ನಾನು ಸಣ್ಣವನಿದ್ದಾಗ ದನ, ಎಮ್ಮೆಗಳಿಗೆ ಅಸೌಖ್ಯವಾದಾಗ ಗೋ ಡಾಕ್ಟರ್ ಬರುತ್ತಿದ್ದರು.
ಗೋ ಡಾಕ್ಟರ್ ಬಂದೊಡನೆ, ಅವರ ಕೈಯಲ್ಲಿದ್ದ ಔಷಧಗಳ ಬ್ಯಾಗನ್ನು ತಮ್ಮ ಕೈಗೆ ತೆಗೆದುಕೊಂಡು ಮಾವ, ಅವರನ್ನು ಗೌರವದಿಂದ ಹಟ್ಟಿಗೆ ಕರೆದೊಯ್ಯುತ್ತಿದ್ದರು. ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆಯಾದ ನಂತರ ಕೈಕಾಲು ತೊಳೆದು ವರಾಂಡಕ್ಕೆ ಬರುತ್ತಿದ್ದರು. ನಂತರ ಕಾಫಿ, ಚಹಾ, ತಿಂಡಿಯ ಉಪಚಾರ. ಕೆಲವೊಮ್ಮೆ ಮದ್ಯಾಹ್ನವಾದರೆ ಊಟ ಕೂಡಾ ಒಟ್ಟಿಗೆ ನಡೆಯುತ್ತಿತ್ತು.
ಆದರೆ ಈಗ ಗೋ ಡಾಕ್ಟರ್ಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಪಶು ವೈದ್ಯರೆಲ್ಲ ಶ್ರೀಮಂತರ ನಾಯಿಗಳಿಗೆ ವೈದ್ಯರಾಗಲು ಬಯಸುತ್ತಿದ್ದಾರೆ. ಅಲ್ಲಿ ಹಣವೂ ಹೆಚ್ಚು ಸಿಗುತ್ತಿದ್ದು, ಆಕರ್ಷಣೀಯವೆನಿಸಿದೆ. ಆದರೆ ಹಳ್ಳಿಗಳಲ್ಲಿ ಊರೂರು ಅಲೆಯುತ್ತ, ರೈತಾಪಿಗಳೊಂದಿಗೆ ಕಲೆಯುತ್ತ ಜಾನುವಾರುಗಳ ಸೇವೆ ಮಾಡುವುದು ಅವರಿಗೆ ಬೇಡವಾಗಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಪಶು ವೈದ್ಯರಾದ ಡಾ. ಕೃಷ್ಣ ಭಟ್ ಅವರ ಜೊತೆ ಮಾತನಾಡುವ ವೇಳೆ ಈ ಸೂಕ್ಷ್ಮ ತಿಳಿಯಿತು.
ಒಂದೂರಿಗೆ ಗ್ರಾಮ ಲೆಕ್ಕಿಗ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಗೋ ಡಾಕ್ಟರ್ ಬೇಕೇ ಬೇಕು ಎಂಬುದನ್ನು ಮರೆಯಕೂಡದು. ಈಗ ದಕ್ಷಿಣ ಕನ್ನಡ, ಕಾಸರಗೋಡಿನ ಹಳ್ಳಿಗಳಲ್ಲಿ ಇರುವವರೆಲ್ಲ ಹಳೆಯ ಪಶು ವೈದ್ಯರೇ. ಹೊಸ ತಲೆಮಾರಿನ ಗೋ ಡಾಕ್ಟರ್ ಕಾಣಿಸುತ್ತಿಲ್ಲ... ಇದನ್ನೆಲ್ಲ ಬರೆಯುವಾಗ ಬೇಸರವಾಗುತ್ತದೆ.
ಸಮ್ಮನಸ್ಸಿಗೆ ಶರಣು
6 months ago
No comments:
Post a Comment