
ಮಾತನಾಡುತ್ತ ಲಹರಿ ಹಳ್ಳಿಗಳತ್ತ ತಿರುಗಿತು. ಹಳ್ಳಿಗಳ ಬಗ್ಗೆ ಅಧ್ಯಯನ ಮಾಡುವುದು ಎಂದರೆ ಅದಕ್ಕೊಂದು ಸ್ಪಷ್ಟವಾದ ಗುರಿ ಇರಬೇಕು. ಹಳ್ಳಿಯ ನಿರ್ದಿಷ್ಟ ಸಮಸ್ಯೆ ಇರಬಹುದು, ಅಸಮಾನತೆ ಇರಬಹುದು, ಅಭಿವೃದ್ಧಿಯ ವಿಚಾರ ಇರಬಹುದು, ಅಂತೂ ಲೇಖನ ಯಾಕೆ ಬರೆಯುತ್ತಿದ್ದೀರಿ ಎಂಬುದಕ್ಕೆ ಉತ್ತರ ಇರಬೇಕಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು ಪಡ್ರೆ.
ಹಳ್ಳಿಗಳ ಅಂತರಾತ್ಮ ಹೊಕ್ಕು ಬರೆಯಬೇಕಾದರೆ ಹಳ್ಳಿಯವರಂತೆಯೇ ಬದುಕಬೇಕು. ಆಗ ಸಮಸ್ಯೆ ಏನು ಎಂದು ಗೊತ್ತಾಗುತ್ತದೆ. ಇಲ್ಲವಾದಲ್ಲಿ ಬರಹ ಆಳವಾಗುವುದಿಲ್ಲ. ಈಗೀಗ ಪತ್ರಕರ್ತರ ಜತೆ ಮಾತನಾಡುವವರು ಎಲ್ಲ ಹಳ್ಳಿಗಳಲ್ಲಿಯೂ ಇರುತ್ತಾರೆ. ಅದು ಅವರಿಗೆ ಗೊತ್ತಿದೆ.ಕೆಲವೊಮ್ಮೆ ಹಳ್ಳಿಗಳ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲವೇನೋ ಎಂದೂ ಅನ್ನಿಸುತ್ತಿದೆ ಎಂದರು.
ಹೀಗೆ ಇನ್ನೂ ಕೆಲವು ಉಪಯುಕ್ತ ಮಾಹಿತಿ, ಸಲಹೆಯನ್ನು ನೀಡಿದ ಪಡ್ರೆಯವರಿಗೆ, ಈ ಸಲ ಊರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಬೇಕೆಂದು ಹೇಳಿದೆ. ಆಗಬಹುದು ಬನ್ನಿ ಎಂದರು ಆತ್ಮೀಯವಾಗಿ.
ಫೋನಿಟ್ಟ ನಂತರ ಪಡ್ರೆಯವರ ಮಾತುಗಳನ್ನು ಬಹಳ ಹೊತ್ತು ಮೆಲುಕು ಹಾಕಿದೆ. ಕೆಲವೊಮ್ಮೆ ಹಳ್ಳಿಗಳ ಸಮಸ್ಯೆಗೆ ಪರಿಹಾರ ಇಲ್ಲವೇನೋ ಎಂದು ನನಗನ್ನಿಸುತ್ತಿದೆ ಎಂಬ ಪಡ್ರೆಯವರ ಮಾತು ಆಳವಾಗಿ ಕಲಕುತ್ತಿದೆ...
No comments:
Post a Comment