Monday 28 December 2009

ವರ್ಲ್ಡ್ ಸ್ಪೇಸ್ ವಿದಾಯ ಗೀತೆ






ಬಾನುಲಿಯಲ್ಲಿ ಸುಮಧುರ ಗೀತೆಗಳನ್ನು ಆಲಿಸುತ್ತ ಮೈಮರೆಯುವ ಲಕ್ಷಾಂತರ ಶ್ರೋತೃಗಳಿಗೆ ಇದೊಂದು ಕಹಿ ಸುದ್ದಿ. ಉಪಗ್ರಹ ಆಧಾರಿತ ರೇಡಿಯೊ ವರ್ಲ್ಡ್‌ಸ್ಪೇಸ್, ಕೇವಲ ಇನ್ನೆರಡು ದಿನಗಳಲ್ಲಿ ಸ್ತಬ್ಧವಾಗಲಿದೆ.
ಜಾಹೀರಾತುಗಳ ಬ್ರೇಕ್ ಇಲ್ಲದೆ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಕೇಳುಗರ ಮನತಣಿಸುತ್ತಿದ್ದ ವರ್ಲ್ಡ್ ಸ್ಪೇಸ್ ರೇಡಿಯೊದ ಪೆಟ್ಟಿಗೆಯನ್ನು ಇನ್ನುಮುಂದೆ ಷೋಕೇಸಿನಲ್ಲಿಡಬೇಕಷ್ಟೇ.
ಡಿಸೆಂಬರ್ ೩೧ರ ಮಧ್ಯರಾತ್ರಿಯಿಂದ ರೇಡಿಯೊ ವರ್ಲ್ಡ್ ಮೌನವಾಗಲಿದೆ. ಯಾಕೆಂದರೆ ವರ್ಲ್ಡ್ ಸ್ಪೇಸ್ ಇಂಡಿಯಾದ ಮಾತೃಸಂಸ್ಥೆ ವರ್ಲ್ಡ್ ಸ್ಪೇಸ್ ದಿವಾಳಿಯಾಗಿದೆ.
೨೦೦೮ರ ಅಕ್ಟೋಬರ್‌ನಿಂದ ದಿವಾಳಿ ಸ್ಥಿತಿಯಲ್ಲಿದ್ದ ವರ್ಲ್ಡ್ ಸ್ಪೇಸ್‌ನ್ನು ಖರೀದಿಸಲು ಮುಂದೆ ಬಂದಿರುವವರು, ಭಾರತದಲ್ಲಿರುವ ಕಂಪನಿಯ ಆಸ್ತಿ, ಬಿಸಿನೆಸ್ ಹಾಗೂ ಚಂದಾವನ್ನು ಖರೀದಿಸಲು ಸಿದ್ಧರಿಲ್ಲ. ಹೀಗಾಗಿ ಭಾರತದಲ್ಲಿ ತನ್ನೆಲ್ಲ ಪ್ರಸಾರವನ್ನು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಕಂಪನಿಯ ಅಕಾರಿಗಳು ಲಭ್ಯರಿಲ್ಲ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿರುವ ವರ್ಲ್ಡ್ ಸ್ಪೇಸ್ ಕಚೇರಿಯಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಕಾಣಿಸುತ್ತಿಲ್ಲ. ಬದಲಿಗೆ ಎಲ್ಲರ ಮುಖದಲ್ಲೂ ಅವ್ಯಕ್ತ ಚಿಂತೆ. ಅವರವರದ್ದೇ ಧಾವಂತ. ಇನ್ನು ಕೆಲವರ ಮೊಬೈಲ್‌ಗಳಿಗೆ ಬರುವ ಕರೆಗಳಲ್ಲಿ ಅದೇ ಪ್ರಶ್ನೆ. ‘ ಕಂಪ್ನಿ ಮುಚ್ಚಿಕೊಳ್ಳುತ್ತಿದೆಯಂತೆ ಹೌದಾ ? ಬೇರೆ ಯಾರಾದರೂ ಖರೀದಿಸುತ್ತಾರೆಯೇ ? ಅಂತ.
ಹೀಗಾಗಿ ಇಷ್ಟಪಟ್ಟು ಕೆಲಸ ಮಾಡುತ್ತಿದ್ದ ರೇಡಿಯೊ ನಿಲಯ, ಸ್ಟೂಡಿಯೊದಲ್ಲೀಗ ಭಣ ಭಣ. ಸ್ವಾಗತಕಾರಿಣಿಯ ಸ್ಥಾನ ಖಾಲಿ. ದ್ವಾರದಲ್ಲಿ ವಾಚ್‌ಮನ್ ನಿರ್ಲಿಪ್ತನಂತೆ ಬಂದವರನ್ನು ಹಿಂದಿಯಲ್ಲಿ ಮಾತನಾಡಿಸಿ ಕಳುಹಿಸುತ್ತಿದ್ದಾನೆ. ಗೋಡೆಗೆ ಹಚ್ಚಿದ ನೋಟಿಸ್‌ನ್ನು ತೋರಿಸ್ತಾನೆ..ಬೇಕಾದರೆ ಪರಿಹಾರಕ್ಕೆ ಸಲ್ಲಿಸುವ ಅರ್ಜಿಯನ್ನೂ ಉಚಿತವಾಗಿ ಕೊಡುತ್ತಾನೆ.
ಅಮೆರಿಕದಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತ ಬೆಂಗಳೂರಿನಲ್ಲಿ ರೇಡಿಯೊ ನಿಲಯವೊಂದರ ಶೆಟರ್‌ನ್ನು ಹೀಗೆ ಎಳೆದುಕೊಂಡಿತು ನೋಡಿ. ಡೀಲರ್‌ಗಳಲ್ಲಿ ಬಹುತೇಕ ಮಂದಿ ಈಗಾಗಲೇ ಈ ಸ್ಯಾಟಲೈಟ್ ರೇಡಿಯೊ ಜತೆಗಿನ ವ್ಯವಹಾರವನ್ನು ಕೈ ಬಿಟ್ಟಿದ್ದಾರೆ. ಅಳಿದುಳಿದವರಿಗೂ ಹೆಚ್ಚಿನ ಮಾಹಿತಿ ಇಲ್ಲ.
ಆ ದಿನಗಳ ಅಲೆ : ಆದರೆ ವರ್ಲ್ಡ್ ಸ್ಪೇಸ್‌ನ ಆರಂಭ ಬೆಂಗಳೂರು ಸೇರಿದಂತೆ ಎಲ್ಲೆಡೆ ಬಾನುಲಿ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಸುಮಾರು ೪೦ ಪ್ರತ್ಯೇಕ ಚಾನಲ್‌ಗಳೊಂದಿಗೆ ಪ್ರಸಾರವಾಗುತ್ತಿದ್ದ ಸಂಗೀತಮಯ ರೇಡಿಯೊ ಇದಾಗಿತ್ತು. ಲಕ್ಷಗಟ್ಟಲೆ ಚಂದಾದಾರರು ವರ್ಲ್ಡ್ ಸ್ಪೇಸ್‌ಗೆ ಆಕರ್ಷಿತರಾಗಿದ್ದರು. ಆದರೆ ಅವರನ್ನೆಲ್ಲ ನಡು ನೀರಿನಲ್ಲಿ ಕೈಬಿಟ್ಟಂತಾಗಿದೆ. ಇತ್ತೀಚೆಗೆ ಚಂದಾದಾರರಾದವರೂ ಇದ್ದಾರೆ. ಇವರಿಗೆಲ್ಲ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೆ ಒಳಿತಾಗುತ್ತಿತ್ತು ಅಲ್ಲವೇ. ಈಗ ಅತಂತ್ರರಾಗಿರುವ ಚಂದಾದಾರರಿಗೆ ಕಂಪನಿ ಇ-ಮೇಲ್ ಮಾಡಿ ಕೈತೊಳೆದುಕೊಂಡಿದೆ. ‘ ಅಮೆರಿಕದ ದಿವಾಳಿತನದ ಕಾನೂನಿನ ಅನ್ವಯ ಪರಿಹಾರ ಪಡೆದುಕೊಳ್ಳಬಹುದು ’ ಎಂದು ತಿಳಿಸಿದೆ. ಆದರೆ ಯಾವಾಗ ಹಾಗೂ ಎಷ್ಟು ಪರಿಹಾರ ಸಿಗಲಿದೆ ? ಹಾಗಾದರೆ ಸ್ತಬ್ಧವಾಗಲಿರುವ ರೇಡಿಯೊವನ್ನು ಕಂಪನಿ ಹಿಂತೆಗೆದುಕೊಳ್ಳಲಿದೆಯೇ ? ಈ ಪ್ರಶ್ನೆಗಳಿಗೆ ನಿಮಗೆಲ್ಲೂ ಉತ್ತರ ಸಿಗಲ್ಲ.
ಕನ್ನಡದಲ್ಲಿ ರೇಡಿಯೊ ಸ್ಪರ್ಶ, ಮರಾಠಿಯಲ್ಲಿ ಸುರಭಿ, ತೆಲುಗಿನಲ್ಲಿ ಸ್ಪಂದನ, ಮಲಯಾಳಂನಲ್ಲಿ ಮಾಧುರಿ, ತಮಿಳಿನಲ್ಲಿ ಕೆಎಲ್ ರೇಡಿಯೊ, ಬಿಬಿಸಿ ನ್ಯೂಸ್, ಭಾರತೀಯ ಶಾಸ್ತ್ರೀಯ ಸಂಗೀತ, ಹಿಂದಿ ಚಲನಚಿತ್ರ, ರೇಡಿಯೊ ಆರ್ಟ್ ಆಫ್ ಲಿವಿಂಗ್ ಆಧ್ಯಾತ್ಮ ಅಂತ ಹಲವು ಕಾರ್ಯಕ್ರಮಗಳನ್ನು ನಿಲಯ ನೀಡುತ್ತಿತ್ತು. ಕನ್ನಡದ ಚಾನಲ್ ಸ್ಪರ್ಶದಲ್ಲಿ ಕನ್ನಡ ಸಿನಿಮಾ, ಸಂಗೀತ ಲೋಕಕ್ಕೆ ಸಂಬಂಸಿ ವಿಶೇಷ ಸರಣಿ ಕಾರ್ಯಕ್ರಮಗಳು ಬಿತ್ತರವಾಗಿತ್ತು. ಚಂದಾದಾರರಾಗುವವರು ೧,೭೯೦ ರೂ.ಗಳಿಂದ ಅಂದಾಜು ೨ ಸಾವಿರ ರೂ.ತನಕ ಖರ್ಚು ಮಾಡಿ ಪ್ರತ್ಯೇಕ ರೇಡಿಯೊ ಖರೀದಿಸಿದರೆ ಸಾಕು. ದಿನವಿಡೀ ಸುಶ್ರಾವ್ಯ ನಾದಲೋಕದಲ್ಲಿ ವಿಹರಿಸಬಹುದಿತ್ತು. ಪಾಶ್ಚಾತ್ಯ ಸಂಗೀತವನ್ನೂ ಇದರಲ್ಲೇ ಆಸ್ವಾದಿಸಬಹುದಿತ್ತು. ಬಾನುಲಿ ಸಂಗೀತ ಪ್ರಿಯರಿಗಂತೂ ವರ್ಷಾಂತ್ಯಕ್ಕೆ ಬ್ಯಾಡ್ ನ್ಯೂಸ್.

No comments:

Post a Comment