Tuesday 11 August 2009

ಹಳ್ಳಿ ಬಗ್ಗೆ ಬರೆಯಲು ಅವರಂತೆಯೇ ಬದುಕಬೇಕು

ಶ್ರೀ ಪಡ್ರೆಯವರ ಜತೆ ನಿನ್ನೆ ರಾತ್ರಿ ಮೊದಲ ಸಲ ಮಾತನಾಡಿದ್ದೆ. ರಾಜ್ಯ ಮತ್ತು ದೇಶದ ನಾನಾ ಕಡೆಗಳ ಹಳ್ಳಿಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನಿರಂತರವಾಗಿ ಸಂಚರಿಸುವ ಶ್ರೀ ಪಡ್ರೆಯವರ ತಾಳ್ಮೆ ಮತ್ತು ಅಧ್ಯಯನ ನನ್ನನ್ನು ಸದಾ ಅಚ್ಚರಿಗೆ ದೂಡುತ್ತದೆ. ಇತ್ತೀಚೆಗೆ ಕಳತ್ತೂರಿಗೂ ಬಂದಿದ್ದರು. ಇದು ಕಿದೂರಿಗೆ ಸಮೀಪದ ಗ್ರಾಮ. ಕುಂಬಳೆಯಿಂದ ೮ ಕಿ.ಮೀ ದೂರದಲ್ಲಿದೆ. ನಾನು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದು ಇದೇ ಊರಿನಲ್ಲಿ. ನನ್ನ ಅಜ್ಜನ ಮನೆಯೂ ಇಲ್ಲಿದೆ. ಕಳತ್ತೂರಿಗೆ (ಕಾಸರಗೋಡು ಜಿಲ್ಲೆ) ಭೇಟಿ ನೀಡಿದ್ದ ಶ್ರೀ ಪಡ್ರೆಯವರು ಅಲ್ಲಿ ನಡೆದ ಸಮಾರಂಭದಲ್ಲಿ ನನ್ನ ಅತ್ತೆ ಕೃಷ್ಣವೇಣಿ ಕಿದೂರು ಅವರನ್ನೂ ಮಾತನಾಡಿಸಿದ್ದರು. ನನ್ನ ಬಗ್ಗೆ ಕೇಳುತ್ತಾ, ನಿಮ್ಮ ಮಗನಾ ಅಂತ ಅತ್ತೆಯ ಹತ್ತಿರ ಪಡ್ರೆ ವಿಚಾರಿಸಿದ್ದರು. ಅಲ್ಲ, ಅತ್ತಿಗೆಯ ಮಗ ಅಂತ ಅತ್ತೆ ತಿಳಿಸಿದರು. ಈ ವಿಷಯವನ್ನು ಪಡ್ರೆಯವರೇ ನನಗೆ ಹೇಳಿದರು.
ಮಾತನಾಡುತ್ತ ಲಹರಿ ಹಳ್ಳಿಗಳತ್ತ ತಿರುಗಿತು. ಹಳ್ಳಿಗಳ ಬಗ್ಗೆ ಅಧ್ಯಯನ ಮಾಡುವುದು ಎಂದರೆ ಅದಕ್ಕೊಂದು ಸ್ಪಷ್ಟವಾದ ಗುರಿ ಇರಬೇಕು. ಹಳ್ಳಿಯ ನಿರ್ದಿಷ್ಟ ಸಮಸ್ಯೆ ಇರಬಹುದು, ಅಸಮಾನತೆ ಇರಬಹುದು, ಅಭಿವೃದ್ಧಿಯ ವಿಚಾರ ಇರಬಹುದು, ಅಂತೂ ಲೇಖನ ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ಉತ್ತರ ಇರಬೇಕಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು ಪಡ್ರೆ.
ಹಳ್ಳಿಗಳ ಅಂತರಾತ್ಮ ಹೊಕ್ಕು ಬರೆಯಬೇಕಾದರೆ ಹಳ್ಳಿಯವರಂತೆಯೇ ಬದುಕಬೇಕು. ಆಗ ಸಮಸ್ಯೆ ಏನು ಎಂದು ಗೊತ್ತಾಗುತ್ತದೆ. ಇಲ್ಲವಾದಲ್ಲಿ ಬರಹ ಆಳವಾಗುವುದಿಲ್ಲ. ಈಗೀಗ ಪತ್ರಕರ್ತರ ಜತೆ ಮಾತನಾಡುವವರು ಎಲ್ಲ ಹಳ್ಳಿಗಳಲ್ಲಿಯೂ ಇರುತ್ತಾರೆ. ಅದು ಅವರಿಗೆ ಗೊತ್ತಿದೆ.ಕೆಲವೊಮ್ಮೆ ಹಳ್ಳಿಗಳ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲವೇನೋ ಎಂದೂ ಅನ್ನಿಸುತ್ತಿದೆ ಎಂದರು.
ಹೀಗೆ ಇನ್ನೂ ಕೆಲವು ಉಪಯುಕ್ತ ಮಾಹಿತಿ, ಸಲಹೆಯನ್ನು ನೀಡಿದ ಪಡ್ರೆಯವರಿಗೆ, ಈ ಸಲ ಊರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಬೇಕೆಂದು ಹೇಳಿದೆ. ಆಗಬಹುದು ಬನ್ನಿ ಎಂದರು ಆತ್ಮೀಯವಾಗಿ.
ಫೋನಿಟ್ಟ ನಂತರ ಪಡ್ರೆಯವರ ಮಾತುಗಳನ್ನು ಬಹಳ ಹೊತ್ತು ಮೆಲುಕು ಹಾಕಿದೆ. ಕೆಲವೊಮ್ಮೆ ಹಳ್ಳಿಗಳ ಸಮಸ್ಯೆಗೆ ಪರಿಹಾರ ಇಲ್ಲವೇನೋ ಎಂದು ನನಗನ್ನಿಸುತ್ತಿದೆ ಎಂಬ ಪಡ್ರೆಯವರ ಮಾತು ಆಳವಾಗಿ ಕಲಕುತ್ತಿದೆ...

No comments:

Post a Comment