Tuesday 18 August 2009

ಅಸೂಯಾಪರ ಪತ್ರಕರ್ತೆಯರೂ ಇರುತ್ತಾರೆ...

ಪತ್ರಿಕಾಲಯದಲ್ಲಿ ಎಂಥಾ ಅಸೂಯಾಪರರು ಇದ್ದಾರೆ ಹಾಗೂ, ಅವರಲ್ಲಿ ಕೆಲವು ಮಹಿಳೆಯರೂ ಇದ್ದಾರೆ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ನನಗೆ ತಿಳಿದ ಒಂದು ಪ್ರಸಂಗ ಹೇಳ್ತೀನಿ. ಇಲ್ಲಿ ಹೆಸರು, ಪತ್ರಿಕೆ, ಯಾರು ಏನು ಅಂತ ತಿಳಿಸುವುದಿಲ್ಲ. ಆದರೆ ಈ ಘಟನೆ ನಡೆದದ್ದು ಮಾತ್ರ ನಿಜ.
ನನ್ನ ಗೆಳತಿ ಪತ್ರಿಕೋದ್ಯೋಗಿ. ಆಕೆಯ ಕಚೇರಿಯಲ್ಲಿ ನಡೆಯುವ ಕೆಲವು ವಿದ್ಯಮಾನಗಳನ್ನು ತಿಳಿಸುತ್ತಾಳೆ. ಅವಳ ವಿಭಾಗದ ಸೀನಿಯರ‍್ ಕೂಡಾ ಹೆಣ್ಣೇ.
ಇವಳಿಗೆ ಒಮ್ಮೆ ಯಾವುದೋ ಪದದ ಅರ್ಥ ಗೊತ್ತಾಗಲಿಲ್ಲ. ಇಂಥ ಸಂದರ್ಭದಲ್ಲಿ ಹತ್ತಿರ ಯಾರು ಸಿಗುತ್ತಾರೋ, ಅವರನ್ನು ಕೇಳುವುದು ವಾಡಿಕೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಹಾಗೆ ಮತ್ತೊಬ್ಬ ಹಿರಿಯರ ಬಳಿ ಕೇಳಿದಳು. ಎಲ್ಲೋ ದೂರದಲ್ಲಿ ಆಕೆಯ ಸೀನಿಯರ‍್ ಇದನ್ನು ಗಮನಿಸುತ್ತಿದ್ದವಳೇ, ಸ್ವಲ್ಪ ಹೊತ್ತು ಬಿಟ್ಟು ಬಂದು ಈಕೆಯನ್ನು ಕರೆದಳು. ಕರೆದು ಕೇಳಿದ್ದೇನು ಗೊತ್ತೇ ? ನೀನ್ಯಾಕೆ ಅವರ ಹತ್ತಿರ ಮಾತನಾಡಿದೆ ? ನನ್ನನ್ನು ಕೇಳಬಾರದಿತ್ತೇ ? ಅಂತ !
ಪಾಪ, ಈಕೆ ಏನೆನ್ನಬೇಕು ?
ನಾನು ನಿಮ್ಮ ಕುರ್ಚಿ ಕಡೆ ನೋಡಿದೆ. ನೀವಿರಲಿಲ್ಲ, ಬಲಕ್ಕೆ ತಿರುಗಿದೆ. ಮೇಡಮ್ ಇದ್ದರು. ಅವರನ್ನು ಕೇಳಿದೆ ಎಂದಳು.
ಅದಕ್ಕೆ ಆ ಸೀನಿಯರ‍್ ಅಂದಳು- ಮೇಡಂ ಮಿಸ್ ಗೈಡ್ ಮಾಡ್ತಾರೆ..!!
ಆ ಮೇಡಂಗೆ ಪತ್ರಿಕೋದ್ಯಮದಲ್ಲಿ ದಶಕಗಳಷ್ಟು ಅನುಭವ ಇತ್ತು. ಅವರಿಗೆ ಮಿಸ್ ಗೈಡ್ ಮಾಡಬೇಕಾದ ಹರಕತ್ತೇನಾದರೂ ಇತ್ತ ? ಅದೂ ಯಾವುದೋ ಒಂದು ಪದದ ಅರ್ಥ ಕೇಳಿದ್ದಕ್ಕೆ ?
ಕಾರಣವಿಷ್ಟೇ,
ಅಸೂಯೆ, ಈ ಹುಡುಗಿ ನನ್ನ ಕಪಿ ಮುಷ್ಠಿಯೊಳಗಿರಬೇಕು. ಬೆಳೆಯಕೂಡದು ಎನ್ನುವ ಅಸೂಯೆ..ಮತ್ತು ಮೂರ್ಖತನ..ಹೀಗೆ ಸಣ್ಣತನ ತೋರಿದ ಆ ಸೀನಿಯರ‍್ ಗೆ ತಾನು ಕನ್ನಡ ಸಾರಸ್ವತ ಲೋಕದ ಮಹಾನ್ ಪ್ರವರ್ತಕಿ ಎಂಬ ಹಮ್ಮಿರುವುದನ್ನು ನಾನೂ ಗಮನಿಸಿದ್ದೇನೆ. ಆಕೆಯ ಮತ್ತಷ್ಟು ವಿಚಿತ್ರ ವರ್ತನೆಗಳನ್ನು ಇನ್ನು ಯಾವತ್ತಾದರೂ ಬರೆಯುತ್ತೇನೆ.
ಅಂದಹಾಗೆ ಇದು ಯಾರನ್ನೋ ಹೀಯಾಳಿಸಲು ಬರೆದ ಲೇಖನ ಅಲ್ಲ, ಸುಳ್ಳೂ ಅಲ್ಲ.. ಇಂಥವರೂ ಇರುತ್ತಾರೆ ಎಂಬುದನ್ನು ಹೇಳಿದೆ.
ಆದರೆ ಇಂಥಾ ಅಸೂಯಾಪರ ಜರ್ನಲಿಸ್ಟುಗಳಿಗೆ ನನ್ನ ಮನವಿ ಇಷ್ಟೇ-
ಅರಳುವ ಹೂಗಳನ್ನು ತಡೆಯಲು ಯಾರಿಂದ ಸಾಧ್ಯ ? ಬೆಳಗುವ ರವಿಯನ್ನು ಮೋಡಗಳಿಂದ ಮರೆಮಾಚಲು ಎಷ್ಟು ಹೊತ್ತು ಸಾಧ್ಯ ? ಆದ್ದರಿಂದ ಬಾಯಿ ಮುಚ್ಕೊಂಡು ನಿಮ್ಮ ನಿಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ. ಸಾಧ್ಯವಾದರೆ ಎಳೆಯರನ್ನು ಸಾಧನೆಗೆ ಪ್ರೋತ್ಸಾಹಿಸಿ, ಇಲ್ಲವಾದಲ್ಲಿ ಅವರು ಬೆಳೆಯುವುದನ್ನು ಕಂಡು ಆನಂದಿಸುವುದನ್ನು ಕಲಿತುಕೊಳ್ಳಿ..

No comments:

Post a Comment