Monday 21 December 2009

ಕೆ.ಆರ್.ಮಾರುಕಟ್ಟೇಲಿ ಕೇರ್ ಆಫ್ ಫುಟ್‌ಪಾತ್ ಆದೋರ್‍ಯಾರು ?


ಕೃಷ್ಣರಾಜೇಂದ್ರ ಮಾರುಕಟ್ಟೆ !
ಹೀಗಂದ್ರೆ ಯಾವ್ದಪ್ಪಾ ಅಂತ ಬಹುಶಃ ಯೋಚಿಸಬಹುದು. ಆದರೆ ಸಿಟಿ ಮಾರ್ಕೆಟ್ ಅಥವಾ ಕೆ.ಆರ್. ಮಾರುಕಟ್ಟೆ ಎಂದರೆ ಪ್ರತಿಯೊಬ್ಬ ಬೆಂಗಳೂರಿಗನೂ ತೋರಿಸ್ತಾನೆ. ಅದನ್ನು ಭಾರತದ ಸಾಂಪ್ರದಾಯಿಕ ಮಾರುಕಟ್ಟೆ ಅಂತಾರೆ. ಶತಮಾನಗಳಿಂದ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಕೆ.ಆರ್.ಮಾರುಕಟ್ಟೆ ನಿತ್ಯ ಲಕ್ಷಾಂತರ ಗ್ರಾಹಕರ ಆಕರ್ಷಕ ಸಂತೆ. ಇಲ್ಲಿಯೂ ಶಾಪಿಂಗ್ ಮಾಲ್‌ಗಳಲ್ಲಿಯೂ ನಡೆಯುವುದೊಂದೇ ವ್ಯಾಪಾರ ಆದ್ರೂ ಅಜಗಜಾಂತರ ವ್ಯತ್ಯಾಸ ಇದೆ. ಅದರ ಅನುಭವ ನಿಮಗೆಲ್ಲರಿಗೂ ಆಗಿರಬಹುದು. ಅಂತಹ ಟಿಪಿಕಲ್ ಇಂಡಿಯನ್ ಶೈಲಿಯ ಕೆ.ಆರ್. ಮಾರುಕಟ್ಟೆಯ ಒಳಗಿನ ಸುಳಿ ಮೇಲ್ನೋಟಕ್ಕೆ ಸರಳ, ಆದರೆ ಒಂದಕ್ಕೊಂದು ವಿಭಿನ್ನ. ನಂಬಲೂ ಕಷ್ಟವಾಗುವ ವೈಚಿತ್ರ್ಯಗಳ ಬಜಾರ್ ಇದು. ಒಂದು ಕಡೆ ಸ್ವಾದ, ಮತ್ತೊಂದು ಕಡೆ ಖೇದ..ಒಂದು ಮೂಲೆಯಲ್ಲಿ ಗಿಜಿಗಿಜಿ ಜನರಿದ್ದರೆ ಮತ್ತೊಂದು ಮೂಲೆಯಲ್ಲಿ ಏನಿಟ್ಟರೂ ಭಣ..ಭಣ....! ಏನಿದರ ರಹಸ್ಯ ? ಹಾಗಾದರೆ ಬನ್ನಿ ಬಜಾರ್ ಸುತ್ತಿ ಬರೋಣ...
ಕೆ.ಆರ್.ಮಾರುಕಟ್ಟೆ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರ ಮಾತ್ರವಲ್ಲ, ಇಲ್ಲಿನ ಫುಟ್‌ಪಾತುಗಳೇ ಸಾವಿರಾರು ಮಂದಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಜೀವನಕ್ಕೊಂದು ದಾರಿ ಮಾಡಿಕೊಟ್ಟಿದೆ. ಈ ಸಂಕೀರ್ಣದಲ್ಲಿ ೧೮೮೧ ಅಂಗಡಿ ಮತ್ತು ಮಳಿಗೆಗಳಿವೆ. ಮೊದಲ ಮಹಡಿ, ನೆಲ ಅಂತಸ್ತು, ಮೇಲ್ಮಹಡಿ ಅಂತ ಮೂರು ಅಂತಸ್ತುಗಳಲ್ಲಿ ಇವು ಹರಡಿವೆ. ಪಕ್ಕದಲ್ಲೇ ಮಟನ್ ಮಾರ್ಕೆಟ್ ಇದೆ. ಅಂದಹಾಗೆ ಇಲ್ಲಿ ಅಂಗಡಿಗಳಿಗೆ ಬಾಡಿಗೆ ಎಷ್ಟಿರುತ್ತೆ ಗೊತ್ತೇ ?
೩೦೦ರೂ. ಬಾಡಿಗೆ, ಬಾಕಿ ೨.೫೯ ಕೋಟಿ !
ನೆನಪಿಡಿ..ಇದು ಬೆಂಗಳೂರಿನ ಹೃದಯ ಭಾಗ ಎನ್ನಿಸಿಕೊಂಡಿರುವ ಪ್ರದೇಶ. ಲಕ್ಷಾಂತರ ಜನ ನಿತ್ಯ ಇಲ್ಲಿ ಓಡಾಡುತ್ತಾರೆ. ಏನಿಟ್ಟರೂ ಸೇಲಾಗುವ ಮಹತ್ವದ ಬಿಸಿನೆಸ್ ಪಾಯಿಂಟ್. ಮೆಜೆಸ್ಟಿಕ್‌ನಿಂದ ಹದಿನೈದು ಕಿ.ಮೀ ಆಚೆಗೂ ಸಣ್ಣ ಸಂಗಡಿಗೆ ಮೂರ್‍ನಾಲ್ಕು ಸಾವಿರ ರೂ. ಬಾಡಿಗೆ ಇರುತ್ತೆ. ಹೀಗಿದ್ದರೂ ಕೆ.ಆರ್.ಮಾರುಕಟ್ಟೆಯಲ್ಲಿ ಮಾತ್ರ ಈಗಲೂ ಮುನ್ನೂರು ರೂ. ಬಾಡಿಗೆ ಚಾಲ್ತಿಯಲ್ಲಿದೆ ! ಅಂದರೆ ದಿನಕ್ಕೆ ಹತ್ತು ರೂಪಾಯಿ. ಮುನ್ನೂರು ರೂ.ಗಳಿಂದ ಆರಂಭವಾಗಿ ನಾನ್ನೂರು, ಐನೂರು, ಏಳು ನೂರು ಅಂತ ಸಾಗುತ್ತದೆ. ಮೂರು ಸಾವಿರ ರೂ.ಗಿಂತ ಹೆಚ್ಚಿನ ಬಾಡಿಗೆಯೇ ಇಲ್ಲಿಲ್ಲ. ಹೀಗಿದ್ದರೂ ಇಲ್ಲಿನ ವ್ಯಾಪಾರಿಗಳಲ್ಲಿ ಬಹುತೇಕ ಮಂದಿಗೆ ಬಾಡಿಗೆ ಕಟ್ಟಲೂ ದುಡ್ಡಿಲ್ಲವಂತೆ.ಬೇಕಾದರೆ ನೋಡಿ. ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಗೆ ಕೆ.ಆರ್.ಮಾರುಕಟ್ಟೆಯ ವರ್ತಕರಿಂದಲೇ ಬರಬೇಕಾಗಿರುವ ಬಾಡಿಗೆಯ ಬಾಕಿ ಮೊತ್ತ ೨.೫೯ ಕೋಟಿ ರೂ. !
ಅಂದಹಾಗೆ ಬಾಡಿಗೆ ಈ ರೀತಿ ಅತ್ಯಂತ ಅಗ್ಗವಾಗಲು ಕಾರಣ ? ಕಳೆದ ಹನ್ನೊಂದು ವರ್ಷಗಳಿಂದ ಬಾಡಿಗೆಯನ್ನೇ ಪರಿಷ್ಕರಿಸಿಲ್ಲ. ತಲ ತಲಾಂತರಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದ ಕುಟುಂಬಗಳಿಗೆ ಪುನರ್ವಸತಿ ಸಲುವಾಗಿ ಹೊಸ ಕಟ್ಟಡಗಳನ್ನು ಕಟ್ಟಿಸಿಕೊಟ್ಟು ಬಿಡಲಾಯಿತು. ಅಷ್ಟೇ. ನಂತರ ನಾಮ್‌ಕೇವಾಸ್ತೆ ಉಸ್ತುವಾರಿ ಮಾತ್ರ ಇಲ್ಲಿದೆ. ಅಕ್ಷರಶಃ ಸಂತೆಯೇ ಆಗಿರುವ ಮಾರುಕಟ್ಟೆಯಲ್ಲಿ ಶುಚಿತ್ವಕ್ಕೆ ಎಳ್ಳಷ್ಟೂ ಆಸ್ಪದವಿಲ್ಲ. ಒಳಗೊಮ್ಮೆ ಹೊಕ್ಕರೆ ಮನೆಗೆ ವಾಪಸಾಗುವ ಹೊತ್ತಿಗೆ ಇದ್ದಬದ್ದ ರೋಗಗಳೆಲ್ಲ ಮುತ್ತಿಕೊಳ್ಳುವ ಭೀತಿ ಯಾರಿಗಾದರೂ ಉಂಟಾಗದಿರದು. ಆದರೆ ಶಾಪಿಂಗ್ ಮಾಲ್‌ಗಳಲ್ಲಿ ನಿಮಗೆ ಯಾರೊಬ್ಬರ ಹತ್ತಿರ ಕೂಡ ಚೌಕಾಶಿ ಮಾಡಲು ಆಗುವುದಿಲ್ಲ. ಇಲ್ಲಾದರೆ ರೇಟೂ ಕಡಿಮೆ, ಮತ್ತೂ ಚೌಕಾಸಿಗೆ ಇಳಿಯಬಹುದು. ಇದೊಂದೇ ಕಾರಣಕ್ಕೆ ಮಧ್ಯಮವರ್ಗದ ಜನ ಇಲ್ಲಿಗೆ ದೌಡಾಯಿಸುತ್ತಾರೆ.
ಕಡಿಮೆ ಬಂಡ್ವಾಳ ಸಾಕು
ಹಾಗೆ ಧಾವಿಸುವ ಜನ ಸಾಗರ ಅತಿ ಹೆಚ್ಚು ವ್ಯಾಪಾರ ನಡೆಸುವುದು ಮಾತ್ರ ಕೆ.ಆರ್.ಮಾರುಕಟ್ಟೆಯ ಫುಟ್‌ಪಾತ್‌ಗಳಲ್ಲಿ ಕುಂತು ನಾನಾ ಅಗತ್ಯ ವಸ್ತುಗಳನ್ನು, ಕಾಯಿಪಲ್ಲೆಗಳನ್ನು ಹರವಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಿಗಳ ಬಳಿ ! ಹೀಗಾಗಿ ಒಳಗೆ ಕುಳಿತು ನೊಣ ಹೊಡೆಯುತ್ತಿರುವವರೂ ಫುಟ್‌ಪಾತಿಗೆ ಬಂದು ಸಾಮಾನುಗಳನ್ನು ಹರಡಿ ಭರ್ಜರಿ ವ್ಯಾಪಾರ ಮಾಡ್ತಾರೆ. ಯಾವ ಬಾಡಿಗೆ ಅಥವಾ ಸುಂಕದ ರಗಳೆಯೇ ಇಲ್ಲದೆ, ಮಾರುಕಟ್ಟೆಯ ಫುಟ್‌ಪಾತಿನಲ್ಲಿ ಮಾರಾಟಕ್ಕೆ ಕುಳಿತುಕೊಳ್ಳುವವರಿಗೆ ಇರುವ ಏಕೈಕ ಅನುಕೂಲ ಏನೆಂದರೆ, ಕಡಿಮೆ ಬಂಡವಾಳ ಸಾಕು. ವ್ಯಾಪಾರ ಅಂತೂ ಗ್ಯಾರಂಟಿ. ಹಾಗಾದರೆ ಅವರೆಷ್ಟು ಸಂಪಾದಿಸುತ್ತಾರೆ ? ಯಾವುದೇ ಸಾಮಾನಿಟ್ಟರೂ ದಿನಕ್ಕೆ ಮುನ್ನೂರು, ಐನೂರು ಅಥವಾ ಅದೃಷ್ಟ ಖುಲಾಯಿಸಿದರೆ ದಿನಕ್ಕೆ ಸಾವಿರ ರೂ. ಆದಾಯ ಮಾಡಿದವರಿದ್ದಾರೆ. ಇಲ್ಲಿ ತರಕಾರಿ ಮಾರಾಟ ಮಾಡುವವರಿಗೆ ಮಾತ್ರ ಅಂತಹ ಸಂಪಾದನೆಯಾಗುತ್ತಿಲ್ಲ. ಹಣ್ಣು ಹಣ್ಣು ಮುದುಕಿಯರೂ ಹಣ್ಣುಗಳನ್ನಿಟ್ಟು ಸುಡುಬಿಸಿಲಿಗೆ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅವರೆಲ್ಲರ ಹಿಂದೆ ಒಂದೊಂದು ನೋವು, ಯಾತನೆಯ ಕಥೆ,ವ್ಯಥೆಯಿದೆ. ಆದರೆ ಉಳಿದವರಿಗೆ ಮೋಸವಿಲ್ಲ. ಆದರೆ ಈ ಮಾರುಕಟ್ಟೆಯಲ್ಲೂ ಎಲ್ಲೆಡೆ ಕಾಣಸಿಗುವಂತೆ ಬೇಕಾದಂತೆ ಯಾಮಾರಿಸುವವರೂ ಇದ್ದಾರೆ. ಹುಷಾರ್.


ಮೊಬೈಲ್ ಕವರಿನಲ್ಲಿ ನೂರುಲ್ಲಾ ಡೋಂಟ್ ವರಿ


ಅವರ ಹೆಸರು ನೂರುಲ್ಲಾ ಮಹಮ್ಮದ್ ಅಂತ !
ಪ್ರತಿ ಭಾನುವಾರ ಕೆಲಸಕ್ಕೆ ರಜೆ ಹಾಕಲ್ಲ. ಸೀದಾ ಕೆ.ಆರ್.ಮಾರುಕಟ್ಟೆಗೆ ಬಂದು ಫುಟ್‌ಪಾತಲ್ಲಿ ಕುಂತು ತಮ್ಮ ಜೋಳಿಇಗೆ ಬಿಡಿಸುತ್ತಾರೆ. ಅದರೊಳಗಿನಿಂದ ಬಳೆಗಳನ್ನು ಇಡಲು ಹೆಂಗಳೆಯರು ಬಳಸುವ ತಂತಿಯ ಸ್ಟ್ಯಾಂಡ್‌ಗಳನ್ನು ಹೊರತೆಗೆದು ಒಂದಕ್ಕೊಂದು ಸಿಕ್ಕಿಸುತ್ತಾರೆ. ಮೊಬೈಲ್ ಕವರ್‌ಗಳ ಪ್ಯಾಕೆಟ್ಟುಗಳನ್ನು ತೆಗೆದು ಓರಣವಾಗಿ ಜೋಡಿಸುತ್ತಾರೆ. ಸೂಪರ್ ಸ್ಟಿಕ್‌ಗಳನ್ನು ಹರವಿಡುತ್ತಾರೆ. ಹಾಗಂದರೆ ಒಂದು ವಿಧದ ಗಮ್. ಪ್ಲಾಸ್ಟಿಕ್ ಬಕೆಟ್ ಒಡೆದರೆ, ಪಾತ್ರ ತೂತಾದರೆ ಅದನ್ನು ಮೆತ್ತಿ ಸರಿಪಡಿಸಬಹುದು. ಮತ್ತೆ ಮದ್ದು ಸಿಂಪಡಿಸುವ ಸ್ಪ್ರೇಯರ್‌ಗಳನ್ನು ತಂದಿಡುತ್ತಾರೆ.
ಅಂದಹಾಗೆ ನೂರುಲ್ಲಾ ರಾಮನಗರದವರು. ಕಳೆದ ಆರು ವರ್ಷಗಳಿಂದ ಮೈಸೂರು ಬ್ಯಾಂಕ್ ವೃತ್ತದ ಬಳಿ ಬೀದಿ ಬದಿಯ ವ್ಯಾಪಾರಿ. ಅದಕ್ಕೂ ಮುನ್ನ ಮಾಲೂರು ಮುಂತಾದ ಕಡೆ ಮಸೀದಿಗಳಲ್ಲಿ ಕೆಲಸ ಮಾಡುತ್ತಿದ್ದರಂತೆ. ಅನಂತರ ಹೆಚ್ಚಿನ ಸಂಪಾದನೆ ಮಾಡುವ ದೃಷ್ಟಿಯಿಂದ ಸೀದಾ ಬೆಂಗಳೂರಿನ ಅವೆನ್ಯೂ ರಸ್ತೆಗೆ ಬಂದಿಳಿದು ಬೆಂಕಿಪೊಟ್ಟಣ ಮಾರಾಟ ಮಾಡಲು ಶುರು ಮಾಡಿದರು. ಆಗ ೩೦೦ ರೂ. ಬಂಡವಾಳ ಹಾಕಿದ್ದರಂತೆ. ಕ್ರಮೇಣ ಮೊಬೈಲ್ ಕವರ್, ಸೂಪರ್ ಸ್ಟಿಕ್, ಬೆಲ್ಟು, ಬಳೆ ಸ್ಟ್ಯಾಂಡ್ ಅಂತ ವ್ಯಾಪಾರ ಮಾಡಿದರು. ಈ ಆರು ವರ್ಷದಲ್ಲಿ ಆರಾಮವಾಗಿದ್ದೇನೆ. ಕನಿಷ್ಠ ೫೦ ಸಾವಿರ ರೂ. ಉಳಿತಾಯ ಮಾಡಿದ್ದೇನೆ..ಫುಟ್‌ಪಾತ್ ವ್ಯಾಪಾರ ಮಾಡೋವ್ರು ಹೆಚ್ಚು ಬಂಡವಾಳ ಹಾಕಬೇಕಿಲ್ಲ. ಬೆಂಗಳೂರಲ್ಲಿ ಫುಟ್‌ಪಾತಲ್ಲಿ ದಿನಕ್ಕೆ ಮುನ್ನೂರು ರೂಪಾಯಿ ಈಸಿಯಾಗಿ ಸಂಪಾದನೆ ಮಾಡಬಹುದು. ತರ್‍ಕಾರಿ ಮಾರೋವ್ರಿಗೆ ಅಷ್ಟೊಂದು ಇರ್‍ಲಿಕ್ಕಿಲ್ಲ..ಅಂತಾರೆ ನೂರುಲ್ಲ !

No comments:

Post a Comment