Friday 17 February 2012

ನಿಜವಾದ ಕರ್ಮಯೋಗಿ..

ಎಷ್ಟೋ ಸಲ ಮನಸ್ಸಿಗೆ, ಶರೀರಕ್ಕೆ ಜಡತ್ವ ಆವರಿಸಿದಾಗ ನಮ್ಮ ನಾಡಿನ ಹೆಮ್ಮೆಯ ಶತಾಯುಷಿ ಕರ್ಮಯೋಗಿಯನ್ನು ನೆನಪಿಸಿಕೊಳ್ಳುತ್ತೇನೆ. ಅವರು ಯಾರೆಂಬುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು.. ನಿಮ್ಮ ಊಹೆ ನಿಜ. ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿ. ಅವರ ಬಗ್ಗೆ ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲ ವರ್ಷಗಳ ಹಿಂದೆ ಲೇಖನ ಪ್ರಕಟವಾಗಿತ್ತು. ಅದರ ಸಾರವನ್ನು ನಿಮ್ಮ ಮುಂದಿಡುತ್ತೇನೆ.
- ಸಿದ್ಧ ಗಂಗಾ ಮಠದ ಶ್ರೀ. ಶಿವಕುಮಾರ ಸ್ವಾಮೀಜಿಯವರು ಯಾವುದೇ ಮತಕ್ಕಿಂತ ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ಅವರು ಬಡವರು, ಅನಾಥರಿಗೆ ಜ್ಞಾನದ ಬಾಗಿಲುಗಳನ್ನು ತೆರೆದರು. ಜ್ಞಾನದ ಜತೆಗೆ ಅಶನ, ವಸತಿ ಒದಗಿಸಿದರು. ಅವರ ಮಠದಲ್ಲಿ ಕಂಡು ಬಂದ ಚಿತ್ರಣವಿದು.
"ಬುದ್ಧಿ, ಸರಕಾರಿ ಅಧಿಕಾರಿಯೊಬ್ಬರು ನಿಮ್ಮನ್ನು ಭೇಟಿಯಾಗ ಬಯಸುತ್ತಿದ್ದಾರೆ’ ವ್ಯಕ್ತಿಯೊಬ್ಬರು ಸ್ವಾಮೀಜಿಯವರ ಕಿವಿಯ ಬಳಿ ಮೆಲುದನಿಯಲ್ಲಿ ತಿಳಿಸುತ್ತಾರೆ. " ಬುದ್ಧಿ, ನಮ್ಮ ಕಾಲೇಜಿಗೆ ನೀವು ಭೇಟಿ ಕೊಟ್ಟರೆ ಸಂತಸವಾಗುತ್ತದೆ ಎನ್ನುತ್ತಾರೆ ಅಲ್ಲಿಗೆ ಬಂದಿರುವ ವಿದ್ಯಾರ್ಥಿಗಳ ಗುಂಪು, " ಬುದ್ಧಿ, ಜೇವರ್ಗಿಯಿಂದ ಒಂದಷ್ಟು ಮಂದಿ ಬಂದಿದ್ದು, ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿದ್ದಾರೆ, ಬುದ್ಧಿ, ಈವತ್ತು ಪ್ರಸಾದಕ್ಕೆ ಏನು ಮಾಡೋಣ, ಅಂತ ಮಠದ ಅಡುಗೆಯವರು ಭಿನ್ನವಿಸಿಕೊಳ್ಳುತ್ತಾರೆ.
ಕಡತಗಳನ್ನು ಓದುತ್ತ ಮೆಲ್ಲನೆ ತಲೆಯನ್ನೆತ್ತಿ, ಪ್ರೀತಿಯಿಂದ ಮಾತನಾಡಿಸುವ ಸ್ವಾಮೀಜಿ, ಎಲ್ಲರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾರೆ. " ಅಧಿಕಾರಿಗೆ ಕಚೇರಿಯಲ್ಲಿ ಕುಳ್ಳಿರಲು ಹೇಳುತ್ತಾರೆ. ಎಲ್ಲ ಸರಿ ನಾನೀಗ ಬರುತ್ತೇನೆ. ವಿದ್ಯಾರ್ಥಿಗಳೇ ನೀವೆಲ್ಲರೂ ಚೆನ್ನಾಗಿ ಓದುತ್ತಿದ್ದೀರಿ ಎಂದು ಭಾವಿಸಿದ್ದೇನೆ. ನಿಮ್ಮ ಆಯ್ಕೆಯ ವಿಷಯದಲ್ಲಿ ಕಲಿಯಿರಿ, ಇನ್ನು ಜೇವರ್ಗಿಯಿಂದ ಬಂದಿರುವವರನ್ನು ಭೇಟಿಯಾಗೋಣ, ಯಾಕೆಂದರೆ ಅವರು ಬಹುದೂರ ಪ್ರಯಾಣ ಬೆಳೆಸಿ ಮನೆ ಸೇರಬೇಕಾಗಿದೆ..’ ಎನ್ನುತ್ತಾರೆ ಸ್ವಾಮೀಜಿ.. 99ರ ಇಳಿ ವಯಸ್ಸಿನಲ್ಲಿ ಸ್ವಾಮೀಜಿಯವರ ನಿತ್ಯದ ಚಟುವಟಿಕೆಗಳ ಎರಡು ನಿಮಿಷಗಳಿವು. 99ರ ವಯಸ್ಸಿನಲ್ಲಿಯೂ ಅವರು ದಿನಕ್ಕೆ 18 ಗಂಟೆ ದುಡಿಯುತ್ತಾರೆ ! ಈಗ ಅವರ ವಯಸ್ಸು 104 ( ಮುಂದುವರಿಯುವುದು)

1 comment:

  1. 30 ವರ್ಷಕ್ಕೇ ಜೀವನ ಬೇಸರ ಎಂದು ಉತ್ಸಾಹರಹಿತ ಜೀವನ ಸಾಗಿಸುವ ಈಗಿನವರು 104 ವರ್ಷದ ಸ್ವಾಮೀಜಿಯವರನ್ನು ನೋಡಿ ಕಲಿಯುವುದು ಬಹಳವಿದೆ

    ReplyDelete