Monday 7 September 2009

ರೈತಾಪಿ ಮಿತ್ರನ ಹಿಂಬಾಲಿಸಿದ ಕಾರ್ ಡ್ರೈವರ್

ಚೆನ್ನಪಟ್ಟಣದ ಅರಳಾಳುಸಂದ್ರ ಬೆಂಗಳೂರಿನ ದಟ್ಟವಾದ ಪ್ರಭಾವಕ್ಕೆ ತುತ್ತಾಗಿರುವ ಪ್ರದೇಶಗಳಲ್ಲೊಂದು. ಬರ ಬೇರೆ ಕಾಡುತ್ತಿದೆ. ಗ್ರಾಮದ ನಿರುದ್ಯೋಗಿ ಯುವಕರೆಲ್ಲ ಸ್ವಂತ ಜಮೀನಿದ್ದರೂ, ಹಳ್ಳಿಯ ಸಹವಾಸ ಬೇಡವೆಂದು ರಾಜಧಾನಿಯನ್ನು ಸೇರುತ್ತಿದ್ದರೆ,ಹಸಿರು ಶಾಲು ಹೊದ್ದ ಗಿರೀಶ್ ಊರಿನಲ್ಲಿಯೇ ಇದ್ದುಕೊಂಡು ಹಿರಿಯರಿಂದ ಬಂದ ಜಮೀನನ್ನು ಸಾವಯವ ಪದ್ದತಿಯಲ್ಲಿ ಬೆಳೆಸುತ್ತಿದ್ದಾರೆ. ಅಕ್ಕ ಪಕ್ಕದ ರೈತರು ರಾಸಾಯನಿಕ ಗೊಬ್ಬರಗಳಿಗೆ ಮೊರೆಹೋಗಿದ್ದರೆ ಗಿರೀಶ ಅದನ್ನು ನಿಲ್ಲಿಸಿ ಕೆಲವು ಸಮಯವಾಗಿದೆ. ಹೊಲದ ಪಕ್ಕದಲ್ಲಿ ಜೀವಾಮೃತ ತಯಾರಿಸಿ ರಾಗಿ ಬೆಳೆದಿದ್ದಾರೆ. ( ೧೦ ಲೀಟರ್ ಗಂಜಲ, ೧೦ ಕಿಲೋ ಸೆಗಣಿ, ೨ ಕಿಲೋ ಬೆಲ್ಲ, ೨ ಕಿಲೊ ದ್ವಿದಳ ಧಾನ್ಯದ ಹಿಟ್ಟು, ನೀರು ಮತ್ತು ಮಣ್ಣನ್ನು ಮಿಶ್ರಣ ಮಾಡಿ ಜೀವಾಮೃತ ತಯಾರಿಸಬಹುದು) . ಈಗ ಅವರ ಬಂಜರು ಭೂಮಿಯಲ್ಲಿ ಎರೆಹುಳಗಳ ಸಂತತಿ ಹೆಚ್ಚಿದೆ. ನೆರೆಹೊರೆಯವರೆಲ್ಲ ಲೇವಡಿ ಮಾಡಿದರೂ ಗಿರೀಶ್ ಲೆಕ್ಕಿಸದೆ ಸಾವಯವಕ್ಕೆ ಮರಳಿದ್ದರು.
ಗಿರೀಶ್ ಅವರ ಕಥೆ ಕೇಳಿದ ರಾಜೇಶ ಎಂಬ ಅವರ ಮಿತ್ರ ನಗರದಿಂದ ತನ್ನೂರಿಗೆ ಹಿಂತಿರುಗಿದ್ದಾರೆ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಏಳೆಂಟು ವರುಶ ದುಡಿದು, ಬಾಸ್ ಬೈಗುಳ ತಿಂದು ಹೈರಾಣಾಗಿದ್ದ ರಾಜೇಶ ಇದೀಗ ಗುತ್ತಿಗೆಗೆ ಬೇರೆಯವರ ಹೊಲದಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಅದೂ ಸಾವಯವ ಪದ್ದತಿಯಲ್ಲಿ. ಇಲ್ಲಿ ಕೆಲಸ ಸುಲಭವಲ್ಲವಾದರೂ, ಮನಸ್ಸಿಗೆ ನೆಮ್ಮದಿ ಇದೆ. ಇಲ್ಲಿ ನನಗೆ ನಾನೇ ಬಾಸ್..ಎನ್ನುತ್ತಾರೆ ರಾಜೇಶ್.
ನೆರೆಹೊರೆಯವರೆಲ್ಲ ನೀರಿಲ್ಲ, ನೀರೇ ಇಲ್ಲ ಎಂದು ಹಪಹಪಿಸುತ್ತಿರುವ ಸಂದರ್ಭದಲ್ಲಿ ಗಿರೀಶ್ ಉಪಾಯ ಮಾಡಿದರು. ಇವರ ಜಮೀನಿನ ಪಕ್ಕದಲ್ಲಿ ಬೆಟ್ಟವೊಂದಿದೆ. ಮಳೆ ಬಂದಾಗ ನೀರು ಇಳಿದು ವ್ಯರ್ಥವಾಗಿ ಹೋಗುತ್ತದೆ. ಆದರೆ ಗಿರೀಶ್ ತಮ್ಮ ಹೊಲದಲ್ಲಿ ದೊಡ್ಡ ಹೊಂಡವನ್ನು ತೋಡಿದರು. ಬೆಟ್ಟಕ್ಕೆ ಬೀಳುವ ಮಳೆನೀರು ಹೊಂಡದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಏನಾಗಿದೆ ಎಂದರೆ ಹೊಂಡದ ಸಮೀಪ ಸ್ವಲ್ಪ ತಗ್ಗಿನಲ್ಲಿರುವ ಬಾವಿಯಲ್ಲಿ ಅಂತರ್ಜಲದ ಪ್ರಮಾಣದಲ್ಲಿ ಏರಿಕೆಯಾಗಿದೆ. ಗಿರೀಶ್ ಗೆ ಏನಂತೆ ? ಅವರಿಗೆ ನೀರಾವರಿ ಇದೆ. ಸಾವಯವ ಮಾಡಬಹುದು ಎಂದು ಇತರ ರೈತರು ಹೇಳುತ್ತಾರೆ. ಆದರೆ ಬೆಟ್ಟದ ಸಮೀಪ ಮಳೆನೀರಿನ ಸಂಗ್ರಹದ ಹೊಂಡ ಮಾಡಿರುವುದರಿಂದ ಬಾವಿಯಲ್ಲಿ ಅಂತರ್ಜಲ ಹೆಚ್ಚಿ ಉಪಯೋಗವಾಗಿರುವ ಸಂಗತಿ ಗಿರೀಶ್ ಅನುಭವಕ್ಕೆ ಬಂದಿದೆ. ಆದರೂ ಈ ಸಲ ಬರದ ತೀವ್ರತೆಯ ಪರಿಣಾಮ ಬಿಸಿ ತಟ್ಟಿದೆ. ಡೀಸೆಲ್ ಪಂಪಿನಲ್ಲಿ ನೀರೆತ್ತಬೇಕು. ಬೋರ್ ವೆಲ್ ಇಲ್ಲ. ಇಂಗು ಗುಂಡಿಯಲ್ಲಿಯೂ ನೀರಿಲ್ಲ. ಇಂತಹ ಬರವನ್ನೂ ಎದುರಿಸುವ ಬಗೆ ಹೇಗೆ ಎಂಬುದನ್ನು ಗಿರೀಶ್ ಕಂಡುಕೊಳ್ಳಬೇಕಾಗಿದೆ.
ಹೈಸ್ಕೂಲ್ ಮೆಟ್ಟಿಲು ಹತ್ತದಿರುವ ಗಿರೀಶ್ ಸಾವಯವಕ್ಕೆ ಸಂಬಂಧಿಸಿದ ತರಬೇತಿಯನ್ನು ಪಡೆದು ಬಂದಿದ್ದಾರೆ. ಅವರ ಮನೆಯ ಟ್ರಂಕ್ ಪೆಟ್ಟಿಗೆಯಲ್ಲಿ ಸಾವಯವ ಕುರಿತ ಕಿರು ಟಿಪ್ಪಣಿಗಳಿವೆ. ಜತೆಗೆ ಸ್ವಾನುಭವದಿಂದ ಕಲಿಯುತ್ತಿದ್ದಾರೆ. ನೀರಾ ಇಳಿಸುತ್ತಿದ್ದಾರೆ. ಉದ್ಯೋಗದಲ್ಲಿ ಕುಶಲತೆ ಸಾಧಿಸುವುದು ಎಂದರೆ ಇದುವೇ ಅಲ್ಲವೇ ?

No comments:

Post a Comment