ನಮ್ಮ ಸುತ್ತಮುತ್ತ ಸಾಧಕರು ತಮ್ಮ ಪಾಡಿಗೆ ಮೇಲೆ ಬರುತ್ತಲೇ ಇರುತ್ತಾರೆ. ಆದರೆ ಅವರಲ್ಲಿ ಬಹಳ ಮಂದಿ ಎಲೆ ಮರೆಯ ಕಾಯಿಯಂತೆ ಇರುತ್ತಾರೆ. ಈ ಸಲ ಪುತ್ತೂರಿಗೆ ಹೋಗಿದ್ದಾಗಲೂ ಅಂತಹ ಕೆಲವು ಮಂದಿಯನ್ನು ಕಂಡೆ. ಬಾಲ್ಯದಲ್ಲಿ ಕಡು ಬಡತನವನ್ನೇ ಹೊದ್ದುಕೊಂಡಿದ್ದವರು ಬಾಳೆ ಎಲೆಯ ವ್ಯಾಪಾರ ಶುರು ಮಾಡಿ ಗೆದ್ದು ಈವತ್ತು ದಿನಕ್ಕೆ ಇಪ್ಪತ್ತು ಸಾವಿರ ರೂ. ಸಂಪಾದನೆ ಮಾಡಿದವರಿದ್ದಾರೆ. ರಾಜಕೀಯಕ್ಕಿಳಿದು ಗಣ್ಯರಾದವರು ಇದ್ದಾರೆ. ಚೆನ್ನಾಗಿ ಓದಿ ಸಂಶೋಧಕರಾದವರಿದ್ದಾರೆ. ಕೃಷಿಯಲ್ಲಿ ಯಶಸ್ವಿಯಾದವರಿದ್ದಾರೆ. ಮನೆಯಲ್ಲಿ ಕೆಲಸಕ್ಕೆ ಬಾರದವನಂತಿದ್ದವರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ. ಮತ್ತೆ ಕೆಲವರು ಮನೆಯ ತೋಟದ ಕೆಲಸದ ಜತೆಗೆ ಮಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಹೊಂದುತ್ತಿದ್ದಾರೆ. ಗೆಳೆಯನೊಬ್ಬ ಪಿಎಚ್ ಡಿ ಮಾಡುತ್ತಿದ್ದಾನೆ. ಗೆಳೆಯರು ಅನೇಕ ಮಂದಿ ಮದುವೆಯಾಗಿದ್ದಾರೆ. ಮತ್ತೆ ಹಲವರು ಹುಡುಕಾಟದಲ್ಲಿದ್ದಾರೆ..ಪ್ರತಿ ಸಲ ಹೋಗಿ ಬಂದಾಗಲೂ ಊರಿನ ಗುಂಗಿನಿಂದ ಹೊರ ಬರಲು ಬೇಗನೆ ಸಾಧ್ಯವಾಗುವುದೇ ಇಲ್ಲ. ಕಳೆದ ಸಲ ಹೋಗಿದ್ದಾಗ ಅರಳು ಹುರಿದಂತೆ ಮಾತನಾಡುತ್ತ, ಚುರುಕಿನಿಂದ ಓಡಾಡುತ್ತಿದ್ದ ಹಿರಿಯ ಬಂಧುಗಳೊಬ್ಬರು ಈ ಸಲ ಹಾಸಿಗೆ ಹಿಡಿದಿದ್ದಾರೆ. ಮಾತೇ ಇಲ್ಲ. ಅವರ ನೋವು ಈಗಲೂ ಹಿಂಡುತ್ತಿದೆ. ಮತ್ತೊಂದು ಕಡೆ ಗೆಳೆಯನೊಬ್ಬ ಅಪ್ಪನಾಗಿದ್ದ. ಮತ್ತೆ ಕೆಲವರಿಗೆ ಹೆಣ್ಣು, ಗಂಡು ಮಗು ಆಗಿರುವ ಬಗ್ಗೆ ಸಂಬಂಧಿಕರು ಸಮಾಚಾರ ತಿಳಿಸಿದರು. ಈ ಜಗತ್ತು ನೋಡ ನೋಡುತ್ತಿರುವಂತೆ ಬದಲಾಗುತ್ತಿರುವ ಪರಿ ಅಚ್ಚರಿ ಹೊತ್ತು ತರುತ್ತದೆ.
ಹೊಳೆ ಮತ್ತು ಶೇಂದಿ : ಅಡ್ಕಸ್ಥಳದಲ್ಲಿ ವಿಟ್ಲಕ್ಕೆ ಹೋಗುವ ಬಸ್ಸಿಗೆ ನಾನು ಮತ್ತು ಮಾವ ಕಾಯುತ್ತಿದ್ದೆವು. ಕಣ್ಣೆದುರಿಗೆ ಹೊಳೆ ಮೈದುಂಬಿ ಕೆಂಬಣ್ಣದಿಂದ ಹರಿಯುತ್ತಿತ್ತು. ಮಳೆ ಬಿಡದೆ ಸುರಿಯುತ್ತಿತ್ತು. ಜನರ ಓಡಾಟ ಕಡಿಮೆ ಇತ್ತು. ಹೊಳೆಯ ದಂಡೆಯಲ್ಲಿ ಒಂದು ಗುಡಿಸಲು ಇತ್ತು. ಅದರ ಸನಿಹ ಶೇಂದಿ ಅಂಗಡಿ ಎಂದು ದೊಡ್ಡಕ್ಷರದಲ್ಲಿ ಬರೆದಿದ್ದರು. ಮಳೆ-ಚಳಿಗೆ ಜನ ಗರಮ್ಮಾಗಲು ಶೇಂದಿಗೆ ಮೊರೆ ಹೋಗುತ್ತಾರೆ. ತೆಂಗಿನ ಗರಿಯಿಂದ ಹೊದೆಸಿದ ಮಾಡೇ ಶೇಂದಿ ಅಂಗಡಿಯ ಸೂರಾಗಿತ್ತು. ಒಳಗೆ ನೀರು ಸೋರದಂತೆ ಪಾಲಿಥೀನ್ ಹಾಳೆ ಹೊದೆಸಿದ್ದರು.ಆದರೆ ಎಲ್ಲರೂ ಅಲ್ಲಿಗೆ ಹೋಗುವುದಿಲ್ಲ. ಹೋಗಲೇಬೇಕು ಎಂದುಕೊಂಡವರು ಹೋಗದೆ ಬಿಡುವುದಿಲ್ಲ.
ನಾನು ಅಲ್ಲೇ ಎದುರಿದ್ದ ಗೂಡಂಗಡಿಗೆ ಹೋದೆ. ಊರಿನ ಗೆಣಸಿನ ಬುಟ್ಟಿ ಗಮನ ಸೆಳೆಯಿತು. ಕೇಜಿಗೆ ಎಷ್ಟು ಎಂದೆ. ಹತ್ತು ರೂಪಾಯಿ ಅಂದ. ಬೆಂಗಳೂರಿನಲ್ಲಿ ಇಷ್ಟು ಕಮ್ಮಿಗೆ ಇಂತಹ ಗೆಣಸು ಸಿಗದು ಎಂದು ಅನ್ನಿಸಿತು.
ಲಭ್ಯ ಪುಸ್ತಕಗಳು.....
5 days ago
No comments:
Post a Comment