Tuesday 4 August 2009

ಕೃಷಿ ನೆಚ್ಚಿಕೊಂಡ ಮಠಗಳ ವ್ಯಥೆ...

" ಕೃಷಿಯ ಬಗ್ಗೆ ನಮ್ಮ ಜನಕ್ಕೆ ಅತೀವ ಕೀಳರಿಮೆ ಉಂಟಾಗಿದೆ. ಈ ಹಿಂದೆ ವ್ಯವಸಾಯವನ್ನು ಆದಾಯಕ್ಕೆ ನೆಚ್ಚಿಕೊಂಡಿದ್ದ ಮಠಗಳು ಕೂಡ ಈಗ ಶಿಕ್ಷಣ, ವೈದ್ಯಕೀಯದಲ್ಲಿ ಫಸಲು ಕಾಣುತ್ತಿವೆ. ಬೇಸಾಯವನ್ನು ನೆಚ್ಚಿಕೊಂಡಿರುವ ಚಿಕ್ಕಪುಟ್ಟ ಮಠಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಯಾರೊಬ್ಬರೂ ಬಹಿರಂಗವಾಗಿ ಹೇಳುತ್ತಿಲ್ಲವಷ್ಟೇ...
ಸ್ವತಃ ಸ್ವಾಮೀಜಿಯೊಬ್ಬರೇ ಹೇಳಿದ ಮಾತಿದು. ಅವರ ಹೆಸರು ಶ್ರೀ ಶಿವಕುಮಾರ ಸ್ವಾಮಿ. ಗದಗದ ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಸ್ವಾಮೀಜಿಯವರು. ೨೦೦೨ರಲ್ಲಿ ಪಟ್ಟವನ್ನೇರಿದ್ದ ಶಿವಕುಮಾರ ಸ್ವಾಮಿಯವರಿಗೆ ಪರಿಸರದ ಬಗ್ಗೆ ಕಾಳಜಿ. ಸ್ವತಃ ಕೃಷಿಕರು ಎಂದು ಹೇಳಿಕೊಳ್ಳಲು ಅವರಿಗೆ ಹೆಮ್ಮೆ. ಕೃಷಿ ಬಿಟ್ಟರೆ ಮಿಕ್ಕಿದ್ದೆಲ್ಲ ದಂಧೆ ಎನ್ನುವ ಸ್ವಾಮೀಜಿ ಗದಗ ಸಮೀಪದ ಕಪ್ಪತ್ತಗುಡ್ಡದಲ್ಲಿ ಎದ್ದಿರುವ ಗಣಿಗಾರಿಕೆಯ ಭೀತಿ ಬಗ್ಗೆ ಇತ್ತೀಚೆಗೆ ವಿವರಿಸಿದರು. ಆ ಬೆಟ್ಟದಲ್ಲಿ ಹುದುಗಿರುವ ಚಿನ್ನದ ಅದಿರನ್ನು ತೆಗೆಯಲು ಕೆಲವು ಕಂಪನಿಗಳು ಹುನ್ನಾರ ನಡೆಸಿದ್ದು, ಬೆಟ್ಟದ ಉಳಿವಿಗೆ ಸಂಚಕಾರ ಬಂದಿದೆ ಎಂಬುದು ಅವರ ಆತಂಕ.
ಹಳ್ಳಿಯ ಜನಜೀವನದ, ಕಷ್ಟ ಸಂಕಷ್ಟಗಳ ಆಳವಾದ ಪರಿಚಯ ಇರುವ ಸ್ವಾಮೀಜಿಗೆ ಸರಕಾರ ಪರಿಸರ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದೆ. ಆದರೆ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಎತ್ತಿರುವ ಧ್ವನಿಯನ್ನು ಮುಚ್ಚಲು ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ವಾಕ್ಯ ಮಾತನಾಡಲೂ ನನಗೆ ಅವಕಾಶ ನೀಡಿರಲಿಲ್ಲ. ಆದರೆ ಆತ್ಮವಂಚನೆಯಿಂದ ಬದುಕಲು ನನಗೆ ಸಾಧ್ಯವಿಲ್ಲ. ಹಳ್ಳಿಯ ಪರಿಸರದ ಸಂರಕ್ಷಣೆಗೆ, ಕೃಷಿಕರ ಹಿತಾಸಕ್ತಿಗೆ ದುಡಿಯುವುದನ್ನು ನಿಲ್ಲಿಸಲಾರೆ ಎನ್ನುತ್ತಾರೆ ಶಿವಕುಮಾರ ಸ್ವಾಮಿ.
ಬೆಸಗರಹಳ್ಳಿ ರಾಮಣ್ಣನವರ ಓದು
ಅಣ್ಣ ಎಲ್ಲಾದರೂ ಹೋದರೆಂದರೆ ಎರಡು ಕೈಯಲ್ಲೂ ಗಿಟಕಿರುತ್ತಿದ್ದ ಪುಸ್ತಕದ ದಂಡನ್ನು ಹೊತ್ತು ತರುತ್ತಿದ್ದರು. ಅವು ಸಾಹಿತ್ಯ, ಭೂಗೋಳ, ವಿಜ್ಞಾನ ಇತ್ಯಾದಿ ಪ್ರಪಂಚದ ಸಕಲೆಂಟು ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಾಗಿರುತ್ತಿದುವು. ಆ ಹೊಸ ಪುಸ್ತಕಗಳಿಂದ ಹೊಮ್ಮುತ್ತಿದ್ದ ಹೊಸ ಅಕ್ಷರಗಳ ವಾಸನೆಯನ್ನು ಆಘ್ರಾಣಿಸುವುದು ನನಗೆ ಇಷ್ಟವಾಗುತ್ತಿತ್ತು. ತಂದ ತಕ್ಷಣವೆ ಅಣ್ಣನಿಗೆ ಓದುವ ಆತುರ. ಸಿಕ್ಕ ಯಾರನ್ನೇ ಆಗಲಿ ಎಳೆದು ಕೂರಿಸಿ, ಕಾಫಿ ಕುಡಿಸಿ ಆ ಪುಸ್ತಕದ ಕುರಿತೇ ಮಾತು. ಆ ಪುಸ್ತಕದ ಗಹನತೆ, ಕೃತಿಕಾರನ ಚಿಂತನೆ, ಅವುಗಳ ಪ್ರಸ್ತುತತೆ ಮುಂತಾದವುಗಳ ಬಗ್ಗೆ ನಿರರ್ಗಳ ಮಾತಾಡಿ, ತಮಗೆ ಮೆಚ್ಚುಗೆಯಾದ ಸಾಲುಗಳನ್ನು ನೆನಪಿನಿಂದಲೇ ಉದ್ಧರಿಸುತ್ತಿದ್ದರು. ಎದುರು ಕೂತವರಿಗೆ ಆ ಪುಸ್ತಕವನ್ನು ಕೊಟ್ಟು ಮುಟ್ಟಯ್ಯ, ಹೆಂಗದೆ ನೋಡು, ಓದ್ಬೇಕು. ಅವನ ಅನುಭವ ನೋಡು ಎಂದು ಕನಿಷ್ಠ ಪುಸ್ತಕವನ್ನು ಮುಟ್ಟುವಂತೆ ಮಾಡುತ್ತಿದ್ದರು. ಹಾಗೆ ಸಿಕ್ಕವರು ಯುವಕರಾಗಿದ್ದರಂತೂ, ಪುಸ್ತಕ ಕೊಳ್ಳುವಂತೆ ತರಿಸಿಕೊಟ್ಟು ಓದಲು ಪ್ರೇರೇಪಿಸುತ್ತಿದ್ದರು.
ಆಸ್ಪತ್ರೆಯ ಬಿಡುವಿಲ್ಲದ ಕೆಲಸ ಮುಗಿಸಿ, ಅಣ್ಣ ಮನೆಗೆ ಬಂದು, ಒಂದು ಸ್ನಾನ ಮಾಡಿ ಪುಸ್ತಕಗಳೊಂದಿಗೆ ಕೂತರೆಂದರೆ ಅದೊಂದು ಧ್ಯಾನ ಸ್ಥಿತಿ. ಹಾಸಿಗೆಯ ಸುತ್ತಾ ತಮಗೆ ಪ್ರಿಯವಾದ ಪುಸ್ತಕಗಳನ್ನು ಹರಡಿಕೊಂಡು, ಇಷ್ಟವಾದದ್ದನ್ನು ಓದುತ್ತಾ, ಏನಾದರೂ ಅನಿಸಿದರೆ ಅಲ್ಲೇ ಬರೆಯುತ್ತಾ ಬೆಳಗಿನ ಜಾವದವರೆಗೂ ಕೂತಿರುತ್ತಿದ್ದರು. ಅವರ ನಿದ್ದೆಯನ್ನು ಕೋಳಿ ನಿದ್ದೆಯೆಂದು ನಾವು ತಮಾಷೆ ಮಾಡುತ್ತಿದ್ದೆವು.
( ಆಗಸ್ಟ್ ಸಂಚಿಕೆಯ ಮಯೂರದಲ್ಲಿ ಕಥೆಗಾರ ಬೆಸಗರಹಳ್ಳಿ ರಾಮಣ್ಣನವರ ಬಗ್ಗೆ ಪುತ್ರ ರವಿ ಬೆಸಗರಹಳ್ಳಿ ಮನೋಜ್ಞವಾದ ಲೇಖನದ ಮೂಲಕ ತಂದೆಯನ್ನು ಸ್ಮರಿಸಿದ್ದಾರೆ. ಲೇಖನದ ಕೆಲವು ಸಾಲುಗಳು ಇಲ್ಲಿವೆ )
ನಾಗೇಶ್ ಹೆಗಡೆ ಜತೆ
ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಗುರುಗಳಾದ ನಾಗೇಶ್‌ ಹೆಗಡೆಯವರ (ತರಗತಿಯ ಗುರುಗಳಲ್ಲ ) ಜತೆ ಎಷ್ಟು ಹೊತ್ತು ಮಾತನಾಡಿದರೂ ನನಗೆ ಸಾಲುವುದಿಲ್ಲ. ಅವರ ಆತ್ಮೀಯತೆ, ತಿಳಿ ಹಾಸ್ಯ, ತಾಳ್ಮೆ, ಅಪಾರ ಜ್ಞಾನ, ಮಾತಿನ ಮೋಡಿ, ಎಳೆಯರನ್ನು ಪ್ರೋತ್ಸಾಹಿಸುವ ಪರಿ ಯಾವಾಗಲೂ ನನ್ನನ್ನು ಅಚ್ಚರಿಗೆ ದೂಡುತ್ತದೆ.
ನಾನೊಂದು ವೇಳೆ ಅವರನ್ನು ಹೊಗಳುತ್ತಿದ್ದೇನೆ ಎಂದು ಭಾವಿಸುತ್ತಾರೋ, ಏನೋ, ಆದರೆ ಇದು ನಿಜ. ಅವರಿಂದ ನಾವೆಲ್ಲ ಕಲಿಯಬೇಕಾದ್ದು ಬಹಳಷ್ಟಿದೆ.
ಯಾವುದಾದರೂ ವಿಷಯಕ್ಕೆ ಸಂಬಂಧಿಸಿ ಒತ್ತಡ, ಗೊಂದಲ ಆದಾಗ ಸಾಮಾನ್ಯವಾಗಿ ನೆಚ್ಚಿನ ಗುರುಗಳ ಫೋನ್ ನಂಬರ‍್ ಒತ್ತಿ ಕಿವಿಗೆ ಹಚ್ಚುತ್ತೇನೆ. ಅತ್ತ ಕಡೆಯಿಂದ ಅವರು ಸೂಕ್ತ ಸಲಹೆ ಕೊಡುತ್ತಾರೆ. ನಾನಂತೂ ಒಮ್ಮೆಯೂ ನಿರಾಶನಾಗಿಲ್ಲ. ಬದಲಿಗೆ ಹೊಸ ಹೊಳಹು, ಸ್ಪೂರ್ತಿ ಅವರಿಂದ ಸಿಕ್ಕಿದೆ.


No comments:

Post a Comment