Saturday 15 August 2009

ಹಳ್ಳಿಗಳನ್ನು ಕಾಡುವ ಕ್ರಿಮಿನಲ್ ಗಳ ಬಗ್ಗೆ

ಸ್ವಾಮಿ ರಂಗನಾಥಾನಂದರು ಹೇಳಿರುವ ಈ ಮಾತು ಸದಾ ನನ್ನ ಮನಸ್ಸನ್ನು ಕಾಡುತ್ತಿರುತ್ತಿದೆ. ಅವರು ಹೇಳ್ತಾರೆ-
ನಾವು ಶೈಕ್ಷಣಿಕವಾಗಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ನಮ್ಮ ಗ್ರಾಮೀಣ ಬದುಕನ್ನು-ಅದರಲ್ಲಿ ಮೂಲನಿವಾಸಿ ಪ್ರದೇಶಗಳೂ ಸೇರಿದಂತೆ, ಸಮಗ್ರವಾಗಿ ಪರಿವರ್ತಿಸದಿದ್ದರೆ, ನಮ್ಮ ರಾಷ್ಟ್ರೀಯ ಅಭಿವೃದ್ಧಿ, ಶಕ್ತಿ, ಸಾಮರ್ಥ್ಯಗಳನ್ನು ನಾವು ಎಂದಿಗೂ ಸಾಧಿಸಲಾರೆವು.
ನಮ್ಮನ್ನು ಪ್ರಭಾವಿಸುವ ಎಲ್ಲಾ ಸಮಸ್ಯೆಗಳು, ನಗರ ಪ್ರದೇಶದ ಸಮಸ್ಯೆಗಳು ಕೂಡ, ಅಭಿವೃದ್ಧಿಯಾಗದ ಗ್ರಾಮೀಣ ಕ್ಷೇತ್ರದ ಸ್ಥಿತಿಗತಿಗಳಿಂದಲೇ ಉದ್ಭವಿಸಿವೆ. ನಮ್ಮ ಪಟ್ಟಣಗಳ, ನಗರಗಳ ಅಭಿವೃದ್ಧಿ, ಸುಧಾರಣೆಗಳನ್ನು ಸಾಧಿಸುವುದಕ್ಕೆ ಜತೆಜತೆಯಾಗಿ ಅಥವಾ ಪೂರ್ವಭಾವಿಯಾಗಿ ನಾವು ನಮ್ಮ ವಿಶಾಲ ಗ್ರಾಮೀಣ ಜನತೆಯ ಸ್ಥಿತಿಯನ್ನು ಸುಧಾರಿಸಲು ನಮ್ಮ ಗಮನವೆಲ್ಲವನ್ನೂ ಅದರ ಮೇಲೆ ಕೇಂದ್ರೀಕರಿಸಬೇಕು.
ನಾವು ನಮ್ಮ ಗ್ರಾಮೀಣ ಅಭಿವೃದ್ಧಿಯನ್ನು ಉಪೇಕ್ಷಿಸುತ್ತಿರುವುದರಿಂದ ಅದು ನಮ್ಮ ನಗರಪ್ರದೇಶಗಳ ಮೇಲೆ ಅನಪೇಕ್ಷಣೀಯ ಪ್ರಭಾವ ಬೀರುತ್ತಿದೆ. ನಾವು ಇಲ್ಲಿಯವರೆಗೆ ಯಾವ ಯಾವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರೀಕರಿಸಿದ್ದೇವೆಯೋ ಆ ಕ್ಷೇತ್ರಗಳ ಏಳಿಗೆಯಿಂದ ಕೇವಲ ನಮ್ಮ ಗ್ರಾಮ ಮತ್ತು ಸಮಾಜದ ಪ್ರತಿಷ್ಠಿತರಿಗೆ, ಗಣ್ಯರಿಗೆ ಮಾತ್ರ ಅಭಿವೃದ್ಧಿಯ ಫಲಾನುಭ ಲಭ್ಯವಾಗಿದೆ...
ಎಂಥಾ ಸತ್ಯವಾದ ಮಾತಿದು. ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಹಳ್ಳಿಗಳಲ್ಲೂ ಒಳಹೊಕ್ಕು ನೋಡಿದರೆ, ವಿಚಾರಿಸಿದರೆ ಕಂಡು ಬರುವ ನಗ್ನ ಸತ್ಯವಿದು. ಶಾಂತಿ ಪ್ರಿಯತೆ, ಸಮಾನತೆ ನೆಲಸಿರುವ ಗಂಧದ ಬೀಡಿನಲ್ಲಿ ಕೂಡ ಇಂಥ ಅಸಮಾನತೆ, ಕ್ರೌರ್ಯ, ಸ್ವಾರ್ಥ, ಹಳ್ಳಿಗಳನ್ನು ವಿನಾಶ ಮಾಡುತ್ತಿರುವುದನ್ನು ಕಂಡಾಗ ಹೊಟ್ಟೆಯಲ್ಲಿ ಬೆಂಕಿ ಏಳುತ್ತದೆ.
ಇತ್ತೀಚೆಗೆ ಹಳ್ಳಿಯೊಂದರಲ್ಲಿ ಅಲ್ಲಿನ ಬಡವರ ಸಮಸ್ಯೆಯನ್ನು ಆಲಿಸಲು, ವಿಚಾರಿಸಲು ಯತ್ನಿಸಿದಾಗ ಏಕ ನಾಥನೆಂಬ ( ಹೆಸರು ಬದಲಿಸಿದೆ) ಕ್ರಿಮಿನಲ್‌ ನನ್ನು ಭೇಟಿಯಾಗಿದ್ದೆ. ಕಂಡರಿಯದ ಸಮಾಜಸುಧಾರಕನಂತೆ ಫೋಸು ಕೊಡುತ್ತಿದ್ದ ಈತನ ಕುಟುಂಬಕ್ಕೆ ಆ ಪುಟ್ಟ ಹಳ್ಳಿಯಲ್ಲಿ ನೂರಿಪ್ಪತ್ತು ಎಕರೆ ಜಮೀನಿತ್ತು. ಅದೂ ಬೆಂಗಳೂರಿಗೆ ಅತ್ಯಂತ ಸಮೀಪದ ಗ್ರಾಮ. ಒಂದೆಕರೆ ಖಾಲಿ ಭೂಮಿಗೇ ೪೦ರಿಂದ ೫೦-೬೦ ಲಕ್ಷ ರೂ. ಬೆಲೆ ಬರಬಹುದು. ಈತನ ಪುಂಡಾಟಿಕೆಯ ಬಗ್ಗೆ ಊರೆಲ್ಲ ಕಥೆಗಳಿವೆ. ಕಾರ್ಪೊರೇಷನ್‌ ಕಸದ ಲಾರಿಗಳು ಈತನ ಮೂವತ್ತೆಕರೆ ಜಾಗದಲ್ಲಿ ಕಸದ ಬೆಟ್ಟವನ್ನೇ ಸೃಷ್ಟಿಸಿವೆ. ಅದಕ್ಕೆ ವಿಶ್ವನಾಥ ಬೆಂಕಿ ಇಡುತ್ತಾನೆ. ಒಂದು ಲೋಡು ಕಸಕ್ಕೆ ೪೦೦ ರೂ. ಸಿಗುತ್ತದೆಯಂತೆ. ( ಆದರೆ ಆತ ಅದನ್ನು ಒಪ್ಪುವುದಿಲ್ಲ. ನಾನೇ ಲಾರಿ ಚಾಲಕರಿಗೆ ಖರ್ಚಿಗೆ ನೂರು ರೂ. ಕೊಡುತ್ತೇನೆ ಅನ್ನುತ್ತಾನೆ ಈ ಭೂಪ. ) ಆದರೆ ಊರಿಡೀ ಗಾಳಿಯಲ್ಲಿ ದುರ್ನಾತ ಮತ್ತು ನೊಣಗಳ ಸಾಮ್ರಾಜ್ಯ ಹಬ್ಬಿರುವುದಂತೂ ನಿಜ. ಮನೆಮನೆಯನ್ನೂ ಈ ನೊಣಗಳು ಬಿಡುತ್ತಿಲ್ಲ. ಗ್ರಾಮಸ್ಥರಂತೂ ಅಕ್ಷರಶಃ ರೋಸಿ ಹೋಗಿದ್ದಾರೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಿಲ್ಲ...ಊರಿನವರ ವಿರೋಧವನ್ನು ಲೆಕ್ಕಿಸದೆ ತಾನೇ ಖುದ್ದಾಗಿ ಕಾವಲಿಗೆ ನಿಂತು ಕಸದ ಲಾರಿಗಳನ್ನು ಬರ ಮಾಡಿಕೊಳ್ಳುತ್ತಾನೆ.
ಆತ ಹೀಗೆ ಕಥೆ ಹೇಳುತ್ತಾನೆ- ಕಸ ಹಾಕುವ ಜಾಗದಲ್ಲಿ ದೊಡ್ಡ ಹೊಂಡ ಇದೆ. ಕಸದಿಂದ ಹೊಂಡ ತುಂಬುತ್ತಿದೆ. ಅದರ ಮೇಲೆ ಮಣ್ಣಿನ ಪದರ ನಿರ್ಮಿಸುತ್ತೇನೆ. ಕಾಂಪೋಸ್ಟ್‌ ಗೊಬ್ಬರವಾಗುತ್ತದೆ. ಅದರಲ್ಲಿ ಗೊಬ್ಬರದ ಹುಳ ಹುಟ್ಟುತ್ತದೆ..
ಅಲ್ಲಾ, ಇಪ್ಪತ್ತನಾಲ್ಕು ಗಂಟೆಯೂ ಅಲ್ಲಿ ಹೊಗೆ ಏಳುತ್ತದೆ. ಕಿಚ್ಚು ಆರುವುದಿಲ್ಲ. ಸುತ್ತುಮುತ್ತಲ ಪರಿಸರ ನೊಣ, ಹೊಗೆ, ಧೂಳು ಮತ್ತು ಕಿಚ್ಚಿನಲ್ಲಿ ಸುಡುತ್ತದೆ. ಹೀಗಿರುವಾಗ ಅಲ್ಲಿ ಗೊಬ್ಬರದ ಹುಳು ಬದುಕುತ್ತದಾ ? ಛೀ ಧಿಕ್ಕಾರವಿರಲಿ, ನಾಥನಂತಹ ಕ್ರಿಮಿನಲ್‌ ಗಳಿಗೆ....

No comments:

Post a Comment