಿಸುತ್ತಿದೆ. ಇದಕ್ಕೆ ಬೇಕಾದ ಕಚ್ಚಾ ವಸ್ತುವನ್ನು ದೂರದ ಗುಜರಾತ್‌ನಿಂದ ರಿಲಯನ್ಸ್ ಕಂಪನಿ ಒದಗಿಸುತ್ತದೆ. ಹೇಗಿದೆಯಲ್ಲವೇ ಪ್ಯಾಕೇಜಿಂಗ್ ಮ್ಯಾಜಿಕ್ !
ಕೇಶವ ಪ್ರಸಾದ್.ಬಿ

Sunday 29 November 2009

ಭುವಿಯ ಚೂರು ನೀನೇನಾ ಚಂದಮಾಮಾ

( ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಚಂದ್ರಮುಖಿ ಇಸ್ರೊ, ಅವಲೋಕನದ ಎರಡನೇ ಕಂತು )

ಚಂದ್ರ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆ ಋಗ್ವೇದ ಕಾಲದಿಂದಲೂ ಬಗೆಹರಿದಿಲ್ಲ. ಹೀಗಿದ್ದರೂ ನಾನಾ ಸಿದ್ಧಾಂತಗಳು ಚಾಲ್ತಿಯಲ್ಲಿವೆ. ಏಕಕಾಲಕ್ಕೆ ಸೃಷ್ಟಿ : ಸೌರ ಮಂಡಲದ ಬೃಹತ್ ನೀಹಾರಿಕೆಯಿಂದ ಭೂಮಿ ಮತ್ತು ಚಂದ್ರ ಏಕಕಾಲಕ್ಕೆ ಪರಸ್ಪರ ಸಮೀಪದಲ್ಲಿ ರಚನೆಯಾಯಿತು,. ಅನತಿ ಕಾಲದಲ್ಲಿ ಭೂಮಿಯ ಸನಿಹ ಕಕ್ಷೆಯಲ್ಲಿ ಚಂದ್ರ ತಿರುಗಲು ಶುರು ಹಚ್ಚಿಕೊಂಡ ಎಂದು ಈ ಸಿದ್ಧಾಂತ ಹೇಳುತ್ತದೆ.
ಧರೆಯ ಸೆಳೆತ : ಸೌರವ್ಯೂಹದ ಯಾವುದೋ ಒಂದು ಜಾಗದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವಲ್ಲಿ ಚಂದ್ರ ರೂಪು ತಳೆದ. ನಂತರ ಉರುಳುತ್ತ ಭೂಮಿಯ ಹತ್ತಿರ ಬಂದ. ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಚಂದ್ರನನ್ನು ಸೆಳೆಯಿತು. ಅಂತಿಮವಾಗಿ ಧರೆಯ ಕಕ್ಷೆಯಲ್ಲಿ ಸ್ಥಿರವಾಗಿಚಲಿಸಿದ.
ವಿದಳನ : ಈ ಅನುಮಾನದ ಪ್ರಕಾರ ಆರಂಭದಲ್ಲಿ ಶಶಿಯೇ ಇರಲಿಲ್ಲ. ಭೂಮಿ ರಭಸದಿಂದ ಪರಿಭ್ರಮಣೆ ಮಡುತ್ತಿದ್ದ ವೇಲೆ ಅದರ ಭಾರಿ ಗಾತ್ರದ ತುಂಡು ಸಿಡಿದು ಬೇರ್ಪಟ್ಟಿತು. ಹಾರಿದ ನಂತರ ತಣ್ಣಗಾದ ಭುವಿಯ ಚೂರು ಚಂದಿರನಾಯಿತು. ಚಂದ್ರ ಮತ್ತು ಭೂಮಿಯ ಶಿಲೆಗಳಲ್ಲಿ ಸಾಮ್ಯತೆ ಇರುವುದಕಲ್ಕೆ ಇದೇ ಕಾರಣ.

ಚಂದ್ರ ಯಾಕೆ ಮಾಮ ?
ಚಂದ್ರ ಭೂಮಿಯಿಂದಲೇ ಸಿಡಿದ ತುಂಡಾಗಿದ್ದರೆ ಅವನು ಪೃಥ್ವಿಯ ಸೋದರ ಇದ್ದಂತೆ...ಭೂಮಿ ನಮಗೆ ತಾಯಿ. ಅಂದಮೇಲೆ ಚಂದಿರ ನಮ್ಮ ಮಾಮ ಅಲ್ಲವೇ !

ಚಂದ್ರಾದಾರರು
ಈ ಸಹಸ್ರಮಾನದಲ್ಲಿ ಚಂದ್ರಮಂಚಕೆ ಏರಲು ನಾನಾ ರಾಷ್ಟ್ರಗಳು ಸಿದ್ಧತೆ ನಡೆಸುತ್ತಿವೆ. ಅಮೆರಿಕ, ಯೂರೋಪ್, ಜಪಾನ್, ಚೀನಾ ಮತ್ತು ರಷ್ಯಾ ಹೆಚ್ಚಿನ ಸಂಖ್ಯೆಯಲ್ಲಿ ಬಾಹ್ಯಾಕಾಶ ಯಾತ್ರೆಗಳನ್ನು ಘೋಷಿಸಿವೆ. ಸೌರವ್ಯೂಹದ ಉಗಮವನ್ನು ಅರ್ಥ ಮಡಿಕೊಳ್ಳಲು ಮಾತ್ರವಲ್ಲದೆ, ಈ ಸಾಹಸದಲ್ಲಿ ಚಂದ್ರನನ್ನು ಮಧ್ಯಂತರ ನಿಲ್ದಾಣವನ್ನಾಗಿ ಬಳಸಲು ಚಿಂತನೆ ನಡೆದಿದೆ. ಆದರೆ ಅದಕ್ಕೂ ಮೊದಲು ಅಲ್ಲಿ ಲಭ್ಯವಿರುವ ಸಂಪನ್ಮೂಲಗಳ ಸಮಗ್ರ ಅಧ್ಯಯನ ಅನಿವಾರ್ಯ.
ಜಪಾನ್ : ಚಂದ್ರನ ಆಂತರಿಕ ವಿನ್ಯಾಸದ ಅಧ್ಯಯನಕ್ಕೆ ಜಪಾನ್ ಕೈಗೆತ್ತಿಕೊಮಡಿರುವ ಯೋಜನೆ ಲೂನಾರ್ -ಎ. ಅಲ್ಲಿನ ಕಂಪನ, ಉಷ್ಣತೆಯ ಹರಿವು, ತಿರುಳಿನ ಸಮೀಕ್ಷೆ ನಡೆಯಲಿದೆ. ಕಾಂತೀಯ ಕ್ಷೇತ್ರ, ಮೇಲ್ಮೈನ ಸಂಯುಕ್ತಗಳ ರಚನೆಗೆ ಸೆಲೆನ್ ಎಂಬ ಮತ್ತೊಂದು ಯೋಜನೆಯನ್ನು ಅದು ಜಾರಿಗೊಳಿಸಿದೆ.
ಚೀನಾ : ಚಂದ್ರನ ಮಣ್ಣಿನ ಸಾಂದ್ರತೆ, ನಕ್ಷೆ ರಚನೆ ಹಾಗೂ ಪರಿಸರದ ಅವಲೋಕನಕ್ಕೆ ಚೀನಾ ಚಾಂಗೆ ಎಂಬ ಯೋಜನೆ ಹಮ್ಮಿಕೊಂಡಿದೆ. ಸ್ಟೀರಿಯೊ ಕ್ಯಾಮರಾ, ಸ್ಟೆಕ್ಟೋಮೀಟರ್, ಇಮೇಜರ್, ಲೇಸರ್ ಅಲ್ಟಿಮೀಟರ್, ಮೇಕ್ರೊವೇವ್ ರೇಡಿಯೊ ಮೀಟರ್, ಗಾಮಾ ಮತ್ತು ಎಕ್ಸ್‌ರೇ ಸ್ಪೆಕ್ಟೋಮೀಟರನ್ನು ಇದು ಒಳಗೊಂಡಿದೆ.
ಅಮೆರಿಕ : ಲೂನಾರ್ ರಿಕಾನ್ ಎಸೆನ್ಸ್ ಆರ್ಬಿಟರ್ ಎಂಬ ಈ ಸಾಹಸದ ರೂವಾರಿ ಅಮೆರಿಕದ ನಾಸಾ. ಚಂದ್ರನ ಸಂಪನ್ಮೂಲದ ಸಮಗ್ರ ಶೋಧ ಇದರ ಗುರಿ. ಚಂದ್ರನನ್ನು ವೇದಿಕೆಯಾಗಿ ಬಳಸಿಕೊಂಡು ಮಂಗಳನ ಅಧ್ಯಯನಕ್ಕೂ ನಾಸಾ ತಯಾರಿ ನಡೆಸಿದೆ.
ಚಾಂದ್ ಕಾ ಟುಕಡಾ...
೩೮೪,೪೦೦ ಕಿ.ಮೀ : ಚಂದ್ರನ ಕಕ್ಷೆಗೂ ಭೂಮಿಗೂ ಇರುವ ಅಂತರ
೩,೪೭೬ ಕಿ.ಮೀ : ಚಂದ್ರನ ವ್ಯಾಸ
೪೫೦ ಕೋಟಿ ರೂ. ಮೊದಲ ಚಂದ್ರಯಾನದ ಅಂದಾಜು ವೆಚ್ಚ
೨ ವರ್ಷ : ಚಂದ್ರಯಾನ-೧ರ ಅವ
ಪಿಎಸ್‌ಎಲ್‌ವಿ-ಎಕ್ಸ್‌ಎಲ್ : ಚಂದ್ರಯಾನದ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯಲಿರುವ ಉಡಾವಣಾ ವಾಹಕ
ಶ್ರೀಹರಿಕೋಟಾ : ಬಾಹ್ಯಾಕಾಶ ನೌಕೆಯ ಉಡ್ಡಯಣ ಸ್ಥಳ
ನಿಯಂತ್ರಣ : ಬೆಂಗಳೂರಿನ ಬ್ಯಾಲಾಳುವಿನಲ್ಲಿ ೧೮ ಮೀಟರ್ ಹಾಗೂ ೩೨ ಮೀಟರ್ ವ್ಯಾಸದ ಆಂಟೆನಾ ಅಳವಡಿಸಲಾಗಿದೆ. ಬೆಂಗಳೂರಿನಲ್ಲೇ ನಿಯಂತ್ರಣ.
ಬ್ಯಾಲಾಳುವಿನಲ್ಲಿರುವ ಇಂಡಿಯನ್ ಸ್ಪೇಸ್ ಸಯನ್ಸ್ ಸೆಂಟರ್ ಚಂದ್ರಯಾನ-೧ರ ಮಾಹಿತಿಯನ್ನು ಸಂಗ್ರಹಿಸಲಿದೆ.
೪೦೦ ಕೆ.ಜಿ : ಭೂಮಿಗೆ ಇಲ್ಲಿಯವರೆಗೆ ೧೨ಕ್ಕೂ ಹೆಚ್ಚು ಯಾತ್ರಿಗಳು ಚಂದಿರನಿಂದ ತಂದಿರುವ ಶಿಲೆ, ಮಣ್ಣಿನ ತೂಕ

ಚಂದ್ರಯಾನದಿಂದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ, ನಮಗೆಲ್ಲರಿಗೂ ಸಂಬಂಸಿದ ಯೋಜನೆಗಳಿಗೆ ಉಪಯೋಗವಿದೆ. ನೋಡಿ, ನಮ್ಮಲ್ಲಿರುವ ಪೆಟ್ರೋಲಿಯಂ ಸಂಪತ್ತು ೪೦ ವರ್ಷಗಳ ನಂತರ ಖಾಲಿಯಾಗಬಹುದು. ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಚಂದ್ರನಲ್ಲಿರುವ ಹೀಲಿಯಂ ಅನ್ನು ತರಲು ಸಾಧ್ಯವಾದಲ್ಲಿ ಪ್ರಪಂಚಕ್ಕೆ ೧ ಸಾವಿರ ವರ್ಷಕ್ಕೆ ಆಗುವಷ್ಟು ವಿದ್ಯುತ್ ಗಳಿಸಬಹುದು.
ಡಾ.ಉಡುಪಿ ರಾಮಚಂದ್ರ ರಾವ್
ಇಸ್ರೊ ಮಾಜಿ ಅಧ್ಯಕ್ಷ




ಚಂದ್ರಮುಖಿ ಇಸ್ರೊ

( ಚಂದ್ರಯಾನದ ಬಗ್ಗೆ ವಿಜಯ ಕರ್ನಾಟಕದಲ್ಲಿ ೨೦೦೮, ಮಾರ್ಚ್ ೨೪ಕ್ಕೆ ಬರೆದ ಲೇಖನ, ಅವಲೋಕನ ವಿಭಾಗದಲ್ಲಿ ಒಂದು ಪುಟ ಭರ್ತಿ ಪ್ರಕಟವಾಗಿತ್ತು. ನುಡಿಚೈತ್ರದಲ್ಲಿ ೨ ಕಂತುಗಳಲ್ಲಿ ಈ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ )

ಚಂದಿರನೇತಕೆ ಕಾಡುವ ನಮ್ಮ..
ಆರಂಭದಿಂದಲೇ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಮುಖ ಗುರಿಗಳಲ್ಲಿ ಬಾಹ್ಯಾಕಾಶ ಸಂಶೋಧನೆ ಸಹ ಒಂದಾಗಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ.
ಎಲೆಕ್ಟ್ರೋಜೆಟ್ ಅಧ್ಯಯನಕ್ಕೆ ತಿರುವನಂತಪುರದಲ್ಲಿ ೧೯೬೩ರಲ್ಲಿ ಸ್ಥಾಪನೆಯಾದ ತುಂಬಾ ರಾಕೆಟ್ ಉಡಾವಣಾ ಕೇಂದ್ರ ದೇಶದ ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು. ಎಕ್ಸ್-ರೇ, ಖಗೋಳ ಶಾಸ್ತ್ರ, ಸೋಲಾರ್ ನ್ಯೂಟ್ರಾನ್, ಸೂಪರ್ ಥರ್ಮಲ್ ಎಲೆಕ್ಟ್ರಾನ್ ಸಾಂದ್ರತೆ ಮತ್ತು ಇತರ ವಿಷಯಗಳ ಬಗ್ಗೆ ಪ್ರಯೋಗ ನಡೆಸಲು ೧೯೭೫ರಲ್ಲಿ ಉಡಾಯಿಸಿದ ಮೊದಲ ಉಪಗ್ರಹ ಆರ್ಯಭಟ, ನಂತರ ಬಿಟ್ಟ ಹೀಲಿಯಂ ತುಂಬಿದ ಬಲೂನುಗಳು, ಸಂಶೋಧನೆಗೆ ಮೀಸಲಾದ ಸೌಂಡಿಗ್ ರಾಕೆಟ್ ಹಾಗೂ ಉಪಗ್ರಹಗಳು ಶೋಧಕ್ಕೆ ನೆರವಾಗಿವೆ. ಜತೆಗೆ ಅನೇಕ ವಿಶ್ವ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಗಳ
ವಿಜ್ಞಾನಿಗಳು ಸೌರವ್ಯೂಹದ ಅಧ್ಯಯನ ಮಾಡಿದ್ದಾರೆ.
ನೈಸರ್ಗಿಕ ಸಂಪನ್ಮೂಲದ ಸಮೀಕ್ಷೆ ಮತ್ತು ನಿರ್ವಹಣೆ, ಹವಾಮಾನ ಸೇವೆ, ಉಪಗ್ರಹ ಸಂಪರ್ಕ ಕುರಿತು ಬಾಹ್ಯಾಕಾಶ ಸಾಧನಗಳ ನಿರ್ಮಾಣದಲ್ಲಿ ಭಾರತ ಕಾಲಕ್ರಮೇಣ ನೈಪುಣ್ಯ ಪಡೆಯಿತು.
ಇಸ್ರೊ ಸಿದ್ಧಪಡಿಸಿರುವ ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ) ಮತ್ತು ಜಿಎಸ್‌ಎಲ್‌ವಿನಿಂದ (ಜಿಯೊ-ಸ್ಟೇಷನರಿ ಲಾಂಚ್ ವೆಹಿಕಲ್) ಚಂದ್ರ ಹಾಗೂ ಸಮೀಪದ ಇತರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುವ ಭಾರತದ ಸಾಮರ್ಥ್ಯ ಅನೂಹ್ಯ ಮಟ್ಟದಲ್ಲಿ ವೃದ್ಧಿಸಿತು.
ಹೀಗೆ ದೇಶ ಗಳಿಸಿಕೊಂಡಿರುವ ತಾಂತ್ರಿಕ ಸಾಮರ್ಥ್ಯ ಹಾಗೂ ವಿeನಿಗಳ ಕುತೂಹಲ ಇದೀಗ ಚಂದ್ರಯಾನಕ್ಕೆ ಇಸ್ರೊವನ್ನು ಪ್ರೇರೇಪಿಸಿದೆ. ಬಾಹ್ಯಾಕಾಶ ವಲಯದಲ್ಲಿ ದೇಶದ ಯುವ ವಿeನಿಗಳಿಗೆ ಅವಕಾಶಗಳ ಹೆಬ್ಬಾಗಿಲನ್ನು ತೆರೆಯುವುದು ಯೋಜನೆಯ ಮತ್ತೊಂದು ಧ್ಯೇಯ.

ವಿಜ್ಞಾನ ಅಕಾಡೆಮಿಯಲ್ಲಿ ೧೯೯೯ರಲ್ಲಿ ನಡೆದ ಸಭೆಯಲ್ಲಿ ಚಂದ್ರಯಾನದ ಕಲ್ಪನೆ ಅಂಕುರವಾಯಿತು. ಅಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಲ್ಲಿ ಮುಂದಿನ ವರ್ಷ ಮತ್ತೆ ಚರ್ಚೆಯಾಯಿತು. ಈ ಎರಡೂ ಸಂಘಟನೆಗಳ ಸದಸ್ಯರ ಶಿಫಾರಸಿನ ಮೇರೆಗೆ ಇಸ್ರೊ, ರಾಷ್ಟ್ರೀಯ ಚಂದ್ರಯಾನ ಕಾರ್ಯಪಡೆ ರಚಿಸಿತು. ದೇಶದ ಪ್ರಮುಖ ವಿಜ್ಞಾನಿಗಳು, ತಂತ್ರಜ್ಞರು ಯೋಜನೆಯ ರೂಪು ರೇಷೆ ಸಿದ್ಧಪಡಿಸಿದರು. ೨೦೦೩ರಲ್ಲಿ ಕಾರ್ಯಪಡೆಯ ಅಧ್ಯಯನ ವರದಿ ಭಾರತ ಚಂದ್ರಯಾನ ಕೈಗೊಳ್ಳಲೇಬೇಕು ಎಂದು ಶಿಫಾರಸು ಮಾಡಿತು. ೨೦೦೩ರ ನವೆಂಬರ್‌ನಲ್ಲಿ ಮೊದಲ ಚಂದ್ರಯಾನಕ್ಕೆ ಸರಕಾರದ ಒಪ್ಪಿಗೆ ಪಡೆಯಿತು.
" ಚಂದ್ರನಿಗೂ ಸೌರವ್ಯೂಹದ ಆದಿಗೂ ನಂಟಿದೆ. ಅದನ್ನು ಅರ್ಥ ಮಾಡಿಕೊಂಡರೆ ಸೌರವ್ಯೂಹದ ರಹಸ್ಯ ಬಯಲಾಗುವುದು ಖಚಿತ. ಶಶಿಯ ಮೇಲೆ ನೇರವಾಗಿ ಸೂಸುವ ಸೂರ್ಯನ ಎಕ್ಸ್-ರೇಗಳ ಅಧ್ಯಯನ ಕೂಡ ಮಾಡಬಹುದು. ಆತನನ್ನೇ ವೇದಿಕೆಯನ್ನಾಗಿಸಿ ಬಾಹ್ಯಾಕಶ ಯೋಜನೆಗಳನ್ನು ಸುಸೂತ್ರವಾಗಿ ನಡೆಸಬಹುದು. ಸಾಧ್ಯವಾದರೆ ಅಲ್ಲಿನ ಅಗಾಧ ಮೊತ್ತದ ಹೀಲಿಯಂ-೩ ಬಳಸಿ ಭವಿಷ್ಯದ ವಿದ್ಯುತ್ ಕೊರತೆ ನೀಗಿಸಬಹುದೇನೊ, ಎಂಬ ವಿಶ್ವಾಸದಲ್ಲಿ ಭಾರತೀಯ ವಿeನಿಗಳು ಹಗಲು ರಾತ್ರಿಗಳನ್ನು ಸುಡುತ್ತಿದ್ದಾರೆ. ಅಮೆರಿಕ ಮತ್ತಿತರ ರಾಷ್ಟ್ರಗಳೂ ಕೈ ಜೋಡಿಸಿವೆ. ಬಾಹ್ಯಾಕಾಶದಲ್ಲಿ ದೇಶದ ಮೊದಲ ಸಂಪೂರ್ಣ ವೈeನಿಕ ಯೋಜನೆಗೆ ನಮ್ಮಲ್ಲೇಕೆ ಅಪಸ್ವರ ? ಕಾರಣ ನಿಲ್ಲದ ಬಡತನ, ಅಜ್ಞಾನ ಮತ್ತು ರಾಜಕೀಯ.
೪೦೦ ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಸೌರಮಂಡಲದಲ್ಲಿ ಭೂಮಿಗೆ ಪಕ್ಕದ ಮನೆಯವನೇ ಚಂದ್ರ. ೧೯೫೯ರಿಂದ ನೂರಾರು ಸಲ ಚಂದ್ರನನ್ನು ದಕ್ಕಿಸಲು ಶೋಧ ನಡೆದಿದೆ. ಹೀಗಿದ್ದರೂ ಅವನ ಉಗಮ, ಸ್ವರೂಪ, ಆಂತರಿಕ ವಿನ್ಯಾಸ, ರಾಸಾಯನಿಕ ಮತ್ತು ಖನಿಜಗಳ ರಚನೆ ಬಗ್ಗೆ ಸಂಶೋಧನೆ ಮುಗಿದಿಲ್ಲ.ಅಂತಹ ಚಂದಿರನ ಕಡೆಗೆ ಭಾರತದ ಮೊದಲ ಯೋಜನೆಯೇ ಚಂದ್ರಯಾನ-೧
ಭೂಮಿಯ ಗುಉತ್ವಾಕರ್ಷಣೆ ಮೀರಿ ವ್ಯೋಮದಲ್ಲಿ ಇಸ್ರೊ ನಡೆಸಲಿರುವ ಮೊದಲ ಹುಡುಕಾಟವಿದು. ಚಂದ್ರನ ಮೇಲ್ಮೈನ ಕೂಲಂಕಷ ಅಧ್ಯಯನ, ಅಲ್ಲಿನ ವಿಕಿರಣಗಳು, ಶಕ್ತಿಶಾಲಿ ಎಕ್ಸ್ ರೇ ವಲಯ, ತ್ರೀ-ಡಿ ನಕ್ಷೆ, ಖನಿಜಗಳ ಶೋಧವನ್ನು ಯೋಜನೆ ಒಳಗೊಂಡಿದೆ. ಸಂಪೂರ್ಣ ಸ್ವದೇಶಿ ನಿರ್ಮಿತ ೧೧ ಉಪಕರಣಗಳಿಂದ ಶೋಧ ನಡೆಯಲಿದೆ. ಭಾರತದ ಪೇಲೋಡ್‌ಗಳಲ್ಲದೆ ನಾಸಾ, ಇಎಸ್‌ಎ ಮತ್ತು ಬಲ್ಗೇರಿಯಾದ ೬ ಪೇಲೋಡ್‌ಗಳು ಬಳಕೆಯಾಗಲಿವೆ.
ಜಿ. ಮಾಧವನ್ ನಾಯರ್-ಇಸ್ರೊ ಅಧ್ಯಕ್ಷ

ಪಿಎಸ್ಸೆಲ್ವಿ ಬಿದ್ದಾಗ ಅಂಜಿದ್ದರೆ ?
ಮೂಲೋಪಯೋಗವಿಲ್ಲದ ಮತ್ತು ಪ್ರತಿಷ್ಠೆ ಹೆಚ್ಚಿಸಲಾಗುವುದು ಎಂದು ಹೇಳಲಾಗುವ ಉಪಗ್ರಹಗಳಂತಹ ದುಬಾರಿ ಯೋಜನೆಗಳನ್ನು ಕೈ ಬಿಡಬೇಕು. ನಾನೇನು ವೈಜ್ಞಾನಿಕ ಕೀಳರಿಮೆಯನ್ನು ಪ್ರತಿಪಾದಿಸುತ್ತಿಲ್ಲ. ಆದರೆ ವಿಜ್ಞಾನದ ಬಳಕೆಯು ಭಾರತದ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದಂತೆ, ಸಾಮಾನ್ಯ ಜನರ ಮೂಲ ಅಗತ್ಯಗಳೊಂದಿಗೆ ನೇರ ಸಂಬಂಧ ಹೊಂದಿರಬೇಕಷ್ಟೇ ಎಂದು ನಾನು ಹೇಳುವುದು- ಲೋಕ ನಾಯಕ ಜಯಪ್ರಕಾಶ್ ನಾರಾಯಣ ಹಾಗಂತ ಹೇಳಿದ್ದರು. ತುರ್ತುಪರಿಸ್ಥಿತಿಯ ವೇಳೆ ನಾಲ್ಕು ತಿಂಗಳು ಸೆರೆವಾಸ ಅನುಭವಿಸಿದಾಗ ಬರೆದ ದಿನಚರಿಯಲ್ಲಿ ದೇಶದ ಆರ್ಥಿಕ ಚೌಕಟ್ಟು ಹೇಗಿರಬೇಕೆಂದು ವಿವರಿಸುತ್ತ ಬಾಹ್ಯಾಕಾಶ ಯೋಜನೆಗಳನ್ನು ಜೆಪಿ ಬಲವಾಗಿ ವಿರೋಧಿಸುತ್ತಾರೆ. ಆದರೆ ಅವರ ಮಾತನ್ನು ವಿeನಿಗಳು ಯಾವತ್ತೋ ಸುಳ್ಳು ಮಾಡಿದ್ದಾರೆ.
ಕೇವಲ ೧೫ ವರ್ಷಗಳ ಹಿಂದೆ ಸರಿಯೋಣ. ಶ್ರೀಹರಿಕೋಟದಿಂದ ದೇಶದ ಮೊದಲ ಪಿಎಸ್‌ಎಲ್‌ವಿ (ಉಪಗ್ರಹ ಉಡಾವಣಾ ವಾಹನ) ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿತ್ತು. ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಉಡಾವಣೆಯಾದ ೭೦೦ ಸೆಕೆಂಡ್‌ಗಳಲ್ಲೇ ಪಿಎಸ್‌ಎಲ್‌ವಿ ಬಂಗಾಳ ಕೊಲ್ಲಿಯಲ್ಲಿ ಬಿತ್ತು. ಕೋಟ್ಯಂತರ ರೂಪಾಯಿ ಬಂಗಾಳ ಕೊಲ್ಲಿ ಪಾಲಾಯಿತು ಅಂತ ಜನ ಬಾಯಿ ಬಡಿದುಕೊಂಡರು. ಬಡವರಿಗೆ ತುತ್ತು ಸಿಗದ ದೇಶದಲ್ಲಿ ಉಪಗ್ರಹ ಹಾರಿಸುವುದೇಕೆ ಎಂದು ಉಗಿದರು. ಅದೇ ರೀತಿಯಲ್ಲಿ ೪೫೦ ಕೋಟಿ ರೂ. ವೆಚ್ಚದ ಚಂದ್ರಯಾನ ಬೇಕೇ ಎಂದು ಇವತ್ತು ಚರ್ಚೆಯಾಗುತ್ತಿದೆ. ಟೀಕಿಸುವುದಕ್ಕೆ ಮುನ್ನ ಸ್ವಲ್ಪ ಯೋಚಿಸಬೇಕು.
ಇದುವರೆಗೆ ಪಿಎಸ್‌ಎಲ್‌ವಿ ವಿಫಲವಾಗಿದ್ದು ಒಂದು ಸಲ ಮಾತ್ರ.ಮತ್ತೊಂದು ಸಲ ಭಾಗಶಃ ವಿಫಲವಾಯಿತು. ಒಟ್ಟು ೧೨ ಉಡಾವಣೆಗಳಲ್ಲಿ ೧೦ ಸಲ ಯಶಸ್ಸು ಸಿಕ್ಕಿದೆ. ಇವತ್ತು ಜರ್ಮನಿ, ದಕ್ಷಿಣ ಆಫ್ರಿಕಾ, ಇಂಡೊನೇಷ್ಯಾ, ಬೆಲ್ಜಿಯಂ, ಅರ್ಜೆಂಟೀನಾ ಮುಂತಾದ ದೇಶಗಳ ೪೫ರಿಂದ ೩೫೦ ಕೆಜಿ ತೂಕದ ಉಪಗ್ರಹಗಳನ್ನು ಪಿಎಸ್ಸೆಲ್ವಿ ಉಡಾಯಿಸುತ್ತಿದೆ. ಇತ್ತೀಚೆಗೆ ೪ ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ ಏಕಕಾಲಕ್ಕೆ ಉಡಾಯಿಸಿದೆ.
ಇಂದು ದೂರಸಂಪರ್ಕ, ವೈದ್ಯಕೀಯ, ಶಿಕ್ಷಣ, ಕೃಷಿ ಹವಾಮಾನ ಮುಂತಾದ ನಾನಾ ಕ್ಷೇತ್ರಗಳಲ್ಲಿ ಉಪಗ್ರಹದ ಪಾತ್ರ ಅವಿಭಾಜ್ಯ. ಆವತ್ತು ಬಂಗಾಳ ಕೊಲ್ಲಿಗೆ ಉಪಗ್ರಹ ಬಿದ್ದಾಗ ಟೀಕೆಗೆ ಅಂಜಿ ಹಿಂದೇಟು ಹಾಕಿದ್ದರೆ ವಿeನಿಗಳಿಗೆ ಈ ಎಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೇ ? ಮುಖ್ಯವಾಗಿ ದೂರ ಸಂಪರ್ಕ ವಲಯದಲ್ಲಿ ಇಷ್ಟೊಂದು ಕ್ರಾಂತಿ ಆಗುತ್ತಲೇ ಇರಲಿಲ್ಲ.

Sunday 22 November 2009

ಐಟಿ ಈಸ್ ಇನ್ ಮೈ ಬ್ಲಡ್- ಸುಹಾಸ್ ಗೋಪಿನಾಥ್

ಸುಹಾಸ್ ಗೋಪಿನಾಥ್ !
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೆಲವರಿಗೆ ಈ ಹೆಸರು ಪರಿಚಿತ. ಅಪ್ಪಟ ಕನ್ನಡಿಗ ಸುಹಾಸ್‌ಗೆ ಈಗ ಕೇವಲ ೨೩ರ ಹರೆಯ. ಮೀಸೆ ಇನ್ನೂ ಬಲಿಯದ ಪ್ರಾಯ. ಆದರೆ ಈತನ ರಕ್ತದಲ್ಲೇ ಮಾಹಿತಿ ತಂತ್ರಜ್ಞಾನ ಕರಗತವಾಗಿದೆ.
ಬೆಂಗಳೂರಿನ ಮತ್ತಿಕೆರೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಈ ಹುಡುಗ ಗ್ಲೋಬಲ್ಸ್ ಎಂಬ ಐಟಿ ಬಹುರಾಷ್ಟ್ರೀಯ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ. ಅಮೆರಿಕ, ಕೆನಡಾ, ಬಹರೇನ್, ಜರ್ಮನಿ, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ ಹನ್ನೊಂದು ರಾಷ್ಟ್ರಗಳಲ್ಲಿ ಈ ಕಂಪನಿಯ ವಹಿವಾಟು ನಡೆಯುತ್ತಿದೆ !
ನೀವು ನಂಬುತ್ತೀರಾ..ವಿಶ್ವ ಬ್ಯಾಂಕ್‌ನ ಆರ್ಥಿಕ ಸಲಹಾ ಮಂಡಳಿಯಲ್ಲಿನ ಏಕೈಕ ಭಾರತೀಯ ಹಾಗೂ ಕಿರಿಯ ಸದಸ್ಯ ಈ ಹೈದ. ಆಫ್ರಿಕಾದ ಬಡ ರಾಷ್ಟ್ರಗಳು ಸೇರಿದಂತೆ ಹಿಂದುಳಿದ ದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸಬಹುದು ಎಂಬುದರ ಬಗ್ಗೆ ಸುಹಾಸ್ ಜತೆ ವಿಶ್ವ ಬ್ಯಾಂಕ್ ಸಮಾಲೋಚನೆ ನಡೆಸುತ್ತದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೂಡ ಸುಹಾಸ್ ಸದಸ್ಯ. ಮೊನ್ನೆ ದಿಲ್ಲಿಯಲ್ಲಿ ನಡೆದ ಭಾರತೀಯ ಆರ್ಥಿಕ ಶೃಂಗದಲ್ಲಿ ಕೂಡ ಭಾಗವಹಿಸಿದ್ದಾನೆ. ಪೆಪ್ಸಿಕೊದ ಸಿಇಒ ಇಂದ್ರಾ ನೂಯಿ ಸೇರಿದಂತೆ ಘಟಾನುಘಟಿಗಳನ್ನು ಭೇಟಿಯಾಗಿದ್ದಾನೆ. ಇನೋಸಿಸ್‌ನ ಮುಖ್ಯ ಮಾರ್ಗದರ್ಶಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಹಾಸ್ ನಡುವೆ ನಿಯಮಿತವಾಗಿ ಇ-ಮೇಲ್ ಸಂವಹನ ನಡೆಯುತ್ತದೆ.
ಸುಹಾಸ್ ತಂದೆ ಗೋಪಿನಾಥ್ ರಕ್ಷಣಾ ಇಲಾಖೆಯಲ್ಲಿ ಅಕಾರಿಯಾಗಿದ್ದವರು. ಇನ್ನೂ ೧೬ರ ಬಾಲಕನಾಗಿದ್ದಾಗಲೇ ಹೆತ್ತವರ ಮಾರ್ಗದರ್ಶನದಲ್ಲಿ ಅಮೆರಿಕಕ್ಕೆ ತೆರಳಿ, ಸ್ನೇಹಿತರನ್ನು ಸಂಪಾದಿಸಿ ಅಲ್ಲಿನ ಮುಕ್ತ ವಾತಾವರಣದಲ್ಲಿ ಈ ಕಂಪನಿಯನ್ನು ಅಸ್ತಿತ್ವಕ್ಕೆ ತಂದ ಸುಹಾಸ್‌ನ ಯಶೋಗಾಥೆ ನಿಜಕ್ಕೂ ಅಚ್ಚರಿಯ ಸರಮಾಲೆ. ಈ ಹುಡುಗ ಮತ್ತೊಬ್ಬ ಎನ್.ಆರ್. ನಾರಾಯಣಮೂರ್ತಿಯಾಗುವ ದಿನಗಳು ದೂರವಿಲ್ಲ ಎಂದು ಅನ್ನಿಸಲು ಹಲವು ಕಾರಣಗಳಿವೆ. ಮೂರ್ತಿಯವರಂತೆ ಇವನದ್ದೂ ಹೋರಾಟದ ಹಾದಿ. ೧೭ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಸಿಇಒ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಸುಹಾಸ್, ನಂತರ ಕೂಡ ಹಿಂದೆ ಬಿದ್ದಿಲ್ಲ. ಮುಂದಿನ ವರ್ಷ ಮತ್ತೊಂದು ಕಂಪನಿಯ ಸ್ಥಾಪನೆಗೆ ಮುಂದಾಗಿದ್ದಾನೆ. ಯಾರಿಗಾದರೂ ಒಂದು ಕ್ಷಣ ನಂಬಲೂ ಕಷ್ಟವಾಗುವ, ಆದರೆ ಅಷ್ಟೇ ಸತ್ಯವಾಗಿರುವ ಸಾಧನೆ ಈ ಹುಡುಗನಿಂದ ಹೇಗೆ ಸಾಧ್ಯವಾಯಿತು ?
ಆಗ ಸುಹಾಸ್‌ಗೆ ೧೩ ವರ್ಷವಾಗಿತ್ತು. ಅಣ್ಣ ಶ್ರೇಯಸ್ ಗೋಪಿನಾಥ್ ಆಗಾಗ್ಗೆ ಮನೆಯ ಪಕ್ಕದ ಸೈಬರ್ ಕೆಫೆಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ಕಂಪ್ಯೂಟರ್ ಇರಲಿಲ್ಲ. ಈಗಿನಂತೆ ಇಂಟರ್‌ನೆಟ್ ಅಗ್ಗವಾಗಿರಲಿಲ್ಲ. ಗಂಟೆಗೆ ೧೦೦ ರೂ. ಶುಲ್ಕವಾಗುತ್ತಿತ್ತು. ಅಣ್ಣನೊಟ್ಟಿಗೆ ತಾನೂ ಇ-ಮೇಲ್ ಎಲ್ಲ ಮಾಡಿಕೊಂಡ ಹುಡುಗನಿಗೆ ಕ್ರಮೇಣ ನೆಟ್‌ಲೋಕ ಕೈ ಬೀಸಿ ಕರೆಯಿತು.
ವೆಬ್‌ಸೈಟ್ ಮಾಡೋದು ಹೇಗೆ ? ಇದರ ಮೂಲಕ ಹಣ ಗಳಿಸುವುದು ಹೇಗೆ ? ಎಂದೆಲ್ಲ ಇ-ಕಾಮರ್ಸ್ ಬಗ್ಗೆ ಬಾಲಕ ಕಲಿಯಲು ಆಸಕ್ತಿ ವಹಿಸಿದ. ಇಂಟರ್‌ನೆಟ್ ದುಬಾರಿಯಾದಾಗ ಕೆಫೆಯ ಮಾಲೀಕನೊಡನೆ ಚರ್ಚಿಸಿ, ಬಿಡುವಿನ ವೇಳೆ ತಾನೇ ಕೆಫೆಯನ್ನು ನೋಡಿಕೊಂಡ. ಆದಾಯ ಹೆಚ್ಚುವುದಾದರೆ ಯಾರು ಬೇಡ ಎನ್ನುತ್ತಾರೆ ? ಇತ್ತ ಸುಹಾಸ್‌ಗೂ ಉಚಿತವಾಗಿ ಇಂಟರ್‌ನೆಟ್ ಲೋಕವನ್ನು ಹೊಕ್ಕುವ ಅವಕಾಶ ಸಿಕ್ಕಿತು. ಕೂಲ್ ಹಿಂದುಸ್ತಾನ್ ಡಾಟ್‌ಕಾಮ್ ಎಂಬ ವೆಬ್‌ಸೈಟ್ ಯೋಜನೆಯನ್ನು ೧೪ನೇ ಪ್ರಾಯದಲ್ಲಿ ಸುಹಾಸ್ ನಿರ್ಮಿಸಿದಾಗ, ವಿಶ್ವದ ಅತ್ಯಂತ ಕಿರಿಯ ವೆಬ್‌ಸೈಟ್ ಡಿಸೈನರ್ ಎಂಬ ಹೆಗ್ಗಳಿಕೆ ಬಂತು. ಅನಂತರ ಅಮೆರಿಕದ ಕಂಪನಿಯೊಂದರಿಂದ ಸುಹಾಸ್‌ಗೆ ಆಹ್ವಾನ ಸಿಕ್ಕಿತು. ಭಾರತದಲ್ಲಿ ಸ್ವಂತ ಐಟಿ ಕಂಪನಿ ತೆರೆಯಬಹುದಲ್ಲವೇ ಎಂಬ ಯೋಚನೆ ಅಲ್ಲಿಯೇ ಹೊಳೆಯಿತು. ಆದರೆ ಭಾರತದಲ್ಲಿ ಕಾನೂನು ಪ್ರಕಾರ ಕಂಪನಿ ಸ್ಥಾಪಿಸಬೇಕಾದರೆ ೧೮ ವರ್ಷ ಕಡ್ಡಾಯವಾಗಿ ಭರ್ತಿಯಾಗಲೇ ಬೇಕು. ಹೀಗಾಗಿ ಅಮೆರಿಕದಲ್ಲೇ ಸುಹಾಸ್ ಕಂಪನಿ ಆರಂಭಿಸಿದ. ಭಾರತಕ್ಕೆ ಮರಳಿ ವ್ಯಾಪಾರ ಮುಂದುವರಿಸಿದ. ಹೆಚ್ಚಿನ ವಹಿವಾಟುಗಳೆಲ್ಲ ಅಂತರ್ಜಾಲದ ಮೂಲಕವೇ ನಡೆಯುತ್ತಿತ್ತು. ಐಟಿಗಿರುವ ಬಹುದೊಡ್ಡ ಅನುಕೂಲವೇ ಇದು. ಎಷ್ಟೋ ಸಲ ಗ್ರಾಹಕರು ಸುಹಾಸ್ ಧ್ವನಿ ಕೇಳಿ, ಬಾಲಕನ ಧ್ವನಿಯಂತಿದೆಯಲ್ಲವೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರಂತೆ. ಒಂದು ಕಂಪನಿಯ ಸಿಇಒ ಎಂದರೆ ಯಾರೂ ನಂಬುತ್ತಿರಲಿಲ್ಲ. ಆದರೆ ‘ ನೀವು ನನ್ನ ಸೇವೆಯನ್ನು ಗಮನಿಸಿ, ನಂತರ ಹೇಳಿ ಎಂದು ಒಪ್ಪಿಸುವ ಜಾಣ್ಮೆ ಸುಹಾಸ್‌ನಲ್ಲಿತ್ತು.
ಕಂಪನಿಯ ವಹಿವಾಟು ವಿಸ್ತರಿಸಿದಂತೆ ಬಿಡುವು ಸಿಗದಾಯಿತು. ಮಾಹಿತಿ ತಂತ್ರಜ್ಞಾನದಲ್ಲಿ ೬ನೇ ಸೆಮಿಸ್ಟರ್ ನಂತರ ಓದು ಮುಂದುವರಿಸಲು ಕಷ್ಟವಾಯಿತು. ನಂತರ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದ ಮೂಲಕ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ವಿಶೇಷ ಅರ್ಹತೆಯ ಮೇರೆಗೆ ಡಿಪ್ಲೊಮಾ ಪದವಿಯನ್ನು ಸುಹಾಸ್ ಪೂರೈಸಿದ್ದಾನೆ. ಗ್ಲೋಬಲ್ಸ್ ಕಂಪನಿಯಲ್ಲಿ ನೂರಾರು ಮಂದಿ ಟೆಕ್ಕಿಗಳಿದ್ದಾರೆ. ಬಹುತೇಕ ಮಂದಿ ೨೦-೨೫ ವಯಸ್ಸಿನ ಎಳೆಯರು.
ಭಾರತದಲ್ಲಿ ಉದ್ಯಮಶೀಲತೆ ಅಭಿವೃದ್ಧಿಯಾಗಬೇಕಾದರೆ ಬಾಲ್ಯದಿಂದಲೇ ಉತ್ತೇಜನ ಸಿಗಬೇಕು. ಹೆತ್ತವರಿಂದ, ಸಮಾಜದಿಂದ, ಶೈಕ್ಷಣಿಕ ವಲಯದಿಂದ, ಮಾಧ್ಯಮಗಳಿಂದ ಪ್ರೋತ್ಸಾಹ ಸಿಗಬೇಕು. ಭಾರತೀಯರು ಉದ್ದಿಮೆಯಲ್ಲಿ ಸೋಲುಗಳನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕು. ಒಂದು ದೃಷ್ಟಿಕೋನ ಇರಬೇಕು. ಕಠಿಣ ಪರಿಶ್ರಮದ ಜತೆಗೆ ಕೌಶಲ್ಯಯುಕ್ತ ದುಡಿಮೆಯೂ ಆಗಬೇಕು. ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಹೊರಡುವವರಿಗೆ ಅನುಕೂಲವಾಗುವಂತೆ ನಿಜವಾದ ಏಕ ಗವಾಕ್ಷಿ ಯೋಜನೆ ಜಾರಿಯಾಗಬೇಕು. ಎಷ್ಟೋ ಸಲ ಕಾಲೇಜುಗಳಲ್ಲಿ ಉದ್ಯಮಶೀಲತೆ ಬಗ್ಗೆ ಉಪನ್ಯಾಸ ಕೊಟ್ಟಿದ್ದೇನೆ. ಹೊರ ಬರುವಾಗ ಹಲವರು ಬಂದು ಸ್ವ ವಿವರವನ್ನು ಕೊಟ್ಟು ನಿಮ್ಮ ಕಂಪನಿಯಲ್ಲಿ ಉದ್ಯೋಗ ಸಿಗಬಹುದೇ ಎಂದು ಕೇಳುತ್ತಾರೆ ! ಆದ್ದರಿಂದ ಉದ್ಯಮಿಗಳ ಸಂಖ್ಯೆ ಹೆಚ್ಚಬೇಕಾದರೆ ಮೊದಲು ಮೈ ಚಳಿ ಬಿಡಬೇಕು ಎಂದು ಮುಂದುವರಿಯುತ್ತದೆ ಸುಹಾಸ್ ಮಾತಿನ ಸರಣಿ. ಹಾಗಾದರೆ ಮುಂದಿನ ಕಂಪನಿ ಐಟಿಗೆ ಸಂಬಂಸಿದ್ದೇ ಅಥವಾ ಬೇರೆಯೇ ? ಎಂದಾಗ ಸುಹಾಸ್ ಹೇಳಿದ್ದೇನು ಗೊತ್ತೇ ?
" ಐಟಿ ಈಸ್ ಇನ್ ಮೈ ಬ್ಲಡ್.. ಹೀಗಾಗಿ ಅದು ಬಿಟ್ಟು ಬೇರೆ ಇಲ್ಲ.." !


ಹೀಗಿದ್ದಾನೆ ಯಂಗ್ ಸಿಇಒ !
ಸುಹಾಸ್ ದಿನಚರಿಯೇ ಆತನೊಳಗಿರುವ ಸಾಧಕನನ್ನು ಪರಿಚಯಿಸುತ್ತದೆ. ಪ್ರತಿ ದಿನ ೪ರಿಂದ ೫ ಗಂಟೆ ಮಾತ್ರ ವಿಶ್ರಾಂತಿ. ಉಳಿದೆಲ್ಲ ಪ್ರಚಂಡ ದುಡಿಮೆ. ಹಾಸಿಗೆಗೆ ಒರಗುವ ವೇಳೆ ಮುಂಜಾನೆ ೩ ಅಥವಾ ೪ ಗಂಟೆಯಾಗುತ್ತದೆ. ಬೆಳಗ್ಗೆ ೮ಕ್ಕೆ ಮತ್ತೆ ದಿನ ಆರಂಭ. ಗೆಳೆಯರ ಜತೆಗೆಲ್ಲ ಜಾಲಿ ಹೊಡೆಯಲು ಸಮಯದ ಅಭಾವ. ಕೆಲವೊಮ್ಮೆ ಒತ್ತಡ ಹೆಚ್ಚಾದಾಗ ಇದೆಲ್ಲ ಬೇಕೇ ಎಂದೂ ಅನ್ನಿಸಿದ್ದು ಇದೆಯಂತೆ. ಆದರೆ ತನ್ನ ಕಂಪನಿಯಿಂದ ನೂರಾರು ಮಂದಿಗೆ ಉದ್ಯೋಗ ಸಿಕ್ಕಿರುವುದನ್ನು ನೆನೆದಾಗ ಪಟ್ಟ ಶ್ರಮ ಸಾರ್ಥಕ ಎನ್ನಿಸಿ ಮತ್ತೆ ಚೈತನ್ಯ ಗಳಿಸಿಕೊಳ್ಳುತ್ತೇನೆ.ನಾನು ಆಧ್ಯಾತ್ಮಿಕ ವ್ಯಕ್ತಿಯಲ್ಲ, ಆದರೆ ಆದರೆ ಒತ್ತಡ ಶಮನಕ್ಕೆ ಯೋಗಾಭ್ಯಾಸ ಕಲಿಯಲು ಬಯಸಿದ್ದೇನೆ ಎನ್ನುತ್ತಾನೆ ಸುಹಾಸ್. ಎಂಥಾ ಪ್ರಬುದ್ಧ ಮಾತಲ್ಲವೇ ಇದು. ಬಿಬಿಸಿ ನ್ಯೂಸ್ ಚಾನೆಲ್‌ನವರಂತೂ ಒಂದು ವಾರ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಸುಹಾಸ್ ಉಣ್ಣೋದರಿಂದ ಹಿಡಿದು ಮಲಗೋತನಕ ಶೂಟಿಂಗ್ ಮಾಡಿ ಹೋಗಿದ್ದರು. ಹೆತ್ತವರ ಜತೆ ಕಾಲ ಕಳೆಯಲೂ ಈತನಿಗೆ ಸಮಯ ಸಿಗುತ್ತಿಲ್ಲ. ಅಮೆರಿಕ, ಫ್ರಾನ್ಸ್, ಜರ್ಮನಿ, ಸ್ಪೇನ್, ಸಿಂಗಾಪುರ ಅಂತ ನಾನಾ ರಾಷ್ಟ್ರಗಳಲ್ಲಿ ಸಂಚರಿಸಬೇಕು. ವಿಶ್ವ ಬ್ಯಾಂಕ್ ಅಧ್ಯಕ್ಷರು ಇ-ಮೇಲ್ ಮೂಲಕ ಆಹ್ವಾನಿಸಿದಾಗ ಸುಹಾಸ್ ವಿಮಾನದಲ್ಲಿದ್ದ.

ಸಾಕು ಪ್ರಾಣಿಗಳೆಂದರೆ ಇಷ್ಟ
ಇಷ್ಟೆಲ್ಲ ಕೆಲಸದ ನಡುವೆಯೂ ಬೀದಿ ನಾಯಿಗಳನ್ನು ಸಲಹಲು ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿದ್ದಾನೆ ಸುಹಾಸ್. ಬಾಲ್ಯದಿಂದಲೇ ನಾಯಿ, ಬೆಕ್ಕು ಅಂತ ಸಾಕುಪ್ರಾಣಿಗಳೆಂದರೆ ಸುಹಾಸ್‌ಗೆ ಪಂಚಪ್ರಾಣ. ಕಚೇರಿಯ ಚೇಂಬರಿನಲ್ಲೂ ಮುದ್ದಾದ ನಾಯಿಮರಿಗಳ ಚಿತ್ರಗಳಿವೆ. ಸುಹಾಸ್‌ನ ಕಂಪ್ಯೂಟರ್ ಪರದೆಯಲ್ಲೂ ನಾಯಿ ಮರಿಗಳು ಆಟವಾಡುತ್ತಿರುವ ಚಿತ್ರವೇ ಮಿಂಚುತ್ತಿದೆ.

ಸುದೀಪ್ ಅಭಿಮಾನಿ, ಕನ್ನಡದ ಚಿತ್ರಗಳೇ ಇಷ್ಟ
ಸಮಯ ಸಿಕ್ಕಿದಾಗ ಕನ್ನಡದ ಚಿತ್ರಗಳನ್ನು ಸುಹಾಸ್ ನೋಡುತ್ತಾನೆ. ಸುದೀಪ್ ಚಿತ್ರಗಳ ಅಭಿಮಾನಿ ನಾನು. ಗ್ಲೋಬಲ್ಸ್‌ನಲ್ಲಿ ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಕನ್ನಡಿಗ ಟೆಕ್ಕಿಗಳಿದ್ದಾರೆ. ಕಚೇರಿ ವ್ಯವಹಾರ ಬಿಟ್ಟು ಉಳಿದ ಸಂದರ್ಭ ಕನ್ನಡದಲ್ಲೇ ಮಾತುಕತೆ ನಡೆಯುತ್ತದೆ ಎನ್ನುತ್ತಾನೆ ಸುಹಾಸ್.
e-mail : suhas@globalsinc.com

Wednesday 11 November 2009

ನ್ಯಾನೊ ನಿನಗೆ ಕಾಣಿಸ್ತೇನೊ..

ಹೊಸದಿಲ್ಲಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿ ಕಳೆದ ವರ್ಷ ಜನವರಿ ಹತ್ತರಂದು ನ್ಯಾನೊ ಕಾರನ್ನು ಮೊಟ್ಟ ಮೊದಲ ಬಾರಿಗೆ ಪ್ರದರ್ಶಿಸಿದಾಗ ದೇಶದ ಜನ ಕಣ್ಣರಳಿಸಿ ನೋಡಿದ್ದರು. ಈ ವರ್ಷ ಮಾರ್ಚ್ ೨೩ರಂದು ವಾಣಿಜ್ಯೋದ್ದೇಶದಿಂದ ಬಿಡುಗಡೆಗೊಳಿಸಿದಾಗಲೂ ಅದೇ ಮಟ್ಟದಲ್ಲಿ ಜನ ಬೆರಗಾಗಿದ್ದರು. ಹೀಗಾಗಿ ಏಪ್ರಿಲ್ ೯ರಿಂದ ೨೫ರ ತನಕ ಕೇವಲ ೧೫ ದಿನಗಳ ಬುಕ್ಕಿಂಗ್ ಅವಯಲ್ಲಿ ೨೦ ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಇದು ಮಾರುತಿ ೮೦೦ಕ್ಕಿಂತ ಅಗ್ಗದ ಕಾರು ಎಂದು ಬಣ್ಣಿಸಲಾಯಿತು. ಇರಬಹುದು. ಆದರೆ ಈಗ ರಾಜ್ಯದಲ್ಲಿ ಎಷ್ಟು ನ್ಯಾನೊ ಕಾರು ರಸ್ತೆಗಿಳಿದಿವೆ ? ಬೆಂಗಳೂರಿನಲ್ಲಿ ಎಲ್ಲೋ, ಅಲ್ಲೊಂದು ಇಲ್ಲೊಂದು ಕಾರು ಓಡಾಡುತ್ತಿದೆಯಷ್ಟೇ. ಹಾಗಾದರೆ ಎಲ್ಲೆಲ್ಲಿಯೂ ಕಾರು ಬರೋದು ಯಾವಾಗ ?
ಟಾಟಾದ ಮುಂಬಯಿನ ಪ್ರಧಾನ ಕಚೇರಿಯಲ್ಲೂ ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಮುಖ್ಯವಾಗಿ ಕಾನ್‌ಕಾರ್ಡ್ ಮೋಟಾರ್ಸ್ ಹಾಗೂ ಪ್ರೇರಣಾ ಮೋಟಾರ್ಸ್ ಡೀಲರ್‌ಗಳಾಗಿವೆ. ಕಾನ್‌ಕಾರ್ಡ್‌ನ ಶಾಖೆಯೊಂದರಲ್ಲಿ ಸುಮಾರು ೩ ಸಾವಿರ ಮಂದಿಗೆ ಕಾರು ಮಂಜೂರಾಗಿದೆ. ಆದರೆ ೧೦೦ರಿಂದ ೧೫೦ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ಪ್ರೇರಣಾ ಮೋಟಾರ್ಸ್‌ನಿಂದ ೨೪ ಕಾರುಗಳನ್ನು ನೀಡಲಾಗಿದೆ.
ಇದಕ್ಕಿಂತ ಹೆಚ್ಚಿನ ಉತ್ತರ ಸಿಗುವುದಿಲ್ಲ. ಡೀಲರ್‌ಗಳಿಗೆ ಸಂಪರ್ಕಿಸಿದರೆ ಟಾಟಾ ಮೋಟಾರ್ಸ್‌ನವರತ್ತ ಬೊಟ್ಟು ಮಾಡುತ್ತಾರೆ. ಟಾಟಾ ಮೋಟಾರ್ಸ್‌ನ ಪ್ರಧಾನ ಕಚೇರಿಯನ್ನು ಸಂಪರ್ಕಿಸಿದರೆ ಮತ್ತೆ ಬೆಂಗಳೂರಿನ ಡೀಲರ್‌ಗಳ ಸಂಪರ್ಕ ಸಂಖ್ಯೆ ಕೊಟ್ಟು ಬಿಡುತ್ತಾರೆ. ಅಷ್ಟೇ.
ಕೊನೆಗೂ ಪ್ರೇರಣಾ ಮೋಟರ್ಸ್‌ನ ಸಿಬ್ಬಂದಿ ಹೇಳಿದ್ದಿಷ್ಟು : ‘ ನ್ಯಾನೊ ಕಾರಿನ ವ್ಯಾಪಾರ ಚಟುವಟಿಕೆ ಸದ್ಯಕ್ಕೆ ನಿಂತಿದೆ. ಯಾಕೆಂದರೆ ಬುಕ್ಕಿಂಗ್ ನಡೆಯುತ್ತಿಲ್ಲ. ಈಗಾಗಲೇ ಕಾರು ಮಂಜೂರಾದವರಿಗೆ, ಸಕಾಲದಲ್ಲಿ ಬಿಡುಗಡೆಯಾಗಬಹುದು. ಬಹುಶಃ ಮುಂದಿನ ತಿಂಗಳು ನೂರೋ, ಇನ್ನೂರೋ ಕಾರು ಬಿಡುಗಡೆಯಾಗಬಹುದು. ಆದರೆ ಪ್ರತಿಯೊಬ್ಬ ಗ್ರಾಹಕನಿಗೂ ಮುಂಬಯಿನಿಂದ ರವಾನೆಯಾಗುವ ಮಂಜೂರು ಪತ್ರದಲ್ಲಿ, ಯಾವಾಗ ಸಿಗುತ್ತದೆ ? ಬಣ್ಣ, ದರ ಇತ್ಯಾದಿ ಎಲ್ಲ ವಿವರ ಇರುತ್ತದೆ ಉದಾಹರಣೆಗೆ ‘ ಅಕ್ಟೋಬರ್‌ನಿಂದ ಡಿಸೆಂಬರ್ ಅವಯಲ್ಲಿ ಬಿಡುಗಡೆ ’ ಆಗಬಹುದು ಎಂದಿರುತ್ತದೆ. ಹೀಗಾಗಿ ಗೊಂದಲದ ಅಗತ್ಯ ಇಲ್ಲ. ಪ್ರೇರಣಾ ಮೋಟಾರ್ಸ್‌ನಿಂದ ನ್ಯಾನೊ ಕಾರು ತೆಗೆದುಕೊಂಡಿರುವ ಗ್ರಾಹಕರು ಸಂತೃಪ್ತಿಯಲ್ಲಿದ್ದಾರೆ. ಅವರು ಹೋದೆಡೆಯಲ್ಲೆಲ್ಲ ಜನ ಪ್ರಶ್ನೆಗಳ ಸುರಿಮಳೆಗೆರೆಯುತ್ತಾರೆ. ಹೊಸ ಉತ್ಪನ್ನವಾದ್ದರಿಂದ ಇದೆಲ್ಲ ಸಹಜ ’
ಇಷ್ಟೆಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಟಾಟಾ ನ್ಯಾನೊ ಕಾರಿನ ಮಾರಾಟದ ಬಗ್ಗೆ ಡೀಲರ್‌ಗಳು ಹಾಗೂ ಟಾಟಾ ಮೋಟಾರ್ಸ್ ಕಂಪನಿ ಮಾಹಿತಿ ಕೊಡಲು ಮಾತ್ರ ಹಿಂದೇಟು ಹಾಕುತ್ತಿರುವುದೇಕೆ ? ಗೊಂದಲ ಮತ್ತು ಅನುಮಾನ ಉಂಟಾಗುವುದೇ ಹೀಗೆ. ಆದರೆ ಒಂದಂತೂ ಸ್ಪಷ್ಟ. ಅತಿ ರಂಜಿತವಾಗಿ ‘ ವಿಶ್ವದ ಅತ್ಯಂತ ಅಗ್ಗದ ಕಾರು ’ ಬುಕ್ಕಿಂಗ್ ಆದದ್ದಕ್ಕೂ, ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಕಾರುಗಳ ಸಂಖ್ಯೆಗೂ ಭಾರಿ ಅಂತರ ಇದೆ. ಆದ್ದರಿಂದಲೇ ಜನ ಕೆಲವೇ ಮಂದಿ ನ್ಯಾನೊ ಮಾಲೀಕರ ಮೇಲೆ ಪ್ರಶ್ನೆಗಳ ಸುರಿಮಳೆಗೆರೆಯುತ್ತಾರೆ. ಈ ನಡುವೆ ಬೆಂಗಳೂರಿನ ಬಳಸಿದ ಕಾರುಗಳ ಮಾರುಕಟ್ಟೆಗೂ ಶೀಘ್ರದಲ್ಲೇ ನ್ಯಾನೊ ಕಾರು ಬರಲಿದೆ ಎಂಬ ಸುದ್ದಿಯಿದೆ. ಈಗಾಗಲೇ ಮುಂಬಯಿನ ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಗೆ ನ್ಯಾನೊ ಬಂದಿದೆ.

Wednesday 4 November 2009

ಬಂಗಾರ ದುಬಾರಿಯಾದಾಗ ? ೫೦೦ ರೂ. ಕಂತಿನಲ್ಲಿ ಕನಸು ನನಸು

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕಿರುವ ಮಹತ್ವವನ್ನು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯವಿಲ್ಲ. ಅಂತಹ ಬಂಗಾರ ಕೇವಲ ಸೌಂದರ್ಯವರ್ಧಕ ಸಾಧನವಾಗಿಯೂ ಉಳಿದಿಲ್ಲ. ಉಳಿತಾಯ ಹಾಗೂ ಹೂಡಿಕೆಯ ಸುರಕ್ಷಿತ ವಿಧಾನವಾಗಿ ಕೂಡ ಆಕರ್ಷಿಸುತ್ತಿದೆ. ಒಂದು ವೇಳೆ ಭಾರತದಲ್ಲಿ ಚಿನ್ನದ ಕೊರತೆ ತೀವ್ರವಾಗಿದ್ದಲ್ಲಿ, ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ದೇಶ ಕಂಗಾಲಾಗುತ್ತಿತ್ತು. ಹೀಗಿದ್ದರೂ ಚಿನ್ನದ ಬೆಲೆ ಪ್ರತಿ ೧೦ ಗ್ರಾಮ್‌ಗೆ ೧೬,೪೫೦ ರೂ. ಗಡಿ ದಾಟಿದೆ. ಹೀಗಾಗಿ ಚಿನ್ನದ ಖರೀದಿಗೆ ಚಿಂತಿಸುವವರೂ ಹೆಚ್ಚುತ್ತಿದ್ದಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚಿನ್ನವನ್ನು ನಿಮ್ಮದಾಗಿಸಲು ಸುರಕ್ಷಿತ ಹಾಗೂ ಸರಳ ಅನುಕೂಲ ಇದೆ. ಪ್ರತಿ ತಿಂಗಳು ಸುಲಭ ಕಂತುಗಳ ಮೂಲಕ ಬಂಗಾರದ ಕನಸನ್ನು ನನಸು ಮಾಡಿಕೊಳ್ಳಬಹುದು. ಯಾರ್‍ಯಾರೋ ಕೈಗೆ ದುಡ್ಡು ಕೊಟ್ಟು ಮೋಸ ಹೋಗುವುದರ ಬದಲಿಗೆ ಬ್ರಾಂಡ್ ಕಂಪನಿಗಳ ಕಂತಿನ ಯೋಜನೆಯಲ್ಲಿ ಸೇರಿಕೊಳ್ಳಬೇಕು. ಅಷ್ಟೇ. ಹಾಗಾದರೆ ಚಿನ್ನದ ಮಾಸಿಕ ಕಂತು ಯೋಜನೆಗಳು ಹೇಗಿರುತ್ತವೆ ? ಅವುಗಳಲ್ಲಿ ಏನೇನು ಸೌಲಭ್ಯ ಸಿಗುತ್ತವೆ ? ಉದಾಹರಣೆಗೆ ಮಲಬಾರ್ ಗೋಲ್ಡ್ ಕಂಪನಿಯ ಯೋಜನೆಯನ್ನು ನೋಡೋಣ. ಐನೂರು ರೂ.ಗಳಿಂದ ಕಂತು ಆರಂಭವಾಗುತ್ತದೆ. ಯಾರು ಬೇಕಾದರೂ ಕಂಪನಿಯ ಶೋ ರೂಮ್‌ಗೆ ಹೋಗಿ ಎರಡು ಪಾಸ್‌ಪೋರ್ಟ್ ಆಕಾರದ ಭಾವ ಚಿತ್ರ, ವಿಳಾಸ ಕೊಟ್ಟು ಯೋಜನೆಗೆ ಸೇರಿಕೊಳ್ಳಬಹುದು. ನಿಮಗೆ ಗುರುತಿನ ಕಾರ್ಡ್, ರಸೀದಿ ಕೊಡುತ್ತಾರೆ. ೧೮ ತಿಂಗಳಿಗೆ ಕಂತಿನ ಮೊತ್ತ ೯ ಸಾವಿರ ರೂ. ಆಗುತ್ತದೆ. ವರ್ಷಕ್ಕೆ ಶೆ. ೬ರಷ್ಟು ಬೋನಸ್‌ನ್ನು ಕೂಡ ಮಲಬಾರ್ ನೀಡುತ್ತದೆ. ೯ ಸಾವಿರ ರೂ.ಗೆ ( ಬೋನಸ್ ೪೨೭.೫ ರೂ.) ನಿಮಗೆ ಬೇಕಾದ ಉಂಗುರ ಅಥವಾ ಚೈನ್ ಖರೀದಿಸಬಹುದು. ಅಥವಾ ೨೪ ತಿಂಗಳಿಗೆ ಮುಂದುವರಿಸಿದರೆ ೧೨ ಸಾವಿರ ರೂ. (೪೨೭.೫ ರೂ. ಬೋನಸ್ ) ಬೆಲೆಯ ಬಂಗಾರ ನಿಮ್ಮದಾಗುತ್ತದೆ. ಬಜೆಟ್‌ಗೆ ತಕ್ಕಂತೆ ೫೦೦, ೧೦೦೦,೨೫೦೦, ೫೦೦೦ ರೂ. ಕಂತುಗಳಲ್ಲಿ ಸೇರಿಕೊಳ್ಳಬಹುದು. ಚಿನ್ನದ ನಾಣ್ಯ : ನಾನಾ ಬ್ಯಾಂಕ್‌ಗಳು, ಆಭರಣ ಕಂಪನಿಗಳು, ಅಷ್ಟೇಕೆ ಅಂಚೆ ಇಲಾಖೆ ಕೂಡ ಈವತ್ತು ಬಂಗಾರದ ನಾಣ್ಯಗಳನ್ನು ಮಾರಾಟ ಮಾಡುತ್ತಿವೆ. ಇವುಗಳೂ ಹೂಡಿಕೆಗೆ ಸುರಕ್ಷಿತ ವಿಧಾನ. ಬಂಗಾರದ ನಾಣ್ಯಗಳನ್ನು ಪಡೆದ ನಂತರ ಮಜೂರಿ ಶುಲ್ಕ ( ಮೇಕಿಂಗ್ ಚಾರ್ಜ್) ಅಂತ ಬೇರೆ ಕೊಡಬೇಕಾದ ಅಗತ್ಯ ಇರುವುದಿಲ್ಲ. ಚಿನ್ನ ಲೋಪವಾಗುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ನಾಣ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳನ್ನೂ ಕಂತಿನಲ್ಲಿ ಪಡೆಯಬಹುದು. ಆದ್ದರಿಂದ ಕೈಯಲ್ಲಿ ದುಡ್ಡಿಲ್ಲ ಅಂತ ಚಿನ್ನ ಖರೀದಿಸುವ ಯೋಜನೆಯನ್ನು ಕೈಬಿಡಬೇಡಿ. ಕಂತಿನ ಮಾರ್ಗದಲ್ಲಿ ಹನಿಗೂಡಿ ಹಳ್ಳವಾಗುತ್ತದೆ. ಬಂಗಾರ ನಿಮ್ಮದಾಗುತ್ತದೆ.
(ವಿಜಯಕರ್ನಾಟಕದಲ್ಲಿ ಪ್ರಕಟಿತ ವರದಿ )

Tuesday 3 November 2009

ಜನ ಚೇಂಜ್ ಕೇಳ್ತಾರೆ, ಕೇಬಲ್ ಟಿವಿಯಿಂದ ಡಿಟಿಎಚ್‌ಗೆ

ದಿನೇ ದಿನೆ ಡಿಟಿಎಚ್ ಉದ್ಯಮ ವಿಸ್ತರಿಸಿಕೊಳ್ಳುತ್ತಿದೆ. ಮನರಂಜನೆ ಕ್ಷೇತ್ರದಲ್ಲಿ ಈ ಉದ್ಯಮದ ಪಾತ್ರವೇನು ? ಅದರಲ್ಲೂ ಬಿಗ್‌ಟಿವಿಯ ವೈಶಿಷ್ಟ್ಯವೇನು ? ಕಂಪನಿಯ ಹಿರಿಯ ಉಪಾಧ್ಯಕ್ಷ ಉಮೇಶ್ ರಾವ್ ವಿಜಯ ಕರ್ನಟಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಿಷ್ಟು :

೧. ಡಿಟಿಎಚ್ ವಿಸ್ತರಣೆಯಲ್ಲಿ ಕಂಡುಬರುತ್ತಿರುವ ಸವಾಲು ಯಾವುದು ?
ರಾಷ್ಟ್ರದಾದ್ಯಂತ ಡಿಟಿಎಚ್ ಸೇವೆ ಒದಗಿಸುವುದು ಎಲ್ಲಕ್ಕಿಂತ ಮುಖ್ಯ ಸವಾಲು. ಆದರೆ ರಿಲಯನ್ಸ್ ಬಿಗ್ ಟಿವಿಯು ೬,೫೦೦ಕ್ಕೂ ಹೆಚ್ಚು ಪಟ್ಟಣಗಳಲ್ಲಿ ೧ ಲಕ್ಷಕ್ಕೂ ಹೆಚ್ಚು ರೀಟೇಲ್ ಕೇಂದ್ರಗಳಲ್ಲಿ ಲಭ್ಯವಿದೆ. ರಿಲಯನ್ಸ್ ಬಿಗ್ ಟಿವಿಯಲ್ಲಿ ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ೩೦೦ಕ್ಕೂ ಹೆಚ್ಚು ಚಾನೆಲ್‌ಗಳಿವೆ.

೨. ಇತರ ಡಿಟಿಎಚ್‌ಗಿಂತ ಬಿಗ್ ಟಿವಿ ಹೇಗೆ ವಿಭಿನ್ನ ?
ತಂತ್ರಜ್ಞಾನ, ವಸ್ತು ಮತ್ತು ವಿತರಣೆಯ ವಿಷಯದಲ್ಲಿ ಬಿಗ್ ಟಿವಿ ವಿಭಿನ್ನ. ಎಂಪಿಇಜಿ ೪ ತಂತ್ರಜ್ಞಾನವನ್ನು ಮೊದಲು ಜಾರಿಗೊಳಿಸಿದ್ದೇವೆ. ೪೦೦ಕ್ಕೂ ಹೆಚ್ಚು ಚಾನಲ್‌ಗಳನ್ನು ಹೊಂದುವ ಸಾಮರ್ಥ್ಯ ನಮಗಿದೆ. ಇತರ ಯಾವುದೇ ಕಂಪನಿಗಿಂತ ಹೆಚ್ಚು ಚಾನಲ್‌ಗಳು ನಮ್ಮಲ್ಲಿವೆ. ೩೨ ಸಿನಿಮಾ ಚಾನಲ್‌ಗಳಿವೆ (ಪಿಪಿವಿ ಚಿತ್ರ ). ಇವು ಪ್ರಾದೇಶಿಕ ಭಾಷೆಗಳಲ್ಲೂ ಈ ಲಭ್ಯ. ಬಿಗ್ ಟಿವಿಯ ಕಾಲ್ ಸೆಂಟರ್ ೧೧ ಭಾಷೆಗಳಲ್ಲಿ, ನಿತ್ಯ ೫೦ ಸಾವಿರ ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ.

೩. ಭಾರತದಲ್ಲಿ ಡಿಟಿಎಚ್ ಭವಿಷ್ಯ ?
ಭಾರತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಟಿ.ವಿ ವೀಕ್ಷಕಕರನ್ನು ಹೊಂದಿರುವ ದೇಶ. ೧೧೯ ದಶಲಕ್ಷ ಕುಟುಂಬಗಳಲ್ಲಿ ಟಿ.ವಿ ಇದೆ. ಸದ್ಯಕ್ಕೆ ಡಿಟಿಎಚ್ ೧೩ ದಶಲಕ್ಷ ಕುಟುಂಬಗಳಲ್ಲಿ ಇದೆ. ಇದು ಶೇ.೨೫-೩೦ರ ದರದಲ್ಲಿ ಬೆಳೆಯುತ್ತಿದೆ. ಇತ್ತೀಚಿನ ಟ್ರೆಂಡ್ ಏನೆಂದರೆ ಜನ ಕೇಬಲ್ ಟಿವಿಯಿಂದ ಡಿಟಿಎಚ್‌ನತ್ತ ವಾಲುತ್ತಿರುವುದು. ಕ್ರಮೇಣ ಡಿಟಿಎಚ್ ಕೇಬಲ್ ಮತ್ತು ಸ್ಯಾಟಲೈಟ್ ಸಾಂದ್ರತೆಗೆ ಸಮನಾಗುವ ವಿಶ್ವಾಸವಿದೆ.

೪. ಬಿಗ್ ಟಿ.ವಿ ಇತರ ಡಿಟಿಎಚ್‌ಗಿಂತ ಎಷ್ಟು ಅಗ್ಗ ?
ನಮ್ಮಲ್ಲಿ ೯೯ ರೂ.ಗಳಿಂದ ಆರಂಭವಾಗುವ ೧೧ ಪ್ಯಾಕೇಜ್ ಇದೆ. ಮೂಲ ಪ್ಯಾಕೇಜ್‌ನಿಂದ ಚಾನಲ್‌ಗಳನ್ನು ಸೇರಿಸುತ್ತ ಹೋಗಬಹುದು. ನಿಮಗೆ ಯಾವ ಚಾನಲ್ ಬೇಕೋ ಅಷ್ಟನ್ನು ಯ್ಕೆ ಮಾಕೊಳ್ಳಬಹುದು. ಅತ್ಯಂತ ಕಡಿಮೆ ಎಂದರೆ ೯೯ ರೂ.ಗಳಿಗೆ ೮೧ ಚಾನೆಲ್. ಇದರಲ್ಲಿ ೭೦ ಟಿ.ವಿ ಚಾನೆಲ್ ೧೦ ಆಡಿಯೊ ಚಾನೆಲ್.

೫. ಜಾಹೀರಾತು ಸಲುವಾಗಿ ಬಿಗ್ ಟಿವಿ ಎಷ್ಟು ವೆಚ್ಚ ಮಾಡುತ್ತಿದೆ ?
ಬಿಗ್ ಟಿವಿ ತನ್ನ ಹೊಸ ಬ್ರಾಂಡ್‌ನ ಅಭಿಯಾನ ಕೈಗೊಂಡಿದ್ದು, ೫೦ ಕೋಟಿ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ. ಮುದ್ರಣ, ಟಿ.ವಿ, ನೂರಕ್ಕೂ ಹೆಚ್ಚು ಇತರ ಪ್ರಕಾಶನ, ಆನ್‌ಲೈನ್, ೧ ಸಾವಿರ ವೆಬ್‌ಸೈಟ್, ೫೦ ರೇಡಿಯೊ ನಿಲಯಗಳ ಮೂಲಕ ಪ್ರಚಾರ ಅಭಿಯಾನ ನಡೆಯುತ್ತಿದೆ.

(ವಿಜಯ ಕರ್ನಾಟಕಕ್ಕೆ ಇತ್ತೀಚೆಗೆ ರಿಲಯನ್ಸ್ ಬಿಗ್ ಟಿವಿಯ ಹಿರಿಯ ಉಪಾಧ್ಯಕ್ಷ ಉಮೇಶ್ ರಾವ್ ಜತೆ ನಡೆಸಿದ ಸಂದರ್ಶನವಿದು )

Wednesday 21 October 2009

ಹಳ್ಳಿ ಶಾಲೆ ಮಕ್ಕಳ ಬ್ಯಾಂಕ್ ಮತ್ತು ಉಳಿತಾಯ !



(ಮೈಸೂರಿನ ಆಂದೋಲನ ಪತ್ರಿಕೆಯಲ್ಲಿದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಸರಣಿ )

ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚರಿಯ ಗೂಡು.
ಎಲ್ಲ ಹಳ್ಳಿಗಳಂತೆಯೇ ಇರುವ ದೊಡ್ಡ ಕೊಪ್ಪಲಿನಲ್ಲಿ ಈ ಪುಟ್ಟ ಸರಕಾರಿ ಶಾಲೆ ಸದ್ದಿಲ್ಲದೆ ನಡೆಸುತ್ತಿರುವ ಶೈಕ್ಷಣಿಕ ಪ್ರಗತಿ ಗ್ರಾಮದ ಮಟ್ಟಿಗೆ ಒಂದು ಆಂದೋಲನದಂತೆ ಪರಿವರ್ತನೆಗೊಳ್ಳುತ್ತಿದೆ. ಖಾಸಗಿ ಶಾಲೆಗಳೂ ಈ ಶಾಲೆಯನ್ನೊಮ್ಮೆ ನೋಡಿ ಹಲವು ವಿಚಾರಗಳನ್ನು ಕಲಿಯುವಂತಿದೆ. ಶಾಲೆಯ ಬಾಹ್ಯ ಪರಿಸರ, ಶಿಕ್ಷಕರು, ಚಿಣ್ಣರು, ಅನುಷ್ಠಾನಗೊಂಡಿರುವ ತರಾವರಿ ಪ್ರಯೋಗಗಳು ವಿಶಿಷ್ಟ ಕಥನವಾಗುತ್ತವೆ.
ಮಿತ್ರ ಕೃಷ್ಣ ಅವರೊಂದಿಗೆ ದೊಡ್ಡ ಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೆದುರು ನಿಂತಾಗ ಕಂಡ ಪರಿಸರ ವಿಭಿನ್ನ. ಅಯಸ್ಕಾಂತದಂತೆ ಅದು ಸೆಳೆದುಕೊಂಡಿತು. ಇತರರ ದೃಷ್ಟಿಯಲ್ಲಿ ವ್ಯರ್ಥವೆನಿಸುವ, ಕೈಗೆಟುಕುವ ಸಾಧನಗಳನ್ನು ಬಳಸಿ ಸುಂದರವಾದ ಉದ್ಯಾನವನ್ನು ಅಲ್ಲಿ ನಿರ್ಮಿಸಲಾಗಿತ್ತು. ಗೇಟಿನಿಂದ ಶಾಲೆಯ ಮೆಟ್ಟಿಲಿನವರೆಗೂ ಕಮಾನು, ಅವುಗಳಿಗೆ ಹೂಬಳ್ಳಿಗಳ ಅಲಂಕಾರ ಇತ್ತು. ಅಲ್ಲೊಂದು ಪುಟ್ಟದಾದ ಕೊಳವಿತ್ತು.ಅದರಲ್ಲಿ ಅಲಂಕಾರಿಕ ಮೀನುಗಳು ಓಡಾಡುತ್ತಿತ್ತು. ಉಳಿದಂತೆ ನೂರಾರು ಬಗೆತ ಕ್ರಾಟನ್ ಗಿಡಗಳು, ಹಣ್ಣಿನ ಗಿಡಗಳು, ಭರತದ ಭೂಪಟದ ಆಕಾರದ ರಚನೆಗಳು ಕಣ್ಮನ ತಣಿಸುತ್ತಿದ್ದವು.
ಕುತೂಹಲದ ಸಂಗತಿ ಏನೆಂದರೆ ಶಾಲೆಯಲ್ಲಿ ಮಕ್ಕಳೇ ನಡೆಸುತ್ತಿರುವ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಬ್ಯಾಂಕ್. ಉಳಿತಾಯದ ಮಹತ್ವವನ್ನು ಮಕ್ಕಳಿಗೆ ಹೇಗೆ ಪರಿಣಾಮಕಾರಿಯಾಗಿ ಬೋಸಬಹುದೆನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಶಾಲೆಯ ೩ರಿಂದ ೭ನೇ ತರಗತಿಯ ವರೆಗಿನ ಹಳ್ಳಿ ಮಕ್ಕಳು ತಮಗಾಗಿ ಈ ಬ್ಯಾಂಕ್ ರೂಪಿಸಿದ್ದಾರೆ. ಅದರಲ್ಲಿ ಖಾತೆದಾರನ ಹೆಸರು, ಖಾತೆ ಸಮಖ್ಯೆ, ದಿನಾಂಕ ಠೇವಣಿ ಮೊತ್ತ, ಜಮಾ, ಖರ್ಚು ಉಳಿಕೆ ಎಲ್ಲವನ್ನೂ ಬರೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ಸುಸೂತ್ರವಾಗಿ ನಡೆದಿದೆ.
ಅಪ್ಪ ಅಮ್ಮಂದಿರು ಕೊಡುವ ಪಾಕೆಟ್ ಮನಿಯಲ್ಲಿ ಉಳಿಸಿ ಹಣವನ್ನು ಮಕ್ಕಳು ಈ ಬ್ಯಾಂಕಿನಲ್ಲಿಡುತ್ತಾರೆ. ವರ್ಷಾಂತ್ಯದಲ್ಲಿ ಹಣವನ್ನು ಡ್ರಾ ಮಾಡುತ್ತಾರೆ. ಉಳಿತಾಯ, ಬ್ಯಾಂಕ್ ವಹಿವಾಟು ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕೆರಳಿಸುತ್ತದೆ ಈ ವ್ಯವಸ್ಥೆ. ಈ ವರ್ಷ ಬ್ಯಾಂಕಿನಲ್ಲಿ ೧೨೪೦ ರೂ. ಸಂಗ್ರಹವಾಗಿದೆ.
ಶಾಲೆಯ ಕೈತೋಟ ಮಾತ್ರ ಕಂಗೊಳಿಸಿದರೆ ಸಾಲದು. ದೊಡ್ಡಕೊಪ್ಪಲಿನ ಪ್ರತಿಯೊಂದು ಮನೆಯ ಮುಂದೆಯೂ ಇಂಥ ಕೈತೋಟ ಇರಬೇಕು. ಆದ್ದರಿಂದ ನಾವು ಊರ ಜನತೆಗೆ ಗಿಡಗಳನ್ನು ಹಂಚಲು ಯೋಜಿಸಿದ್ದೇವೆ ಎನ್ನುತ್ತಾರೆ ಶಿಕ್ಷಕ ನವೀನ್ ಕುಮಾರ್. ಅದು ನಿಜವಾಗಲಿ.
ಶಾಲೆಯಲ್ಲಿ ಸುಪ್ತ ಶಕ್ತಿ ಎಂಬ ಭಿತ್ತಿ ಪತ್ರಿಕೆ ಇದೆ. ಶಾಲಾ ಮಕ್ಕಳ ಬರವಣಿಗೆಗೆ ಇದು ಮಾಧ್ಯಮವಾಗಿದೆ. ಬರುವಾಗ ಗೆಳೆಯ ಕೃಷ್ಣ ಹೇಳಿದರು- ಇಂಥ ಶಾಲೆ ಮೈಸೂರು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶೇ.೬೦ಕ್ಕೆ ಮುಟ್ಟಿದರೂ ಸಾಕು..

ಕೂಲಿ ಕೆಲಸಗಾರರು ಕಟ್ಟಿದ ಶಾಲಾ ಮೈದಾನ !

( ಮೈಸೂರಿನ ಆಂದೋಲನದಲ್ಲಿ ಇದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಸರಣಿಯ ಐದನೇ ಕಂತು ಇಲ್ಲಿದೆ )
ಈ ಸಲದ ಗಾಂಧಿ ಜಯಂತಿಯ ದಿನ ನಂಜನಗೂಡಿನ ಒಂದು ತೀರಾ ಹಿಂದುಳಿದ ಗ್ರಾಮಕ್ಕೆ ತೆರಳಿದಾಗ ವಿಶಿಷ್ಟ ಅನುಭವ ದೊರೆಯಿತು. ಇದುವರೆಗೆ ನಮ್ಮ ಗ್ರಾಮಕ್ಕೆ ಪತ್ರಿಕೆಯವರು ಬಂದೇ ಇರಲಿಲ್ಲ. ನಮ್ಮ ಶಾಲೆಯ ಬಗ್ಗೆ ಆಂದೋಲನ ಪತ್ರಿಕೆಯ ಮೂಲಕ ಸಾವಿರಾರು ಓದುಗರಿಗೆ ಪರಿಚಯಿಸುತ್ತಿದ್ದೀರಾ. ಇದರಿಂದ ತುಂಬ ಸಂತಸವಾಗುತ್ತಿದೆ ಎಂದರು ಆ ಗ್ರಾಮಸ್ಥರು. ಆ ಗ್ರಾಮದ ಹೆಸರು ಗೌಡರ ಹುಂಡಿ..ಗೌಡರ ಹುಂಡಿಯ ಗ್ರಾಮಸ್ಥರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಅಗತ್ಯ ಬಸ್ ಸೌಕರ್ಯ ಕೂಡ ಇಲ್ಲದ ಗೌಡರ ಹುಂಡಿಯಲ್ಲಿ ಶಾಲೆಯ ಏಳಿಗೆಗೆ ಗ್ರಾಮಸ್ಥರು ಅಕ್ಷರಶಃ ಪಣ ತೊಟ್ಟಿದ್ದಾರೆ. ಆದ್ದರಿಂದ ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಈ ಸರಕಾರಿ ಶಾಲೆ ಬೆಳೆದು ನಿಂತಿದೆ. ಶಾಲೆಯ ದ್ವಾರದಲ್ಲಿ ‘ ದೇವಾಲವಿ ವಿದ್ಯಾಲಯವು ಕೈ ಮುಗಿದು ಒಳಗೆ ಬಾ ಎಂಬ ಆಕರ್ಷಕ ಕಮಾನು ಇದೆ. ಸಣ್ಣ ಕೈತೋಟವಿದೆ. ಹತ್ತಾರು ತೆಂಗಿನ ಮರಗಳು, ಬಾಳೆ ಗಿಡಗಳು ಲಾಸ್ಯವಾಡುತ್ತಿವೆ. ಹೂವು ಹಣ್ಣಿನ ಗಿಡಗಳು ಹಸಿರಾಗಿವೆ. ಬಿಸಿಯೂಟಕ್ಕೆ ಬೇಕಾದ ತರಕಾರಿ, ಕಾಯಿ ಪಲ್ಲೆಗಳನ್ನು ಶಾಲೆಯ ಆವರಣದಲ್ಲೇ ಬೆಳೆಸುತ್ತಾರೆ. ಬೀನ್ಸ್, ಕ್ಯಾರೆಟ್, ಟೊಮೊಟೊ, ಬದನೆ, ಕೊತ್ತಂಬರಿ, ದಂಟಿನ ಸೊಪ್ಪು, ಸಬ್ಸಿಗೆ ಸೊಪ್ಪು ಮುಂತಾದ ತರಕಾರಿ ಸೊಪ್ಪುಗಳು ಇಲ್ಲಿ ಲಭ್ಯ. ಎಳನೀರು, ತೆಂಗಿನ ಕಾಯಿ ಕೂಡ ಸಿಗುತ್ತದೆ. ಶಾಲಾಭಿವೃದ್ಧಿ ಸಮಿತಿ ಪ್ರತಿವರ್ಷ ೨-೩ ವಿದ್ಯಾರ್ಥಿಗಳ ಸಮಸ್ತ ಖರ್ಚನ್ನೂ ನಿಭಾಯಿಸುತ್ತದೆ. ಈ ಊರಿನಲ್ಲಿ ಕಬ್ಬು ಬೆಳೆಗಾರರಿಗೆ ಸಹಕರಿಸುವ ಕೂಲಿ ಕಾರ್ಮಿಕರಿದ್ದಾರೆ. ಆ ಯುವಕರೆಲ್ಲ ಸೇರಿಕೊಂಡು ಕಬ್ಬಿನ ಸಂಘ ಎಂಬ ಸಂಘ ಸ್ಥಪಿಸಿದ್ದಾರೆ. ಸಂಘದ ಚಂದ್ರು ಮತ್ತು ಇತರರು ಸೇರಿಕೊಂಡು ಶಾಲೆಗೋಸ್ಕರ ಸೊಗಸಾದ ಬ್ಯಾಡ್ಮಿಂಟನ್ ಮೈದಾನ ನಿರ್ಮಿಸಿದ್ದಾರೆ. ಶಾಲೆಗೆ ವಿದ್ಯುಚ್ಛಕ್ತಿ ಸೌಲಭ್ಯ, ಕಮಾನು ನಿರ್ಮಾಣ, ತೋಟ ಸೇರಿದಂತೆ ಹಲವಾರು ಕಾಣಿಕೆಗಳನ್ನು ಗ್ರಾಮಸ್ಥರೆಲ್ಲ ಸೇರಿಕೊಂಡು ಕೊಟ್ಟಿದ್ದಾರೆ. ವಿಕಸನದತ್ತ ಸರಕಾರಿ ಶಾಲೆಗಳು ಎಂಬ ಪರಿಕಲ್ಪನೆಯೇ ತುಸು ಭಿನ್ನ. ಸರಕಾರಿ ಶಾಲೆಗಳು ಹೇಗೆ ಪಾಳು ಬಿದ್ದು ಹೋಗಿವೆ ಎಂಬುದರ ಬಗ್ಗೆ ಮಾಧ್ಯಮಗಳು ಸಾಕಷ್ಟು ಸಲ ವರದಿ ಮಾಡಿವೆ. ಈಗಲೂ ಲೋಪ ದೋಷಗಳ ಪಟ್ಟಿ ಮುಗಿದಿಲ್ಲ. ಆದರೆ ಮತ್ತೊಂದು ಮುಖವನ್ನೂ ಪರಿಚಯಿಸಕೊಡಬೇಕಲ್ಲವೇ.

Tuesday 20 October 2009

ಶಾಲೆಗೆ ಸಿಮೆಂಟ್ ಗಾರೆ ಹಾಕಿಸಿಕೊಟ್ಟ ಬಡ ಹಳ್ಳಿಗರು !

( ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇದ್ದಾಗ ಬರೆದ ವಿಕಸನದತ್ತ ಸರಕಾರಿ ಶಾಲೆಗಳು ಎಂಬ ಸರಣಿಯ ನಾಲ್ಕನೇ ಕಂತು )



ನಂಜನಗೂಡು ತಾಲ್ಲೂಕಿನ ಚಾಮಲಾಪುರದ ಹುಂಡಿ, ಪಟ್ಟಣದ ಮಗ್ಗುಲಿನಲ್ಲಿಯೇ ನಾನಾ ಸಮಸ್ಯೆಗಳಿಂದ ತತ್ತರಿಸಿಕೊಂಡಿರುವ ಒಂದು ಕುಗ್ರಾಮ. ಗ್ರಾಮಸ್ಥರು ತೀರಾ ಬಡವರು. ಒಂದೊಂದು ಮನೆಯೊಳಗೂ ಮೂರ್‍ನಾಲ್ಕು ಕುಟುಂಬಗಳ ವಾಸ. ಸ್ಥಳದ ಅಭಾವ. ಮೂಲಭುತ ಸೌಲಭ್ಯಗಳು ಕನ್ನಡಿಯೊಳಗಿನ ಗಂಟು.ಹಿಂದೆ ಸುಜಾತಾ ಮಿಲ್ ಇದ್ದಾಗ ಅದರಲ್ಲಿ ದುಡಿಯುತ್ತಿದ್ದವರಲ್ಲಿ ಬಹುತೇಕ ಮಂದಿ ಕಾರ್ಮಿಕರು ಚಾಮಲಾಪುರದ ಹುಂಡಿಯವರು. ಈಗ ಕಾರ್ಖಾನೆ ಮುಚ್ಚಿದೆ. ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿಕೊಂಡಿದ್ದಾರೆ. ಈ ರೀತಿ ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣ ಪರಿಸ್ಥಿತಿ ಏನಾಗಬೇಕು ? ಅಂತಹ ಚಿಣ್ಣರ ಭವಿಷ್ಯದ ಕನಸುಗಳಿಗೆ ಪೂರಕವಾಗಿ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆಯೇ ? ಇದಕ್ಕೆ ಉತ್ತರ ಎಂಬಂತೆ ಹಲವು ಸಮಸ್ಯೆಗಳ ನಡುವೆಯೂ ಚಾಮಲಾಪುರದ ಸರಕಾರಿ ಶಾಲೆ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣ ನೀಡುತ್ತಿದೆ. ಸುಮಾರು ೬೦ ಮಂದಿ ಮಕ್ಕಳಿದ್ದ ಶಾಲೆಯಲ್ಲೀಗ ೩೫೨ ಮಂದಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.ಒಂದರಿಂದ ಆರನೇ ತರಗತಿಯವರೆಗೆ ವಿದ್ಯಾಭ್ಯಾಸದ ಅವಕಾಶವಿರುವ ಶಾಲೆಯಿದು. ಆರಂಭದಲ್ಲಿ ಇದ್ದ ಕೊಠಡಿಗಳ ಸಂಖ್ಯೆ ಎರಡು. ಈವತ್ತು ೫ ಕೊಠಡಿಗಳು ಇವೆ. ಜತೆಗೆ ಅಕ್ಷರ ದಾಸೋಹದ ಅಕ್ಕಿ, ಅಡುಗೆ ಸಲಕರಣೆಗಳೂ ಸೇರಿಕೊಂಡಿವೆ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಬಂದಿದೆ. ಆದರೆ ಕೊಠಡಿಗಳ ಸಂಖ್ಯೆ ಅನುಗುಣವಾಗಿಲ್ಲ. ಪರಿಣಾಮ ಶಾಲಾ ಜಗಲಿ, ಅಂಗಳವೇ ತರಗತಿಗಳಾಗುತ್ತಿವೆ. ಇಂತಹ ಸಮಸ್ಯೆ ಎಷ್ಟೋ ಸರಕಾರಿ ಶಾಲೆಗಳಿಗೆ ಕಾಡುತ್ತಿರಬಹುದು. ಹೀಗಿದ್ದರೂ ಇವುಗಳನ್ನೆಲ್ಲ ಎದುರಿಸಿಕೊಂಡು ಈ ಶಾಲೆ ಪ್ರಗತಿಯತ್ತ ಹೊರಳುತ್ತಿದೆ. ಅಭಿವೃದ್ಧಿತ್ತ ನಡೆದಿರುವ ಈ ಶಲೆಗೆ ಎಟಿಎಂಡ್ ಎಸ್ ಕಾರ್ಖಾನೆ ಕೂಡ ನೆರವು ನೀಡಿದೆ. ಮುಖ್ಯವಾಗಿ ಸ್ಥಳೀಯರು ಕೈಲಾದ ನೆರವು ನೀಡಿದ್ದಾರೆ. ಬಿಸಿಯೂಟ ಮಾಡುವ ಮಕ್ಕಳಿಗೆ ಕುಳಿತುಕೊಳ್ಳಲು ಸ್ಥಳ ಬೇಕಲ್ಲವೇ. ಇರುವ ಚೂರು ನೆಲಕ್ಕೆ ಸಿಮೆಂಟ್ ಗಾರೆ ಹಾಕಿಸಿಕೊಟ್ಟಿದ್ದಾರೆ ಈ ಗ್ರಾಮಸ್ಥರು. ತೀರಾ ಪಾಳು ಬಿದ್ದಿದ್ದ ಶಾಲೆಯಿದು. ಇಂದು ಅಚ್ಚರಿ ಮೂಡಿಸುವಷ್ಟು ಬದಲಾಗಿದೆ. ಡಿಪಿಇಪಿ ಕಲಿಕಾ ಪದ್ಧತಿ ಪ್ರಭಾವ ಬೀರಿದೆ. ಶಾಲೆಯ ತರಗತಿಗಳಲ್ಲಿ ಕಲಿಕಾ ಸಾಮಗ್ರಿಗಳು ತುಂಬಿ ತುಳುಕುತ್ತಿವೆ. ಇವುಗಳ ಮಧ್ಯೆ ಚಿಣ್ಣರು ವ್ಯಾಸಂಗ ನಿರತರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಈ ರೀತಿ ಅಭಿವೃದ್ಧಿಯತ್ತ ಮುಖ ಮಾಡಿರುವ ಸರಕಾರಿ ಶಾಲೆಗಳು ಹಲವು. ಇನ್ನೂ ಕೆಲವೆಡೆಗಳಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಕೊಡುಗೆ ಸಲ್ಲಿಸಿವೆ.

Thursday 15 October 2009

ಪ್ರಶಸ್ತಿ ಹಣದಲ್ಲಿ ಶಾಲೆಯ ರಂಗಮಂದಿರ ಕಟ್ಟಿದರು ನೋಡಿ !

ಅಲ್ಲೊಂದು ಪಾಳು ಬಿದ್ದಿರುವ ಶಾಲೆ ಇರುತ್ತದೆ. ಶಾಲೆ ಪರಮ ನಿರ್ಲಕ್ಷ್ಯತನಕ್ಕೆ ಬಿದ್ದಿರುವುದು ಎಲ್ಲರಿಗೂ ಗೊತ್ತಿದ್ದರೂ, ಅದು ಉದ್ಧಾರವಾಗಲಿ ಎಂಬ ಹಾರೈಕೆ ಯಾರಿಗೂ ಇರುವುದಿಲ್ಲ. ಇಂತಹ ನೂರಾರು ಸರಕಾರಿ ಶಾಲೆಗಳಂತೆ ಮಂಡಕಳ್ಳಿಯಲ್ಲಿಯೂ ಪಾಳು ಬಿದ್ದಿದ್ದ ಸರಕಾರಿ ಶಾಲೆಯೊಂದಿತ್ತು. ಆದರೆ ಆ ಸರಕಾರಿ ಶಾಲೆ ಈಗ ಪರಿವರ್ತನೆಯ ಮಜಲನ್ನು ದಾಟಿದೆ. ಸ್ವರೂಪವೇ ಬದಲಾಗಿದೆ.
ಅಂದು ಮಂಡಕಳ್ಳಿಗೆ ಕಾಲಿಟ್ಟಾಗ ಮಟ ಮಟ ಮಧ್ಯಾಹ್ನವಾಗಿತ್ತು. ಶಾಲೆಯ ಅಂಗಳ ಪ್ರವೇಶಿಸುತ್ತಿದ್ದಂತೆ ಹಾಯೆನ್ನಿಸಿತು. ನೂರಾರು ಗಿಡಮರಗಳಿಂದ ಕಂಗೊಳಿಸುತ್ತಿದ್ದ ಶಾಲೆಯ ತೋಟದಲ್ಲಿ ನಡೆದಾಗ ಆಯಾಸ ಪರಿಹಾರವಾಯಿತು. ಈ ಸರಕಾರಿ ಶಾಲೆಯ ಆವರಣ ಗೋಡೆಯನ್ನೇ ನೋಡುತ್ತ ಒಂದು ಸುತ್ತು ಹಾಕಿದರೆ ಉತ್ತಮ ಅಧ್ಯಯನವಾಗುತ್ತದೆ. ಶಾಲೆಯ ಗೇಟಿನ ಇಕ್ಕೆಲಗಳಲ್ಲಿ ಮಕ್ಕಳಿಗೆ ಸೊರೆಯುವ ಶೈಕ್ಷಣಿಕ ಸೌಲಭ್ಯಗಳ ವಿವರವನ್ನು ಬರೆಯಲಾಗಿದೆ. ಡಿಪಿಇಪಿ ಯೋಜನೆಯ ಬಗ್ಗೆ ಶಿಕ್ಷಕ ಸಮುದಾಯದಲ್ಲಿ ಗೊಂದಲ ಇದ್ದರೂ ಜನರಿಗೆ ತಿಳುವಳಿಕೆ ಮೂಡಿಸುವ ಯತ್ನವನ್ನು ಕೈಗೊಳ್ಳಲಾಗಿದೆ.
ಶಾಲೆಯ ತೋಟದಲ್ಲಿ ಬೇವು, ತೇಗ ವಿವಿಧ ಹೂಗಿಡಗಳು, ತೆಂಗು, ನೆಲ್ಲಿಯ ಮರಗಳು ಸೊಂಪಾಗಿ ಬೆಳೆದಿದೆ. ಮಕ್ಕಳು ಇವುಗಳಿಗೆ ನೀರುಣಿಸುತ್ತಾರೆ. ತಾಲ್ಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಪಡೆದಿರುವ ಮಂಡಕಳ್ಳಿ ಶಾಲೆಯಲ್ಲೀಗ ಬಯಲು ರಂಗಮಂಟಪಕ್ಕೆ ಬುನಾದಿ ಹಾಕಲಾಗಿದೆ. ಶಾಲೆಗೆ ಬಂದ ನಾನಾ ಪ್ರಶಸ್ತಿಗಳ ಮೊತ್ತದಿಂದಲೇ ಮಂಟಪದ ಬುನಾದಿಯನ್ನು ಕಟ್ಟಲಾಗಿದೆ ಎನ್ನುವುದು ವಿಶೇಷ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ. ಮಕ್ಕಳ ಸಾಂಸ್ಕೃತಿಕ ಪ್ರತಿಭೆಗೊಂದು ವೇದಿಕೆ ಬೇಕಲ್ಲಾ ? ಎಂಬ ಪ್ರಶ್ನೆಗೆ ಈ ಭೌತಿಕ ವೇದಿಕೆ ಉತ್ತರವಾಗುತ್ತದೆ.
ಅಂದಹಾಗೆ ವಿಕಸನದತ್ತ ಸರಕಾರಿ ಶಾಲೆಗಳು ಅಭಿಮುಖವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳು ನೆರವು ನೀಡಿವೆ. ಕೆಲ ರೋಟರಿ ಸಂಸ್ಥೆಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿವೆ. ಈ ಸಂಘ ಸಂಸ್ಥೆಗಳು ತಮ್ಮ ಪ್ರಚಾರದ ಸಲುವಾಗಿ ಇಂಥ ಕೆಲಸಗಳಿಗೆ ಕೈ ಹಾಕುತ್ತವೆ ವಿನಾ ನಿಜವಾದ ಸೇವೆ ಅಲ್ಲಿರುವುದಿಲ್ಲ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸರಕಾರಿ ಶಾಲೆಗಳು ವಿಕಸನದತ್ತ ಸಾಗಲಿ ಎಂಬ ಉದ್ದೇಶದಿಂದ ಇಷ್ಟಾದರೂ ಪರಿವರ್ತನೆ ಆಗುತ್ತಿದೆಯಲ್ಲವೇ, ಇದು ಸಕಾರಾತ್ಮಕ. ವೃಥಾ ನಿಂದಿಸುವುದರಿಂದ ಏನು ಪ್ರಯೋಜನ ಅಲ್ಲವೇ.
(ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಇದ್ದಾಗ ಬರೆದ ಸರಣಿ-ವಿಕಸನದತ್ತ ಸರಕಾರಿ ಶಾಲೆಗಳು. ಅದರ ೩ನೇ ಕಂತು ಇದು.)

Tuesday 13 October 2009

ಸರಕಾರಿ ಶಾಲೆಯಿಂದ ಗ್ರಾಮದ ಪರಿವರ್ತನೆ

ಸಾಗರಕಟ್ಟೆ ಹೆಮ್ಮನಹಳ್ಳಿಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎನ್ ಜಯಲಕ್ಷ್ಮಿ. ಅವರು ಈ ಶಾಲೆಗೆ ಬಂದಾಗ ಶಾಲೆಯ ಸ್ಥಿತಿ ಉತ್ತಮವಾಗಿರಲಿಲ್ಲ. ಹೇಳೋರು ಕೇಳೋರು ಇಲ್ಲದ ಅನೇಕ ಸರಕಾರಿ ಶಾಲೆಗಳಂತೆ ಇದೂ ಇತ್ತು.
ಅಂತಹ ಶಾಲೆಯ ಪುನಶ್ಚೇತನಕ್ಕಾಗಿ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಹಾಗೂ ಗ್ರಾಮಸ್ಥರು ಜತೆಗೂಡಿ ಶ್ರಮಿಸಿದ ರೀತಿ ಅನನ್ಯ. ಅನೇಕ ಮಂದಿ ಶಿಕ್ಷಣ ತಜ್ಞರು ಈ ಶಾಲೆಗೆ ಭೇಟಿ ಕೊಟ್ಟು ಮೂಕ ವಿಸ್ಮಿತರಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು ?
ಸಾಗರಕಟ್ಟೆ ಹೆಮ್ಮನಹಳ್ಳಿ ಅತ್ಯಂತ ಪುಟ್ಟ ಹಳ್ಳಿ. ಅಂದಾಜು ನೂರು ಮನೆಗಳಿವೆ. ಇತರೆಡೆಗಳಿಂದ ವಲಸೆ ಬಂದವರು, ಕೂಲಿ ನಾಲಿ ಮಾಡುವವರು ವಾಸಿಸುತ್ತಾರೆ. ಅಂತಹ ಗ್ರಾಮವಾಸಿಗಳಲ್ಲಿ ಶಾಲೆ ನಮ್ಮದು ಎಂಬ ಭಾವನೆಯನ್ನು ಜಯಲಕ್ಷ್ಮಿ ಬಿತ್ತಿದರು. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ದಿನಗಳಂದು ಶಾಲೆಯಲ್ಲಿ ಗ್ರಾಮಸ್ಥರನ್ನು ಒಳಗೊಂಡಂತೆ ಹಬ್ಬ ಆಚರಿಸಿದರು. ಎಲ್ಲರೂ ಜಾತ್ರೆಗೆ ಸೇರುವಂತೆ ಈ ಎರಡೂ ಹಬ್ಬಗಳನ್ನು ಆಚರಿಸುತ್ತಾರೆ. ಆವತ್ತು ಮಧ್ಯಾಹ್ನ ಗ್ರಾಮದವರೆಲ್ಲರಿಗೂ ಮಕ್ಕಳೊಂದಿಗೆ ಶಾಲೆಯಲ್ಲೇ ಊಟ. ಸಿಹಿ ವಿತರಣೆ. ಶಾಲೆಯ ಅಭಿವೃದ್ಧಿಗೂ ಆಗ ಚರ್ಚೆಯಾಗುತ್ತದೆ. ಶಾಲೆಯಲ್ಲಿ ಸೋಲಾರ್ ದೀಪವಿದೆ. ಹೂತೋಟವಿದೆ. ಬಾಳೆ, ಪಪ್ಪಾಯ, ವಿವಿಧ ಹೂವಿನ ಗಿಡಗಳು ಇವೆ. ಗ್ರಾಮಸ್ಥರೆಲ್ಲರೂ ಶಾಲೆಗೆ ಶ್ರಮ ದಾನ ನೀಡುತ್ತಾರೆ.
ಈ ಹಿಂದೆ ಗ್ರಾಮದಲ್ಲಿ ಅಸ್ತ್ರ ಒಲೆಗಳು ಇರಲಿಲ್ಲ. ಹಾಗಂದರೇನು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಈಗ ಊರಿನ ಎಲ್ಲ ಮನೆಗಳಲ್ಲಿ ಅಸ್ತ್ರ ಒಲೆ ಇದೆ. ಇದಕ್ಕೆ ಕಾರಣ ಸರಕಾರಿ ಶಾಲೆ. ಶಾಲೆಯ ತೋಟಕ್ಕೆ ಹನಿ ನೀರಾವರಿ ಇದೆ. ಮಕ್ಕಳಾಡುವ ಚಕಮಕಿಗೆ ಕೊಳವೆ ಬಾವಿಯ ಹಿಡಿಯನ್ನು ಜೋಡಿಸಲಾಗಿದೆ. ಮಕ್ಕಳು ಚಕಮಕಿಯನ್ನೇರಿ ಆಡುವಾಗ ನೀರು ಟ್ಯಾಂಕ್‌ಗೆ ಹರಿಯುತ್ತದೆ. ಇಂತಹ ಹಲವಾರು ಪ್ರಯೋಗಗಳಿಗೆ ಈ ಶಾಲೆ ಕಾರಣವಾಗಿದೆ. ಒಂದು ಸರಕಾರಿ ಶಾಲೆ ಸಾಮಾಜಿಕ ಪರಿವರ್ತನೆ ಮಾಡುತ್ತಿರುವುದು ಅಚ್ಚರಿದಾಯಕವಲ್ಲವೇ.

Monday 12 October 2009

ಕೆ.ಆರ್. ನಗರದಲ್ಲಿ ಕಲ್ಲರಳಿ ಹೂವಾದ ಸರಕಾರಿ ಶಾಲೆ

( ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಕಾಸ ಹೊಂದುತ್ತಿರುವ ಸರಕಾರಿ ಶಾಲೆಗಳ ಬಗ್ಗೆ ಸರಣಿ ಬರೆದಿದ್ದೆ. ಈ ಸರಣಿಯಲ್ಲಿ ೧೨ ಸರಕಾರಿ ಶಾಲೆಗಳ ಬಗ್ಗೆ ಬರೆದಿದ್ದೆ. ಇಷ್ಟೂ ಶಾಲೆಗಳು ವಿಕಾಸವಾದ ಪರಿ ಕುತೂಹಲಕರ. ಅವುಗಳ ವಿವರ ನಿಮ್ಮೊಂದಿಗೆ-)

ಕಳೆದ ವಾರದ ಹಾಡುವಿನಲ್ಲಿ ಹುಣಸೂರಿನ ಕುಗ್ರಾಮವಾದ ಕೆಂಪಮ್ಮನ ಹೊಸೂರಿನಲ್ಲಿ ಶಿಕ್ಷಕ-ಶಿಕ್ಷಕಿಯರಿಬ್ಬರ ಕಠಿಣ ಪರಿಶ್ರಮದಿಂದಾಗಿ ಮಾದರಿಯಾಗಬಹುದಾದಂತಹ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರೂಪುಗೊಂಡ ಯಶೋಗಾಥೆಯನ್ನು ಓದಿದ್ದೀರಿ.
ಶಾಲೆ ಎಂಬ eನಾಲಯದ ಉತ್ಥಾನಕ್ಕೆ ಎಲ್ಲಾ ಶಿಕ್ಷಕರು ಜತೆಗೂಡಿದಾಗ ಅವರೊಂದಿಗೆ ಸಮುದಾಯದ ಬೆಂಬಲ ಸಂಗಮಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ ಅನ್ನುವುದು ಕೆ.ಆರ್.ನಗರದ ಅಗ್ರಹಾರದ ಸರಕಾರಿ ಶಾಲೆಯಿಂದ ಸಾಬೀತಾಗಿದೆ.
ಮೂಲತಃ ಹಾಸನದವರಾದ ಶ್ರೀಕಂಠಪ್ಪ ಈ ಸರಕಾರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು. ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸದತ್ತ ಒಲವನ್ನು ತೋರಿಸಬೇಕಾದರೆ ಸುತ್ತಲಿನ ಪರಿಸರ ಮನೀಜ್ಞವಾಗಿರಬೇಕು. ಕಲಿಕೆ, ಅಧ್ಯಯನಾದಿಗಳಿಗೆ ಹುಮ್ಮಸ್ಸು ತುಂಬಿಸುವಂತಿರಬೇಕು ಎಂಬುದನ್ನು ಶ್ರೀಮಕಂಠಪ್ಪ ಪ್ರತಿಪಾದಿಸುತ್ತಾರೆ. ಅಷ್ಟೇ ಅಲ್ಲದೆ ನಂಬಿದ್ದನ್ನು ಕಾರ್ಯಗತಗೊಳಿಸಿದ್ದಾರೆ ಕೂಡಾ. ಯಾವಾಗಲೂ ನಂಬಿಕೆಗಳಾಗಿ ಪ್ರವರ್ತನೆಯಾದಾಗ ಮಾತ್ರ ಬೆಲೆ ಬರುವುದು ತಾನೇ ?
ಕೆಲವು ವರ್ಷಗಳ ಹಿಂದೆ ಈ ಶಾಲೆ ಬಹುತೇಕ ಸರಕಾರಿ ಶಾಲೆಗಳಂತೆ ಅವ್ಯವಸ್ಥೆಗಳ ಬೀಡಾಗಿತ್ತು. ಕೊರತೆಗಳ ಪಟ್ಟಿ ಮೈಲುದ್ದವಾಗಿತ್ತು. ಶಾಲೆಯದ್ದೇ ಅನ್ನುವ ಪ್ರತ್ಯೇಕ ಜಾಗವೂ ದಾಖಲೆಗಳಲ್ಲಿ ಇರಲಿಲ್ಲ. ಆವರಣ ಗೋಡೆ ಇರಲಿಲ್ಲ. ಶಾಲೆಯ ಸೂರೇ ಕಿತ್ತು ಹೋಗಿತ್ತು. ಮಳೆ ಬಂದರೆ ಶಾಲೆಯೊಳಗೂ ಛತ್ರಿ ಅಗತ್ಯ ಎನ್ನುವ ಪರಿಸ್ಥಿತಿ. ಅಂಥ ದುಸ್ಥಿತಿಗೆ ಸಿಲುಕಿದ್ದ ಸರಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳ, ಕಲಿಕೆಯಲ್ಲಿ ಪ್ರಗತಿ ಹೇಗೆ ಸಾಧ್ಯವಾಯಿತು ?
ಮೂರು ವರ್ಷಗಳ ಹಿಂದೆ ಶಾಲೆಯ ಬಳಿ ಕೊಳವೆ ಬಾವಿ ಕೊರೆಸಲಾಯಿತು. ನೀರು ಉಕ್ಕಿತು. ಕೊಳವೆ ಬಾವಿಯ ನೀರನ್ನು ಶಾಲೆಗೆ ಮಾತ್ರವಲ್ಲದೆ ಸ್ಥಳೀಯರಿಗೂ ಪೂರೈಸಲಾಯಿತು. ಶಾಲೆಯತ್ತ ಸಮುದಾಯ ಸಹಾಹ ಹಸ್ತ ಚಾಚಲು ಇದು ಕಾರಣವಾಯಿತು.
ಶಾಲೆಯ ಮುಂದೆ ಇದ್ದ ಜಾಗದಲ್ಲಿ ಕ್ರಮೇಣ ಉದ್ಯಾನವನ್ನು ನಿರ್ಮಿಸಲಾಯಿತು. ಇದರಿಂದಾಗಿ ಶಾಲೆಯ ಸ್ವರೂಪವೇ ಅಗಾಧವಾಗಿ ಪರಿವರ್ತನೆಗೊಂಡಿತು. ಅರಣ್ಯ ಇಲಾಖೆಯೂ ಇಲ್ಲಿಗೆ ಬಗೆಬಗೆಯ ಗಿಡಗಳನ್ನು ವಿತರಿಸಿದೆ.
ಇಂದು ಶಾಲೆಯ ಮುಂದೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತಹ ಅಪರೂಪದ ಸುಂದರ ಉದ್ಯಾನ ತಲೆ ಎತ್ತಿಕೊಂಡಿದೆ. ಶಾಲಾ ಮಕ್ಕಳು ಉರಿ ಬಿಸಿಲಿಗೆ ನಿಂತು ಪ್ರಾರ್ಥನೆ, ಧ್ವಜವಂದನೆ ಮಾಡಬೇಕಾದ ಪ್ರಮೇಯವೇ ಇಲ್ಲ. ಈ ಶಾಲೆಯ ಸಾಧನೆಗಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ( ೨೦ ಸಾವಿರ ರೂ. ನಗದು) ತಾಲೂಕಿನ ಅತ್ಯುತ್ತಮ ಶಾಲೆ ಎಂಬಿತ್ಯಾದಿಯಾಗಿ ಬಹುಮಾನಗಳು ಸಿಕ್ಕಿವೆ. ಮುಂದಿನ ದಿನಗಳಲ್ಲಿ ಶಾಲಾವರಣದಲ್ಲಿ ಔದೀಯ ಗಿಡ ಮೂಲಿಕೆಗಳನ್ನು ಬೆಳೆಸುವ ಯೋಜನೆ ಇದೆ. ಅದು ಸಿದ್ಧಗೊಳ್ಳುತ್ತಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಶ್ರೀಕಂಠಪ್ಪ. ನೀವು ಊಹಿಸಬಲ್ಲಿರಾ ಸರಕಾರಿ ಶಾಲೆಯೊಳಗೆ ಇಂತಹ ಗಿಡಮೂಲಿಕೆಗಳ ಉದ್ಯಾನವನ್ನು ? ಶಾಲಾ ಮುಖ್ಯ ಶಿಕ್ಷಕರ ಕಚೇರಿಯಲ್ಲಿ ಒಂದು ಬೋರ್ಡಿದೆ. ಅದರಲ್ಲಿ ಶಾಲಾ ಮಂತ್ರಿ ಮಂಡಲದ ವಿವರಣೆ ಇದೆ. ಶಾಲೆಯ ಎಲ್ಲ ಸಚಿವರುಗಳ ವಿವರ ಇದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಪ್ರೇರೇಪಿಸಲಿ ಇಂತಹ ಉಪಕ್ರಮಗಳು ಸಹಕಾರಿ.

Thursday 8 October 2009

ವಾಟ್ ಆನ್ ಐಡಿಯಾ...ಝೀರೊ ಬ್ಯಾಲೆನ್ಸ್ ಖಾತೆಯಲ್ಲಿಟ್ಟ ಚಿಲ್ಲರೆ, ಸಾಲದ ಕಂತು ತೀರಿಸುತ್ತೆ..

ಬೆಂಗಳೂರಿನಿಂದ ೫೫ ಕಿ.ಮೀ ದೂರದಲ್ಲಿ ದೊಡ್ಡ ಬಳ್ಳಾಪುರ ತಾಲೂಕಿಗೆ ಸೇರಿದ ದೊಡ್ಡ ಬೆಳವಂಗಳ ಹೋಬಳಿಯಿದೆ. ಈ ಹೋಬಳಿಯಲ್ಲಿ ಹಾದರಿಪುರ ಎಂಬ ಗ್ರಾಮ ಇದೆ. ೮೮೦ ಜನಸಂಖ್ಯೆಯ ಗ್ರಾಮದಲ್ಲಿ ೨೮೦ ಕುಟುಂಬವಿದೆ. ಬಹುತೇಕ ಮಂದಿ ಕೃಷಿ ಕೂಲಿ ಕಾರ್ಮಿಕರು. ಕೆಲವರು ಸಣ್ಣ ಪುಟ್ಟ ವ್ಯಾಪಾರಸ್ಥರು. ಪ್ರತಿ ದಿನ ಐವತ್ತೋ, ನೂರೋ ಸಂಪಾದಿಸುತ್ತಾರೆ. ಇಲ್ಲಿಯವರೆಗೆ ಬಹುತೇಕ ಮಂದಿ ಬ್ಯಾಂಕ್ ಮೆಟ್ಟಿಲೇರಿದವರಲ್ಲ. ಆದರೆ-
ಈ ಗ್ರಾಮದ ಪಂಚಾಯಿತಿ ಗ್ರಂಥಾಲಯದ ಪಾಲಕ ರಂಗಸ್ವಾಮಿ ಉತ್ಸಾಹಿ. ಗ್ರಾಮದಲ್ಲಿ ೨೪೨ ಮಂದಿಗೆ ಕಾರ್ಪೊರೇಷನ್ ಬ್ಯಾಂಕ್‌ನ ಖಾತೆ ಮಾಡಿಸಿಕೊಟ್ಟಿದ್ದಾರೆ. ಬ್ಯಾಂಕಿನ ಶಾಖಾ ರಹಿತ ಕೇಂದ್ರದ ಪ್ರತಿನಿಯಾಗಿರುವ ಸ್ವಾಮಿ, ಹಿಂದೆಂದಿಗಿಂತ ಬ್ಯುಸಿಯಾಗಿದ್ದಾರೆ. ಊರಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿಯಾಗಿದ್ದವರೆಲ್ಲ ಇವರ ಬಳಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ. ಸುಲಭವಾಗಿ ಬ್ಯಾಂಕ್ ವಹಿವಾಟು ಮಾಡುತ್ತಿದ್ದಾರೆ. ಬ್ಯಾಂಕ್ ಹುಡುಕಿಕೊಂಡು ಹೋಗಬೇಕಿಲ್ಲ. ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಪರವಾಗಿಲ್ಲ, ಅಕೌಂಟ್ (ಕಾರ್ಪ್ ಪ್ರಗತಿ ಎಸ್‌ಬಿ ಖಾತೆ ) ಚಾಲ್ತಿಯಲ್ಲಿರುತ್ತದೆ. ಒಬ್ಬರಿಗೆ ದಿನಕ್ಕೆ ಗರಿಷ್ಠ ೨೦೦೦ ರೂ. ಹಣ ವರ್ಗಾಣೆಗೆ ಅವಕಾಶವಿದೆ.
ಉದಾಹರಣೆಗೆ ಓದು ಬಾರದ ಹಳ್ಳಿಗನೊಬ್ಬ ರಂಗಸ್ವಾಮಿಯ ಬಳಿ ಬಂದು ಬಯೋ ಮೆಟ್ರಿಕ್ ಸಾಧನದ ಮೇಲೆ ಹೆಬ್ಬೆಟ್ಟು ಒತ್ತಿ, ಹತ್ತು ರೂ. ಕೊಟ್ಟೊಡನೆ ನೀವು ಭರ್ತಿ ಮಾಡಿದ ಹಣ ಹತ್ತು ರೂ. ಅನ್ನುತ್ತೆ. ಠೇವಣಿ ಪ್ರಕ್ರಿಯೆ ಮುಗಿದೊಡನೆ ‘ ನೀವು ಭರ್ತಿ ಮಾಡಿದ ಹಣ ಹತ್ತು ರೂ. ಎನ್ನುತ್ತದೆ. ಹಾಗೆಯೇ ಹಣ ತೆಗೆಯುವಾಗಲೂ ತೆಗೆದದ್ದೆಷ್ಟು, ಉಳಿದದ್ದೆಷ್ಟು ಎಂದು ಮೆಶೀನ್ ತಿಳಿಸುತ್ತದೆ. ಜತೆಗೆ ರಸೀದಿಯನ್ನೂ ಕೊಡುತ್ತದೆ. ಹೀಗಾಗಿ ಎಲ್ಲವೂ ಕರಾರುವಾಕ್. ಸ್ವಸಹಾಯ ಸಂಘಗಳ ಸದಸ್ಯರೂ, ದಿನದ ಸಂಪಾದನೆಯಲ್ಲಿ ಕೈಲಾದಷ್ಟನ್ನು ಖಾತೆಗೆ ಹಾಕುತ್ತಾರೆ. ತಿಂಗಳಿನ ಕೊನೆಗೆ ಸಂಘದ ಸಾಲದ ಕಂತು ತೀರಿಸಲು ಈ ಹಣವನ್ನು ಬಳಸುತ್ತಾರೆ. ಚಿಲ್ಲರೆ ದುಡ್ಡುಗಳೆಲ್ಲ ಸೇರಿ ಸಾಲದ ಕಂತು ತೀರುತ್ತದೆ.
ಸುಮಾರು ೨೦ ಸಾವಿರ ರೂ. ಬೆಲೆಯ ಬಯೋಮೆಟ್ರಿಕ್ ಮೆಶೀನ್‌ನಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಬ್ಯಾಂಕಿಗೂ ಪ್ರತ್ಯೇಕ ಶಾಖೆ ತೆರೆಯಬೇಕಾದ ಖರ್ಚು ಉಳಿಯುತ್ತದೆ. ಈವತ್ತು ಪ್ರತಿಯೊಂದು ಗ್ರಾಮದಲ್ಲೂ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿವೆ. (ಅದು ಬೀಗ ಜಡಿದಿರುವುದೇ ಹೆಚ್ಚು) ಈ ಕೇಂದ್ರಗಳಲ್ಲಿ ದುಡಿಯುವವರಲ್ಲಿ ಪ್ರಾಮಾಣಿಕರನ್ನು ಗುರುತಿಸಿ, ಶಾಖೆ ರಹಿತ ಬ್ಯಾಂಕಿಂಗ್ ಅನ್ನು ಹಳ್ಳಿಯ ಮನೆ ಬಾಗಿಲಿಗೆ ತಲುಪಿಸಬಹುದು. ರಾಜ್ಯದ ಲಕ್ಷಾಂತರ ಗ್ರಾಮವಾಸಿಗರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಬಹುದು. ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಮುಂತಾದ ಆರ್ಥಿಕ ನೆರವನ್ನು ಈ ಪದ್ಧತಿಯಲ್ಲಿ ವಿತರಿಸಿದರೆ ಜನತೆಗೆ, ತಮಗೆ ಅಗತ್ಯವಿರುವಷ್ಟು ಹಣವನ್ನು ತಾವಿದ್ದಲ್ಲೇ ಕ್ರಮಬದ್ಧವಾಗಿ ಪಡೆಯಲು ಸಾಧ್ಯವಾಗುತ್ತದೆ. ಮಿಕ್ಕಿದ ಹಣ ಬ್ಯಾಲೆನ್ಸ್ ನಲ್ಲೇ ಇರುತ್ತದೆ. ನಗರಗಳಲ್ಲಿ ಎಟಿಎಂ ಬಳಕೆಯಂತೆ ಹಳ್ಳಿಗಳಲ್ಲಿ ಶಾಖಾ ರಹಿತ ಬ್ಯಾಂಕಿಂಗ್ ಸಖತ್ ಐಡಿಯಾ.

Wednesday 7 October 2009

ದುಡಿಯುವ ಕೈಗಳಿಗೆ ಇರಲಿ ಬ್ಯಾಂಕಿಂಗ್

‘ ನನಗೆ ಚೆನ್ನಾಗಿ ಗೊತ್ತು. ಐಟಿ ಕ್ಯಾಪಿಟಲ್ ಬೆಂಗಳೂರಿನಲ್ಲೇ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಗಲಿರುಳು ದುಡಿಯುವ ಸಾವಿರಾರು ಕಾರ್ಮಿಕರ ಬಳಿ ಬ್ಯಾಂಕ್ ಖಾತೆಯೇ ಇಲ್ಲ. ಮೊದಲು ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಬೇಕು. ಹಾಗಿದ್ದರೆ ಮಾತ್ರ ಆತ ದೇಶದ ಉತ್ಪಾದಕ ಆಸ್ತಿಯಾಗಬಲ್ಲ..’
ಆರ್‌ಬಿಐನ ಡೆಪ್ಯುಟಿ ಗವರ್ನರ್ ಡಾ. ಕೆ.ಸಿ ಚಕ್ರವರ್ತಿ ಇತ್ತೀಚೆಗೆ ಕಾರ್ಪೊರೇಷನ್ ಬ್ಯಾಂಕ್‌ನ ಶಾಖೆ ರಹಿತ ೧೫೦ ಬ್ಯಾಂಕಿಂಗ್ ಕೇಂದ್ರಗಳನ್ನು ಉದ್ಘಾಟಿಸಿ ಹೇಳಿದ ಮಾತಿದು. ನಿಜ. ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿಯೂ ನೂರಾರು ಮಂದಿಗೆ ಬ್ಯಾಂಕ್ ಖಾತೆ ಎಂಬುದಿಲ್ಲ. ಮತ್ತೆ ನೂರಾರು ಮಂದಿಗೆ ಖಾತೆ ಇದ್ದರೂ ಖಾಲಿ ಮತ್ತು ಖಾಲಿ. ಠೇವಣಿ ಇಡಬೇಕಾದರೂ ಮೈಲುಗಟ್ಟಲೆ ದೂರದ ಬ್ಯಾಂಕ್ ಶಾಖೆಗೆ ತೆರಳಬೇಕು. ನೂರು ರೂಪಾಯಿ ಠೇವಣಿ ಇಡಬೇಕಾದರೆ ಇಪ್ಪತೈದು ರೂ. ಖರ್ಚು ಮಾಡಬೇಕು. ಸಮಯ ಕೂಡ ವೇಸ್ಟು.
ಸಾವಿರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಈವತ್ತು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದುವೇ. ಮಾತ್ರವಲ್ಲದೆ ನಮ್ಮ ಬ್ಯಾಂಕ್‌ಗಳಿಗೆ ಶ್ರೀಮಂತ ಗ್ರಾಹಕರೆಂದರೆ ತುಂಬ ಅಚ್ಚುಮೆಚ್ಚು. ಬೇಕಾದರೆ ನೀವೇ ನೋಡಿ, ನೂರು, ಐವತ್ತು ರೂ. ಠೇವಣಿ ಇಡುವ ಗ್ರಾಹಕರು ನೀವಾಗಿದ್ದರೆ ನಿಮ್ಮತ್ತ ಬ್ಯಾಂಕ್ ಮ್ಯಾನೇಜರ್ ಮೂಸಿ ಕೂಡ ನೋಡುವುದಿಲ್ಲ. ಅದುವೇ ಲಕ್ಷಾಂತರ ಠೇವಣಿ ಇಡುವ ಉದ್ಯಮಿಯಾದರೆ ಕೈಮುಗಿದು ಛೇಂಬರಿಗೆ ಕರೆದು ಕಾಫಿ, ಟೀ ,ಜ್ಯೂಸ್ ಕೊಟ್ಟು ಸತ್ಕರಿಸುತ್ತಾರೆ. ಯಾವುದೇ ಸಂದೇಹವಿಲ್ಲ. ಬ್ಯಾಂಕ್‌ಗಳು ಶ್ರೀಮಂತ ಗಿರಾಕಿಗಳನ್ನೇ ಓಲೈಸುವುದು ಹೆಚ್ಚು. ಆದರೆ ಸ್ವತಃ ಆರ್‌ಬಿಐನ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ ಚಕ್ರವರ್ತಿ ಹೇಳ್ತಾರೆ- ಶ್ರೀಮಂತರ ಹಿಂದೆ ಬೀಳಬೇಡಿ, ಅವರಿಂದ ಬ್ಯಾಂಕ್‌ಗಳು ಉಳಿಯುವುದಿಲ್ಲ, ದೀರ್ಘಕಾಲ ಬದುಕಿ ಉಳಿಯಬೇಕಾದರೆ ಬಡವರನ್ನು ನಂಬಿ. ಅವರನ್ನು ಬ್ಯಾಂಕಿಂಗ್ ಚಟುವಟಿಕೆಯ ವ್ಯಾಪ್ತಿಗೆ ಕರೆ ತನ್ನಿ. ಹಾಗಿದ್ದರೆ ಮಾತ್ರ ಯಶಸ್ವಿಯಾಗುತ್ತೀರಿ. ಕಾರ್ಪೊರೇಷನ್‌ನಂತಯಹ ಬ್ಯಾಂಕ್‌ಗಳು ಸಣ್ಣ ಬಂಡವಾಳದಿಂದಲೇ ಆರಂಭವಾದ ಬ್ಯಾಂಕ್‌ಗಳಲ್ಲವೇ ಎನ್ನುತ್ತಾರೆ ಚಕ್ರವರ್ತಿ.
ಅಂತೂ ಇಂತೂ ನಿಧಾನವಾಗಿ ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಉದಾಹರಣೆಗೆ ಕಾರ್ಪೊರೇಷನ್ ಬ್ಯಾಂಕ್ ‘ ಕಾರ್ಪ್ ಗ್ರಾಮೀಣ ವಿಕಾಸ್’ ಎಂಬ ಯೋಜನೆ ಜಾರಿಗೊಳಿಸಿದೆ. ಶಾಖಾ ರಹಿತ ಬ್ಯಾಂಕಿಂಗ್ ಪದ್ಧತಿಯಿದು. ದೂರದ ಹಳ್ಳಿಗಳಲ್ಲಿ ಸ್ಮಾರ್ಟ್ ಕಾರ್ಡ್ ಮೂಲಕ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಯೋಜನೆ ಇದು. ಒಂದೂರಿನಲ್ಲಿ ೨೦೦-೨೫೦ ಮಂದಿಗೆ ಬ್ಯಾಂಕ್ ಖಾತೆಯಿದ್ದರೆ ಸಾಕು, ಒಬ್ಬರಿಗೆ ಬ್ಯಾಂಕಿನ ಪ್ರತಿನಿಯಾಗಬಹುದು. ಆ ಪ್ರತಿನಿಗೆ ೮೦೦ ರೂ.ಗಳಿಂದ ೧,೫೦೦ ರೂ. ತನಕ ಸಂಭಾವನೆ ಸಿಗುತ್ತದೆ. ೧.೫ ಕೆ.ಜಿ ತೂಗುವ ಬಯೋಮೆಟ್ರಿಕ್ ಸಾಧನ ಕೊಡುತ್ತಾರೆ. ಧ್ವನಿಯಾಧಾರಿತ ಈ ಸಲಕರಣೆಯ ಮೂಲಕ ಗ್ರಾಹಕರು ಠೇವಣಿ ಇಡಬಹುದು. ಅದು ಎಷ್ಟೇ ಮೊತ್ತವಾದರೂ ಚಿಂತೆ ಇಲ್ಲ. ೧೦ ರೂ. ಬೇಕಾದರೂ ಇಡಬಹುದು. ನಿಮ್ಮ ಮನೆ ಬಾಗಿಲಿಗೇ ಹೀಗೆ ಬ್ಯಾಂಕ್ ಸೇವೆ ಲಭ್ಯವಾಗುತ್ತದೆ. ಜತೆಗೆ ಒಬ್ಬರಿಗೆ ಪಾರ್ಟ್ ಟೈಂ ಕೆಲಸ ಮತ್ತು ಆದಾಯ ಸಿಕ್ಕಿದಂತಾಗುತ್ತದೆ. ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್, ಆರ್.ಡಿ, ಉದ್ಯೋಗ ಖಾತರಿ ಯೋಜನೆಯ ವೇತನ ಬಟವಾಡೆ, ಎಸ್‌ಎಸ್‌ಪಿ ಪೇಮೆಂಟ್‌ಗಳನ್ನು ಇದರ ಮೂಲಕ ನಿರ್ವಹಿಸಬಹುದು.
ಈವತ್ತು ತಂತ್ರಜ್ಞಾನದ ನೆರವಿನಿಂದ ಯಾವುದೇ ಊರಿನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ತರಬಹುದು. ಕೇವಲ ಏಳನೇ ಕ್ಲಾಸ್ ಓದಿದ ಮಹಿಳೆಯೂ ಮನಸ್ಸು ಮಾಡಿದರೆ ತನ್ನೂರಿನಲ್ಲಿ ಶಾಖಾ ರಹಿತ ಬ್ಯಾಂಕಿಂಗ್‌ನ ಪ್ರತಿನಿಯಾಗುವುದರ ಮೂಲಕ ಪಾರ್ಟ್ ಟೈಂ ಆದಾಯ ಪಡೆಯಬಹುದು. ಜನ ಜಾಗೃತಿಯನ್ನೂ ಮೂಡಿಸಬಹುದು. ನಿಜ. ಹಳ್ಳಿಗಾಡಿನ ಅಥವಾ ನಗರ ಪ್ರದೇಶದ ಪ್ರತಿಯೊಬ್ಬ ಕಾರ್ಮಿಕರೂ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಹಾಗಿದ್ದರೆ ಮಾತ್ರ ಆತ ಸಂಪಾದಿಸಿದ ಆದಾಯ ಹನಿಗೂಡಿ ಹಳ್ಳವಾಗುತ್ತದೆ. ದೇಶದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡಿದಂತಾಗುತ್ತದೆ. ಸಂಪಾದಿಸಿದ ಆದಾಯ ೧೦ ರೂಪಾಯಿಯೇ ಆಗಿರಲಿ, ಅದರಲ್ಲಿ ೫ ರೂ.ಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಇಡಬೇಕು. ಖಂಡಿತ ಹನಿಗೂಡಿ ಹಳ್ಳವಾಗುತ್ತದೆ. ಜತೆಗೆ ಪ್ರತಿಯೊಂದು ಬ್ಯಾಂಕ್ ಕೂಡ ತಂತ್ರಜ್ಞಾನದ ಮೂಲಕ ಬಡವರನ್ನು ತಲುಪುವುದರ ಮೂಲಕ ತಳಮಟ್ಟದಲ್ಲಿ ಹಣಕಾಸು ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ಬಡತನದ ರೇಖೆಗಿಂತ ಕೆಳಗಿರುವ ಮಂದಿ ಮೇಲೆ ಬರುತ್ತಾರೆ. ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತದೆ.

Monday 5 October 2009

ವಾಟ್ ಆನ್ ಐಡಿಯಾ..ನಿಮ್ಮೂರಲ್ಲಿ ಬ್ರ್ಯಾಂಚ್ ಇಲ್ಲದಿದ್ದರೂ ಬ್ಯಾಂಕ್ ತೆರೆಯಬಹುದು

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಸೇವೆ ಅಷ್ಟಾಗಿ ಇರುವುದಿಲ್ಲ. ಖಾತೆಗೆ ಒಂದಷ್ಟು ಠೇವಣಿ ಇಡಬೇಕಾದರೂ ಮೈಲುಗಟ್ಟಲೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಸಾಮಾನ್ಯ. ಹಾಗಾದರೆ ಮಾಡುವುದೇನು ? ಇದಕ್ಕೆ ಉತ್ತರ ಶಾಖಾ ರಹಿತ ಬ್ಯಾಂಕಿಂಗ್.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಚಯವಾಗುತ್ತಿರುವ ಶಾಖಾ ರಹಿತ ಬ್ಯಾಂಕಿಂಗ್ ಪದ್ಧತಿಯ ವೈಶಿಷ್ಟ್ಯವಿದು. ಕಾರ್ಪೊರೇಷನ್ ಬ್ಯಾಂಕ್ ೨೦೦೬ರಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ೨೫೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೇವೆ ಲಭ್ಯವಿದೆ.
ಇದು ಹೇಗೆ ಸಾಧ್ಯ ? ಶಾಖಾ ರಹಿತ ಬ್ಯಾಂಕಿಂಗ್‌ನಲ್ಲಿ ಹೆಸರೇ ಹೇಳುವಂತೆ ಬ್ಯಾಂಕಿನ ಶಾಖೆ ಇರುವುದಿಲ್ಲ. ಬದಲಿಗೆ ಬ್ಯಾಂಕ್ ಒಬ್ಬ ಪ್ರತಿನಿಯನ್ನು ನೇಮಕ ಮಾಡುತ್ತದೆ. ಆತ ಬಯೋಮೆಟ್ರಿಕ್ ಸ್ಮಾರ್ಟ್ ಕಾರ್ಡ್ ಹಾಗೂ ಧ್ವನಿಯಾಧಾರಿತ ನಿರ್ದೇಶನವಿರುವ ಸಾಧನವನ್ನು ಉಪಯೋಗಿಸಿ ಗ್ರಾಮೀಣ ಗ್ರಾಹಕರಿಗೆ ಸುರಕ್ಷಿತ ಬ್ಯಾಂಕ್ ಸೇವಾ ಸೌಲಭ್ಯ ಒದಗಿಸುತ್ತಾನೆ. ಗ್ರಾಹಕ ತನ್ನ ಬೆರಳ ಗುರುತನ್ನು ಸಾಧನದ ಮೇಲೆ ಒಟ್ಟಿದರೆ, ಧ್ವನಿಯಾಧಾರಿತ ಸಾಧನದಲ್ಲಿ ಹಣದ ವರ್ಗಾವಣೆಯ ಬಗ್ಗೆ ದೃಢೀಕರಣವಾಗುತ್ತದೆ.
ಕಾರ್ಪೊರೇಷನ್ ಬ್ಯಾಂಕ್ ನೇಮಕ ಮಾಡಿರುವ ಬಿಸಿನೆಸ್ ಪ್ರತಿನಿಗಳಲ್ಲಿ ಬಹುತೇಕ ಮಂದಿ ಮಹಿಳೆಯರೇ ಆಗಿದ್ದಾರೆ. ಶಾಖಾ ರಹಿತ ಬ್ಯಾಂಕ್ ಸ್ಥಾಪನೆಗೆ ೨೦ ಸಾವಿರ ರೂ. ಬೆಲೆಯ ಸಾಧನವನ್ನು ಬ್ಯಾಂಕ್ ನೀಡುತ್ತದೆ. ತಿಂಗಳಿಗೆ ೮೦೦ ರೂ.ಗಳಿಂದ ೧,೫೦೦ ರೂ. ವೇತನ ಕೊಡುತ್ತದೆ. ಇದು ಪಾರ್ಟ್ ಟೈಂ ಕೆಲಸವಾಗಿದ್ದು, ಪ್ರತಿನಿಗೆ ಹೆಚ್ಚುವರಿ ಆದಾಯಕ್ಕೆ ದಾರಿಯಾಗುತ್ತದೆ. ಇದರಿಂದ ಗ್ರಾಹಕರು ಕೇವಲ ಬ್ಯಾಂಕ್ ವ್ಯವಹಾರಕ್ಕೋಸ್ಕರ ಪಟ್ಟಣಕ್ಕೆ ತೆರಳಿ ಸಮಯ ಮತ್ತು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ. ೧೦,೨೦ರೂ. ಅಂತ ಸಣ್ಣ ಮೊತ್ತದ ಹಣವನ್ನೂ ಇದರಲ್ಲಿ ಠೇವಣಿ ಇಡಬಹುದು. ಹೀಗಾಗಿ ಹಿಂಪಡೆಯುವಿಕೆಗಿಂದ ಠೇವಣಿ ಇಡುವವರ ಸಂಖ್ಯೆಯೇ ಇಲ್ಲಿ ಹೆಚ್ಚಿರುತ್ತದೆ. ಇಲ್ಲಿ ಖಾತೆದಾರರು ಯಾವುದೇ ಆರಂಭಿಕ ಶುಲ್ಕ ಕೊಡಬೇಕಾಗಿಲ್ಲ. ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು. ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಶಾಖಾ ರಹಿತ ಬ್ಯಾಂಕಿಂಗ್ ವ್ಯವಸ್ಥೆಯಿಂದ ಬ್ಯಾಂಕ್‌ಗಳಿಗೆ ಗ್ರಾಮೀಣ ಭಾಗದ ಬಡವರಿಗೆ ಹಣಕಾಸು ವ್ಯವಸ್ಥೆಯನ್ನು ಒದಗಿಸಲು ಸುಲಭವಾಗುತ್ತದೆ. ಅಲ್ಲದೆ ಪ್ರತ್ಯೇಕ ಶಾಖೆ ನಿರ್ಮಿಸಲು ಬೇಕಾಗುವ ಕಟ್ಟಡ ನಿರ್ಮಾಣ, ಸಿಬ್ಬಂದಿ ವೆಚ್ಚ ಉಳಿತಾಯವಾಗುತ್ತದೆ. ಅತಿ ಸಣ್ಣ ಮೊತ್ತದ ಹಣದ ವರ್ಗಾವಣೆಯನ್ನು ನೇರವಾಗಿ ಮಾಡಬಹುದು. ಹಣಕಾಸು ಸೇರ್ಪಡೆಯ ಹೆಚ್ಚಳಕ್ಕಾಗಿ ೨೦೦೬ರಲ್ಲಿ ಆರ್‌ಬಿಐ, ಬ್ಯಾಂಕ್‌ಗಳು ಬಿಸಿನೆಸ್ ಪ್ರತಿನಿಗಳ ಮೂಲಕ ವಹಿವಾಟು ವಿಸ್ತರಣೆಗೆ ಅನುಮತಿ ಕೊಟ್ಟಿತು.
ಶಾಖಾ ರಹಿತ ಬ್ಯಾಂಕಿಂಗ್ ಪರಿಕಲ್ಪನೆ ಬಂದಿದ್ದು ಬ್ರೆಜಿಲ್‌ನಿಂದ. ಅಲ್ಲಿ ಸಣ್ಣ ಪುಟ್ಟ ವರ್ತಕರು, ಲಾಟರಿ ಅಂಗಡಿಗಳು, ಅಂಚೆ ಕಚೇರಿಗಳು ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನೂ ಒದಗಿಸಲು ಆರಂಭಿಸಿದಾಗ ಈ ಐಡಿಯಾ ಬೆಳಕಿಗೆ ಬಂತು. ೨೦೦೫ರಲ್ಲಿ ಬ್ರೆಜಿಲ್‌ನ ೯೦ ಸಾವಿರ ಏಜೆಂಟರು ೧೦೦ ಕೋಟಿ ಡಾಲರ್‌ಗೂ ಹೆಚ್ಚು ಹಣದ ವರ್ಗಾವಣೆ ನಡೆಸಿದ್ದರು. ಕೇವಲ ಮೂರು ವರ್ಷಗಳಲ್ಲಿ ೧೨ ೧.೨ ಕೋಟಿ ಖಾತೆಗಳನ್ನು ತೆರೆಯಲಾಗಿತ್ತು.
ಈ ಸ್ಮಾರ್ಟ್ ಕಾರ್ಡ್‌ನಲ್ಲಿ ಲಭ್ಯವಿರುವ ಸೇವೆ
೧. ಠೇವಣಿ ಇಡಬಹುದು
೨. ಹಣ ಹಿಂಪಡೆಯುವಿಕೆ
೩. ಬ್ಯಾಲೆನ್ಸ್ ವಿಚಾರಣೆ
೪. ಮಿನಿ ಸ್ಟೇಟ್‌ಮೆಂಟ್
೫. ಹಣದ ವರ್ಗಾವಣೆ
೬. ಆರ್.ಡಿ ಖಾತೆ
೭. ಎಸ್‌ಎಚ್‌ಜಿ ಗುಂಪುಗಳಿಗೆ ಖಾತೆ
೮. ಎನ್‌ಆರ್‌ಇಜಿ ಪೇಮೆಂಟ್
೯. ಎಸ್‌ಎಸ್‌ಪಿ ಪೇಮೆಂಟ್

Sunday 4 October 2009

ಹೆಲಿಕಾಪ್ಟರ್ ನಿಂದ ಪೊಟ್ಟಣ..ನಾಯಿಪಾಡಾದ ಜನ

ಇಡೀ ಉತ್ತರ ಕರ್ನಾಟಕ ನೆರೆಯ ಹಾವಳಿಗೆ ತತ್ತರಿಸಿದೆ. ಜೀವ ಹಾನಿ ಹಾಗೂ ಆಸ್ತಿ ಪಾಸ್ತಿಯ ನಷ್ಟ ಅಷ್ಟಿಷ್ಟಲ್ಲ. ೨೦ ಸಾವಿರ ಕೋಟಿ ರೂ. ನಷ್ಟವಾಗಿರುವುದರ ಜತೆಗೆ ಸಹಸ್ರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನಿಜಕ್ಕೂ ಇದೊಂದು ರಾಷ್ಟ್ರೀಯ ವಿಪತ್ತು. ಇಂಥ ಸಂದರ್ಭದಲ್ಲಿ ಪಕ್ಷ ಭೇದ ಮರೆತು ರಾಜಕಾರಣಿಗಳು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕೈಗೊಳ್ಳಬೇಕು. ಈವತ್ತು ಮೂರ್‍ನಾಲ್ಕು ಹೆಲಿಕಾಪ್ಟರ್‌ಗಳು ಆಹಾರದ ಮೂಟೆಗಳನ್ನು ನಾಯಿಗಳಿಗೆ ಬಿಸಾಡಿದಂತೆ ಕೆಳಗೆ ಎಸೆಯುತ್ತಿವೆ. ಸಂಕಷ್ಟಪೀಡಿತ ಜನ ಓಡೋಡಿ ಮುಗಿಬಿದ್ದು ಆಹಾರದ ಮೂಟೆಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಎಂಥಾ ದುರಂತವಿದು..ಪ್ರತಿಯೊಬ್ಬರೂ ಉತ್ತರ ಕರ್ನಾಟಕದ ಜನತೆಯ ನೋವನ್ನು ಹಂಚಿಕೊಳ್ಳಬೇಕಾಗಿದೆ.
ದುರದೃಷ್ಟವಶಾತ್ ಪರಿಹಾರ ಕಾರ್ಯದಲ್ಲಿಯೂ ಕೇಂದ್ರ ಸರಕಾರ ಅಕ್ಷರಶಃ ತಾರತಮ್ಯ ನಡೆಸುತ್ತಿದೆ. ಆಂಧ್ರ ಪ್ರದೇಶದಲ್ಲಿ ಕರ್ನಾಟಕದಷ್ಟು ಹಾನಿಯಾಗಿರದಿದ್ದರೂ ಪರಿಹಾರ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದಂತೂ ನಿಜ.

Friday 2 October 2009

ಮೆಚ್ಯೂರಾದ ಭಗ್ನಪ್ರೇಮಿ...

ದಿನದಿಂದ ದಿನಕ್ಕೆ ಮನುಷ್ಯ ಮೆಚ್ಯೂರ್ ಆಗುತ್ತಿದ್ದಾನಾ ?
ಈಗ ಯಾರೂ ಜನುಮ ಜನುಮದಾ ಅನುಬಂಧ ಅಂತ ರಾಗ ಹಾಡುವುದಿಲ್ಲ.
ಹುಡುಗೀರೂ ಅಂತ ಹಾಡುಗಳನ್ನೆಲ್ಲ ನಂಬಲ್ಲ. ಏನಿದ್ದರೂ ಈವತ್ತು ಮಾತ್ರ ಸತ್ಯ. ಏನಿದ್ದರೂ ಲೆಕ್ಕ ಈ ಜನ್ಮದಲ್ಲೇ ಚುಕ್ತ ಆಗಬೇಕು..ಆಗುತ್ತದೆ ಎಂಬ ಪ್ರಬಲ ನಂಬಿಕೆ ಕೂಡಾ.
ಪ್ರೀತಿಯಲ್ಲಿ ಸೋತರೆ ಸೇಡು ತೀರಿಸುವ ದಾರೀನೇ ಬೇರೆ. ನೀನು ಸಿಗದಿದ್ದರೆ ಬದುಕನ್ನು ಛಿದ್ರ ಮಾಡುವ ಪ್ರಶ್ನೆಯೇ ಇಲ್ಲ..ಆಕೆ ಪ್ರೀತಿಸುವುದಿಲ್ಲ ಎಂದು ಕನ್ನಡಿಯಷ್ಟು ಸ್ಪಷ್ಟವಾದ ಮೇಲೆ ಹರ್ಟ್ ಆಗುತ್ತೆ. ಆದರೆ ತಾಕತ್ತಿದೆಯಲ್ಲವೇ, ಅದನ್ನು ಆರಿಸುವ ಪ್ರಶ್ನೆಯೇ ಇಲ್ಲ...ಬದುಕು ಇದೆಯಲ್ಲವೇ..ಅದನ್ನು ಸದ್ಯದ ದೃಷ್ಟಿಯಿಂದ ನೋಡಿಕೊಂಡು ಕಟ್ಟಿಕೊಳ್ಳುವ ರೀತಿಯೇ ಉತ್ತರವಾಗುತ್ತದೆ. ಅಲ್ಲಿ ನಾನೇ...ಸಾಕಿದಾ ಗಿಣಿ ಹಾಡಿಗೆ ನೋ ಛಾನ್ಸ್. ಇದ್ದಷ್ಟು ದಿನ ಯಾರ ಅನುಕಂಪಕ್ಕೂ ಕಾಯದೆ ಕಳೆದು ಹೋದ ಪ್ರೀತಿಯನ್ನು ಮತ್ತೊಂದರಲ್ಲಿ ದಕ್ಕಿಸಿಕೊಳ್ಳುವುದು. ವಾಸ್ತವಕ್ಕೆ ಮುಖಾಮುಖಿಯಾಗುವುದು.
ನನಗನ್ನಿಸುತ್ತಿದೆ ಭಗ್ನ ಪ್ರೇಮಿಗಳು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಗ್ನ ಪ್ರೇಮದಲ್ಲೂ ತಾಕತ್ತನ್ನು ಮರೆಯದೆ ಪ್ರಬುದ್ಧರಾಗುತ್ತಿದ್ದಾರೆ. ಬದುಕಿನುದ್ದಕ್ಕೂ ಅಳುಬುರಕರಾಗುವುದಿಲ್ಲ. ಕೈ ಜಾರಿದ ಗುಲಾಬಿಯನ್ನೇ ಹುಡುಕುತ್ತ ಟೈಮ್ ವೇಸ್ಟ್ ಮಾಡಲ್ಲ. ಗುಲಾಬಿಯ ತೋಟವನ್ನೇ ಸೃಷ್ಟಿಸುತ್ತಾರೆ. ಬದುಕಿನ ವಿಕಾಸದ ಅತ್ಯುನ್ನತ ಹಂತವೂ ಇದೇ ಅಲ್ಲವೇ.

ಓಶೋ ಹೇಳಿದ್ದು..ನಾಲ್ಕು ಮಾತು..

೧. ನೀವು ಬದುಕುವ ಸಲುವಾಗಿ ಹೊರಗಿನದ್ದನ್ನು ಬದಲಿಸಲು ಹೋಗಬಹುದು. ಆದರೆ ಅದರಿಂದಲೇ ನಿಮಗೆ ತೃಪ್ತಿ ಸಿಗುವುದಿಲ್ಲ. ಬದಲಾವಣೆಗೆ ಮತ್ತೊಂದು ಯಾವುದೋ ಉಳಿದುಕೊಳ್ಳುತ್ತದೆ. ಅದುವೇ ಆಂತರಿಕ ಬದಲಾವಣೆ. ಅದಿಲ್ಲದಿದ್ದರೆ ಹೊರಗಿನ ಬದಲಾವಣೆ ಪೂರ್ಣವಾಗುವುದಿಲ್ಲ....
೨. ಯಾವಾಗ ಪ್ರೀತಿ ಮತ್ತು ದ್ವೇಷವೆರಡೂ ಗೈರು ಹಾಜರಾಗುತ್ತವೆಯೋ, ಆವಾಗ ಪ್ರತಿಯೊಂದೂ ಸ್ಪಷ್ಟ ವಾಗುತ್ತವೆ
೩. ಜ್ಞಾನ ಎಂದರೆ ಮಾಹಿತಿ ಅಲ್ಲ, ಪರಿವರ್ತನೆ
೪. ನಿಮ್ಮೊಳಗಿನ ಅನೂಹ್ಯ ರಹಸ್ಯಗಳು ನಿಮ್ಮೆದುರು ತೆರೆದುಕೊಳ್ಳಬೇಕಿದ್ದರೆ, ಅಚ್ಚರಿ ನಿಮ್ಮಲ್ಲಿರಲಿ. ಪ್ರಶ್ನಿಸುವವರ ಮುಂದೆ ನಿಗೂಢಗಳು ತೆರೆದುಕೊಳ್ಳಲಾರವು. ಪ್ರಶ್ನಿಸುವವರು ಶೀಘ್ರವಾಗಿ ಇಲ್ಲವೇ ಕೊನೆಗೆ ಪವಿತ್ರ ಗ್ರಂಥಗಳೊಂದಿಗೆ ಪರ್ಯವಸಾನ ಹೊಂದುತ್ತಾರೆ. ಯಾಕೆಂದರೆ ಅವುಗಳ ತುಂಬ ಉತ್ತರಗಳಿರುತ್ತವೆ. ಉತ್ತರಗಳು ಯಾವತ್ತಿಗೂ ಅಪಾಯಕಾರಿ. ಅವುಗಳು ನಿಮ್ಮ ಅಚ್ಚರಿಯನ್ನು ಕೊಲ್ಲುತ್ತವೆ.

ಕೆಂಡಸಂಪಿಗೆ, ಜಯಪ್ರದಾ ಮತ್ತು ಸಂದೀಪ್ ಬೇಕಲ್

ಕೆಂಡಸಂಪಿಗೆ ಇನ್ನಿಲ್ಲವಾಗಿರುವುದು ತುಂಬ ನೋವು ಕೊಡುತ್ತಿದೆ. ಪ್ರತಿ ದಿನ ಕನ್ನಡದ ಬೆಡಗು, ಪರಿಮಳವನ್ನು ಹೊತ್ತು ವಿವಿಧ ಬರಹಗಳೊಡನೆ ಮೂಡಿ ಬರುತ್ತಿದ್ದ ಕೆಂಡಸಂಪಿಗೆಯನ್ನು ನಿತ್ಯ ಓದುತ್ತಿದ್ದೆ. ಪೆಜತ್ತಾಯರ ಆತ್ಮಕಥೆಯಂತೂ ರಸಭರಿತವಾಗಿ ಓದಿಸಿಕೊಂಡು ಹೋಗುತ್ತಿತ್ತು. ಛೆ..ಹೀಗಾಗಬಾರದಿತ್ತು.
ನಿನ್ನೆ ಜ್ಯುಯೆಲ್ಸ್ ಆಫ್ ಇಂಡಿಯಾದ ಸುದ್ದಿಗೋಷ್ಠಿಗೆ ಹೋಗಿದ್ದೆ. ಝಗಮಗಿಸುವ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ಜಯಪ್ರದಾ ಕೇಂದ್ರ ಬಿಂದುವಾಗಿದ್ದರು. ಜುಯೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ರಾಯಭಾರಿಯಾಗಿದ್ದ ಅವರು ಮೈತುಂಬ ಕೇಜಿಗಟ್ಟಲೆ ಬಂಗಾರದ ಆಭರಣಗಳನ್ನು ಧರಿಸಿ ಮಿಂಚುತ್ತಿದ್ದರು. ನನಗೆ ಹದಿನೈದು ದಿನಗಳ ಹಿಂದಿನ ಘಟನೆಯೊಂದು ನೆನಪಾಯಿತು. ಲಖನೌ ಸಮೀಪದ ರಾಮ್‌ಪುರ ಜಯಪ್ರದಾ ಅವರ ಸ್ವಕ್ಷೇತ್ರ. ನೆರೆಯ ಹಾವಳಿಯಿಂದ ರಾಮ್‌ಪುರದ ಹಲವಾರು ಹಳ್ಳಿಗಳು ಜಲಾವೃತವಾಗಿದ್ದವು. ನೆರೆ ಪೀಡಿತ ಪ್ರದೇಶದ ವೀಕ್ಷಣೆ ನಡೆಸಿದ ಜಯಪ್ರದಾ ನೆರೆಯ ಅಬ್ಬರಕ್ಕೆ ಭಯಪಟ್ಟು ಕೊನೆಗೆ ಅತ್ತುಬಿಟ್ಟಿದ್ದರು. ಇದು ರಾಷ್ಟ್ರೀಯ ಪತ್ರಿಕೆಗಳಲ್ಲೂ ಚಿತ್ರ ಸಮೇತ ಪ್ರಕಟವಾಗಿತ್ತು. ಇಂತಿಪ್ಪ ಜಯಪ್ರದಾ ಈಗ ಪಕ್ಕಾ ಮಾಡೆಲ್ ನಾಚುವಂತೆ ಜಗಮಗಿಸುತ್ತಿದ್ದರು. ಎರಡೂ ವಿಭಿನ್ನ ಪಾತ್ರ..ಒಂದೆಡೆ ಸಂತ್ರಸ್ತರನ್ನು ಸಂತೈಸುವ ಬಡವರ ಬಂಧುವಿನ ಪಾತ್ರ, ಕೆಲವೇ ದಿನಗಳಲ್ಲಿ ಅಮೂಲ್ಯ ಚಿನ್ನಾಭರಣಗಳ ಗ್ರಾಹಕರನ್ನು ಮೋಡಿ ಮಾಡುವ ಕಂಪನಿಯ ರಾಯಭಾರಿಯ ಪಾತ್ರ. ಅಲ್ಲಿ ಬಡವರ ಬಂಧು, ಇಲ್ಲಿ ಒಡವೆಯೇ ಬಂಧು. ಒಂದೆಡೆ ಕಣ್ಣೀರು ಹಾಕುವ ಪಾತ್ರ, ಮತ್ತೊಂದೆಡೆ ಗ್ರಾಹಕರನ್ನು ಸೆಳೆಯಲು ವೈಯ್ಯಾರದ, ಥಳಕು ಬಳುಕಿನ ಮಾಡೆಲ್‌ನ ಪಾತ್ರ..
ಈ ಜಗತ್ತು ಮಾಯೆಯಲ್ಲವೇ..ಎಂದೂ ಅನ್ನಿಸಿತು.
ಆದರೂ ಸಂದೀಪ್ ಬೇಕಲ್ ಅವರ ಸಾಹಸ ಮೆಚ್ಚತಕ್ಕದ್ದೇ. ಜ್ಯುಯೆಲ್ಸ್ ಆಫ್ ಇಂಡಿಯಾದ ಸಿಇಒ ಆಗಿರುವ ಸಂದೀಪ್ ಬೇಕಲ್, ನಾನಾ ರಾಜ್ಯಗಳ ಚಿನ್ನಾಭರಣ ವ್ಯಾಪಾರಿಗಳನ್ನು ಒಗ್ಗೂಡಿಸಿ, ರೀಟೇಲ್ ಚಿನ್ನಾಭರಣ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಸಂಘಟಿಸುತ್ತಿದ್ದಾರೆ. ಇದರಿಂದ ವ್ಯಾಪಾರ ಹೆಚ್ಚುತ್ತದೆ ಎಂಬುದು ಅವರ ಅನುಭವದ ಮಾತು. ಕನ್ನಡಿಗರ ಸಾಹಸ ಹೀಗೆ ಮುಂದುವರಿಯಲಿ..

Wednesday 30 September 2009

ಆರ್ಕಿಟೆಕ್ಟ್ ಎಂದರೆ ಯಾರು ?

( ಆರ್ಕಿಟೆಕ್ಟ್ ವಿಲ್‌ಫ್ರೆಡ್ ಬೇಕರ್ ಅವರ ನೀತಿ, ನಿಲುವು, ಪರಿಸರ ಪ್ರೇಮ ಸ್ವಾರಸ್ಯಕರ. ಅವರ ಅನಿಸಿಕೆಗಳು ಇಲ್ಲಿವೆ)
ಈ ಪ್ರಶ್ನೆಗೆ ನಾನಾ ಉತ್ತರಗಳು ಇರಬಹುದು.
ನಿಘಂಟುಗಳ ಪ್ರಕಾರ ಆರ್ಕಿಟೆಕ್ಚರ್ ಅನ್ನು ಪ್ರಾಕ್ಟೀಸ್ ಮಾಡುವ ವ್ಯಕ್ತಿಯೇ ಆರ್ಕಿಟೆಕ್ಟ್. ಕಟ್ಟಡಗಳನ್ನು ನಿರ್ಮಾಣ ಮಾಡುವ ಕಲೆ ಮತ್ತು ವಿಜ್ಞಾನವೇ ಆರ್ಕಿಟೆಕ್ಚರ್ !
ನಾನೂ ಆರ್ಕಿಟೆಕ್ಟ್ ಅಂತ ಪ್ರಮಾಣ ಪತ್ರ ಪಡೆದ ನಂತರ ಎರಡರಿಂದ ಮೂರು ಆಫೀಸ್‌ನಲ್ಲಿ ಕೆಲಸ ಮಾಡಿದ್ದೆ. ಆದರೆ ಅದು ಡೆಡ್ಲಿ ಡಲ್ ಆಗಿತ್ತು. ಎರಡನೇ ಜಾಗತಿಕ ಯುದ್ಧದ ವೇಳೆ ನನಗೆ ಅದರಿಂದ ಮುಕ್ತಿ ದೊರೆಯಿತು. ಆಗ ಬ್ರಿಟನ್‌ನಿಂದ ಚೀನಾಗೆ ತೆರಳಿದ್ದೆ. ಕೆಲವು ವರ್ಷಗಳ ಕಾಲ ವೈದ್ಯಕೀಯ ತಂಡದಲ್ಲಿ ದುಡಿದ ನಂತರ ಭಾರತದ ಮಾರ್ಗವಾಗಿ ಇಂಗ್ಲೆಂಡ್‌ಗೆ ಹಿಂತಿರುಗಲು ಯತ್ನಿಸಿದೆ. ಹಡಗಿಗಾಗಿ ಮೂರು ತಿಂಗಳು ಕಾಯುವಂತಾಯಿತು. ಪ್ರತಿಯೊಬ್ಬರೂ ಭಾರತವನ್ನು ಬಿಡುವಂತೆ ನನಗೆ ಸಲಹೆ ನೀಡುತ್ತಿದ್ದರು. ಆದರೆ ಯಾರು ಏನೇ ಹೇಳಿದರೂ, ಭಾರತವನ್ನು ತೊರೆಯಲು ಮನಸ್ಸಿರಲಿಲ್ಲ. ಕೊನೆಗೆ ಇಲ್ಲಿಯೇ ನಿಂತೆ.
ಬ್ರಿಟನ್‌ನಲ್ಲಿ ನಾನು ಕಲಿತಿದ್ದ ಆರ್ಕಿಟೆಕ್ಚರಲ್ ಶಿಕ್ಷಣಕ್ಕೂ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದ ಪಠ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದುವು. ನನ್ನ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಸ್ಕೂಲ್ ಆಫ್ ಆರ್ಟ್ ಕೂಡ ಅವಿಭಾಜ್ಯವಾಗಿತ್ತು. ಬಣ್ಣ ಬಳಿಯುವವರು, ಶಿಲ್ಪಿಗಳು, ಕುಂಬಾರರು, ಮರದ ಕೆತ್ತನೆ ಕೆಲಸಗಾರರು, ಕುಸುರಿ ಕೆತ್ತನೆಯ ಗ್ಲಾಸ್‌ಗಳ ಕಿಟಿಕಿ ರಚಿಸುವವರ ಕಲಾವಿದರ ಜತೆ ಬೆರೆತು ಕಲಿಯುತ್ತಿದ್ದೆವು. ಸಾಯಂಕಾಲ ಕಲಾ ತರಗತಿಗೂ ಹಾಜರಾಗಬೇಕಿತ್ತು. ಮಣ್ಣಿನ ಮಡಕೆ, ಪಿಂಗಾಣಿ ಪಾತ್ರಗೆಳನ್ನು ರಚಿಸಲು ಕಲಿತಿದ್ದೆ. ಆದರೆ ತಿರುವನಂತಪುರಂನಲ್ಲಿ ಆರ್ಕಿಟೆಕ್ಚರ್ ಎನ್ನುವುದು ಎಂಜಿನಿಯರಿಂಗ್ ಕಾಲೇಜಿನ ಒಂದು ಶಾಖೆಯಾಗಿತ್ತು. ನನಗೆ ತಿಳಿದಂತೆ ಕಲಾ ಕಾಲೇಜಿಗೂ ಇದಕ್ಕೂ ಸಂಬಂಧ ಇರಲಿಲ್ಲ.
ನಾನು ನನ್ನದೇ ಮರ್ಗ ಹುಡುಕಲು ಯತ್ನಿಸಿದೆ. ಸೂಕ್ತವಾದ ಕಚೇರಿ ನಡೆಸಲಿಲ್ಲ. ನನ್ನ ಮಂಚದ ಪಕ್ಕದಲ್ಲಿ ಹಳೆಯ ಡ್ರಾಯಿಂಗ್ ಬೋರ್ಡ್ ಇತ್ತು. ನಾನು ಶಾಲೆಯಲ್ಲಿ ಕಲಿಯುವಾಗ ನನ್ನ ಜತೆಗಿದ್ದ ಬೋರ್ಡ್ ಅದಾಗಿತ್ತು. ಶಾಲೆಗೆ ಸೇರಿದ ಸಂದರ್ಭ ಅಣ್ಣ ಕೊಟ್ಟಿದ್ದ ಹಳೆಯ ಕಂಪಾಸ್ ಜೋಪಾನವಾಗಿತ್ತು. ನನ್ನ ಮಟ್ಟಿಗೆ ಗ್ರಾಹಕರ ಜತೆ ಕೂತು ವಿನ್ಯಾಸದ ಬಗ್ಗೆ ಚರ್ಚಿಸುವುದು ಹಾಗೂ ಅವರ ಬಗ್ಗೆ ಅರಿತುಕೊಳ್ಳುವುದು ಅತ್ಯಂತ ಆಸಕ್ತಿದಾಯಕವಾಗಿತ್ತು. ಗ್ರಾಹಕರು ಹೇಗೆ ಬದುಕುತ್ತಿದ್ದಾರೆ ? ಅವರ ಉದ್ಯೋಗ ಯಾವುದು ? ಅವರ ಕನಸಿನ ಮನೆ ಎಂತಹುದು ? ಎಂದು ತಿಳಿಯಲು ಯತ್ನಿಸುತ್ತಿದ್ದೆ. ಅವರ ಯೋಚನೆಯನ್ನು ಗ್ರಹಿಸಿಕೊಂಡು ವಿನ್ಯಾಸವನ್ನು ಕಾಗದದ ಮೇಲೆ ಬಿಡಿಸುವುದು ಥ್ರಿಲ್ ಅನ್ನಿಸುತ್ತಿತ್ತು. ನಂತರ ಅವರ ಬೇಕು, ಬೇಡಗಳನ್ನು ಗಮನಿಸಿ ಬದಲಾವಣೆ ಮಾಡುತ್ತಿದ್ದೆ. ಗ್ರಾಹಕನ ತೃಪ್ತಿಯೇ ಮೊದಲ ಗುರಿಯಾಗಿತ್ತು. ಕೆಲಸಕ್ಕೆ ಪ್ರೇರಣೆಯಾಗಿತ್ತು. ನೀವು ಗ್ರಾಹಕರ ಬಯಕೆಯ ಮನೆಯನ್ನು ಕಟ್ಟಬೇಕು. ನಿಮ್ಮ ಮನೆಯನ್ನಲ್ಲ ಎಂಬುದು ಗುರುಗಳ ಪಾಠವಾಗಿತ್ತು. ಟೂ-ಡೈಮೆನ್ಶನ್ ಡ್ರಾಯಿಂಗ್ಸ್ ಅನ್ನು ತ್ರೀ-ಡೈಮೆನ್ಶನ್ ಬಿಲ್ಡಿಂಗ್‌ಗೆ ಪರಿವರ್ತಿಸುವುದು ಅಷ್ಟೇ ಸ್ವಾರಸ್ಯಕರವಾಗಿತ್ತು. ರೇಖಾ ವಿನ್ಯಾಸ ಕಟ್ಟಡವಾಗಿ ರೂಪಾಂತರವಾಗುವ ವೇಳೆ ಸ್ಥಳದಲ್ಲಿ ನಾನಿದ್ದು ಆಸ್ವಾದಿಸುತ್ತಿದ್ದೆ. ಕ್ಯಾಮೆರಾದಲ್ಲಿ ಎಲ್ಲ ಪ್ರಕ್ರಿಯೆಗಳನ್ನುನ ಕ್ಲಿಕ್ಕಿಸುತ್ತಿದ್ದೆ. ನೆಗೆಟಿವ್ ತೆಗೆಯುತ್ತಿದ್ದೆ. ಆದರೆ ಪ್ರಿಂಟ್ ಹಾಕುತ್ತಿರಲಿಲ್ಲ. ಇದೊಂದು ಮೂರ್ಖತನದಂತೆ ಕಾಣಿಸುತ್ತಿತ್ತು. ಕೆಲವು ಸಲ ಏಣಿಯನ್ನು ಹತ್ತುವಾಗ ಹೆಚ್ಚು ವ್ಯೂ ಸಿಗುತ್ತಿತ್ತು. ಸಾಮಗ್ರಿಗಳ ಮೇಲೆ ಬಣ್ಣ ಬಳಿಯುವುದರ ಬದಲಿಗೆ ಸಾಮಗ್ರಿಗಳದ್ದೇ ಬಣ್ಣವನ್ನು ಅಧ್ಯಯನ ಮಾಡುತ್ತಿದ್ದೆ. ಇದಕ್ಕಾಗಿ ಕಲ್ಲು ಕೆತ್ತುವವರು ಹಾಗೂ ಇತರ ಕಾರ್ಮಿಕರ ಜತೆ ಕೆಲಸ ಮಾಡುತ್ತಿದ್ದೆ. ಸಾಮಗ್ರಿಗಳನ್ನು ಹೇಗೆ ಬಳಸಲು ಬಯಸುತ್ತಿದ್ದೇನೆ ಅಂತ ಅವರಿಗೆ ವಿವರಿಸುತ್ತಿದ್ದೆ. ಆದ್ದರಿಂದ ನನಗೆ ಡೆಸ್ಕ್ ವರ್ಕ್‌ಗಿಂತ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಭಾಗವಹಿಸುವುದು ಹೆಚ್ಚು ಮಹತ್ವಪೂರ್ಣವಾಗಿತ್ತು.
ವಿದ್ಯಾರ್ಥಿಯಾಗಿದ್ದಾಗ ಅದೊಂದು ಅಂಶವನ್ನು ನಮ್ಮ ಪ್ರೊಫೆಸರ್‌ಗಳು ನಾಟುವಂತೆ ಹೇಳಿದ್ದರು : ‘ ಆರ್ಕಿಟೆಕ್ಟ್ ಅನ್ನಿಸಿಕೊಂಡವನ ಮನಸ್ಸಿನಲ್ಲಿ ಕಟ್ಟಡದ ಪರಿಪೂರ್ಣ ಚಿತ್ರಣ ಇರಬೇಕು. ಕೇವಲ ವಿನ್ಯಾಸ ಸಿದ್ಧಪಡಿಸುವುದು ಮಾತ್ರ ಆತನ ಕೆಲಸವಲ್ಲ, ನಿರ್ಮಿಸಿದ ಮನೆಯಲ್ಲಿ ಗ್ರಾಹಕ ಹೇಗೆ ಸಂತೃಪ್ತಿಯಿಂದ ಬದುಕಬಲ್ಲ ಎಂಬುದನ್ನೂ ತಿಳಿದಿರಬೇಕು ’
ನಮ್ಮನ್ನು ಆರ್ಕೆಸ್ಟ್ರಾದ ಕಂಡಕ್ಟರ್ ಎಂದು ಅವರು ಬಣ್ಣಿಸುತ್ತಿದ್ದರು. ಆತನಿಗೆ ತನ್ನ ಸಂಗೀತ ತಂಡದ ಪ್ರತಿಯೊಂದೂ ಗೊತ್ತಿರಬೇಕು. ಪ್ರಸಿದ್ಧನಾದ ಕಂಡಕ್ಟರ್‌ಗೆ ತಂಡದ ಪ್ರತಿಯೊಂದು ಸಂಗೀತ ಸಾಧನವನ್ನೂ ಸಮಯಕ್ಕೆ ತಕ್ಕಂತೆ ನುಡಿಸಲು ತಿಳಿದಿರಬೇಕು. ನನ್ನ ಪ್ರಕಾರ ಆರ್ಕಿಟೆಕ್ಟ್ ಉತ್ತಮ ವ್ಯಕ್ತಿತ್ವವನ್ನು ಹೊಂದಿರಬೇಕು. ಆಗ ಆತನ ಕೆಲಸ ಕೂಡ ಪರಿಪೂರ್ಣವಾಗುತ್ತದೆ. ಚಿತ್ರ ಕಲಾಕಾರ ಅಥವಾ ಶಿಲ್ಪಿಯ ಕಲಾಕೃತಿಯನ್ನು ಆಸಕ್ತಿ ಇರುವವರು ಖರೀದಿಸಿ ತಮ್ಮ ಕೊಠಡಿಯಲ್ಲಿ ಇಡುತ್ತಾರೆ. ಬೇಕಾದವರು ಮಾತ್ರ ನೋಡಬಹುದು. ಆದರೆ ಆರ್ಕಿಟೆಕ್ಟ್ ಕಟ್ಟುವ ಮನೆ ದಾರಿಯಲ್ಲಿ ಸಂಚರಿಸುವ ಎಲ್ಲರಿಗೂ ಕಾಣುತ್ತದೆ. ಆದ್ದರಿಂದ ಆರ್ಕಿಟೆಕ್ಟ್ ತಮ್ಮ ಕೃತಿ ಇತರರಿಗೆ ಆನಂದದಾಯಕವಾಗಿರುತ್ತದೆಯೇ ? ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿದೆಯೇ ಎಂದು ತಮ್ಮನ್ನೇ ಕೇಳಿಕೊಳ್ಳಬೇಕು. ವ್ಯಕ್ತಿತ್ವ ವ್ಯಕ್ತಿಯನ್ನು ರೂಪಿಸುತ್ತದೆ ಅಂತ ವಾಡಿಕೆಯ ಮಾತಿದೆ. ಆದರೆ ವ್ಯಕ್ತಿತ್ವ ಉತ್ತಮ ಆರ್ಕಿಟೆಕ್ಚರ್ ಅನ್ನೂ ರೂಪಿಸುತ್ತದೆ -ವಿಲ್‌ಫ್ರೆಡ್ ಬೇಕರ್.

Tuesday 29 September 2009

ವಾಟ್ ಆನ್ ಐಡಿಯಾ...ನೀವೇಕೆ ಸೈಕಲ್ ಟೂರಿಸಂ ಮಾಡಬಾರದು ?

ಊಟಿಯಲ್ಲಿ ನಿಸರ್ಗದ ವಿಹಂಗಮ ದೃಶ್ಯವನ್ನು ಸವಿಯಲು ಸೈಕಲ್ ಬೇಕು ಎಂದು ಎಷ್ಟೋ ಸಲ ಅನ್ನಿಸುತ್ತದೆ. ಅಲ್ಲಿನ ವಿಶಾಲ ಕೆರೆಗಳ ಬದಿಯಲ್ಲಿ ಸಾಯಂಕಾಲದ ಹೊತ್ತು ಬಾಡಿಗೆಗೆ ಸುಲಭವಾಗಿ ಸಿಗುವ ಸೈಕಲನ್ನೇರಿ ಒಂದು ಸುತ್ತಾಟ ಬಂದರೆ ಅನುಭವವನ್ನು ಜೀವಮಾನದಲ್ಲಿ ಮರೆಯಲು ಸಾಧ್ಯವಾಗುವುದಿಲ್ಲ. ಪ್ರದೇಶ ಅಪರಿಚಿತವಾಗಿದ್ದರೂ, ನಮ್ಮೂರಿನಲ್ಲೇ ಸೈಕಲ್ ಹೊಡೆದಂತಾಗುತ್ತದೆ. ಬಾಲ್ಯದ ದಿನಗಳಿಗೆ ನೆನಪು ಜಾರುತ್ತದೆ..ನಿಸರ್ಗದೊಡನೆ ಒಂದಾಗಿ ರಸ ನಿಮಿಷಗಳನ್ನು ಕಳೆಯಬೇಕಾದರೆ ಸೈಕಲ್‌ಗಿಂತ ಉತ್ತಮ ವಾಹನ ಮತ್ತೊಂದಿಲ್ಲ. ಶರೀರಕ್ಕೂ ವ್ಯಾಯಾಮ ಸಿಗುತ್ತದೆ..ಹಾಗಾದರೆ ಕೇವಲ ಊಟಿಯಲ್ಲಿ ಮಾತ್ರ ಇಂತಹ ಅನುಕೂಲ ಯಾಕೆ ? ಮೈಸೂರಿನ ಚಾಮುಂಡಿಬೆಟ್ಟ, ಮಂಡ್ಯದ ಕೃಷ್ಣ ರಾಜಸಾಗರ, ಶಿವನ ಸಮುದ್ರದಲ್ಲಿ ಇಂಥ ಅನುಕೂಲ ಯಾಕಿಲ್ಲ ? ಯಾಕೆಂದರೆ ಸೈಕಲ್ ಟೂರಿಸಂ ಅನ್ನುವುದು ಇನ್ನೂ ನಮ್ಮಲ್ಲಿ ಬೆಳೆದಿಲ್ಲ. ಅಪವಾದಕ್ಕೆಂಬಂತೆ ಎಲ್ಲೋ ಒಂದೆರಡು ಕಡೆ ಇರಬಹುದು, ಅಷ್ಟೇ. ಆದರೆ ಪ್ರತಿಯೊಂದು ಊರಿನಲ್ಲಿಯೂ ವೈವಿಧ್ಯಮಯ, ವೀಕ್ಷಣೆಗೆ ಸೂಕ್ತವಾದ ತಾಣಗಳು ನಮ್ಮಲ್ಲಿವೆ. ಅಲ್ಲೆಲ್ಲ ಸೈಕಲ್ ಟೂರಿಸಂ ಅನ್ನು ಉದ್ಯಮದಂತೆ ಬೆಳೆಸಲು ವಿಪುಲ ಅವಕಾಶವಿದೆ. ಆದರೆ ಇಂಥ ಐಡಿಯಾವನ್ನು ಜನಪ್ರಿಯಗೊಳಿಸಬೇಕಷ್ಟೇ.
ರಾಜ್ಯದ ವೈಶಿಷ್ಟ್ಯವೇನೆಂದರೆ ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಒಂದೆರಡು ಗಂಟೆ ಪ್ರಯಾಣಿಸಿದರೆ, ಆಯಾ ಭಾಗದಲ್ಲಿನ ಹಳ್ಳಿಗಳ ಲೋಕ ತೆರೆದುಕೊಳ್ಳುತ್ತದೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿ ನಿಜಕ್ಕೂ ಪರಿಸರವನ್ನು, ವೈವಿಧ್ಯಮಯ ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಸೈಕಲ್ ಸವಾರಿ ಮಾಡಬೇಕು. ನಿಸ್ಸಂದೇಹವಾಗಿ ಸೈಕಲ್ ಟೂರಿಸಂ ಅನ್ನು ಬೆಳೆಸಲು ಸಮೃದ್ಧ ಅವಕಾಶ ನಮ್ಮಲ್ಲಿದೆ. ಇದರಿಂದ ಪ್ರವಾಸಿ ತಾಣಗಳ ಸುತ್ತುಮುತ್ತಲಿನ ಹಳ್ಳಿಗರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಪ್ರವಾಸಿಗರಿಗೆ ಹೊಸ ಮಿತವ್ಯಯದಲ್ಲಿ ಹೊಸ ಅನುಭವವಾಗುತ್ತದೆ. ವಿದೇಶಗಳ ಪ್ರವಾಸೋದ್ಯಮ ವಲಯದಲ್ಲಿ ಇಂತಹ ಸೈಕಲ್ ಪ್ರವಾಸವೇ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಮುಖ್ಯವಾದ ಲಕ್ಷಣವೇ ವಿನೂತನ ಅನುಭವ, ಮೋಜು ಮತ್ತು ಸ್ವಾರಸ್ಯಕರ. ಉದಾಹರಣೆಗೆ ಬೆಂಗಳೂರಿನಲ್ಲಿ ಸಮಾ ದುಡಿಯುವ ಮಂದಿ ವಾರಾಂತ್ಯದಲ್ಲಿ ಸುತ್ತುಮುತ್ತಲಿನ ಪ್ರವಾಸಿ ತಾಣಗಳಿಗೆ ಹಾಗೂ ಸಮೀಪದ ಹಳ್ಳಿಗಳಿಗೆ ಹೋಗುತ್ತಾರೆ. ಎಷ್ಟೋ ಮಂದಿ ಬೈಕನ್ನೇರಿ ಗುಂಪಾಗಿ ಮಂಡ್ಯ, ಶ್ರೀರಂಗಪಟ್ಟಣ, ಶಿವನ ಸಮುದ್ರ, ಮಧುಗಿರಿ ಅಂತ ತೆರಳುತ್ತಾರೆ. ಅಲ್ಲಿನ ಹಳ್ಳಿಗರು ಸೈಕಲ್ ಪ್ರವಾಸವನ್ನು ಆಯೋಜಿಸಿದರೆ ಆದಾಯ ಖಚಿತ.
ಸೈಕಲ್ ಜತೆಗೆ : ಅಂದಹಾಗೆ ಬರೀ ಸೈಕಲ್ ಮಾತ್ರ ಕೊಟ್ಟು ಬಿಡುವುದು ಸರಿಯಲ್ಲ. ಆ ಸೈಕಲಿನಲ್ಲಿ ಸವಾರಿ ಸುಲಭವಾಗಲು ಗೇರ್ ಇರಲಿ. ಕುಡಿಯುವ ನೀರು ಅಥವಾ ತಂಪು ಪಾನೀಯ ಇಡಲು ಚೌಕಟ್ಟಿರಲಿ. ಕುರುಕಲು ತಿಂಡಿ, ಊಟ, ತಿನಿಸನ್ನು ಇಡಲು ಜಾಗವಿರಲಿ. ಸೈಕಲ್‌ನಲ್ಲೇ ನೋಡಬಹುದಾದ ಸ್ಥಳಗಳ ಪಟ್ಟಿ ತಯಾರಿಸಿ. ವೆಬ್‌ಸೈಟ್, ಬ್ಲಾಗ್, ಮೊಬೈಲ್, ಎಸ್ಸೆಮ್ಮೆಸ್ ಮೂಲಕ ಬಿಸಿನೆಸ್ ಅನ್ನು ಪ್ರಚಾರ ಮಾಡಿ. ಬೇಕಾದರೆ ಟ್ರಾವೆಲ್ ಏಜೆಂಟ್, ಬ್ರೋಕರ್‌ಗಳ ಸಹಯೋಗವನ್ನು ಪಡೆದು ಮಾರುಕಟ್ಟೆಯನ್ನು ಸೃಷ್ಟಿಸಿ. ಕೆಲವರಿಗೆ ಬೆಟ್ಟ ಗುಡ್ಡಗಳನ್ನು ಸೈಕಲ್‌ಮೂಲಕ ಹತ್ತುವ ಸಾಹಸ ಪ್ರವೃತ್ತಿ ಇರುತ್ತದೆ. ಇನ್ನು ಕೆಲವರಿಗೆ ಸುಮ್ಮನೆ ಅಲೆಯುವುದೇ ಮುದ ಕೊಡುತ್ತದೆ. ಅಂತಹವರನ್ನೆಲ್ಲ ಆಕರ್ಷಿಸುತ್ತದೆ ಸೈಕಲ್..