Sunday 2 August 2009

ಸುದ್ದಿಮನೆಯಲ್ಲಿ ಪತ್ರಕರ್ತರೇಕೆ ತಣ್ಣಗಾಗಿದ್ದಾರೆ ?

ಈ ಸಲ ವಿಧಾನ ಸಭೆ ಅಧಿವೇಶನದಲ್ಲಿ ಡಿಕೆ ಶಿವಕುಮಾರ‍್ ಸಿದ್ದರಾಮಯ್ಯ , ಉಗ್ರಪ್ಪ ಮೊದಲಾದ ರಾಜಕಾರಣಿಗಳೇ ಹತ್ತು ಹಲವಾರು ಹಗರಣಗಳನ್ನು ಹೊರಗೆಳೆದರು. ಮತ್ತೊಂದು ಕಡೆ ಲೋಕಾಯುಕ್ತರು ಆಗಿಂದಾಗ್ಗೆ ಅಧಿಕಾರಿಗಳ ಅಕ್ರಮ ಸಂಪತ್ತನ್ನು ಜಾಲಾಡುತ್ತಿದ್ದಾರೆ. ಡಿಕೆಶಿ ಆರೋಪಿಸಿದ ಇಸ್ಕಾನ್ ಹಗರಣ, ಜೆಡಿಎಸ್ ಮುಂದಿಟ್ಟ ಗೃಹ ಮಂಡಳಿ ಹಗರಣಗಳಂತೂ ಈ ರಾಜ್ಯದಲ್ಲಿ ಮಾಧ್ಯಮಗಳೇನು ಮಾಡುತ್ತಿವೆ ಎಂಬ ಪ್ರಶ್ನೆ ಹುಟ್ಟಿಸಿದೆ.
ಹಾಗಾದರೆ ರಾಜಕಾರಣಿಗಳು ಬಯಲಿಗೆಳೆದ ಹಗರಣಗಳನ್ನು ಪರ್ತಕರ್ತರು ಯಥಾವತ್ ವರದಿ ಒಪ್ಪಿಸುವಂತೆ ಯಾಕಾಯಿತು ?
ವಾಸ್ತವವಾಗಿ ಕೆಂಡದಂಥ ವರದಿಗಳನ್ನು ಬರೆಯುವ ಅವಕಾಶ ಈವತ್ತಿನ ಪರ್ತ್ರಕರ್ತರಿಗೆ ಕಡಿಮೆಯಾಗುತ್ತಿದೆ.
ದೊಡ್ಡ ಪತ್ರಿಕೆಗಳು ತಮ್ಮ ಉಳಿವಿಗೆ ಜಾಹೀರಾತುಗಳ ಬೆನ್ನು ಹತ್ತುತ್ತಿವೆ. ಪತ್ರಿಕಾಲಯದಲ್ಲಿ ಜಾಹೀರಾತು ವಿಭಾಗ ಪ್ರಾಬಲ್ಯ ಪಡೆಯುತ್ತಿದೆ. ಉದಾಹರಣೆಗೆ ರಿಯಲ್ ಎಸ್ಟೇಟ್ ಕಂಪನಿಗಳು, ಹಣಕಾಸು ಸಂಸ್ಥೆಗಳು ಪತ್ರಿಕೆಯೊಂದಕ್ಕೆ ಜಾಹೀರಾತು ನೀಡುತ್ತವೆ ಎಂದಿಟ್ಟುಕೊಳ್ಳೋಣ. ಆಗ ಆ ಕ್ಷೇತ್ರಕ್ಕೆ ಸಂಬಂಧಿಸಿ ಸ್ಫೋಟಕ ವರದಿ ತಯಾರಿಸಲು ವರದಿಗಾರ ಸಾವಿರ ಸಲ ಯೋಚಿಸಬೇಕಾಗುತ್ತದೆ. ಹೀಗಿದ್ದರೂ ಖಾತರಿ ಇರುವುದಿಲ್ಲ. ಒಂದೆರಡು ಸಲ ಇಂಥ ಅನುಭವ ಆದಲ್ಲಿ ಸಹಜವಾಗಿ ಭ್ರಮ ನಿರಸನ ಆಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇಂತಹ ಹುಂಬತನದಿಂದ ಕೆಲಸ, ಬಡ್ತಿಗೆ ಕುತ್ತು ಉಂಟಾದರೇನು ಗತಿ ಎಂಬ ಆತಂಕ ಉಂಟಾಗುತ್ತದೆ. ಕೆಲವು ಪತ್ರಿಕಾಲಯಗಳಲ್ಲಿ ಹುದ್ದೆಗೆ ಸೇರಿಸಿಕೊಳ್ಳುವಾಗಲೇ ಖಾಲಿ ಕಾಗದಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಹೀಗೆ ಮ್ಯಾನೇಜ್ ಮೆಂಟ್‌ಗೆ ತನ್ನ ಜುಟ್ಟನ್ನು ಕೊಡುವ ಪತ್ರಕರ್ತನ ಸಂಕಟ ಅವನಿಗೇ ಗೊತ್ತು.
ಈವತ್ತು ಗುತ್ತಿಗೆ ಆಧಾರದಲ್ಲಿ ಪರ್ತಕರ್ತರ ನೇಮಕ ನಡೆಯುತ್ತಿರುವುದು ಸಾಮಾನ್ಯ. ಈಗಾಗಲೇ ಕೆಲಸದಲ್ಲಿ ಇರುವವರನ್ನೂ ಗುತ್ತಿಗೆಗೆ ಪರಿವರ್ತಿಸಲಾಗಿದೆ. ಹೀಗಾಗಿ ಯಾವಾಗ ಏನಾಗಬಹುದು ಎಂಬ ಅನಿಶ್ಚಿತತೆ ಸದಾ ಕಾಡುತ್ತಿರುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಒಂದು ದಿನ ಕೆಲಸ ಇಲ್ಲದಿದ್ದರೆ ಬದುಕುವುದು ಕಷ್ಟ. ಪತ್ರಕರ್ತನೂ ಎಲ್ಲರಂತೆ ತನ್ನದೇ ಕೌಟುಂಬಿಕ ಹೊರೆ, ಸಾಲದ ಹೊರೆ, ಬದ್ದತೆಗಳ ಸಂಸಾರದಲ್ಲಿರುತ್ತಾನೆ. ಅನಗತ್ಯ ರಿಸ್ಕ್‌ ಯಾಕೆ ಬೇಕು ಎಂಬ ಭಾವ ಸಹಜವಾಗಿ ಚಾಲ್ತಿಯಲ್ಲಿರುತ್ತದೆ.
ಇನ್ನು ಕೆಲವು ಪರ್ತಕರ್ತರಿಗೆ ಕೆಲಸ ಇದ್ದರೆ ಸಾಕು. ಉಳಿದೆಲ್ಲ "ಸಂಪಾದನೆ" ಹೊರಗೆ ಆಗಿಬಿಡುತ್ತದೆ. ಹೀಗಾಗಿ ಅವರಿಗೆ ಯಾವುದೇ ಸಾಮಾಜಿಕ ಬದ್ಧತೆ ಇರುವುದಿಲ್ಲ. ಪರ್ತಕರ್ತರ ಮುಖವಾಡ ಮಾತ್ರ ಅವರಿಗೆ ಸಾಕು. ಯಾವುದೇ ಪ್ರಲೋಭನೆಗೆ ಒಳಗಾಗದೆ ಉಳಿಯುವ ವರದಿಗಾರನೊಬ್ಬ ಸಾಕಷ್ಟು ಹೋರಾಡಿ ಸ್ಫೋಟಕ ವರದಿ ಬರೆದನೆಂದರೆ, ಅದು ಪ್ರಕಟವಾಗುತ್ತದೆ ಎಂಬ ಖಾತರಿ ಇಲ್ಲ.
ಪರ್ತಕರ್ತರು ಕೂಡ ಸಾಲದ ಹೊರೆಯಿಂದ ಬಳಲುತ್ತಾರೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಅಂತ ನಾನಾ ಬಗೆಯ ಆರ್ಥಿಕ ಬದ್ಧತೆ ಅವರಿಗಿರುತ್ತದೆ. ರಿಸೆಶನ್ ಅಂತ ಕಂಪನಿ ಸಂಬಳ ಹೆಚ್ಚಿಸುವುದಿಲ್ಲ. ಹೊಸ ನೇಮಕ ಪ್ರಕ್ರಿಯೆಗಳು ನಿಂತು ಹೋಗಿವೆ. ಹೀಗೆಲ್ಲ ಪರಿಸ್ಥಿತಿ ವಿಷಮಿಸಿರುವಾಗ ತಾವಾಗಿಯೇ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಕೊಟ್ಟ ಕೆಲಸವನ್ನು ಮಾಡಿ ಮನೆಗೆ ಹೋಗುವ ಎಂಬ ರಕ್ಷಣಾತ್ಮಕ ಭಾವನೆ ಉಂಟಾಗದಿರುವುದಿಲ್ಲ.

No comments:

Post a Comment