Thursday 20 August 2009

ಗ್ರಾಮೀಣ ಬಿಪಿಒ ಹೇಗಿದ್ದರೆ ಅನುಕೂಲಕರ ?

ಕೊನೆಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಬಿಪಿಒ( ಬಿಸಿನೆಸ್ ಪ್ರೊಸೆಸ್‌ ಔಟ್ ಸೋರ್ಸಿಂಗ್ ) ಸ್ಥಾಪನೆಯಾಗುತ್ತಿದೆ.
ಹೊರಗುತ್ತಿಗೆಯ ಘಟಕಗಳನ್ನು, ಕಾಲ್ ಸೆಂಟರ‍್ಗಳನ್ನು ಹಳ್ಳಿಗಳಲ್ಲಿ ಆರಂಭಿಸುವವರಿಗೆ ರಾಜ್ಯ ಸರಕಾರ ಒಟ್ಟು ೪೦ ಲಕ್ಷ ರೂ.ಗಳ ಆಕರ್ಷಕ ಸಬ್ಸಿಡಿ ನೆರವು ನೀಡುತ್ತಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಗಿಂತ ಹೆಚ್ಚಿಗೆ ಓದಿರದ, ನಗರಗಳಿಗೆ ಬಂದು ಪರದಾಡುತ್ತಿರುವ ಹುಡುಗರಿಗೆ ಇದೊಂದು ಒಳ್ಳೆಯ ಸುದ್ದಿ. ಕಲ್ಪನಾ ಚಾವ್ಲಾಳಂತಹ ಪ್ರತಿಭೆಯಿದ್ದರೂ, ಎಸ್ಸೆಸ್ಸೆಲ್ಸಿಯನ್ನು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೂ, ಪಿಯುಸಿಗೆ ಹೋಗಲಾಗದೆ ಹೆಂಚಿನ ಮನೆಯಲ್ಲಿ ಕಣ್ಣೀರಿಡುವ ಹುಡುಗಿಯರಿಗೆ ಇದೊಂದು ಗುಡ್‌ ನ್ಯೂಸ್. ಬಡತನದಿಂದ ಎಳೆಯ ವಯಸ್ಸಿನಲ್ಲಿ ಮದುವೆಯಾಗಿ, ಮಕ್ಕಳಾಗಿ ಕುಟುಂಬದ ನೊಗ ಹೊತ್ತು ಬಸವಳಿದ ಯುವತಿಯರಿಗೆ ಇಂಥ ಯೋಜನೆ ಸಹಕಾರಿಯಾದೀತು. ಆದರೆ ಬೇಗ ಬೇಗನೇ ಪ್ರತಿಯೊಂದು ಹೋಬಳಿಗೂ ಬಿಪಿಒ ಸೆಂಟರ‍್ ಬರಬೇಕು. ಯಾಕೆಂದರೆ ಕನಿಷ್ಠ ನಗರಗಳಿಗೆ ಯುವಜನರ ಸಾಮೂಹಿಕ ವಲಸೆಯನ್ನು ತಡೆಯಲು ಇದು ಅತ್ಯುತ್ತಮ ಮಾರ್ಗ.
ಬೆಂಗಳೂರು ಕಳೆದ ದಶಕದಲ್ಲಿ ಐಟಿ, ಬಿಪಿಒ, ಐಟಿಇಎಸ್ ವಲಯದಲ್ಲಿ ಮುಂಚೂಣಿಗೆ ಬಂತು. ಹೊರಗಿನವರಿಗೆ ಕರ್ನಾಟಕ ಎಂದರೇನೆಂದು ಗೊತ್ತಿರದಿದ್ದರೂ, ಬೆಂಗಳೂರು ಎಂದರೆ ಅರ್ಥವಾಗುವಂತಾಯಿತು. ಇಲ್ಲಿಯೇ ಎರಡು ಲಕ್ಷಕ್ಕೂ ಹೆಚ್ಚುಮಂದಿಗೆ ಈ ಕ್ಷೇತ್ರ ಉದ್ಯೋಗ ಕೊಟ್ಟಿದೆ. ಈಗ ತಾತ್ಕಾಲಿಕವಾಗಿ ಆರ್ಥಿಕ ಹಿಂಜರಿತದ ಪರಿಣಾಮ ತಟ್ಟಿರಬಹುದು. ಆದರೂ ಈ ವಲಯ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸುವುದಿಲ್ಲ. ಕಳೆದ ವರ್ಷ ೫೫ ಸಾವಿರ ಕೋಟಿ ರೂ.ನಷ್ಟಿದ್ದ ರಾಜ್ಯದ ಐಟಿ ರಫ್ತು ಈ ಸಲ ೭೧ ಸಾವಿರ ಕೋಟಿ ರೂ.ಗೇರಿದೆ. ದೇಶದ ಐಟಿ ರಫ್ತಿನಲ್ಲಿ ಕರ್ನಾಟಕದ್ದೇ ಅರ್ಧಪಾಲು. ಏರ‍್ ಟೆಲ್ ಮುಂತಾದ ಕಂಪನಿಗಳ ಮೊಬೈಲ್ ಸೇವೆ ಊರೂರನ್ನು ಮುಟ್ಟುತ್ತವೆ. ನಗರದ ಹಾನಿಕಾರಕ ತ್ಯಾಜ್ಯಗಳನ್ನು ಹಳ್ಳಿಗೆ ಲೋಡುಗಟ್ಟಲೆ ತಂದು ಚೆಲ್ಲುತ್ತಾರೆ. ಬೀದಿ ನಾಯಿಗಳನ್ನೂ ಬಿಡುತ್ತಾರೆ. ಒಂದು ಬಿಪಿಒ ಘಟಕ ಸ್ಥಾಪನೆಗೆ ಬೃಹತ್ ಚಿಮಿಣಿಗಳು ಬೇಡ, ಗಗನಚುಂಬಿ ಕಟ್ಟಡಗಳ ಅಗತ್ಯ ಇಲ್ಲ. ಡಾಂಬರಿನ ರಸ್ತೆಯೇ ಬೇಕೆಂದಿಲ್ಲ. ಉತ್ಪಾದನೆಗೆ ಕಲ್ಲಿದ್ದಲಿನಂಥ ಇಂಧನ ಬೇಕಿಲ್ಲ. ಎಕರೆಗಟ್ಟಲೆ ನೆಲ ಕಬಳಿಸಬೇಕಿಲ್ಲ. ನೂರೆಂಟು ಪರವಾನಗಿಗಳ ಅಗತ್ಯವಿಲ್ಲ. ಕಂಪ್ಯೂಟರ‍್, ಕರೆಂಟ್, ಇಂಟರ‍್ ನೆಟ್ ಬ್ರಾಡ್ ಬ್ಯಾಂಡ್ ಸಂಪರ್ಕ ಮತ್ತು ನಿಷ್ಠೆಯಿಂದ ದುಡಿಯುವ ಕೆಲಸಗಾರರು ಸಾಕು. ಸಾಮಾನ್ಯವಾಗಿ ಗ್ರಾಮೀಣ ಬಿಪಿಒಗಳಲ್ಲಿ ಕಂಡುಬರುವ ಸನಸ್ಯೆ ನಿರಂತರ ಬ್ರಾಡ್‌ ಬ್ಯಾಂಡ್‌ ಸರ್ವೀಸಿನದ್ದೇ. ಇದೂ ಬಗೆಹರಿಸಲಾಗದ್ದೇನಲ್ಲ. ಹೀಗಿದ್ದರೂ, ಮೊನ್ನೆಮೊನ್ನೆಯಷ್ಟೇ ಹಳ್ಳಿಯಲ್ಲಿ ಮೊದಲ ಬಿಪಿಒ ಸ್ಥಾಪಿಸಲಾಗಿದೆ. ಈ ಮಂದಗತಿಗೆ ಏನೆನ್ನುವುದು ? ಇರಲಿ, ಬಿಪಿಒ ಹಳ್ಳಿ ಕಡೆಗೆ ಮುಖ ಮಾಡಿರುವುದು ಸ್ವಾಗತಾರ್ಹ.
ಬಿಪಿಒ ಘಟಕಗಳಲ್ಲಿ ವಾಯ್ಸ್ ಬೇಸ್ಡ್ ಮತ್ತು ಡಾಟಾ ಬೇಸ್ಡ್ ಎಂಬ ವಿಭಾಗವಿದೆ. ಅಥವಾ ಎರಡರ ಸಂಯೋಜನೆಯೂ ಇರಬಹುದು. ಗ್ರಾಹಕರ ಜತೆಗೆ ಸಂವಹನ, ಹಣಕಾಸು ಮತ್ತು ಲೆಕ್ಕಪತ್ರ ದಾಖಲು, ಕಾಲ್ ಸೆಂಟರ‍್, ಡಾಟಾ ಮ್ಯಾನೇಜ್ ಮೆಂಟ್, ವಿಮೆ, ವೈದ್ಯಕೀಯ ಮಾಹಿತಿ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಹೊರಗುತ್ತಿಗೆ ನಡೆಸಬಹುದು. ಇದಕ್ಕೆಲ್ಲ ಹೆಚ್ಚಿನ ಔದ್ಯೋಗಿಕ ಕೌಶಲ್ಯ ಅಥವಾ ಉನ್ನತ ಶಿಕ್ಷಣವಾಗಲೀ ಬೇಕಾಗುವುದಿಲ್ಲ. ಎಸ್ಸೆಸ್ಸೆಲ್ಸಿ, ಸ್ವಲ್ಪ ಇಂಗ್ಲಿಷ್‌ ಮತ್ತು ಕಂಪ್ಯೂಟರ‍್ ಜ್ಞಾನವಿದ್ದರೆ ಸಾಕು. ಬಿಪಿಒ ಸೆಂಟರ‍್ ಗಳಲ್ಲಿ ಕೆಲಸ ಸಿಗುತ್ತದೆ. ಅಲ್ಲಿಯೇ ತಕ್ಕಮಟ್ಟಿನ ತರಬೇತಿಯನ್ನು ನೀಡುತ್ತಾರೆ.
೨೦೦೮-೦೯ರ ಸಾಲಿನ ರಾಜ್ಯ ಬಜೆಟ್ ನಲ್ಲಿ ಈ ಸಂಬಂಧ ಸರಕಾರ ಅನುದಾನ ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಬಿಪಿಒ ಎಂದರೆ ಏನೆಂದು ಮೊದಲಿಗೆ ತಿಳಿದುಕೊಳ್ಳಬೇಕು. ಯಾಕೆಂದರೆ ಕಳೆದ ವರ್ಷ ಸರಕಾರ ಬಿಪಿಒ ಸ್ಥಾಪನೆಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಬಹುತೇಕ ಮಂದಿ ಇದೊಂದು ನೆಮ್ಮದಿಯಂತಹ ತರಬೇತಿ ಕಾರ್ಯಕ್ರಮ ಇರಬಹುದು ಎಂದು ಭಾವಿಸಿದ್ದರು. ಆದರೆ ತರಬೇತಿಯ ನಂತರ ಉದ್ಯೋಗವನ್ನು ಆಧರಿಸಿದ ರೆವೆನ್ಯೂ ಬೇಸ್ಡ್ ಬಿಸಿನೆಸ್ ಮಾಡೆಲ್ ಎಂದು ಗೊತ್ತಾಗಲಿಲ್ಲ. ಖಾಸಗಿ ವಲಯದವರಿಗೆ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಹೊರಗುತ್ತಿಗೆ ಉದ್ಯಮವನ್ನು ಬೆಳೆಸಲು ಸಬ್ಸಿಡಿಯ ಮೂಲಕ ಉತ್ತೇಜಿಸುವುದೇ ಸರಕಾರದ ಉದ್ದೇಶ. ಈವತ್ತು ಬ್ರಾಡ್ ಬಾಂಡ್ ಸಂಪರ್ಕ ಇಲ್ಲದ ತಾಲೂಕು, ಹೋಬಳಿ ಸಿಗಲಿಕ್ಕಿಲ್ಲ. ಇತರ ಮೂಲ ಸೌಕರ್ಯಗಳನ್ನು ಒದಗಿಸಿದರಾಯಿತು.
ಅಂದಹಾಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಸಮೀಪದ ಬಾಬುರಾಯನಕೊಪ್ಪಲಿನಲ್ಲಿ ರಾಜ್ಯದ ಮೊದಲ ಗ್ರಾಮೀಣ ಬಿಪಿಒ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಒಟ್ಟು ನೂರು ಮಂದಿ ಗ್ರಾಮೀಣರಿಗೆ ಇಲ್ಲಿ ತರಬೇತಿಯ ನಂತರ ಉದ್ಯೋಗ ಸಿಗಲಿದೆ. ಆರಂಭದಲ್ಲಿ ಮೂರರಿಂದ ಮೂರೂವರೆ ಸಾವಿರ ರೂ. ಆರಂಭಿಕ ವೇತನ ನೀಡುವುದಾಗಿ ಘಟಕ ಸ್ಥಾಪಿಸಿರುವ ಕಂಪನಿ ಐಟಿ ಇಲಾಖೆಗೆ ತಿಳಿಸಿದೆ. ಅದಕ್ಕಿಂತ ಕಡಿಮೆ ಕೊಟ್ಟರೆ ಅಲ್ಲಿ ಯಾರೂ ಕೆಲಸ ಮಾಡಲಾರರು ಎನ್ನುವುದು ಬೇರೆ ವಿಷಯ. ಹಾಗಾದರೆ ಯೋಜನೆಯ ರೂಪು ರೇಷೆಯೇನು ?
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ತಾಲೂಕು/ಹೋಬಳಿ ಮಟ್ಟದಲ್ಲಿ ನೂರು ಸೀಟುಗಳ ಸಾಮರ್ಥ್ಯದ ಗ್ರಾಮೀಣ ಬಿಪಿಒಗಳನ್ನು ಸ್ಥಾಪಿಸಲು ಸರಕಾರ ೪೦ ಲಕ್ಷ ರೂ. ಸಬ್ಸಿಡಿ ನೆರವು ನೀಡುತ್ತದೆ. ಘಟಕ ಸ್ಥಾಪನೆಯ ಬಂಡವಾಳಕ್ಕೆ ೨೦ ಲಕ್ಷ ರೂ, ಉದ್ಯೋಗಿಗಳ ತರಬೇತಿಗೆ ೨೦ ಲಕ್ಷ ರೂ, ಎರಡು ವರ್ಷಗಳ ಬಾಡಿಗೆ, ಇಂಟರ‍್ ನೆಟ್‌, ವಿದ್ಯುತ್, ಜನರೇಟರ‍್ ಮುಂತಾದ ವ್ಯವಸ್ಥೆಗೆ ೧೦ ಲಕ್ಷ ರೂ. ಅಂತ ಒಟ್ಟು ೪೦ ಲಕ್ಷ ರೂ. ಆರ್ಥಿಕ ನೆರವು ಕೊಡುತ್ತದೆ. ವೈಯಕ್ತಿಕವಾಗಿ ಅಥವಾ ಟ್ರಸ್ಟ್‌ ಮೂಲಕ ಬಿಪಿಒ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು. ಕಳೆದ ವರ್ಷ ಬಂದಿದ್ದ ೧೦೪ ಅರ್ಜಿಗಳ ಪೈಕಿ ನಾಲ್ಕನ್ನು ಆಯ್ಕೆ ಮಾಡಲಾಗಿತ್ತು. ಈ ವರ್ಷ ಈಗಾಗಲೇ ೧೨೪ ಅರ್ಜಿಗಳು ಬಂದಿವೆ.ಹಾವೇರಿಯ ಶಿಗ್ಗಾಂವ್ ಮತ್ತು ಹಾಸನದ ಸಮೀಪ ಸೆಪ್ಟೆಂಬರ‍್ ನಲ್ಲಿ ಮತ್ತೊಂದು ಕೇಂದ್ರ ಸ್ಥಾಪನೆಯಾಗಲಿದೆ. ಬಾಬುರಾಯನಕೊಪ್ಪಲಿನಲ್ಲಿ ಘಟಕದಲ್ಲಿ ನೇಮಕಗೊಂಡಿರುವ ಉದ್ಯೋಗಾರ್ಥಿಗಳೀಗ ತರಬೇತಿ ಪಡೆಯುತ್ತಿದು, ಶೀಘ್ರದಲ್ಲಿ ಹೊರಗುತ್ತಿಗೆಯ ಬಿಸಿನೆಸ್ ಆರಂಭವಾಗಲಿದೆ. ಗ್ರಾಮೀಣ ಬಿಪಿಒ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಯೋಜನೆಯ ಉದ್ದೇಶ. ಈ ವರ್ಷ ಯೋಜನೆಗೆ ೪೦ ಕೋಟಿ ರೂ. ಮಂಜೂರಾಗಿದ್ದು, ಸಮರ್ಪಕವಾಗಿ ಜಾರಿಯಾದಲ್ಲಿ ಅಷ್ಟರಮಟ್ಟಿಗೆ ಯುವಜನತೆ ನಗರಗಳಿಗೆ ವಲಸೆ ಬಂದು ತಾಪತ್ರಯಕ್ಕೆ ಸಿಲುಕುವುದು ತಪ್ಪುತ್ತದೆ. ಯಾರೇನೇ ಅನ್ನಲಿ, ಈ ದೇಶಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ೧೬ ಲಕ್ಷ ಕೋಟಿ ರೂ. ಮೊತ್ತದ ವಹಿವಾಟು ನೀಡಿದೆ. ಹೀಗಿರುವಾಗ ಅದನ್ನು ಬೆಂಗಳೂರಿನ ಗಡಿ ದಾಟಿಸಿ ಹಳ್ಳಿಗಳಿಗೆ ಮುಟ್ಟಿಸುವುದು ಮಹತ್ವಪೂರ್ಣ.
ಸಾಮಾನ್ಯವಾಗಿ ಗ್ರಾಮೀಣ ಬಿಪಿಒಗಳಿಗೆ ಪಿಯುಸಿ ತನಕ ಓದಿದವರು, ಕಾಲೇಜು ಓದನ್ನು ಅರ್ಧಕ್ಕೇ ಬಿಟ್ಟವರು ಬರುತ್ತಾರೆ. ಅವರಿಗೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ‍್ ಬಳಕೆಯ ಪ್ರಾಥಮಿಕ ತರಬೇತಿ ನೀಡುತ್ತಾರೆ. ಇದಕ್ಕೆ ಎಂಟ್ಹತ್ತು ವಾರ ಬೇಕಾಗುತ್ತದೆ. ನಂತರ ಅವರಿಗೆ ಅಸೈನ್ ಮೆಂಟ್ ಕೊಡುತ್ತಾರೆ. ಹಳ್ಳಿಗಳಲ್ಲಿ ಶೇ. ೫೦ಕ್ಕಿಂತಲೂ ಹೆಚ್ಚು ಮಂದಿ ಮಹಿಳೆಯರೇ ಸೇರುತ್ತಾರೆ. ಮದುವೆ ಖರ್ಚಿಗೆ, ಸಾಲ ತೀರಿಸಲು, ಕಿವಿಯೋಲೆ, ಹೊಲಿಗೆ ಮೆಶಿನ್ ಪಡೆಯಲು, ದನ ಸಾಕಲು ಮುಂತಾದ ನಾನಾ ಕಾರಣಗಳಿಗೆ ಅವರಿಗೆ ಹಣ ಬೇಕು. ಬಿಪಿಒ ಕೆಲಸ ಅವರ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ಇದೊಂಥರಾ ವಿನ್-ವಿನ್ ಗೇಮ್. ಕಂಪನಿಗಳಿಗೆ ಒಂದು ಕಡೆ ಸರಕಾರದಿಂದ ಭಾರಿ ಮೊತ್ತದ ಸಬ್ಸಿಡಿ, ಮತ್ತೊಂದು ಕಡೆ ಕಡಿಮೆ ಬಾಡಿಗೆಗೆ ಕಟ್ಟಡ ಸಿಗುತ್ತದೆ. ಹೀಗಾಗಿ ಸಾಕಷ್ಟು ಉಳಿತಾಯ ಸಾಧ್ಯವಾಗುತ್ತದೆ.
ಆರ್ಥಿಕ ಹಿಂಜರಿತದ ನಂತರ ಲ್ಯಾಟಿನ್ ಅಮೆರಿಕ, ಯುರೋಪ್ ಮುಂತಾದ ಕಡೆ ಮಾರುಕಟ್ಟೆಗಳನ್ನು ಹುಡುಕುತ್ತಿರುವ, ಭಾರತೀಯ ರೈಲ್ವೆಯ ೨,೫೦೦ ಕೋಟಿ ರೂ.ಗಳ ಹೊರಗುತ್ತಿಗೆ ಒಪ್ಪಂದವನ್ನು ತನ್ನದಾಗಿಸಿಕೊಳ್ಳಲು ಯತ್ನಿಸುತ್ತಿರುವ ಟಿಸಿಎಸ್ ನಂತಹ ಕಂಪನಿಗಳು ಗ್ರಾಮೀಣ ಬಿಪಿಒ ಘಟಕಗಳ ಸ್ಥಾಪನೆಗೂ ಮನಸ್ಸು ಮಾಡಬೇಕು. ಐಟಿ ವಲಯದ ದಿಗ್ಗಜ ಕಂಪನಿಗಳೀಗ ಬೇರೂರಿ ಹೋಗಿವೆ. ಗ್ರಾಮೀಣ ಮಾರುಕಟ್ಟೆ ಬಗ್ಗೆ ಯೋಚಿಸುವುದಕ್ಕಿಂತ, ಅತ್ಯಧಿಕ ಲಾಭದ ವಿದೇಶಿ ಮಾರುಕಟ್ಟೆಯ ಮೇಲೆ ಅವುಗಳ ಕಣ್ಣು ನೆಟ್ಟಿರುತ್ತದೆ. ವ್ಯಾಪಾರ ಅಂದ ಮೇಲೆ ಲಾಭ-ನಷ್ಟಗಳ ಲೆಕ್ಕ ಇರುತ್ತದೆ ಎಂದು ಅಂದುಕೊಳ್ಳಬಹುದು. ಆದರೆ ವಿಪ್ರೊ ಇರಲಿ, ಟಿಸಿಎಸ್ ಇರಲಿ, ಯಾರೇ ಬಂದರೂ ಅರ್ಹತೆ ಇದ್ದಲ್ಲಿ ಸಬ್ಸಿಡಿ ನೆರವು ಕೊಡಲು ನಾವು ತಯಾರಿದ್ದೇವೆ ಎನ್ನುತ್ತದೆ ಐಟಿ ಇಲಖೆ. ಹೀಗಿರುವಾಗ ಗ್ರಾಮೀಣ ಬಿಪಿಒ ಎಂಬ ಹೊಸ ಮಾರುಕಟ್ಟೆಯ ಅನ್ವೇಷಣೆಗೆ ಅವಕಾಶ ಬಂದಿದೆ. ಸದ್ಯಕ್ಕೆ ಯಾರಿಗೆ ಗೊತ್ತು ಈ ಮಾರುಕಟ್ಟೆಯ ಉದ್ದಗಲ ?
ನಿಜ. ತಮ್ಮ ಗ್ರಾಮಗಳಲ್ಲಿ, ಮನೆಗೆ ಸಮೀಪ ಕೆಲಸ ಸಿಕ್ಕಿದಾಗ, ೩,೫೦೦ ರೂ. ಸಂಬಳದಲ್ಲಿ ಸಾಕಷ್ಟು ಉಳಿತಾಯ ಆಗಬಹುದು. ಬಾಡಿಗೆ ಕೊಡಬೇಕಿಲ್ಲ, ಸಾರಿಗೆಗೆ ಖರ್ಚಾಗುವುದಿಲ್ಲ. ಜತೆಗೆ ತರಕಾರಿ, ಸೊಪ್ಪುಪಲ್ಲೆ ಬೆಳೆಯೋದು, ಹಾಲು ಮಾರಾಟ ಅಂತ ಇತರ ವೃತ್ತಿಗಳೂ ಇರುವುದರಿಂದ ಆದಾಯ ಸಿಗುತ್ತದೆ. ಕೆಲಸದ ವೇಳೆಯನ್ನೂ ಪಾಳಿಯಲ್ಲಿ ಹೊಂದಿಸಿಕೊಳ್ಳುವ ಅನುಕೂಲ ಇಲ್ಲಿದೆ. ಹಾಗಾದರೆ ಬಿಪಿಒ ಘಟಕಗಳನ್ನು ತೆರೆದು ಎಸ್ಸೆಸ್ಸೆಲ್ಸಿ ಪಿಯುಸಿ ಮಾಡಿದವರಿಗೆ ಒಂದಷ್ಟು ತರಬೇತಿ ಕೊಟ್ಟು ತಿಂಗಳಿಗೆ ಮೂರು ಸಾವಿರ, ಮೂರೂವರೆ , ನಾಲ್ಕು ಸಾವಿರ ಕೊಟ್ಟು ಕೆಲಸ ಮಾಡಿಸಿದರೆ ಸಾಕೇ ? ನೆವರ‍್. ನಮ್ಮಲ್ಲಿ ಸಾಮಾನ್ಯವಾಗಿ ತಕ್ಷಣದ ಲಾಭ ಏನು ಎಂದು ಯೋಚಿಸುವವರೇ ಹೆಚ್ಚು. ಅದರ ಆಧಾರದ ಮೇಲೆ ಅರಮನೆ ಕಟ್ಟಲು ಹೊರಡುತ್ತಾರೆ. ಆದರೆ ಮುಂದೇನು ? ನಾಳೆ ಮಾರುಕಟ್ಟೆಯ ಪರಿಸ್ಥಿತಿ ಇದೇ ರೀತಿ ಉಳಿಯುತ್ತದೆಯೇ ? ಇಲ್ಲವಾದಲ್ಲಿ ಎದುರಿಸುವ ಸಿದ್ಧತೆ ಏನು ಎತ್ತ ಅಂತ ಯೋಚಿಸುವುದಿಲ್ಲ.
ಭಾರತದ ಹೊರಗುತ್ತಿಗೆ, ಭವಿಷ್ಯದಲ್ಲಿ ಎದುರಾಗುವ ಪೈಪೋಟಿ ಮತ್ತು ಸವಾಲುಗಳನ್ನು ಎದುರಿಸಲು ಈವತ್ತಿನಿಂದಲೇ ತಯಾರಾಗಬೇಕು. ಇನ್ನು ನಗರಗಳಿಗೆ ಹೋಗಿ ಪರದಾಡುವ ಅವಸ್ಥೆ ಇಲ್ಲ, ಸಂಬಳ ಕಡಿಮೆ ಇದ್ದರೂ ಸಾಕು ಅಂತ ಹಳ್ಳಿಯ ಹುಡುಗ, ಹುಡುಗಿಯರೇನೋ ಬರಬಹುದು. ಆದರೆ ಅವರ ಭವಿಷ್ಯ ಕೂಡ ಮುಖ್ಯವಲ್ಲವೇ. ನಗರಗಳಲ್ಲಿ ಏನಾಗಿದೆ ನೋಡಿ, ಒಳ್ಳೆ ಕೆಲಸ ಸಿಗಲಿಲ್ಲ , ಮನೆಯ ಪರಿಸ್ಥಿತಿ ಚೆನ್ನಾಗಿಲ್ಲ, ಹೆಚ್ಚಿನ ಓದಿಲ್ಲ, ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು, ಮನೆಗೆ ತಂದು ಬಿಡುತ್ತಾರೆ, ಪಿಕಪ್ಪೂ ಇರುತ್ತದೆ ಅಂತ ಅಂದುಕೊಂಡು ಒಪ್ಪಿಕೊಳ್ಳುತ್ತಾರೆ. ಆದರೆ ಹೆಚ್ಚು ಸಂಬಳ, ಉನ್ನತ ಶಿಕ್ಷಣ, ಬೆಳೆಯುವ ಅವಕಾಶಕ್ಕಾಗಿ ಬಿಪಿಒ ಘಟಕದಿಂದ ಕಾಲ್ತೆಗೆಯುವ ಮಂದಿಯೂ ಹೆಚ್ಚು. ಕಂಪನಿಯೇ ಮಿಸ್ ಗೈಡ್ ಮಾಡಿತು, ಪರ್ಸನಲ್ ಲೇಫೇ ಇಲ್ಲ, ಟೀಮ್ ಲೀಡರ‍್ ಜೊತೆ ಹೊಂದಿಕೊಳ್ಳಲಾಗುತ್ತಿಲ್ಲ, ಮಾನಸಿಕ ದೈಹಿಕ ಒತ್ತಡ ಬೇರೆ ಅಂತ ಸಂಕಟದಿಂದ ತೊಳಲಾಡುವ ಮಂದಿ ಇಲ್ಲಿ ಸಾಕಷ್ಟು ಮಂದಿ ಇದ್ದಾರೆ. ಯಾಕೆ ಹೀಗಾಗುತ್ತಿದೆ ? ಕಳಪೆ ಗುಣಮಟ್ಟ ಮತ್ತು ಶಿಕ್ಷಣದ ಕೊರತೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಏನಾದೀತು ? ಭವಿಷ್ಯದ ಬಿಪಿಒ ಮಾರುಕಟ್ಟೆಯಲ್ಲಿ ಭಾರತ ತನ್ನ ಪಾಲನ್ನು ಇತರರ ಜತೆ ಹಂಚಿಕೊಳ್ಳಬೇಕಾದೀತು. ನಮ್ಮಲ್ಲಿ ಶಿಕ್ಷಣಸಂಸ್ಥೆಗಳ ಸಮಖ್ಯೆಗೆ ಸರಿ ಸಮನಾಗಿ ಗುಣಮಟ್ಟ ಹೆಚ್ಚುತ್ತಿಲ್ಲ. ಯುವಜನತೆಗೆ ನೀಡುವ ಶಿಕ್ಷಣ ಕಳಪೆಯಾದಲ್ಲಿ ನಿಸ್ಸಂದೇಹವಾಗಿ ಬಿಪಿಒ ವಲಯಕ್ಕೆ ಹೊಡೆತ ಬೀಳುತ್ತದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರಿಗೆ ವೆಬ್ ಸೈಟ್ ಏನಂತ ಗೊತ್ತಿರುವುದಿಲ್ಲ. ವಿದ್ಯುತ್ ಮೊದಲೇ ಇರುವುದಿಲ್ಲ. ದೂರಸಂಪರ್ಕ ಅಸ್ತವ್ಯಸ್ತವಾಗಿರುತ್ತದೆ. ಈ ಎಲ್ಲ ಪೂರಕ ಅಂಶಗಳು ಸಮರ್ಪಕವಾಗಿದ್ದಾಗ ಮಾತ್ರ ಬೆಳವಣಿಗೆ ವೇಗ ಪಡೆದುಕೊಳ್ಳಲು ಸಾಧ್ಯ.
ಇವೆಲ್ಲಕ್ಕಿಂತ ಮುಖ್ಯವಾಗಿ ಈ ಬಿಪಿಒಗಳ ಪ್ರಯೋಜನವನ್ನು ಗ್ರಾಮೀಣ ಯುವಜನತೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಹುಡುಗರ ಬುದ್ಧಿ ಪ್ರಬುದ್ಧವಾಗಿರುವುದಿಲ್ಲ. ಆ ಸಮಯದಲ್ಲಿ ದುಡ್ಡಿನ ರುಚಿ ಹತ್ತಿದ ನಂತರ ಕಲಿಯುವಿಕೆಯಲ್ಲಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಕಲಿಯುವುದರಲ್ಲಿ ಆಸಕ್ತಿ ತಗ್ಗಿದ ಬಳಿಕ ಬೆಳವಣಿಗೆಗೆ ಕೂಡ ಅವಕಾಶ ಇಲ್ಲವಾಗುತ್ತದೆ. ಹೀಗಾಗಲು ಬಿಡಬಾರದು. ಆದ್ದರಿಂದಲೇ ಈವತ್ತು ನಗರಗಳಲ್ಲಿ ಕೆಲಸದಲ್ಲಿದ್ದವರೆಲ್ಲ ಜತೆಗೆ ನಾನಾ ಡಿಪ್ಲೊಮಾ, ಎಂಬಿಎ ಕಲಿಯುತ್ತಾರೆ. ಈ ಕಲಿಯುವ ಪ್ರಕ್ರಿಯೆ ಮುಂದುವರಿಸಬೇಕು ಎನ್ನುವ ಹಂಬಲ ಆ ಎಳೆಯ ಹರೆಯದವರಲ್ಲಿ ಬರಬೇಕು. ಹಾಗಿದ್ದರೆ ಮಾತ್ರ ಅಂತಹ ಮಂದಿ ಬಿಪಿಒ ಕೆಲಸಕ್ಕೆ ಸೇರಿಕೊಂಡ ನಂತರ ಭವಿಷ್ಯವನ್ನು ಕಂಡುಕೊಳ್ಳಬಲ್ಲರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತನ್ನ ೨೦೨೦ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಆದರ್ಶದಲ್ಲಿ ಗ್ರಾಮೀಣ ಬಿಪಿಒಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಅದನ್ನೊಮ್ಮೆ ಸ್ಮರಿಸುವುದು ಉತ್ತಮ. ಅವರು ಹೇಳ್ತಾರೆ-
ಭಾರತವನ್ನು ೨೦೨೦ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ದೇಶದ ೬ ಲಕ್ಷ ಗ್ರಾಮಗಳನ್ನು ಸಮೃದ್ಧಗೊಳಿಸುವುದು ಮುಖ್ಯವಾದ ಹೆಜ್ಜೆಗಳಲ್ಲೊಂದು. ನಮ್ಮ ಗ್ರಾಮಗಳಲ್ಲಿ ಭೌತಿಕ, ಎಲೆಕ್ಟ್ರಾನಿಕ್ ಮತ್ತು ಜ್ಞಾನಧಾರಿತ ಸಂಪರ್ಕ ವ್ಯವಸ್ಥೆಯಿದ್ದು, ಅದು ಆರ್ಥಿಕ ಚಟುವಟಿಕೆಯ ಪ್ರಗತಿಗೆ ಕಾರಣವಾಗಬೇಕು. ಜನತೆಯ ಆದಾಯದಲ್ಲಿ ಹೆಚ್ಚಳಕ್ಕೆ ಇದರಿಂದ ಅವಕಾಶ ಸೃಷ್ಟಿಯಾಗುತ್ತದೆ. ಕೃಷಿ ಕುಟುಂಬದಿಂದ ಬಂದಿರುವ ಯುವಜನತೆಯಲ್ಲಿ ಒಂದಷ್ಟು ಮಂದಿ ಇತರ ಕ್ಷೇತ್ರಗಳಲ್ಲಿ ಅವಕಾಶ ಗಳನ್ನು ಅರಸುತ್ತಾರೆ. ಇದು ನಗರಗಳತ್ತ ಅವರ ವಲಸೆಯನ್ನು ಪ್ರಚೋದಿಸುತ್ತದೆ. ಆದರೆ ಗ್ರಾಮೀಣ ಬಿಪಿಒ ಮೂಲಕ ಅವರಿಗೆ ಹೊಸ ಕೌಶಲ್ಯ ಕಲಿಯಲು ಹಾಗೂ ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯವಾಗಬಹುದು. ಇದರಿಂದ ಕೃಷಿ ಸಮುದಾಯಕ್ಕೂ ಅನುಕೂಲ ದೊರೆಯಲಿದೆ. ಗ್ರಾಮೀಣ ಬಿಪಿಒಗಳು ಸಾಮಾಜಿಕ ಹಾಗೂ ಅರ್ಥಿಕವಾಗಿ ತೀರಾ ಹಿಂದುಳಿದ ಯುವಜನತೆಗೆ ತರಬೇತಿ ನೀಡಿ ಕೆಲಸ ಒದಗಿಸುವುದರ ಜೊತೆಗೆ ಅವರನ್ನು, ಇತರ ಅಂತಾರಾಷ್ಟ್ರೀಯ ಬಿಪಿಒ ಉದ್ಯೋಗಿಗಳ ಮಟ್ಟಕ್ಕೆ ಸಮನಾಗಿ ಬೆಳೆಸಬೇಕು. ಇದರಿಂದ ನಗರಗಳತ್ತ ವಲಸೆಯನ್ನು ತಡೆಯಬಹುದು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಇ ಆಡಳಿತ ಪದ್ಧತಿಯಲ್ಲಿ ಗ್ರಾಮೀಣ
ಸೀಟು ನೂರಿದ್ದರೆ ಸಬ್ಸಿಡಿ
ಹಾಗಾದರೆ ಆವತ್ತು ಸಂದರ್ಶನದಲ್ಲಿ ಏನು ಬೇಕಂತ ಕೇಳಿದರು ?
ಗ್ರಾಮೀಣ ಬಿಪಿಒ ಯೋಜನೆಯಿಂದ ಆಕರ್ಷಿತರಾಗಿ ತನ್ನೂರಿನಲ್ಲೂ ಸೆಂಟರ್ ತೆರೆಯುವ ಉತ್ಸಾಹವನ್ನು ಆವತ್ತು ಹೊಂದಿದ್ದ, ಆ ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ ತಮಗಾದ ಅನುಭವವನ್ನುವಿವರಿಸಿದ್ದು ಹೀಗೆ : ‘ ನಾನು ಎಂಸಿಎ ಮಾಡಿದ್ದೇನೆ. ಹಿಂದುಳಿದ ಜಿಲ್ಲೆಯಿಂದ ಬಂದವನು. ನಮ್ಮೂರಲ್ಲಿ ಬಿಒಇ ಓಪನ್ ಮಾಡಿದರೆ ಸಾಕಷ್ಟು ಮಂದಿಗೆ ಉದ್ಯೋಗ ಸಿಗುತ್ತದೆ. ಹೊಸಬರಿಗೆ ಒಳ್ಳೆಯ ಚಾನ್ಸು ಅಂದುಕೊಂಡಿದ್ದೆ. ಆದರೆ ಇಂಟರ್‌ವ್ಯೂನಲ್ಲಿ ನಡೆದದ್ದೇ ಬೇರೆ ಕಥೆ. ನೀವು ಯಾವುದಾದರೂ ಕಂಪನಿಯಿಂದ ಕಮಿಟ್‌ಮೆಂಟ್ ಲೆಟರ್ ತನ್ನಿರಿ ಎಂದರು. ಯಾವುದೇ ಕಚೇರಿಯಾಗಲಿ, ಅನುಭವವಾಗಲಿ ಇಲ್ಲದ ನನಗೆ ಅದ್ಯಾವ ಕಂಪನಿಯವರು ಪ್ರಾಜೆಕ್ಟ್ ಕೊಡ್ತಾರೆ ?
ಮೊದಲು ಕಚೇರಿ ತೆರೆಯಿರಿ, ಮೂಲಸೌಕರ್ಯ ಎಲ್ಲಿದೆ ಅಂತ ತೋರಿಸಿ, ಉದ್ಯೋಗಿಗಳನ್ನು ಸೇರಿಸಿ..ಯಾವುದೂ ಇಲ್ಲದೆ ಕಮಿಟ್‌ಮೆಂಟ್ ಲೆಟರ್ ಕೊಡಿ ಎಂದರೆ ಅದನ್ನು ಒಪ್ಪುವುದು ಹೇಗೆ ? ಎಂದು ಕಂಪನಿಯವರು ನಕ್ಕು ಹೇಳುತ್ತಾರೆ. ಹೇಗೋ ಮಾಡಿ ಕಮಿಟ್‌ಮೆಂಟ್ ಲೆಟರ್ ತಂದುಕೊಟ್ಟರೆ, ಇಂಥದ್ದನ್ನೆಲ್ಲ ಯಾರು ಬೇಕಾದರೂ ತರಿಸಬಹುದು, ಹೋಗಿ ಇದೆಲ್ಲ ಆಗಲ್ಲ ಎನ್ನುತ್ತಾರೆ. ಬಂಡವಾಳವೇ ಇಲ್ಲದಿದ್ದರೆ ನೂರು ಸೀಟುಗಳ ಬಿಪಿಒ ಸ್ಥಾಪಿಸುವುದಾದರೂ ಹೇಗೆ ? ಬಂಡವಾಳ ಇಲ್ಲದ ಕಾರಣಕ್ಕೇ ಸರಕಾರದ ಸಹಾಯ ಕೇಳುತ್ತೇವೆ. ಎಲ್ಲ ಇದ್ದಿದ್ದರೆ ಇವರ್‍ಯಾಕೆ ಬೇಕು ? ಎಂದರು ನಿರಾಸೆಯಿಂದ.
ರಾಜ್ಯ ಸರಕಾರದ ಇತ್ತೀಚಿನ ಗ್ರಾಮೀಣ ಬಿಪಿಒ ಯೋಜನೆಯನ್ನು ಯುವಜನತೆ ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಅವರಲ್ಲಿ ಎಸ್ಸೆಸ್ಸೆಲ್ಸಿ , ಪಿಯುಸಿ ಪೂರೈಸಿದವರಿದ್ದಾರೆ. ಎಂಬಿಎ, ಎಂಸಿಎ, ಬಿಸಿಎ ವಿದ್ಯಾರ್ಥಿಗಳೂ ಇದ್ದಾರೆ. ನಗರ ಮತ್ತು ಪಟ್ಟಣಗಳಲ್ಲಿನ ಸಣ್ಣ ಪುಟ್ಟ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್‌ಗಳ ಮಾಲೀಕರೂ ಇದ್ದಾರೆ. ಕಳೆದ ವಾರ ಉದ್ಯೋಗ ವಿಜಯದಲ್ಲಿ ಪ್ರಕಟವಾದ ಗ್ರಾಮೀಣ ಬಿಪಿಒ ಕುರಿತ ವರದಿಗೆ ಹಲವು ಓದುಗರು ಪ್ರತಿಕ್ರಿಯಿಸಿದ್ದು, ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಹೆಚ್ಚಿನ ಮಾಹಿತಿಯನ್ನು, ಸಂಪರ್ಕ ಸಂಖ್ಯೆಯನ್ನು, ಮಾರ್ಗದರ್ಶನವನ್ನು ಬಯಸಿದ್ದಾರೆ. ಮಹತ್ವಾಕಾಂಕ್ಷೆಯ ಈ ಯೋಜನೆಯ ಅನುಷ್ಠಾನದಲ್ಲಿ ನಡೆದಿರುವ ಲೋಪಗಳನ್ನು ಕೆಲವರು ಬೊಟ್ಟು ಮಾಡಿದ್ದಾರೆ. ತುಂಬ ಚೆನ್ನಾಗಿರುವ ಈ ಯೋಜನೆಯ ಅನುಷ್ಠಾನ ಮಾತ್ರ ಅಷ್ಟೇ ಕೆಟ್ಟ ರೀತಿಯಲ್ಲಿ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಮೇಲೆ ಹೇಳಿದ್ದು ಅಂತಹದೊಂದು ಸ್ಯಾಂಪಲ್.
ಇದನ್ನೆಲ್ಲ ಕಂಡಾಗ ಒಂದಂತೂ ಸ್ಪಷ್ಟ. ಕೆಲವು ಮಾರ್ಪಾಟುಗಳೊಂದಿಗೆ ಯೋಜನೆ ಸರಿಯಾಗಿ ಕಾರ್ಯಗತವಾದ ಪಕ್ಷದಲ್ಲಿ ಇದು ಜನಪ್ರಿಯವಾಗಲಿದೆ. ಎಸ್ಸೆಸ್ಸೆಲ್ಸಿ. ಪಿಯುಸಿ ಮಾತ್ರ ಆಗಿರುವ , ಮುಂದೇನೆಂಬ ಚಿಂತೆಯಲ್ಲಿರುವ ನಿರುದ್ಯೋಗಿ ಯುವ ಜನತೆಗೆ ಇದರಿಂದ ಉಪಯೋಗವಾಗಲಿದೆ.
ಅಂದಹಾಗೆ ಗ್ರಾಮೀಣ ಬಿಪಿಒ ಯೋಜನೆಯ ಬಗ್ಗೆ ಮಾಹಿತಿ ತಂತ್ರeನ ಇಲಾಖೆ, ಕಳೆದ ಜೂನ್ ತಿಂಗಳಿನಲ್ಲಿ ೨೭ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಿತು. ಗ್ರಾಮೀಣ ಬಿಪಿಒ ಘಟಕವನ್ನು ತೆರೆಯಲು ಸರಕಾರದ ಸಬ್ಸಿಡಿ ನೆರವು ಕೋರಿ ೧೦೪ ಮಂದಿ ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ ೨೭ ಮಂದಿಯನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಈ ಸಂವಹನದಲ್ಲಿ ಒಟ್ಟು ಆರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಾಲ್ವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಅವುಗಳೆಂದರೆ-
೧. ಯೋಜನೆಯ ಪ್ರಸ್ತಾವನೆಯ ಬಗ್ಗೆ ಸಂಪೂರ್ಣ ವಿವರ. ೨. ಅಭ್ಯರ್ಥಿಯ ವಿದ್ಯಾರ್ಹತೆ/ ತಾಂತ್ರಿಕ ನೈಪುಣ್ಯತೆ. ೩. ಬಂಡವಾಳ ಹಾಕುವ ಸಾಮರ್ಥ್ಯ. ೪. ಉದ್ದೇಶಿತ ಯೋಜನೆಗೆ ಪ್ರತಿಷ್ಠಿತ ಕಂಪನಿಗಳಿಂದ ಬಿಪಿಒ ಪ್ರಸ್ತಾಪಗಳನ್ನು (ಆರ್ಡರ್‍ಸ್) ಪಡೆದಿರುವ ಬಗ್ಗೆ. ೫. ಅನುಭವ. ೬. ಈಗಾಗಲೇ ಬಿಪಿಒ ನಡೆಸುತ್ತಿದ್ದಲ್ಲಿ ಅದರ ಅನುಭವದ ವಿವರ.
ಸಂದರ್ಶನದಲ್ಲಿ ಆಯ್ಕೆಯಾಗಲು ವಿಫಲರಾದ ಬಹುತೇಕ ಮಂದಿ, ಆಯ್ಕೆಯ ಈ ಮಾನದಂಡವನ್ನು ಕಟುವಾಗಿ ಟೀಕಿಸಿದ್ದಾರೆ. ಈಗಾಗಲೇ ಬಿಪಿಒ ಘಟಕ ಹೊಂದಿರುವ ಉದ್ಯಮಿಗಳಿಗೆ ಮಾತ್ರ ಸಬ್ಸಿಡಿ ನೆರವು ಕೊಟ್ಟಿದ್ದಾರೆ. ಕನಿಷ್ಠ ೨೫ರಿಂದ ೩೦ ಲಕ್ಷ ಬಂಡವಾಳ ಹಾಕಬಲ್ಲವರಿಗೆ, ಅನುಭವಸ್ಥರಿಗೆ ಮಾತ್ರ ಸಬ್ಸಿಡಿ ನೆರವು ನೀಡಲು ಇಲಾಖೆ ಮುಂದೆ ಬಂದಿದೆ. ಆದರೆ ಹೊಸಬರಿಗೆ ಇಲ್ಲಿ ಅವಕಾಶವೇ ಇಲ್ಲ. ಇದರಿಂದ ಹಾಲಿ ಬಿಪಿಒ ಘಟಕ ನಡೆಸುತ್ತಿರುವವರಿಗೆ ಅದಕ್ಕೆ ಸಮೀಪದಲ್ಲಿ ಮತ್ತೊಂದು ಶಾಖೆ ತೆರೆಯಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ. ಆದರೆ ನಿಜಕ್ಕೂ ನೆರವು ಬೇಕಾಗಿರುವುದು ಹೊಸಬರಿಗೆ ಅಲ್ಲವೇ ? ಈಗಾಗಲೇ ಬಿಪಿಒ ಘಟಕ ಮತ್ತು ಬಂಡವಾಳ ಇದ್ದರೆ ಸರಕಾರದ ನೆರವು ಯಾವನಿಗೆ ಬೇಕು ? ಇದೆಲ್ಲ ಸಬ್ಸಿಡಿ ದುಡ್ಡು ನುಂಗುವ ಪ್ಲಾನು ಅಷ್ಟೇ. ಇಲ್ಲಿಯೂ ಏನಾದರೂ ಮಾಡುವ, ಆದರೆ ಬಂಡವಾಳ ಹೂಡಲು ಸಾಮರ್ಥ್ಯವಿಲ್ಲದವರನ್ನು ಹೇಳುವರಿಲ್ಲ, ಕೇಳುವರಿಲ್ಲ..ಎಂದು ಸಂದರ್ಶನದಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ನಿರಾಶೆಯಿಂದ ಗೋಳು ಹೊಯ್ದುಕೊಂಡವರಂತೆ ತೋಡಿಕೊಂಡಿದ್ದಾರೆ. ಆಯ್ಕೆಯಾಗಿರುವ ಬೆರಳೆಣಿಕೆಯಷ್ಟು ಮಂದಿ ಅಪಾರ ಸಂತಸದಲ್ಲಿದ್ದು, ತಮ್ಮ ಅರ್ಹತೆ, ಅನುಭವಕ್ಕೆ ಮನ್ನಣೆ ಸಿಕ್ಕಿದೆ. ಇಲ್ಲಿ ಯಾವುದೇ ಪ್ರಭಾವ, ಲಾಬಿ ಗೀಬಿ ನಡೆದಿಲ್ಲ , ಎಲ್ಲವೂ ಪಾರದರ್ಶಕವಾಗಿತ್ತು ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿದ್ದಾರೆ. ಹಾಗಾದರೆ ಯಾವುದನ್ನು ನಂಬುವುದು ?
ಗ್ರಾಮೀಣ ಬಿಪಿಒ ಯೋಜನೆಯ ನೀತಿ ನಿರೂಪಕರು ಬುದ್ಧಿಯೇ ಇಲ್ಲದವರಂತೆ ಎಡವಿದ್ದೇ ಇಲ್ಲಿ. ಗ್ರಾಮೀಣ ಪ್ರದೇಶದಲ್ಲಿ ಬಿಪಿಒ ಸ್ಥಾಪಿಸಲು ಬಯಸುವ ಉತ್ಸಾಹಿಗಳಿಗೆ, ಅದು ವೈಯುಕ್ತಿಕವಾಗಿರಬಹುದು, ಟ್ರಸ್ಟ್ ಆಗಿರಬಹುದು, ಆರ್ಥಿಕ ನೆರವಿನ ರೂಪದಲ್ಲಿ ೪೦ ಲಕ್ಷ ರೂ. ಸಬ್ಸಿಡಿ ಕೊಡುತ್ತೇವೆ. ಘಟಕ ಸ್ಥಾಪಿಸಿ, ನೆಲೆ ಕಂಡುಕೊಳ್ಳಿ, ನೂರು ಜನರಿಗೆ ಉದ್ಯೋಗ ಕೊಡಿ, ಕಾರ್ಮಿಕ ಕಾಯಿದೆಯನ್ವಯ ಉದ್ಯೋಗಿಗಳಿಗೆ ಸಂಬಳ ಸಾರಿಗೆ ಕೊಡಿ ಎಂದಿತ್ತು ಇಲಾಖೆ. ಆದರೆ ಬಿಪಿಒ ಸ್ಥಾಪಿಸಲು ಬಯಸುವವರಿಗೆ ಕನಿಷ್ಠ ೨೫ರಿಂದ ೩೦ ಲಕ್ಷ ಬಂಡವಾಳ ಹಾಕುವ ತಾಕತ್ತು ಇರಬೇಕು, ಈಗಾಗಲೇ ಹಲವು ವರ್ಷಗಳ ಸಮೃದ್ಧ ಅನುಭವ ಇರಬೇಕು, ಅಲ್ಲದೆ ಬೇರೆ ಬೇರೆ ಕಂಪನಿಗಳಿಂದ ಈಗಾಗಲೇ ಹೊರಗುತ್ತಿಗೆ ಒಪ್ಪಂದಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಎಂಬ ಅಂಶಗಳನ್ನು ಇಲಾಖೆ ಪ್ರಚುರಪಡಿಸಲೇ ಇಲ್ಲ.
‘ನಮ್ಮದು ಅತ್ಯಂತ ಕಟ್ಟುನಿಟ್ಟಿನ ಪದ್ಧತಿ. ಅಭ್ಯರ್ಥಿಗಳ ಅರ್ಹತೆಯನ್ನು ಅಳೆಯಲು ಅಂಕಗಳನ್ನು ಕೂಡ ನೀಡಿದ್ದೆವು. ಆದ್ದರಿಂದಲೇ ನೋಡಿ, ಬಂದಿದ್ದ ೧೦೪ ಅರ್ಜಿಗಳ ಪೈಕಿ ನಾಲ್ವರು ಮಾತ್ರ ಆಯ್ಕೆಯಾಗಿದ್ದಾರೆ ’ ಅಂತ ಅಕಾರಿಗಳು ಕೇಳಿದವರಿಗೆ ತಮ್ಮನ್ನು ಸಮರ್ಥಿಸಿಕೊಂಡರು. ಆದರೆ ಇಂತಹ ಕಟ್ಟುಪಾಡುಗಳ ಸಂಗತಿ ಅಭ್ಯರ್ಥಿಗಳಿಗೆ ಗೊತ್ತಾಗಿದ್ದು, ಬೆಂಗಳೂರಿನಲ್ಲಿ ನಡೆದ ವೈಯಕ್ತಿಕ ಸಂದರ್ಶನದಲ್ಲಿ ಮಾತ್ರ. ಅಲ್ಲಿಯ ತನಕ ಏನೊಂದೂ ಗೊತ್ತಿರಲಿಲ್ಲ. ವೈಯಕ್ತಿಕ ಸಂದರ್ಶನಕ್ಕೆ ಆಯ್ಕೆಯಾದಾಗ, ಇನ್ನೇನು ನಮ್ಮದೇ ಆದ ಬಿಪಿಒ ಘಟಕಕ್ಕೆ ಸರಕಾರದ ವತಿಯಿಂದ ೪೦ ಲಕ್ಷ ಸಬ್ಸಿಡಿ ಸಿಕ್ಕೇ ಬಿಡ್ತು ಎಂಬ ಉಮೇದಿನಲ್ಲಿದ್ದ ಆಕಾಂಕ್ಷಿಗಳ ಉತ್ಸಾಹ ಯುಎನ್‌ಐ ಬಿಲ್ಡಿಂಗ್‌ನಲ್ಲಿ ಕೆಲವೇ ಕ್ಷಣಗಳಲ್ಲಿ ಧರೆಗಿಳಿಯಿತು. ಸ್ವಾರಸ್ಯ ಏನೆಂದರೆ ಸಂದರ್ಶನ ಪೂರೈಸಿದ ನಂತರವೂ, ತಮಗೆ ಅಂಕಗಳನ್ನು ನೀಡಿದ್ದಾರೆ ಎಂಬ ಸಂಗತಿ ಕೆಲವು ಅಭ್ಯರ್ಥಿಗಳಿಗೆ ತಿಳಿದಿರಲಿಲ್ಲ. ಅಭ್ಯರ್ಥಿಯೊಬ್ಬರನ್ನು ಸಂಪರ್ಕಿಸಿದ ಪತ್ರಿಕೆ ‘ ನಿಮಗೆ ಸಂದರ್ಶನದಲ್ಲಿ ೨೧ ಅಂಕಗಳನ್ನು ನೀಡಿದ್ದರು ಎಂದು ತಿಳಿಸಿದಾಗ, ಹೌದಾ ? ನಂಗೆ ಗೊತ್ತೇ ಇರಲಿಲ್ಲ, ಎಷ್ಟರಲ್ಲಿ ಇಪ್ಪತ್ತೊಂದು ಸಾರ್ ? ’ ಎಂದರು. ‘ ಲೋ ಬಾರಯ್ಯ, ನಾವೊಂದು ಬಿಸಿನೆಸ್ ಮಾಡೋಣ, ನೀನು ಮೂವತ್ತು ಲಕ್ಷ ಹಾಕು, ನಾನು ನಲುವತ್ತು ಲಕ್ಷ ಕೊಡ್ತೀನಿ, ನೂರು ಜನ ಕೆಲಸಗಾರರಿಗೆ ಸಂಬಳ ಕೊಡು, ಮತ್ತೆ ಏನ್ ಬೇಕಾದ್ರೂ ಮಾಡು..ಕಣ್ಲಾ..ಆಗಲ್ಲಾಂದ್ರೆ ನಡಿ..’ ಅಂತ ಸಂತೆಯಲ್ಲಿ ನಿಂತು ಹೇಳಿದ ಹಾಗೆ ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತು. ಹಾಗಾದರೆ ಬಿಪಿಒದ ಎಬಿಸಿಡಿ ಗೊತ್ತಿಲ್ಲದವರಿಗೆ ೪೦ ಲಕ್ಷ ರೂ. ಸಬ್ಸಿಡಿ ಕೊಟ್ಟರೆ, ನಾಳೆ ಅಂಗಡಿ ನಡೆಸಿಕೊಂಡು ಹೋಗೋ ತಾಕತ್ತು ಅವರಿಗೆ ಇರುತ್ತಾ ? ಒಂದುವೇಳೆ ಅಪಾರ್ಥರಿಗೆ ಲಕ್ಷಾಂತರ ರೂ. ನೆರವು ಕೊಟ್ಟ ನಂತರ ನಷ್ಟವಾದಲ್ಲಿ ಯೋಜನೆ ಹಳ್ಳ ಹಿಡಿಯುವುದಿಲ್ಲವೇ ? ಆದ್ದರಿಂದಲೇ ಅನುಭವ ಮತ್ತು ತಾಕತ್ತು ಇರುವವರನ್ನು ನೋಡಿ ನೆರವು ನೀಡುತ್ತೇವೆ ಎನ್ನುತ್ತಾರೆ ಅಕಾರಿಗಳು ನಮ್ಮದೇನೂ ತಪ್ಪಿಲ್ಲಪ್ಪಾ ಎನ್ನುವ ಧಾಟಿಯಲ್ಲಿ.
ನಿಜ. ಅಕಾರಿಗಳು ಹಾಗನ್ನುವುದರಲ್ಲಿ ತಪ್ಪಿಲ್ಲ. ಪುಕ್ಕಟೆಯಾಗಿ ಸಬ್ಸಿಡಿ ಕೊಡಿ ಅಂದರೆ ಯಾರು ಒಪ್ಪುತ್ತಾರೆ ? ಆದರೆ ಗ್ರಾಮೀಣ ಬಿಪಿಒ ಯೋಜನೆಯ ಸಿದ್ಧತೆಯಲ್ಲಿ ಬಿಪಿಒ ಮಾರುಕಟ್ಟೆ, ನಮ್ಮ ಗ್ರಾಮೀಣ ಭಾಗದ ವಿಸ್ತಾರ ಮತ್ತು ಸ್ಥಳದಿಂದ ಸ್ಥಳಕ್ಕೆ ಕಂಡುಬರುವ ಆರ್ಥಿಕ, ಸಾಮಾಜಿಕ ಮತ್ತು ಔದ್ಯೋಗಿಕ ಲಕ್ಷಣ ಮತ್ತು ವ್ಯತ್ಯಾಸಗಳನ್ನು ಪರಿಗಣಿಸದಿರುವುದು, ಇತರ ಉದ್ಯಮಗಳಿಗೆ ಅನ್ವಯಿಸುವ ಕಾಯಿದೆಗಳನ್ನೇ ಬಿಪಿಒ ಉದ್ಯಮಕ್ಕೂ ಅನ್ವಯಗೊಳಿಸಿರುವುದು ಈ ಅಕಾರಿಗಳು ಎಸಗಿದ ತಪ್ಪು. ಗ್ರಾಮೀಣ ಭಾಗದಲ್ಲಿ ಬಿಪಿಒ ಮಾದರಿಯಾಗಿ ಬೆಳೆಯಬೇಕಾದರೆ, ಅಲ್ಲಿನ ಆರ್ಥಿಕತೆಗೆ ಪುಷ್ಟಿಯನ್ನು ನೀಡಬೇಕಾದರೆ, ಅದಕ್ಕೆ ಬೇರೆಯೇ ಆದ ನೀತಿ ಮತ್ತು ವಿಧಾನ ಬೇಕೆಂಬ ಬುದ್ಧಿ ಆತುರದಲ್ಲಿ ಇವರಿಗೆ ಹೊಳೆಯಲೇ ಇಲ್ಲ. ಹೀಗಾಗಿ ನಮಗಂತೂ ಈ ಯೋಜನೆಯಲ್ಲಿ ಅವಕಾಶವೇ ಇಲ್ಲ ಎಂದು ಬಹುತೇಕ ಆಕಾಂಕ್ಷಿಗಳು ನಿರಾಶೆಗೊಳಗಾಗುವಂತಹ ಪರಿಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಯಾಕೆಂದರೆ ಈಗಿನ ನಿಯಮಾವಳಿಗಳ ಪ್ರಕಾರ ನೂರು ಸೀಟುಗಳ ಬಿಪಿಒ ಸ್ಥಾಪಿಸಬೇಕಾದರೆ ಅಭ್ಯರ್ಥಿ ಸ್ವತಃ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷವಾದರೂ ಬಂಡವಾಳ ಹೂಡಬೇಕಾಗುತ್ತದೆ. ಪ್ರತಿ ತಿಂಗಳು ನೂರು ಮಂದಿಯ ಸಂಬಳ ತಲಾ ೩,೦೦೦ ರೂ. ಎಂದರೂ ೩ ಲಕ್ಷ ರೂ. ಬೇಕು. ಕಂಪನಿ ಕಾಯಿದೆಯ ಪ್ರಕಾರ ಇತರ ಸೌಲಭ್ಯ ಒದಗಿಸಬೇಕಾದರೆ ಮತ್ತೂ ಖರ್ಚಾಗುತ್ತದೆ. ಅದಕ್ಕೂ ಮೊದಲು ಅವರಿಗೆ ತಜ್ಞರಿಂದ ತರಬೇತಿ ನೀಡಿ ಸಜ್ಜುಗೊಳಿಸುವುದು ಸುಲಭದ ಮಾತಲ್ಲ. ಹೊಸಬರಿಗೆ ಅದೊಂದು ಸವಾಲೇ. ತರಬೇತಿಗೆಂದೇ ಎರಡು ತಿಂಗಳಾದರೂ ಹಿಡಿಯುತ್ತದೆ. ಆದ್ದರಿಂದ ನೂರು ಮಂದಿಯ ಹಡಗನ್ನು ನಡೆಸಲು ದೊಡ್ಡ ಮೊತ್ತದ ಬಂಡವಾಳ, ಅನುಭವ ಬೇಕೇ ಬೇಕು. ಇಂಥ ಸಂದರ್ಭದಲ್ಲಿ ಸರಕಾರ ಏನು ಮಾಡಬಹುದು ?
ನೂರು ಸೀಟುಗಳ ಜೊತೆಗೆ ಐವತ್ತು, ಇಪ್ಪತ್ತೈದು ಹಾಗೂ ಹದಿನೈದು ಸೀಟುಗಳ ಸಣ್ಣ ಬಿಪಿಒ ಘಟಕಗಳ ಸ್ಥಾಪನೆಗೆ ಕೂಡ ಮಾಹಿತಿ ತಂತ್ರಜ್ಞಾನ ಇಲಾಖೆ ಬೆಂಬಲ ನೀಡಬೇಕು. ಇಂತಹ ಅನುಕೂಲದಿಂದ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹೊರಗುತ್ತಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಸಬ್ಸಿಡಿಯ ಮೊತ್ತ ಕೂಡ ಸೀಟುಗಳ ಸಂಖ್ಯೆಯನ್ನು ಅನುಸರಿಸಿರಲಿ. ಆಗತಾನೆ ಎಂಬಿಎ, ಬಿಸಿಎ, ಎಂಸಿಎ ಅಂತ ಕೋರ್ಸ್ ಪೂರೈಸಿದವರಿಗೆ ಏಕಾಏಕಿಯಾಗಿ ನೂರು ಸೀಟುಗಳ ಬಿಪಿಒ ಮಾಡಿಬಿಡಿ, ನಾವು ನಲ್ವತ್ತು ಲಕ್ಷ ಸಬ್ಸಿಡಿ ಕೊಡ್ತೇವೆ..ಎಂದರೆ ನೀರಿಳಿಯದ ಗಂಟಲೊಳು ಕಡುಬು ತುರುಕಿದಂತೆ ಆಗುವುದಿಲ್ಲವೇ ? ಈವತ್ತು ಉತ್ಸಾಹಿಯೊಬ್ಬ ಬ್ಯಾಂಕಿಗೆ ಹೋಗಿ, ಸಾರ್ ನಾನು ಹೊಸತಾಗಿ ಹಳ್ಳಿಯಲ್ಲಿ ಬಿಪಿಒ ಸೆಂಟರ್ ಶುರು ಮಾಡುತ್ತೇನೆ. ಒಂದಿಪ್ಪತ್ತು ಲಕ್ಷ ಸಾಲ ಕೊಡುವಿರಾ ಎಂದರೆ, ವೆರಿ ಗುಡ್ ಆಗಲಿ ಎನ್ನುವ ಮ್ಯಾನೇಜರ್ ಎಲ್ಲಿದ್ದಾರೆ ಹೇಳಿ ? ಆತನ ಎಂಬಿಎ, ಬಿಸಿಎ,ಎಂಸಿಎ ಸರ್ಟಿಫಿಕೇಟ್‌ಗಳೂ ಸಾಲಕ್ಕೆ ಖಾತರಿಯಾಗಲಾರದು. ಉದ್ದಿಮೆಯಲ್ಲಿ ಸಾಕಷ್ಟು ಅನುಭವ ಇರುವ ಮಂದಿಯೇ ಗ್ರಾಮೀಣ ಬಿಪಿಒ ವಿಷಯದಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಕಾರಣ ಏನೆಂದರೆ ನೂರು ಸೀಟುಗಳ ಬಿಪಿಒ ನಡೆಸುವುದು ಹೇಳಿದಷ್ಟು ಸುಲಭವಲ್ಲ, ಸರಕಾರ ಸಬ್ಸಿಡಿಯನ್ನೇನೋ, ಕೊಡುತ್ತದೆ. ಆದರೆ ಯಾವಾಗ ? ಆರಂಭದಲ್ಲಿ ಮೂಲಸೌಕರ್ಯ, ವರ್ಕಿಂಗ್ ಕ್ಯಾಪಿಟಲ್ ಹೂಡಿದ ಮೇಲಷ್ಟೆ ತಾನೇ ? ಅಕಸ್ಮಾತ್ ಮುಂದೆ ನಷ್ಟವಾದರೆ ತಡೆದುಕೊಳ್ಳುವುದು ಹೇಗೆ ? ಈ ಆತಂಕದಿಂದಲೇ ಹಲವಾರು ಮಂದಿ ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗುವುದರ ಬದಲಿಗೆ ಐವತ್ತು, ಇಪ್ಪತ್ತೈದು ಹಾಗೂ ಹದಿನೈದು ಸೀಟುಗಳ ಕಿರು ಘಟಕಗಳಿಗೂ ಸಬ್ಸಿಡಿ ಬೆಂಬಲ ಕೊಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಂದೆ ಬರುತ್ತಾರೆ. ರಿಸ್ಕ್ ಹಂಚಿ ಹೋಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೇರೂರಿರುವ ಕಂಪನಿಗಳಿಗೆ ಎಷ್ಟೋ ಸಲ ಪ್ರಾಜೆಕ್ಟ್‌ಗಳ ಒತ್ತಡ ತೀವ್ರವಾಗಿದ್ದಾಗ, ಇಂತಹ ಸಣ್ಣ ಪುಟ್ಟ ಘಟಕಗಳಿಗೆ ಹೊರಗುತ್ತಿಗೆ ವಹಿಸಬಹುದು. ಆಗ ಎರಡೂ ಕಡೆಗೂ ಲಾಭವಾಗುತ್ತದೆ. ಅನುಭವ ಹೆಚ್ಚಾದಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ರಿಸ್ಕ್ ತೆಗೆದುಕೊಳ್ಳಲು ಬಯಸದವರು ಇದ್ದದ್ದರಲ್ಲಿಯೇ ತೃಪ್ತಿಪಡಲಿ. ಗ್ರಾಮೀಣ ಬಿಪಿಒ ಈಗಷ್ಟೇ ರಾಜ್ಯದಲ್ಲಿ ಕಣ್ಣು ಬಿಡುತ್ತಿದೆ. ಬದಲಾವಣೆ ಮಾಡಿಕೊಳ್ಳಲು ಸಾಕಷ್ಟು ಅವಕಾಶ ಇದೆ. ಇತರ ಉದ್ದಿಮೆಗಳಿಗೂ ಬಿಪಿಒಗೂ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕಕ್ಕೆ ಈ ಕ್ಷೇತ್ರದಲ್ಲಿ ಅಡ್ವಾಂಟೇಜ್ ಹೆಚ್ಚು. ಅದನ್ನೇಕೆ ಲಾಭವಾಗಿ ಪರಿವರ್ತಿಸಬಾರದು ?
ಈವತ್ತು ಗ್ರಾಮಾಂತರ ವಿಭಾಗದ ಶಾಲಾ ಕಾಲೇಜುಗಳಲ್ಲಿಯೂ ಕಂಪ್ಯೂಟರ್ ಕಲಿಕೆ ಸಾಮಾನ್ಯ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದವರಿಗೆ ಮೊದಲು ಕಾಣುವುದೇ ಹತ್ತಿರದ ಪಟ್ಟಣ ಅಥವಾ ನಗರದ ಬಿಪಿಒ ಸೆಂಟರ್‌ಗಳು. ಬೇಕಾದರೆ ಮೈಸೂರು, ಹುಬ್ಬಳ್ಳಿ , ಮಂಗಳೂರು ಎನ್ನದೆ ಎಲ್ಲಾದರೂ ಒಂದು ಸುತ್ತು ಬನ್ನಿ. ಬಿಪಿಒ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವ ಹುಡುಗ ಹುಡುಗಿಯರಾರು ? ಅಕ್ಕಪಕ್ಕದ ಹಳ್ಳಿಯಿಂದ ಬಂದವರೇ. ಉದಾಹರಣೆಗೆ ತೊಕ್ಕೊಟ್ಟು ಸಮೀಪದ ಮುಡಿಪಿನ ನಾರಾಯಣ, ಬೈಕಿನಲ್ಲಿ ದಿನಾ ಮಂಗಳೂರಿಗೆ ಹೋಗಿ ಬಿಪಿಒ ಸೆಂಟರ್ ಒಂದರಲ್ಲಿ ದುಡಿಯುತ್ತಾನೆ. ಅವನಿಗೆ ಪೆಟ್ರೋಲ್‌ಗೇ ಸಾಕಷ್ಟು ಖರ್ಚಾಗುತ್ತದೆ. ಸಮಯವೂ ನಷ್ಟವಾಗುತ್ತದೆ. ಒಂದೊಮ್ಮೆ ಮುಡಿಪಿನಲ್ಲಿಯೇ ಬಿಪಿಒ ಸೆಂಟರ್ ಇದ್ದಿದ್ದರೆ ಆತ ಮಂಗಳೂರಿಗೆ ಹೋಗುತ್ತಿರಲಿಲ್ಲ. ಪೆಟ್ರೋಲ್, ಸಮಯ ಎರಡೂ ಉಳಿತಾಯವಾಗುತ್ತಿತ್ತು. ಇಂಥ ನೂರಾರು ಉದಾಹರಣೆಗಳು ಸಿಗುತ್ತವೆ.
ಪ್ರತಿ ವರ್ಷ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸಾಗಿ ಹೊರ ಬರುತ್ತಿದ್ದಾರೆ. ಆದರೆ ಅವರ ಪೈಕಿ ಉದ್ಯೋಗಾರ್ಹತೆ ಹೊಂದಿರುವವರ ಶೇಕಡಾವಾರು ಕಡಿಮೆ. ಅವರಿಗೆ ಬಿಪಿಒಉದ್ಯಮಕ್ಕೆ ಬೇಕಾದ ವಿಶೇಷ ತರಬೇತಿಯನ್ನು ಕೊಟ್ಟು ಬೆಳೆಸುವ ಕೆಲಸ ನಡೆಯಬೇಕಿದೆ. ಹೀಗಿದ್ದರೂ, ಒಂದೊಮ್ಮೆ ಗ್ರಾಮೀಣ ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟಲ್ಲಿ ಇತರರಿಗೆ ಕಮ್ಮಿಯಿಲ್ಲದಂತೆ ವೃತ್ತಿಪರತೆಯಿಂದ ಮುಂದುವರಿಯುತ್ತಾರೆ. ಅಂತಹ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಬೇಕಿದೆ.

No comments:

Post a Comment