ಇತ್ತೀಚೆಗೆ ರಾಮೇನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪನವರ ಮನೆಗೆ ಹೋಗಿದ್ದೆ. ಗುಲಗುಂಜನಹಳ್ಳಿಯ ಬಡವರ ಗುಡಿಸಲು ಹಾಗೂ ಹೆಂಚಿನ ಮನೆಗಳನ್ನು ದಾಟುತ್ತ ಹೋದಂತೆ ಇಡೀ ಊರಿಗೆ ಅವರ ಮೂರು ಅಂತಸ್ತಿನ ಬಂಗಲೆ ಕಾಣುತ್ತದೆ. ಅಂಥ ಬಂಗಲೆಯಲ್ಲಿ ಅವರು ಮತ್ತು ಪತ್ನಿ ಇದ್ದರು. ಮನೆಯ ಎದುರು ಲಾನ್ ಬೆಳೆಸಿದ್ದರು. ಆಳೆತ್ತರದ ಕಂಪೌಂಡ್ ಇತ್ತು. ಬೃಹತ್ ಗೇಟು ಇತ್ತು. ಅದನ್ನು ದೂಡಿ ಸರಿದಾಗ ಅಧ್ಯಕ್ಷರ ಪತ್ನಿ ಅಂಗಳದಲ್ಲಿದ್ದರು. ಅವರಿಗೆ ನನ್ನ ಪರಿಚಯ ಮಾಡಿಕೊಂಡೆ. ಅಧ್ಯಕ್ಷರನ್ನು ಮಾತನಾಡಿಸಬೇಕಿತ್ತು ಎಂದರು. ಅವರಿಗೆ ಮೈಯಲ್ಲಿ ಉಶಾರಿಲ್ಲ ಎಂದರು. ಸರಿ, ಹಾಗಾದರೆ ಪರ್ವಾಗಿಲ್ಲ, ಅವರ ಫೋನ್ ನಂಬರ್ ಕೊಡಿ, ಇನ್ನೊಮ್ಮೆ ಮಾತನಾಡುತ್ತೇನೆ ಎಂದೆ. ಅಷ್ಟರಲ್ಲಿ ಹನುಮಂತಪ್ಪನವರೇ ಜಗಲಿಗೆ ಬಂದು ಮಂಚದಲ್ಲಿ ಕುಳಿತರು. ನೀವೂ ಕುಳ್ಳಿರಿ ಎಂದು ಇಬ್ಬರೂ ಹೇಳಿರಲಿಲ್ಲ. ನಾನೂ ಅಂತದ್ದನ್ನೆಲ್ಲ ನಿರೀಕ್ಷಿಸುವುದಿಲ್ಲ. ಆದರೆ ಸಾಮಾನ್ಯವಾಗಿ ಹಳ್ಳಿ ಕಡೆ ಯಾರೇ ಮನೆಗೆ ಬಂದರೂ ಕನಿಷ್ಠ ಕುಳಿತುಕೊಳ್ಳಲು ಹೇಳಿ, ತಾವೂ ಕುಳಿತುಕೊಂಡು ಮಾತಿಗೆ ಶುರು ಹಚ್ಚುತ್ತಾರೆ. ಆದರೆ ಇಲ್ಲಿ ನಾನು ನಿಂತೇ ಮಾತನಾಡಿದೆ. ತೂಕಡಿಕೆಯಲ್ಲಿದ್ದಂತೆ ಮಾತನಾಡಿದ ಅಧ್ಯಕ್ಷರಿಗೆ ನೀವೇನು ಮಾಡುತ್ತಿದ್ದೀರಿ ? ಎಂದೆ. ರಾಗಿ ಬೆಳೆಯುತ್ತಿದ್ದೇನೆ ಎಂದರು. ರಾಗಿ ಬೆಳೆಯುವವರಿಗೆ ಮೂರಂತಸ್ತಿನ ಬಂಗಲೆ ಕಟ್ಟಲು ಆಗುತ್ತಾ ಅಂತ ಆಶ್ಚರ್ಯವಾಯಿತು. ಅವರೊಡನೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.
ಅವರಿಗೆ ನಮಸ್ಕರಿಸಿ ಹೊರಬಿದ್ದೆ. ಸ್ಥಳೀಯ ಗ್ರಾಮಸ್ಥರೊಡನೆ ಕೇಳಿದೆ. ರಾಗಿ ಬೆಳೆದು ಮೂರಂತಸ್ತಿನ ಬಂಗಲೆ ಕಟ್ಟಿದ್ದಾರೆ ನಿಮ್ಮ ಅಧ್ಯಕ್ಷರು. ನಿಮಗೇಕೆ ಆಗೋದಿಲ್ಲ ?
ಅದಕ್ಕೆ ಅವರೆಂದರು- ನಮ್ಮ ಅಧ್ಯಕ್ಷರಿಗೆ ಕ್ವಾರಿ ಇದೆ. ( ಗಣಿ) ಜತೆಗೆ ರಾಜಕೀಯ.
ಇನ್ನೇನು ಬೇಕು ಹೇಳಿ...
ಲಭ್ಯ ಪುಸ್ತಕಗಳು.....
5 days ago
No comments:
Post a Comment