Thursday 13 August 2009

ಸ್ವಾಮಿ ರಂಗನಾಥಾನಂದ ಬೋಧಿಸಿದ ಶಾಶ್ವತ ಮೌಲ್ಯಗಳು

ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ರಂಗನಾಥಾನಂದ ಅವರ ಪರಿವರ್ತನಶೀಲ ಸಮಾಜಕ್ಕೆ ಶಾಶ್ವತ ಮೌಲ್ಯಗಳು ಕೃತಿ ಶ್ರೇಣಿಯಲ್ಲಿರುವ ವಿಚಾರಗಳು ಚಿಂತನ ಯೋಗ್ಯ. ಸಮಾಜ ಮುಖಿ. ಸ್ಯಾಂಪಲ್‌ ಇಲ್ಲಿದೆ..
ಭಾರತದಲ್ಲಿ ಹಣ ಸಂಪಾದನೆ ಮಾಡುವ ಸಾಮರ್ಥ್ಯವನ್ನು ಬೇಕಾದ ಹಾಗೆ ಪಡೆದಿರುವ ಅದೆಷ್ಟೋ ಬಗೆಯ ಜನರಿದ್ದಾರೆ. ಆದರೆ ಇಲ್ಲಿಯವರೆಗೆ ಖರ್ಚು ಮಾಡಿರುವ ರೀತಿ ಮಾತ್ರ ಅನಾರೋಗ್ಯಕರ. ಉದ್ದೇಶರಹಿತ ಬದುಕಿಗೆ, ಊಳಿಗಗಕ್ಕೋ, ಮಕ್ಕಳ ಡಾಂಭಿಕ ಮದುವೆಗಳಿಗೋ ವಿನಿಯೋಗಿಸಿದವರಿದ್ದಾರೆ.ಇದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ವಿಕೃತ ಪರಿಣಾಮವೇ ಉಂಟಾಯಿತು. ಆದರೆ ಇಂದು ಕೆಲವರಾದರೂ " ನಾವು ನಮ್ಮ ಹಣ, ನಮ್ಮ ಅರಿವು, ನಮ್ಮ ಪ್ರತಿಭೆಗಳನ್ನು ಮಾನವ ಅಭಿವೃದ್ಧಿಗಾಗಿ ಮುಡಿಪಾಗಿಡೋಣ, ಪ್ರಜಾಸತ್ತೆಯ ನಾಗರಿಕರಾದ ನಮಗೆ ದೇಶದ ಹಿಂದುಳಿದ, ಬಡವರ ಮೇಲಣ ಜವಾಬ್ದಾರಿ ಇದೆ, ಅವರೂ ನಮ್ಮವರೇ " ಎಂಬ ರೀತಿಯ ಆರೋಗ್ಯಕರ ಚಿಂತನೆಯಿಂದ ಪ್ರಚೋದಿತರಾಗುತ್ತಿದ್ದಾರೆ.
ನಾವು ನಮ್ಮ ಗ್ರಾಮೀಣ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿರುವುದರಿಂದ ಅದು ನಮ್ಮ ನಗರಪ್ರದೇಶಗಳ ಮೇಲೆ ಅನಪೇಕ್ಷಣೀಯ ಪ್ರಭಾವ ಬೀರುತ್ತದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಆರ್ಥಿಕ ಅವಕಾಶಗಳು ಇರುತ್ತಿದ್ದರೆ , ಶೈಕ್ಷಣಿಕ ಮುನ್ನಡೆಯಾಗಿರುತ್ತಿದ್ದರೆ ನಗರಗಳತ್ತ ಧಾವಿಸಿ ಕೊಳಚೆ ಪ್ರದೇಶಗಳಲ್ಲಿ ಜನ ಮಬ್ಬುಗವಿದ ಜೀವನ ಸಾಗಿಸಲು ಆತುರರಾಗಿರುತ್ತಿರಲಿಲ್ಲ.

No comments:

Post a Comment