Thursday 6 August 2009

ಸ್ಪೂರ್ತಿದಾತರಿಗೆ ನಮನಗಳು...

ಅವರ ಹೆಸರು ರೇಣುಕಾ ಮಂಜುನಾಥ್‌..
ಪತ್ರಕರ್ತರಿಗೆ ಇರಬೇಕಾದ ಸೂಕ್ಷ್ಮತೆ, ಬರವಣಿಗೆ, ಸುದ್ದಿ ನಾಸಿಕ, ಸುದ್ದಿ ಸಂಗ್ರಹಕ್ಕೆ ಬೇಕಾದ ಸಂಪನ್ಮೂಲ, ಅಧ್ಯಯನ ಎಲ್ಲವೂ ಇದೆ. ಮನೆಯ, ಸಂಸಾರದ ಕೆಲಸದ ಒತ್ತಡದ ನಡುವೆ ಸಮಾಜದ ಆಗಹೋಗುಗಳಿಗೆ ಸದಾ ಸ್ಪಂದಿಸುವ ಅವರ ಸ್ವಭಾವ ನನ್ನ ಗಮನ ಸೆಳೆದಿತ್ತು.
ಈವತ್ತು ಸಂಪನ್ಮೂಲ ವ್ಯಕ್ತಿಯೊಬ್ಬರ ದೂರವಾಣಿ ನಂಬರ‍್ ಪಡೆಯಲೆಂದು ಅವರಿಗೆ ಫೋನ್‌ ಮಾಡಿದೆ. ನಂಬರ್‌ ಮಾತ್ರವಲ್ಲದೆ, ಪತ್ರಿಕೋದ್ಯಮದ ಒಳನೋಟದ ಬಗ್ಗೆ ಸಂಕ್ಷಿಪ್ತವಾಗಿ ತಮಗೆ ತಿಳಿದಿದ್ದನ್ನೆಲ್ಲ ಹೇಳಿಕೊಟ್ಟರು. ಸುದ್ದಿ, ಮಾಹಿತಿ, ಜ್ಞಾನ ನೀಡುವವರನ್ನು ಹೇಗೆ ಸ್ಮರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಅದರಲ್ಲಿಯೂ ಮುಖ್ಯವಾಗಿ ಹೇಳಿದ್ದೇನೆಂದರೆ- " ನಮಗೆ (ಪತ್ರಕರ್ತರಿಗೆ ಅಥವಾ ಯಾರಿಗೂ ಆಗಬಹುದು) ಮಗುವಿನಲ್ಲಿರುವ ಕುತೂಹಲ ಇರಬೇಕು. ಯಾವುದನ್ನು ಕೂಡ ನನಗೆ ಗೊತ್ತು ಅಂತ ಅಲಕ್ಷ್ಯ ಮಾಡಬಾರದು..ಯಾವುದೋ ಸಣ್ಣ ಎಳೆ ಮಹತ್ವದ ಮತ್ತೆಲ್ಲಿಗೋ ಕರೆದೊಯ್ಯಬಹುದು.. " ಎಂದರು.ಎಷ್ಟು ಸತ್ಯವಾದ ಮಾತು ಅಲ್ವಾ...ರೇಣುಕಾ ಮಂಜುನಾಥ್‌ ಅವರೇ, ಇಂತಹ ಸಲಹೆ, ಮಾರ್ಗದರ್ಶನ ಸದಾ ನಿರೀಕ್ಷಿಸುತ್ತೇನೆ. ನಿಮಗೆ ಧನ್ಯವಾದಗಳು.
ಈವತ್ತು ವಿಜಯ ಕರ್ನಾಟಕದಲ್ಲಿ ರೈತರ ಮಕ್ಕಳು ಯಾಕೆ ಬೇಸಾಯ ಮಾಡಲ್ಲ ಎಂಬ ಶೀರ್ಷಿಕೆಯ ನನ್ನ ಲೇಖನ ಪ್ರಕಟವಾಗಿದೆ. ಬೆಳಗ್ಗೆಯೇ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮಿಯವರು ಕರೆ ಮಾಡಿದ್ದರು.
ಕೇಶವ ಪ್ರಸಾದ್‌ ಅವರೇ, ತುಂಬ ಚೆನ್ನಾಗಿ ಲೇಖನ ಬರೆದಿದ್ದೀರಾ, ರೈತರ ಸಮಸ್ಯೆಗಳು ಮತ್ತಷ್ಟು ಬೆಳಕಿಗೆ ಬರಬೇಕು. ಹೀಗೆಯೇ ಬರೆಯುತ್ತಿರಿ...ಅಂತ ಹಾರೈಸಿದರು. ಸ್ವಾಮೀಜಿಯವರೇ, ನಿಮ್ಮ ಹಾರೈಕೆಗೆ ಪ್ರಣಾಮಗಳು.
ಮತ್ತೊಬ್ಬ ಓದುಗ, ಶಂಕರ ಮೂರ್ತಿ ಎಂಬುವರು, " ನಿಮ್ಮ ಲೇಖನ ಓದಿ ಖುಷಿ ಆಯಿತು. ನಾನೂ ರೈತನ ಮಗ. ೪ ಲಕ್ಷ ರೂ. ಸಾಲ ಮಾಡಿದ್ದೇನೆ. ಬೆಳೆ ನಷ್ಟವಾಗಿದೆ. ಮೋಸ ಮಾಡುವವರಿಗೆ ಸಾಲಮನ್ನಾ ಉಪಯೋಗವಾಗಿದೆ. ನಮಗೆಲ್ಲ ಅಲ್ಲ.. ಎಂದು ಪ್ರತಿಕ್ರಿಯಿಸಿದ್ದರು. ವಿಷಾದದಲ್ಲಿಯೂ, ಲೇಖನ ಅವರಿಗೆ ಖುಷಿ ತಂದಿತ್ತು.
ಎಷ್ಟೋ ಸಲ ಹಿರಿಯರು, ಕಿರಿಯರು ಆಡುವ ಪ್ರಬುದ್ಧ ಮಾತು, ಸಲಹೆಗಳು ಹೀಗೆ ಬರವಣಿಗೆಗೆ ಸ್ಪೂರ್ತಿ ನೀಡುತ್ತವೆ. ಅವರಿಗೆಲ್ಲ ಕೃತಜ್ಞತೆ ನುಡಿಚೈತ್ರದ ಮೂಲಕ ಮತ್ತೆ ಮತ್ತೆ ಧನ್ಯವಾದಗಳು.

No comments:

Post a Comment