Wednesday 5 August 2009

ರೈತರ ಮಕ್ಕಳೇಕೆ ಬೇಸಾಯ ಮಾಡಲ್ಲ ?

ರೈತ ಹೊಲಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ.
ಬೆಳೆದ ಬೆಲೆಗೆ ನ್ಯಾಯವಾದ ದರ ಸಿಗುವುದಿಲ್ಲ.
ಅಂತರ್ಜಲವಿಲ್ಲ, ನೆಲ ವಿಷವಾಗುತ್ತಿದೆ..
ತರಕಾರಿ ದರ ಏರುತ್ತಿವೆ. ಆದರೆ ಬೆಳೆದವನಿಗೆ ಕಿಮ್ಮತ್ತಿಲ್ಲ.
ಮಾರುಕಟ್ಟೆಗೆ ಹೋದರೆ ಮಧ್ಯವರ್ತಿಗಳು ಸುಲೀತಾರೆ.
ಅಧಿಕಾರಿಗಳಿಗೆ ರಾಜಕೀಯ ನಾಯಕರ ಓಲೈಕೆ ಸಾಕು
ನಿಂತ ಬೆಳೆ ಕೊಯ್ಯಲು ಕಾರ್ಮಿಕರು ಸಿಗುವುದಿಲ್ಲ. ಸಾವಯವ ಗೊತ್ತಿಲ್ಲ. ಕೈಯಲ್ಲಿ ಕಾಸಿಲ್ಲ. ಕೂಲಿ ಕೊಡಲಾಗುವುದಿಲ್ಲ, ಸಾಲ ಜಾಸ್ತಿಯಾಗುತ್ತಿದೆ...
ಇಷ್ಟೆಲ್ಲ ಸಮಸ್ಯೆಗಳಿರುವಾಗ ದಿಕ್ಕು ತೋಚದೆ ಕೀಳರಿಮೆಯಿಂದ ನೊಂದು ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದಯವಿಟ್ಟು ಗ್ರಾಮ ವಾಸ್ತವ್ಯ ಮಾಡಿ ಅಂತ ಮಂತ್ರಿಗಳಿಗೆ ಪಕ್ಷಾಧ್ಯಕ್ಷರು ಉತ್ತರದಿಂದ ಬಂದು ಕೌನ್ಸಿಲಿಂಗ್ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಮಠಗಳು ಕೂಡ ಸಾಂಪ್ರದಾಯಿಕ ವ್ಯವಸಾಯಗಳನ್ನೆಲ್ಲ ಕೈ ಬಿಟ್ಟು ಶಿಕ್ಷಣ, ಎಂಜಿನಿಯರಿಂಗ್ ಅಂತ ಬೇರೆ ಉದ್ಯೋಗಗಳಲ್ಲಿ ಫಸಲು ಕಾಣುತ್ತಿವೆ. ಇನ್ನೂ ಕೃಷಿಯನ್ನು ನೆಚ್ಚಿರುವ ಸಣ್ಣ ಪುಟ್ಟ ಮಠಗಳ ಸ್ಥಿತಿ ಬಡಪಾಯಿ ರೈತನಿಗೆ ಸಮವಾಗಿದೆ.
ಎದೆ ಮುಟ್ಟಿ ಕೇಳಿ, ಯಾರಿಗೆ ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳುವಾಸೆ ಇರುತ್ತದೆ ? ನಮ್ಮ ಸರಕಾರಗಳು ನಿಜಕ್ಕೂ ಪ್ರಾಂಜಲ ಮನಸ್ಸಿನಿಂದ ರೈತರ ನೋವನ್ನು ಶಮನಗೊಳಿಸುತ್ತಿವೆಯಾ ? ಪ್ರತಿ ಸಲ ಬಜೆಟ್ ಮಂಡನೆಮಧ್ಯಕ್ಕೆ ಒಗ್ಗೂಡಿಸುಯಾದಾಗಲೂ ಸರಕಾರ ತನ್ನದು ರೈತಪರ ಬಜೆಟ್ ಅಂತ ಘೋಷಿಸುವುದನ್ನು ನೋಡುತ್ತೇವೆ. ಕೇಂದ್ರ ಸರಕಾರ ವಿದರ್ಭ ಪ್ರಾಂತ್ಯದ ರೈತರಿಗೆ ಪ್ಯಾಕೇಜ್ ಪ್ರಕಟಿಸಿ ಕೈ ತೊಳೆಯಿತು. ಆದರೆ ಈವತ್ತಿಗೂ ಅಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ.
ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಉತ್ತೇಜಿಸಿದರೆ ರೈತನ ಬದುಕು ಉದ್ಧಾರವಾದೀತು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಸುಲಿಗೆ ನಿಂತರೆ, ಬೆಳೆಗೆ ಯೋಗ್ಯ ಬೆಲೆ ಕಟ್ಟಿದರೆ ಮಿಕ್ಕಿದ ಸಮಸ್ಯೆಗಳೆಲ್ಲ ಕರಗಿಯಾವು ಅಂತ ಎಲ್ಲರಿಗೂ ಗೊತ್ತಿದೆ. ಆದರೆ ರೈತರ ಕಲ್ಯಾಣದ ಮಂಥನ, ಜಿಜ್ಞಾಸೆಗಳೆಲ್ಲ ಬಾಯುಪಚಾರದಲ್ಲೇ ನಿಂತುಬಿಟ್ಟಿದೆ. ಬರೀ ಮಾತು...ಮಾತು...ಮಾತು..ಬಹುಶಃ ಅತ್ಯಂತ ನಿರ್ಲಕ್ಷಿತ ಕ್ಷೇತ್ರ ಎಂದರೆ ಕೃಷಿಯೇ.
ನೋಡಿ, ಕೃಷಿ ಕ್ಷೇತ್ರದ ಸುಧಾರಣೆಗೆ ಉದ್ಯಮ ಬೆಂಬಲವಾಗಿ ನಿಲ್ಲಬೇಕು. ಅಭಿವೃದ್ಧಿ ಹೊಂದಿದ ಪ್ರತಿ ರಾಷ್ಟ್ರದಲ್ಲಿಯೂ ಶೇ.೮೦ರಷ್ಟು ಕೃಷಿ ಉತ್ಪನ್ನಗಳು ಸಮಸ್ಕರಣೆಯಾಗುತ್ತವೆ. ಆದರೆ ನಮ್ಮಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಹೊತ್ತಿಗೆ ಶೇ. ೪೦ರಷ್ಟು ಸಂಸ್ಕರಣೆಯಾಗದೆ ವ್ಯರ್ಥವಾಗುತ್ತವೆ.
ಗ್ರಾಮೀಣ ಪ್ರದೇಶಗಳ ಸಮಸ್ಯೆ ಮತ್ತು ಆತಂಕದ ಕಾರಣಗಳು ಒಂದೊಂದು ಕಡೆಯಲ್ಲಿ ಭಿನ್ನ. ನಮಗೆ ಚಾಮುಂಡಿ ಬೆಟ್ಟ ಗೊತ್ತು. ಬನ್ನೇರು ಘಟ್ಟ ಗೊತ್ತು. ಯಾಕೆಂದರೆ ಅವೆಲ್ಲ ಬೆಂಗಳೂರಿಗೆ ಸಮೀಪದಲ್ಲಿ ಇದೆ. ಆದರೆ ಗದಗಿನ ಸಮೀಪ ಸುಕಾರು ಒಂದು ಲಕ್ಷ ಎಕರೆಯಲ್ಲಿ ಹರಡಿರುವ ಕಪ್ಪತ್ತಗುಡ್ಡದ ಹೆಸರು ಎಷ್ಟು ಮಂದಿಗೆ ಗೊತ್ತಿದೆ ? ಹೇರಳ ನೈಸರ್ಗಿಕ ಸಂಪನ್ಮೂಲದ ಆಗರವಾಗಿರುವ ಕಪ್ಪತ್ತಗುಡ್ಡದಲ್ಲಿ ಅತ್ಯಂತ ವೇಗದಲ್ಲಿ ಗಾಳಿ ಬೀಸುತ್ತಿದೆ. ಜತೆಗೆ ನಾನಾ ಬಗೆಯ ವದಂತಿಗಳು ಕೂಡಾ. ಅದೇನೆಂದರೆ ಗಣಿಗಾರಿಕೆ. ಇಲ್ಲಿ ಇದೆ ಎನ್ನಲಾಗಿರುವ ಚಿನ್ನದ ಅದಿರನ್ನು ಕಬಳಿಸಲು ಯತ್ನಿಸುತ್ತಿರುವ ಕಂಪನಿಗಳು, ಸೋಡಿಯಂ ಸಯನೈಡ್ ಅನ್ನು ಪ್ರಯೋಗಿಸಲು ಸಂಚು ಹೂಡಿವೆ ಎಂಬ ಗುಲ್ಲು ಗುಡ್ಡದ ತಪ್ಪಲಿನಲ್ಲಿದೆ. ಚಿನ್ನದ ಗಣಿಗಾರಿಕೆಯಲ್ಲಿ ಬಳಸುವ ಈ ಸೋಡಿಯಂ ಸಯನೈಡ್ ಅತ್ಯಂತ ವಿಷಪೂರಿತ.
ಕಪ್ಪತ್ತಗುಡ್ಡದಲ್ಲಿರುವ ಚಿನ್ನದ ನಿಕ್ಷೇಪದ ಮೇಲೆ ಬಂಡವಾಳಶಾಹಿ ಕಂಪನಿಗಳ ವಕ್ರ ದೃಷ್ಟಿ ಬಿದ್ದಿದೆ. ಹೇಗಾದರೂ ಗುಡ್ಡದಲ್ಲಿ ಗಣಿಗಾರಿಕೆ ನಡೆಸಬೇಕೆಂದು ಹೊಂಚು ಹಾಕುತ್ತಿವೆ ಎಂಬ ವದಂತಿ ಈ ಭಾಗದ ಐವತ್ತಾರು ಗ್ರಾಮಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಗಣಿಗಾರಿಕೆ ಆರಂಭವಾದರೆ ಅಲ್ಲಿನ ಪರಿಸರ, ಜೀವಸಂಕುಲ, ಸುತ್ತುಮುತ್ತಲ ಕೃಷಿ ಬದುಕಿನ ನಶ ಸಮೀಪಿಸಿದಂತೆಯೇ ಸರಿ. ಆದರೆ ಈ ಗಂಭೀರ ಸಮಸ್ಯೆಯನ್ನು ಆಲಿಸಲು ಒಬ್ಬರೂ ಬಂದಿಲ್ಲ ಎಂದು ನೋವು ಮತ್ತು ಅಸಹನೆಯಲ್ಲಿ ಹೇಳುತ್ತಾರೆ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮಿ.
ಹೀಗೆ ಏಕಕಾಲದಲ್ಲಿ ದಶದಿಕ್ಕುಗಳಿಂದ ಸಮಸ್ಯೆಗಳು ಬಂದೆರಗಿರುವುದರಿಂದ ಯುವಜನತೆ ಬೆಂಗಳೂರಿಗೋ, ಮುಂಬಯಿಗೋ, ಗೋವಾಗೋ, ಹುಬ್ಬಳ್ಳಿಗೋ ಹೋಗುವುದರಲ್ಲಿ ಆಶ್ಚರ್ಯವಾಗುವಂಥದ್ದೇನಿದೆ ?

No comments:

Post a Comment