ಈವತ್ತು ಸಾಯಂಕಾಲ ಬೆಲ್ ಬಾರಿಸಿತು. ಕದ ತೆರೆದಾಗ ನಮ್ಮ ಅಪಾರ್ಟ್ಮೆಂಟ್ನ ಮೊದಲ ಮಹಡಿಯ ಹಾಲಪ್ಪ ಸ್ವಾಮಿ ನಿಂತಿದ್ದರು.
ಅವರು ಮೂರು ವರ್ಷಗಳ ಹಿಂದೆ ಗ್ರಾಮ ಲೆಕ್ಕಿಗ ಹುದ್ದೆಯಿಂದ ನಿವೃತ್ತರಾಗಿದ್ದರು. ಸಾಯಂಕಾಲ ಜೋರಾಗಿ ಮಳೆ ಸುರಿಯುತ್ತಿತ್ತು. ಪಕ್ಕದ ಖಾಲಿ ಮನೆಯ ಮಾಳಿಗೆಯ ಮೇಲಿಂದ ನೀರು ಸೋರಿ ಅವರ ಮನೆಯ ರೂಮು ಒದ್ದೆಯಾಗುತ್ತಿತ್ತು. ಆ ಸಮಸ್ಯೆಯನ್ನು ಹೇಳಿಕೊಂಡರು. ನಾನು ಆಗತಾನೆ ನಿದ್ದೆಯಿಂದ ಎದ್ದಿದ್ದೆ. ನಾವಿಬ್ಬರು ಸಾಯಂಕಾಲದ ಚಹಾ ಜತೆ ಹರಟೆಗೆ ಶುರು ಹಚ್ಚಿದೆವು. ಅವರ ಊರು ಚಿತ್ರದುರ್ಗ. ಗ್ರಾಮಲೆಕ್ಕಿಗರಾಗಿ ಮೂರು ದಶಕಗಳಿಗೂ ಹೆಚ್ಚು ದುಡಿದಿದ್ದರು. ಶಿವಮೊಗ್ಗ, ಧಾರವಾಡ, ಚಿತ್ರದುರ್ಗದಲ್ಲಿ ಗ್ರಾಮ ಗ್ರಾಮಗಳು ಅವರಿಗೆ ಪರಿಚಯವಿದೆ. ನನ್ನ ಆಸಕ್ತಿ ಹೆಚ್ಚಿತು.
ಹಿಂದೊಮ್ಮೆ ಅವರಿಗೆ ತಿಂಗಳಿಗೆ ೨೦೦ ರೂ. ಸಂಬಳ ಇತ್ತಂತೆ. ನಿವೃತ್ತರಾಗುವ ವೇಳೆ ೧೬ ಸಾವಿರ ರೂ. ಸಂಬಳ ಇತ್ತು. ಸದ್ಯ ತಿಂಗಳಿಗೆ ೮ ಸಾವಿರ ರೂ. ಪಿಂಚಣಿ ಬರುತ್ತಿದೆ. ಮನೆ, ಮೊಮ್ಮಗು, ಊರು ಅಂತ ಆರಾಮವಾಗಿ ಇದ್ದಾರೆ. ಹಿಂದೆ ವಿಜೃಂಂಭಿಸಿದ್ದ ಊರ ಶ್ಯಾನುಭೋಗರು, ಪಟೇಲರು, ಅವರ ಈಗಿನ ಸ್ಥಿತಿ ಗತಿ, ಗ್ರಾಮ ಲೆಕ್ಕಿಗರ ಸಂಘಗಳು, ಹೋರಾಟಗಳು, ಗ್ರಾಮಗಳ ಜನಜೀವನ, ಆರ್ಥಿಕ ಚಿಂತನೆ ಬಗ್ಗೆ ಮಾತನಾಡಿದೆವು.
ಗ್ರಾಮ ಲೆಕ್ಕಿಗರ ಪಾತ್ರ ಎಷ್ಟು ದೊಡ್ಡದು ಎಂಬುದು ನನಗೆ ಆಗ ಅರಿವಾಯಿತು. ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಗ್ರಾಮಗಳ ಜಮೀನುಗಳು, ಜನ, ದನ, ಕರುಗಳ ಲೆಕ್ಕ, ಕಂದಾಯ, ಪಹಣಿ, ಸರ್ವೆ ಮುಂತಾದ ಸಮಸ್ತ ಕಾರ್ಯಗಳನ್ನು ಅವರು ದಾಖಲಿಸಬೇಕು. ಬರ ಬಂದರೆ ಗಮನಿಸಬೇಕು. ಯಾವ ಬೆಳೆಯ ಭೂಮಿಗೆ ಎಷ್ಟು ಕಂದಾಯ ಕಟ್ಟಬೇಕು ಅಂತ ಗುರುತಿಸಬೇಕು. ನಂತರ ತಹಶೀಲ್ದಾರರಿಗೆ ವರದಿ ಒಪ್ಪಿಸಬೇಕು. ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ವರದಿ ಒಪ್ಪಿಸುತ್ತಾರೆ. ಹೀಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರಿಯಾಗಿ ಮಾಹಿತಿ ಹೋಗಬೇಕಾದರೆ ಗ್ರಾಮ ಲೆಕ್ಕಿಗರು ಸರಿಯಾಗಿ ಕೆಲಸ ಮಾಡಬೇಕು. ಹೀಗಿದ್ದರೂ ಅವರಿಗೆ ದಾರಿ ಖರ್ಚು ಸಿಗುವುದು ಕಡಿಮೆ. ಆದರೂ ಕೆಲಸ ತಪ್ಪಬಾರದು. ಎಷ್ಟೋ ಮಂದಿ ಗ್ರಾಮ ಲೆಕ್ಕಿಗರು ನಿವೃತ್ತರಾದ ನಂತರ ಮತ್ತೆ ಕೃಷಿ ಭೂಮಿಗೆ ಮರಳಿದ್ದಾರೆ. ಇನ್ನು ಕೆಲಸವರು ಪೇಟೆಯಲ್ಲಿ ಮನೆ ಮಾಡಿದ್ದಾರೆ. ಇನ್ನು ಕೆಲವರು ಬಾಡಿಗೆಗೆ ಮನೆ ಕೊಟ್ಟಿದ್ದಾರೆ.
ಅಂತಹ ಗ್ರಾಮ ಲೆಕ್ಕಿಗರಿಗರಿಗೆ ನಮನಗಳು.
ಸಮ್ಮನಸ್ಸಿಗೆ ಶರಣು
6 months ago
No comments:
Post a Comment