Monday 22 March 2010

ಪ್ರಣಬ್‌ಗೆ ಮುಗಿ ಬಿದ್ದ ಕ್ಯಾಮೆರಾಗಳು..ಯಾಕಿಂಥಾ ಫಜೀತಿ ?


ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು ಬೆಂಗಳೂರಿಗೆ ಆರ್‌ಬಿಐನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಬಂದಿದ್ದರು. (ಮಾ.೨೨) ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಐಶಾರಾಮಿ ರಾಯಲ್ ಗಾರ್ಡೇನಿಯಾ ಹೋಟೆಲ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ತಮ್ಮ ಭಾಷಣ ಇತ್ಯಾದಿ ಮುಗಿದ ನಂತರ ಸಚಿವರು ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಆದರೆ ಆರ್‌ಬಿಐನ ಸಂಯೋಜಕರು ಮಾಧ್ಯಮದವರ ಜತೆ ಪ್ರಣಬ್ ಭೇಟಿ ಬಗ್ಗೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಎಲ್ಲಿ, ಯಾವಾಗ ಸಚಿವರ ಜತೆ ಸಂವಹನ ನಡೆಸಬಹುದು ಎಂಬುದರ ಬಗ್ಗೆ ಪತ್ರಕರ್ತರಲ್ಲಿ ಗೊಂದಲವಿತ್ತು. ಅದಕ್ಕೆ ಸರಿಯಾಗಿ ಆರ್‌ಬಿಐನ ವಕ್ತಾರರೂ ಬೆಬ್ಬೆಬೆಬ್ಬೆ ಉತ್ತರಿಸುತ್ತಿದ್ದರು. ಕೆಲವು ಪತ್ರಕರ್ತರಿಗೆ ಸಚಿವರ ಭಾಷಣದ ಪ್ರತಿ ಸಿಕ್ಕಿತು. ಇನ್ನು ಕೆಲವರಿಗೆ ಅದೂ ಇಲ್ಲ. ಈ ನಡುವೆ ಸಚಿವರು ಸಭಾಂಗಣದಿಂದ ಹೊರ ಬರುತ್ತಿದ್ದುದೇ ತಡ, ನಾನಾ ಚಾನೆಲ್‌ಗಳ ಫೋಟೋಗ್ರಾಫರ್, ಕ್ಯಾಮರಾಮ್ಯಾನ್‌ಗಳು ಬಾಗಿಲಿನ ಬಳಿ ದಂಡುಗಟ್ಟಿದರು. ಎಲ್ಲರಿಗೂ ೫ ನಿಮಿಷವಾದರೂ ಸಚಿವರೊಡನೆ ಮಾತನಾಡುವ ಕಾತರ..ಆ ಸಂದರ್ಭದ ಚಿತ್ರವಿದು.
ಇದಕ್ಕೂ ಮುನ್ನ ಸಮಾರಂಭದಲ್ಲಿಯೂ ಅಷ್ಟೇ. ಪ್ರಣಬ್ ಕುಂತರೆ, ನಿಂತರೆ, ಕನ್ನಡಕ ತೆಗೆದು ಉಜ್ಜಿದರೆ, ಪಕ್ಕದವರ ಹತ್ತಿರ ಏನೋ ಮಾತನಾಡಿದರೆ, ಸ್ವಲ್ಪ ಅಲ್ಲಾಡಿದರೂ ಕ್ಯಾಮರಾಗಳು ಕ್ಲಿಕ್ ಕ್ಲಿಕ್..
ನೋಡಿ..ಹಣಕಾಸು ಸಚಿವರು ಬಂದರೆಂದರೆ ಮಧ್ಯಮದವರು ಹೇಗೆ ಮುಗಿಬೀಳುತ್ತಾರೆ...ಅನ್ನುತ್ತೀರಾ..ಒಂದು ರೀತಿಯಲ್ಲಿ ನೀವು ಹಾಗೆ ಅಂದುಕೊಂಡರೆ ನಿಜ. ಮಾಧ್ಯಮದವರು ಹೀಗೆ ರಾಜಕಾರಣಿಗಳ ಮುಂದೆ ಮುಗಿ ಬೀಳುವುದನ್ನು ಯಾವಾಗ ನಿಲ್ಲಿಸುತ್ತಾರೋ..ನನಗಂತೂ ಗೊತ್ತಿಲ್ಲ..

No comments:

Post a Comment