Thursday 23 July 2009

ಮೋರಿಯ ಮೇಲೆ ನಿಲ್ಲುವುದೇಕೆ ಸ್ಲಮ್‌ ?

ಬದುಕಲು ನಗರ ಬಿಡದಿದ್ದಾಗ ಅದರದ್ದೇ ಮೋರಿಯಲ್ಲಿ ಹುಟ್ಟಿಕೊಳ್ಳುತ್ತದೆ ಸ್ಲಮ್ ಎಂಬ ನರಕ.
ಹಳಿಗಳ ಮೇಲೆ ಕಿವಿಗಡಚಿಕ್ಕುವ ಸದ್ದಿನಲ್ಲಿ ರೈಲು ಸಾಗುವಾಗ ಸ್ಲಮ್ಮಿನ ಮೋಟುಗೋಡೆಗಳು ಅದುರುತ್ತವೆ. ಅಲ್ಲಿಯೇ ಹೇಸಿಗೆಯ ಲೆಕ್ಕಿಸದೆ ಗೂಡಿನೊಳಗೆ ಮುದುರಿಕೊಂಡಿರುವವರು ಯಾವಾಗ ಏನಾದೀತೋ ಅಂತ ಅಂದುಕೊಳ್ಳುತ್ತಾರೆ.
ಆದರೆ ಅಲ್ಲಿಯೇ ಮೋರಿ ಪಕ್ಕ ಹೊರಳಾಡುವ ಕೆಂಪಾದ ಕಣ್ಣಿನ ಕುಡುಕರು, ಮಾರಮ್ಮನ ಗುಡಿಯ ಪಕ್ಕದ ಕಟ್ಟೆಯ ಮೇಲೆ ಕೇರಂ ಬೋರ್ಡ್ ಬಿಲ್ಲೆ ಮತ್ತು ಇಸ್ಪೀಟು ಎಲೆಗಳೊಂದಿಗೆ ಜೂಜಾಡುವ ಸೋಂಭೇರಿಗಳು ಇದಾವುದೇ ಗೋಜಿಗೆ ಬರುವುದಿಲ್ಲ. ಮನೆಯ ಹೆಂಗಸನ್ನು ಬಡಿದು ಕೊಂದಾದರೂ ಸರಿ, ಕಣ್ಣೆದುರಿನಲ್ಲಿಯೇ ಮರೆಯಲ್ಲಿದ್ದಂತೆ ಮಾರಿದರೂ ಸರಿಯೇ, ಅವರಿಗೆ ತುಣುಕು ಮಾಂಸ, ಮದ್ಯ ಮತ್ತು ಜೂಜಿದ್ದರೆ ಬೇಡ ಇಹ ಪ್ರಪಂಚ ಮತ್ತು ರಾಮಕೃಷ್ಣಾಶ್ರಮದ ಪ್ರವಚನ. ಆದರೂ ನಮ್ಮ ಕೊಳಚೆಯಲ್ಲಿನ ಮಾನವರು ಒಳ್ಳೆಯವರು. ಬೇಕಾದರೆ ಮುಖ್ಯಮಂತ್ರಿಗಳೇ ಸ್ಲಂ ವಾಸ್ತವ್ಯಕ್ಕೆ ಬಂದರೂ, ಕೊಡಲೇನೂ ಇಲ್ಲದಿದ್ದರೂ ಕನಿಷ್ಠ ಗೋಣಿ ತಾಟು ಹಾಸಿ ಸತ್ಕರಿಸಿಯಾರು. ಯಾಕೆಂದರೆ ಅವರು ಇನ್ನೂ ಮನುಷ್ಯರಾಗಿ ಉಳಿದುಕೊಂಡಿದ್ದಾರೆ. ಹಾಗಂತ ಬಡತನ ನಿರ್ಮೂಲನೆಯ ಬಗ್ಗೆ ನಗರದ ರೆಸಾರ್ಟ್‌ಗಳಲ್ಲಿ ರೆಸಾರ್ಟ್ ಗಳಲ್ಲಿ ನಡೆಯುವ ವಿಚಾರಸಂಕಿರಣಗಳಲ್ಲಿ ಅವರು ಭಾಗವಹಿಸುವುದಿಲ್ಲ.
ಮೆಜೆಸ್ಟಿಕ್ ಸಮೀಪದ ಜಗಜೀವನರಾಂ ಕೊಳಚೆ ಪ್ರದೇಶ ಅಥವಾ ಅಂಜನಪ್ಪ ಗಾರ್ಡನ್‌ ಸ್ಲಂಮ್ಮಿನ ಕಿರಿದಾದ ಸಂದಿಗೊಂದಿಗಳಲ್ಲಿ ಎಂದಾದರೂ ನಡೆದಿದ್ದೀರಾ ? ಹಾಗೆ ಯಾವತ್ತಾದರೂ ಅನ್ನಿಸಿದರೆ ಒಮ್ಮೆ ಭಂಗಿ ಕಾಲೋನಿಗೆ ಹೋಗಿ ಬನ್ನಿ. ಹಿಂದೆ ಮಲ ಹೊರುತ್ತಿದ್ದ ಪೌರ ಕಾರ್ಮಿಕರು ಹೆಚ್ಚಾಗಿರುವ ಸ್ಲಮ್ ಅದು. ಸರ್ವೇ ಮಾಡಿದ ಪ್ರಕಾರ ಕೇವಲ ೨೫೦ ಅಡಿ ಅಗಲ ಮತ್ತು ೫೫೦ ಅಡಿ ಉದ್ದವಿರುವ ಈ ಕೊಳಚೆ ಪ್ರದೇಶದಲ್ಲಿ ಸುಮಾರು ೪೫೦ ಕುಟುಂಬಗಳು ಉಸಿರುಗಟ್ಟಿಸುವಂಥ ವಾತಾವರಣದಲ್ಲಿ (ಸುಮಾರು ಎರಡು ಸಾವಿರ ಜನ) ವಾಸಿಸುತ್ತಿವೆ. ಇಂಥ ಜನಸಾಂದ್ರತೆಯ ಸ್ಲಮ್ನಲ್ಲಿ ಕಳೆದ ಐವತ್ತು-ಅರುವತ್ತು ವರ್ಷಗಳಿಂದ ಅವರಿದ್ದಾರೆ. ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಕೆಲವು ಅಡಿಗಳ ಜಾಗದ ಹಕ್ಕು ಪತ್ರ ಸಿಕ್ಕಿದೆ.
ಅವರೆಲ್ಲ ಅಲ್ಲಿಯೇ ಗೂಡು ಕಟ್ಟಿದ್ದೇಕೆ ? ಅದು ಅಕ್ರಮವಾಗಿದ್ದರಿಂದ ಬೃಎಡೆಗೆ ಹೋಗಬೇಕು, ಅವರಿಗೆ ಯಾವ ಸೌಲಭ್ಯವನ್ನು ಕೊಡಲೂ ಸಾಧ್ಯವಿಲ್ಲ. ಅವರು ಕಂದಾಯ ಕಟ್ಟುತ್ತಾರೆಯೇ ? ಎನ್ನುತ್ತದೆ ಸರಕಾರ. ಆದರೆ ದಿನಕ್ಕೆ ಅರುವತ್ತು ರೂಪಾಯಿ ಸಂಪಾದಿಸಲಾಗದ ಜನ ಅವರು. ಎಲ್ಲಿಂದ ಬಾಡಿಗೆ ಮನೆ ಹಿಡಿಯುತ್ತಾರೆ ? ನಗರಪಾಲಿಕೆಯಲ್ಲಿ ಎಲ್ಲ ಕೆಲಸಗಳೂ ಗುತ್ತಿಗೆದಾರರ ಪಾಲಾಗಿವೆ. ಶಾಸನದ ಪ್ರಕಾರ ದಿನಗೂಲಿ ಎಪ್ಪತ್ತು ರೂಪಾಯಿ ಇದ್ದರೂ, ಇವರ ಕೈಗೆ ಐವತ್ತಕ್ಕಿಂತ ಹೆಚ್ಚಿಗೆ ಸಿಗುವುದಿಲ್ಲ. ಬೇರೆ ದಾರಿ ಕಾಣದೆ ರೈಲು ಹಳಿಗಳ ಪಕ್ಕ ಚೂರು ಪಾರು ಇಟ್ಟಿಗೆಗಳನ್ನು ಒತ್ತಟ್ಟಿಗಿಟ್ಟು ಗೂಡು ಕಟ್ಟುತ್ತಾರೆ. ಇಲ್ಲವಾದರೆ ಮೋರಿಗಳ ಕಲ್ಲು ಚಪ್ಪಡಿಗಳ ಮೇಲೆ ಕೆಲವು ಅಡಿಗಳಷ್ಟು ಜಾಗದಲ್ಲಿ ಗುಡಿಸಲನ್ನು ನಿರ್ಮಿಸುತ್ತಾರೆ. ಚರಂಡಿಯ ಮೇಲೆ ಸ್ಲಮ್ ತಯಾರಾಗುವುದೇ ಹಾಗೆ. ಯಾಕೆಂದರೆ ಮೋರಿ ಮತ್ತು ಹಳಿಗಳ ಪಕ್ಕ ಕೆಲವು ಅಡಿಗಳಷ್ಟು ಜಾಗ ಖಾಲಿ ಬಿಡುವುದು ಸಾಮಾನ್ಯ. ಹೀಗಿದ್ದರೂ ನಗರದವರಿಗೆ ಸ್ಲಮ್ಮಿನವರು ಬೇಕು. ಯಾಕೆಂದರೆ ಮೋರಿ ಮತ್ತು ಹಳಿಗಳ ಪಕ್ಕ ಕೆಲವು ಅಡಿಗಳಷ್ಟು ಜಾಗ ಖಾಲಿ ಬಿಡುವುದು ಸಾಮಾನ್ಯ. ಹೀಗಿದ್ದರೂ ನಗರದವರಿಗೆ ಸ್ಲಮ್ಮಿನವರು ಬೇಕು. ಯಾಕೆಂದರೆ ಅವರಿಲ್ಲದಿದ್ದರೆ ನಗರಕ್ಕೆ ನಗರವೇ ಕಸದ ಬುಟ್ಟಿಯಾಗುತ್ತದೆ.
ಸ್ಲಮ್‌ಡಾಗ್‌ ಮಿಲಿಯನೇರ‍್ ಚಿತ್ರದಲ್ಲಿ ಕೊಳಚೆ ಪ್ರದೇಶದ ಬಗ್ಗೆ ತೋರಿಸಿದ್ದು ಅತಿಯಾಗಿರಬಹುದು. ಆದರೆ ಒಮ್ಮೆ ಸ್ಲಮ್ಮಿನ ಒಳಹೊಕ್ಕು ನೋಡಿದರೆ ತೀವ್ರ ಬೇಸರವಾಗದೆ ಇರುವುದಿಲ್ಲ.

No comments:

Post a Comment