Tuesday 1 December 2009

ಮನೆಯೇ ಗ್ರಂಥಾಲಯ

ಜನ ಅಕ್ಕಿ ಬೇಳೆಯಂತೆ ಪುಸ್ತಕ ಕೊಳ್ಳಲಿ !
ಮನೆಯಲ್ಲಿ ಅಕ್ಕಿ , ಬೇಳೆ ಥರಾನೇ...ಪುಸ್ತಕ ಇರಬೇಕು. ಸಾಹಿತ್ಯ ಬಡವನ ಅನ್ನ. ಬದುಕಿನ ಸಂತೋಷದ ದಾರಿದೀಪಗಳೇ ಪುಸ್ತಕಗಳು.
ಮನೆಯಲ್ಲಿ ಪುಸ್ತಕ ಯಾಕಿರಬೇಕು ಎಂಬ ಪ್ರಶ್ನೆಗೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ವಿವರಿಸಿದ್ದು ಹೀಗೆ.

ಯಾವುದೇ ವಿಷಯ ಇರಬಹುದು. ಪುಸ್ತಕಗಳು ಮೌಲ್ಯಗಳ ಆಗರ. ಅಕ್ಕಿಯಲ್ಲಿ ಬೇರೆ ಬೇರೆ ವಿಧಗಳಿಲ್ಲವೇ. ಹಾಗೆ. ನಾವು ಗೋಕರ್ಣದಲ್ಲಿ ಇದ್ದಾಗಲೂ ಪುಸ್ತಕಗಳು ನಮ್ಮ ಆಸ್ತಿಯಾಗಿದ್ದವು.
ಪುಸ್ತಕ ಪ್ರೀತಿಯನ್ನು ಬಂಗಾಳದ ಜನರಿಂದ ನೋಡಿ ಕಲಿಯಬೇಕು. ಎಷ್ಟೇ ಬಡತನ ಇದ್ದರೂ ಸಾಲ ಮಾಡಿಯಾದರೂ ಅವರು ಪುಸ್ತಕಗಳನ್ನು ಖರೀದಿಸುತ್ತಾರೆ. ತಂದೆ ತಾಯಿಯರಿಗೆ ಆಸಕ್ತಿ ಇದ್ದರೆ ಮಕ್ಕಳಲ್ಲಿ ಸಹ ಅದು ಬೆಳೆಯುತ್ತದೆ. ಇಂದು ಇಂಟೀರಿಯರ್ ಡಿಸೈನರ್ ನಿಮ್ಮ ಮನೆಯಲ್ಲಿ ವಿಶ್ವಕೋಶಗಳನ್ನು ತಂದಿಡಿ. ಅದರಿಂದ ಮನೆ ನೀಟಾಗಿ ಕಾಣುವುದಲ್ಲದೆ ನಿಮ್ಮ ಘನತೆ ಹೆಚ್ಚುತ್ತದೆ ಎಂದು ಸಲಹೆ ನೀಡಬಹುದು. ಅಷ್ಟಾದರೆ ಏನು ಉಪಯೋಗ ? ಹಾಗಾದರೂ ಪುಸ್ತಕ ಮನೆಯಲ್ಲಿದ್ದರೆ ಮಕ್ಕಳ ಕಣ್ಣಿಗೆ ಬಿದ್ದು ಅವರು ಓದುವ ಸಾಧ್ಯತೆ ಇರುತ್ತದೆ ಎನ್ನಬಹುದು ಎನ್ನುತ್ತಾರೆ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ.

ಪುಸ್ತಕಗಳು ಮನೆಯ ಸಂಪತ್ತು
ಜನಸಂಖ್ಯೆ ಆಧರಿಸಿ ಹೇಳುವುದಾದರೆ ಮನೆಯಲ್ಲಿ ಗ್ರಂಥ ಸರಸ್ವತಿ ಇಟ್ಟುಕೊಂಡವರ ಸಂಖ್ಯೆ ಕಡಿಮೆ. ಓದಿನ ಬಗ್ಗೆ ಆಸಕ್ತಿ ಉಳ್ಳವರಿಗೆ ಮಾತ್ರ ಕೈಗೆ ಎಟಕುವಂತೆ ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ನೀಡುವ ಮೂಲಕ ಇನ್ನಷ್ಟು ಜನಪ್ರಿಯಗೊಳಿಸಬಹುದು. ಪುಸ್ತಕಗಳಲ್ಲಿ ಹಳೆಯ ಚಿರಂಜೀವಿ ಸ್ವರೂಪದ ಸಾಹಿತಿಗಳು, ಚಿಂತಕರು ಇರುತ್ತಾರೆ. ವರ್ತಮಾನದ ಖ್ಯಾತನಾಮರೂ ಇರುತ್ತಾರೆ. ಭವಿಷ್ಯವನ್ನು ನಿರ್ದೇಶಿಸುವ ಶಕ್ತಿ ಕೂಡ ಇವರ ಬರಹ, ಚಿಂತನೆಗಿರುತ್ತದೆ. ಏಕಾಂಗಿಯಾದವರಿಗೆ ಅತ್ಯಂತ ಹತ್ತಿರವಾದದ್ದು ಮತ್ತು ಮನೆಯ ಆಸ್ತಿ ಕೂಡ ಪುಸ್ತಕ ಎನ್ನುತ್ತಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ.

ಬಿ.ವಿ ಕಾರಂತರ ವಾಚನಾಲಯ
ಮನೆಯಲ್ಲಿ ಗ್ರಂಥಾಲಯ ಹೇಗಿರಬೇಕು ಎಂಬುದಕ್ಕೆ ರಂಗಕರ್ಮಿ, ದಿವಂಗತ ಬಿ.ವಿ ಕಾರಂತರ ಮನೆ ಉದಾಹರಣೆ. ಬೆಂಗಳೂರಿನ ಗಿರಿನಗರದಲ್ಲಿನ ಅವರ ನಿವಾಸದಲ್ಲಿ ಅತ್ಯಮೂಲ್ಯ ಪುಸ್ತಕಗಳ ಬೃಹತ್ ಭಂಡಾರವೇ ಇದೆ. ನಾಟಕ, ಸಿನಿಮಾ, ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ೧೫೦೦ಕ್ಕೂ ಹೆಚ್ಚು ಪುಸ್ತಕಗಳು ಅವರ ಮನೆಯನ್ನು ಅಲಂಕರಿಸಿವೆ. ಬಿ.ವಿ ಕಾರಂತ ರಂಗಪ್ರತಿಷ್ಠಾನದ ಅಡಿಯಲ್ಲಿ ಮನೆಯ ಎರಡು ಅಂತಸ್ತುಗಳ ತುಂಬ ಬೆಲೆ ಕಟ್ಟಲಾಗದ ಅಮೂಲ್ಯ ಗ್ರಂಥಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಗ್ರಂಥಾಲಯದ ಸದಸ್ಯರಾಗಿ ಯಾರು ಬೇಕಾದರೂ ಪುಸ್ತಕಗಳನ್ನು ಓದಿ ಉಪಯೋಗಪಡೆದುಕೊಳ್ಳಬಹುದು. ಆದರೆ ಮನೆಗೆ ಕೊಂಡೊಯ್ಯುವಂತಿಲ್ಲ.ಕಾರಂತರ ಪತ್ನಿ ಪ್ರೇಮಾ ಕಾರಂತ ಸರಕಾರ ಮಾಡದಿದ್ದ ಕೆಲಸವನ್ನು ಮಾಡಿದ್ದಾರೆ. ಅಧ್ಯಯನ ಸಂಶೋಧನೆ ಮಾಡಬಯಸುವವರಿಗೆ ಇದೊಂದು ಉಪಯುಕ್ತ ಕೇಂದ್ರ.ನಾಟಕಗಳು ಮತ್ತು ರಂಗಭೂಮಿಯ ಕಲೆಯ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ಸಿಗುತ್ತದೆ. ವಿಪರ್ಯಾಸ ಏನೆಂದರೆ ಒಂದು ನರಪಿಳ್ಳೆಯೂ ಈ ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುತ್ತಿಲ್ಲ ಎನ್ನುತ್ತಾರೆ ಪ್ರೇಮಾ ಕಾರಂತ.

( ೨೦೦೬ ಆಗಸ್ಟ್ ೧೨ರಂದು ವಿಜಯ ಕರ್ನಾಟಕದ ಗೃಹ ವಿಜಯ ವಿಭಾಗದಲ್ಲಿ ಪ್ರಕಟವಾದ ಮನೆಯೇ ಗ್ರಂಥಾಲಯ ಲೇಖನದ ಮೊದಲ ಕಂತು )

No comments:

Post a Comment