Monday 10 August 2009

ನಮ್ಮಲ್ಲಿ ಟೆಕ್ನಿಕಲ್‌ ಪ್ರಶ್ನೆಗಳಿಗೆ ಮಾತ್ರ ಉತ್ತರ...

ರಾಜ್ಯದಲ್ಲಿ ರೈತರಿಗೆ ಸಹಾಯ ಮಾಡಲೆಂದು ಸಹಾಯವಾಣಿಯೊಂದು ಅಸ್ತಿತ್ವದಲ್ಲಿದೆ. ಕೆಲವು ತಿಂಗಳಿನ ಹಿಂದೆ ಚಾಲ್ತಿಗೆ ಬಂದಿರುವ ಸಹಾಯವಾಣಿಯ ನಂ- ೧೮೦೦-೪೨೫-೩೫೫೩. ಇದು ಉಚಿತವಾಗಿದ್ದು , ಬೆಳಗ್ಗೆ ೭ ರಿಂದ ರಾತ್ರಿ ೯ರ ತನಕ ಸೇವೆಗೆ ಲಭ್ಯವಿದೆ. ಸ್ಥಿರ ದೂರವಾಣಿ ಅಥವಾ ಮೊಬೈಲ್ ನಿಂದ ಕರೆ ಮಾಡಬಹುದು. ಇತ್ತೀಚೆಗೆ ಕುತೂಹಲ ತಡೆಯಲಾಗದೆ ಫೋನ್ ನಂಬರ‍್ ಒತ್ತಿದೆ. ಕೊನೆಗೂ ಅನ್ನದಾತನಿಗೆ ನೆರವು ಸಿಗುತ್ತಿದೆಯಲ್ಲವೇ ಅಂತ ಖುಷಿಯೂ ಇತ್ತು. ಅತ್ತ ಕಡೆಯಿಂದ ಪುಣ್ಯಕ್ಕೆ ಅಚ್ಚ ಕನ್ನಡದಲ್ಲೇ ಮಾತನಾಡಿದರು. ನಮಸ್ಕಾರ ಸಾರ‍್, ಎಂದು ನನ್ನ ಪರಿಚಯ ಹೇಳಿದೆ. ಏನು ಮಾಹಿತಿ ಬೇಕಿತ್ತು ಎಂದಾಗ , ಸಾರ‍್, ರಾಜ್ಯದಲ್ಲಿ ಕೃಷಿ ಕ್ಷೇತ್ರ ಸಂಕಟದಲ್ಲಿದೆ. ರೈತರ ಆತ್ಮಹತ್ಯೆ ಆಗಿಂದಾಗ್ಗೆ ವರದಿಯಾಗುತ್ತಿದೆ. ನೆರೆ-ಬರದ ಸಮಸ್ಯೆ ಇದೆ. ಅಂತಹ ತೊಂದರೆ ಎದುರಿಸುತ್ತಿರುವ ರೈತರನ್ನು ಹೇಗೆ ಸಮಾಧಾನ ಪಡಿಸುತ್ತೀರಾ ಎಂದೆ.
ಅದಕ್ಕೆ ಸಿಕ್ಕಿದ ಉತ್ತರ ಏನೆಂದರೆ-
" ನಮ್ಮಲ್ಲಿ ಟೆಕ್ನಿಕಲ್ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗುತ್ತದೆ "
ಅವರ ಇಂಥ ಉತ್ತರದಿಂದ ತೃಪ್ತನಾಗದೆ, ಹಾಗಂದರೆ ? ಎಂದೆ.
ಯಾವ ಬೆಳೆಗೆ ಯಾವ ಗೊಬ್ಬರ ಹಾಕಬೇಕು ? ರಸಗೊಬ್ಬರ ದಾಸ್ತಾನು ಇದೆಯೇ, ಇಲ್ಲವೇ, ಯಾವ ಬೆಳೆಯ ರೋಗಕ್ಕೆ ಎಂಥ ಚಿಕಿತ್ಸೆ ಇದೆ ಎಂಬಿತ್ಯಾದಿ ತಾಂತ್ರಿಕ ಸಮಸ್ಯೆಗಳಿಗೆ ಮಾತ್ರ ತಜ್ಞರಿಂದ ಉತ್ತರ ಕೊಡುತ್ತೇವೆ. ದಿನಕ್ಕೆ ಸುಮಾರು ಎಪ್ಪತ್ತು ಎಂಬತ್ತು ಕರೆಗಳು ಬರುತ್ತಿವೆ ಎಂದರು.
ಹಾಗಾದರೆ ರೈತರು ತಮ್ಮ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆ ಹೇಳಿಕೊಳ್ಳುವುದಿಲ್ಲವಾ ? ಹತಾಶೆಗೊಂಡಿರುವ ಮನಸ್ಸನ್ನು ಸರಿಪಡಿಸುವ ಬಗೆ ಯಾವುದು ? ಹಿಂಡುತ್ತಿರುವ ಸಾಲದ ಹೊರೆಯಿಂದ ಮುಕ್ತನಾಗುವುದು ಹೇಗೆ ಎಂದು ಕೇಳುವುದಿಲ್ಲವಾ ? ಆತ್ಮಹತ್ಯೆಯ ಆಲೋಚನೆ ಮಾಡುವ ರೈತರು ಸಾಂತ್ವನ ಬಯಸಿ ಕರೆ ಮಾಡುವುದಿಲ್ಲವೇ ? ಎಂದು ಕೇಳಿದೆ.
ಸಾರ‍್, ಮೊದಲೇ ಹೇಳಿದೆಯಲ್ಲವೇ, ನಮ್ಮಲ್ಲಿ ಟೆಕ್ನಿಕಲ್ ಪ್ರಶ್ನೆಗಳಿಗೆ ಮಾತ್ರ ಉತ್ತರ ಇದೆ ಅಂತ..ಅಂದರು. ನಾನು ನಿರುತ್ತರನಾದೆ. ಫೋನಿಟ್ಟೆ.

No comments:

Post a Comment