ಯಾರ ಮನೆಗೂ ಅಂತಸ್ತು, ಐಶ್ವರ್ಯ, ಕೀರ್ತಿಗಳ ಪ್ರದರ್ಶನಕ್ಕಾಗಿ ಹೋಗಕೂಡದು. ಪ್ರೀತಿ, ವಿಶ್ವಾಸಗಳನ್ನು, ಆತ್ಮೀಯತೆಯನ್ನು ಹಂಚಲು ಹೋಗಬಹುದು.
ಅರಿವನ್ನು ಕಳೆದುಕೊಂಡ ಪ್ರತಿ ಸಂದರ್ಭದಲ್ಲೂ ಅಹಂಕಾರ ಪ್ರತಿಷ್ಠಾಪನೆಯಾಗುತ್ತದೆ. ವಿನಯವಂತರಾದ ಪ್ರತಿ ಕ್ಷಣದಲ್ಲೂ ಅರಿವು ನೆಲೆಯೂರುತ್ತದೆ.
ಯಾವತ್ತಿಗೂ ಅಹಂಕಾರ ಜ್ಞಾನವನ್ನು ಬರ ಮಾಡಿಕೊಳ್ಳುವುದಿಲ್ಲ. ಆದರೆ ವಿನಯ ಬರ ಮಾಡಿಕೊಳ್ಳುತ್ತದೆ.
ಎಷ್ಟೋ ಸಲ ಜ್ಞಾನದ ಜತೆಗೆ ಅಹಂಕಾರವೂ ಪ್ರವೇಶಿಸುತ್ತದೆ. ಅದನ್ನು ಅರಿವಿನ ಸಹಾಯದಿಂದ ಹೊರದಬ್ಬಬೇಕು. ಇಲ್ಲವಾಗಿದ್ದರೆ ಅಹಂಕಾರ ದೊಡ್ಡದಾಗಿ ಬೆಳೆದು, ಜ್ಞಾನದ ಪ್ರವೇಶಕ್ಕೆ ಅಡ್ಡಿಯಾಗುತ್ತದೆ.
ಈಗಿನ ಜ್ಞಾನಕ್ಕೆ ಮತ್ತಷ್ಟು ಜ್ಞಾನ ಕೂಡಿಕೊಳ್ಳುವುದು ಅರಿವಿಗೆ ಬರುತ್ತದೆ. ಆದರೆ ಅದರ ಜತೆಗೆ ಅಹಂಕಾರವನ್ನು ಹತ್ತಿರ ಸುಳಿಯಲೂ ಬಿಡಕೂಡದು. ಆಗ ಮಾತ್ರ ಮತ್ತಷ್ಟು ಜ್ಞಾನ ಸೇರಿಕೊಳ್ಳುತ್ತದೆ. ಇಲ್ಲವಾದಲ್ಲಿ ಬೆಳವಣಿಗೆ ಖತಂ.
ಜ್ಞಾನವನ್ನು ಹಂಚುವುದರಿಂದ ಮತ್ತಷ್ಟು ಜ್ಞಾನ ಅದಕ್ಕೆ ಸೇರ್ಪಡೆಯಾಗುತ್ತದೆ. ಜ್ಞಾನದ ಹೆಸರಿನಲ್ಲಿ ಅಜ್ಞಾನ ಕೂಡ ಸೇರಿಕೊಳ್ಳಬಹುದು. ಆದರೆ ಕೊನೆಯಲ್ಲಿ ಉಳಿಯುವುದು ಜ್ಞಾನ ಮಾತ್ರ.
ಜ್ಞಾನ ಯಾರೊಬ್ಬರ ಸ್ವತ್ತಲ್ಲ. ಜ್ಞಾನವನ್ನು ಹಂಚುವುದರಿಂದ ಅದು ನಷ್ಟವಾಗುವುದಿಲ್ಲ. ಮತ್ತೂ ಹೆಚ್ಚುತ್ತದೆ ಎಂಬ ಹಿರಿಯರ ಮಾತು ನೂರಕ್ಕೆ ನೂರು ಸತ್ಯ. ಹಂಚಿದ್ದು ಜ್ಞಾನವಾಗಿದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೆ ಇಲ್ಲ..
ಸ್ನೇಹಿತರೇ,
ನನಗೆ ಎಷ್ಟೋ ಸಲ ಒಂದು ಪ್ರಶ್ನೆ ಪದೇ ಪದೇ ಕಾಡುತ್ತಿರುತ್ತದೆ. ಈ ಜೀವನದ ಗುರಿ ಏನು ? ಕಟ್ಟಕಡೆಗೆ ನನಗೆ ಹೊಳೆಯುವುದು ಸಚ್ಚಾರಿತ್ರ್ಯ. ದುಡ್ಡು ಅಥವಾ ಕೀರ್ತಿ ಕೊಡಲಾಗದ ತೃಪ್ತಿಯನ್ನು ಉತ್ತಮ ಗುಣ ಅಥವಾ ಸಚ್ಚಾರಿತ್ರ್ಯ ನೀಡುತ್ತದೆ. ಸಚ್ಚಾರಿತ್ರ್ಯ ನೀಡುವ ಶಕ್ತಿ ಅತ್ಯುನ್ನತ ಮಟ್ಟದ್ದು, ಅದಕ್ಕೆ ದಣಿವೇ ಇರುವುದಿಲ್ಲ. ಅಲ್ವಾ...
ಕೆಲಸ ಸಿಕ್ಕಿದ್ದಕ್ಕಾಗಿ ಕೃತಜ್ಞತೆಯ ಭಾವ ಇದ್ದಾಗ ಕೆಲಸ ಉತ್ತಮವಾಗುತ್ತದೆ. ಇಲ್ಲದಿದ್ದಾಗ ಗೊಣಗಾಟ, ಅತೃಪ್ತಿ, ಕಳಪೆ ಫಲಿತಾಂಶ ಖಚಿತ.
ಸೋಲಿನಿಂದ ಪಾಠ ಕಲಿತರೆ, ಕಲಿತದ್ದನ್ನು ಅನುಷ್ಠಾನಗೊಳಿಸಿದರೆ ಜೀವನದಲ್ಲಿ ಸೋಲು ಸೋಲೇ ಆಗಿ ಇರುವುದಿಲ್ಲ.
ಸಮ್ಮನಸ್ಸಿಗೆ ಶರಣು
6 months ago
No comments:
Post a Comment