Wednesday 16 September 2009

ಬಾಳೆಲೆಯನ್ನೇ ಮಾರಿ ಲಕ್ಷಾಂತರ ರೂ. ವಹಿವಾಟು

ಬಾಳೆ ಎಲೆ ವ್ಯಾಪಾರಕ್ಕೆ ಹೆಚ್ಚು ಬಂಡವಾಳ ಬೇಡ. ಆದರೆ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಮುಟ್ಟಿಸಬೇಕು. ಸಾಕಷ್ಟು ಪರಿಶ್ರಮ ಪಡಬೇಕು. ಇಷ್ಟಿದ್ದರೆ ಇಲ್ಲಿ ನಷ್ಟವೆನ್ನುವುದಿಲ್ಲ. ಇಪ್ಪತ್ತೈದು ವರ್ಷಗಳ ವಹಿವಾಟಿನಲ್ಲಿ ಶಂಕರನಾರಾಯಣ ಭಟ್ಟರಿಗೆ ನಷ್ಟವಾಗಿದ್ದು ಒಂದೆರಡು ಸಲವಷ್ಟೇ.
ಹಳ್ಳಿಯಲ್ಲಿ ವಾಸವಾಗಿದ್ದರೂ , ಬರಿಗೈಯಲ್ಲಿದ್ದರೂ , ಬಾಳೆಲೆಯನ್ನೇ ಮಾರಿ ಲಕ್ಷಾಂತರ ರೂ.ಗಳ ವಹಿವಾಟು ನಡೆಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡದ ಬಾಳೆಲೆಯ ವ್ಯಾಪಾರಿಗಳೇ ಸಾಕ್ಷಿ.
ಜಿಲ್ಲೆಯಲ್ಲಿ ಇಂತಹ ಐವತ್ತಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳಿದ್ದಾರೆ. ಹೆಚ್ಚಿನವರೂ ಕವಡೆ ಕಾಸಿಲ್ಲದೆ ಬಾಲ್ಯದಲ್ಲಿ ತೀವ್ರ ಅವಮಾನ, ನೋವು ಕಂಡವರು. ಪ್ರತಿಯೊಬ್ಬರ ಕಥೆಯೂ ಹೆಂಗಿದ್ದ ಹೇಗಾದ ಎಂಬ ರೀತಿಯ ವಿಸ್ಮಯ.
ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ ಶಂಕರ ನಾರಾಯಣ ಭಟ್ಟರ ಕಥೆ ಕೇಳಿ. ೧೯೮೪ರಲ್ಲಿ ಭಟ್ಟರದ್ದು ಕಡು ಬಡತನದ ಸ್ಥಿತಿ. ಹತ್ತೊಂಭತ್ತನೇ ವಯಸ್ಸಿನಲ್ಲಿ ಬಾಳೆಲೆಯ ವ್ಯಾಪಾರಿಗಳಾದರು. ಕಟೀಲು ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಗೋಪಾಲಕೃಷ್ಣ ಅಸ್ರಣ್ಣರ ಪ್ರೋತ್ಸಾಹವಿತ್ತು. ಎಸ್ಸೆಸ್ಸೆಲ್ಸಿ ನಂತರ ಹೆಚ್ಚಿ ವಿದ್ಯಾಭ್ಯಾಸ ಮಾಡಲಿಲ್ಲ. ದೇವಸ್ಥಾನದಲ್ಲಿ ಹೋಮ ಹವನ ನಡೆಯುತ್ತಿದ್ದಾಗ ಸಲ್ಲಿಸಿದ ಸೇವೆ, ಇತರ ಕಡೆ ಮಾಡಿದ ಸಣ್ಣ ಪುಟ್ಟ ಕೆಲಸಗಳಿಂದ ಒಟ್ಟುಗೂಡಿಸಿದ ಇನ್ನೂರು ರೂಪಾಯಿಗಳೇ ಬಂಡವಾಳ. ಶ್ಯಾಮ ಭಟ್ಟರ ಮನೆಯ ತೋಟದಿಂದ ಬಾಳೆ ಎಲೆಗಳನ್ನು ಕೊಯ್ದು ಬಿಸಿನೆಸ್ ಶುರು ಮಾಡಿದರು. ಕಟೀಲು ದೇವಸ್ಥಾನಕ್ಕೆ ನಿಯಮಿತವಾಗಿ ಬಾಳೆ ಎಲೆ ವಿತರಿಸಿದರು. ನಿಧಾನವಾಗಿ ಬಾಳೆ ಎಲೆ ಕಟ್ಟುಗಳ ಸಂಖ್ಯೆ ಹೆಚ್ಚುತ್ತಾ ಬಂತು. ಬಾಳೆ ಎಲೆಯ ಜತೆಗೆ ಬಾಳೆ ಗೊನೆ, ಬೂದುಗುಂಬಳ, ಚೀನಿಕಾಯಿ ಸೇರಿತು. ಊರಿನಲ್ಲಿ ಸಿಗುವ ಇತರ ತರಕಾರಿ, ಸೊಪ್ಪು, ಕಾಯಿ ಪಲ್ಲೆಗಳಿಗೂ ನಾನಾ ಕಡೆಗಳಲ್ಲಿ ಮಾರುಕಟ್ಟೆ ಹುಡುಕಿ ಮಾರಾಟ ಮಾಡಿದರು. ಮೊದಲು ಮೂರೆಕೆರೆ ಖಾಲಿ ಜಮೀನಿತ್ತು. ಸಂಪಾದನೆಯಲ್ಲಿ ಆಸ್ತಿ ಹತ್ತೆಕೆರೆಗೆ ವಿಸ್ತರಿಸಿತು. ತೋಟ ಕಟ್ಟಿದರು. ಉಪ್ಪಿನ ಕಾಯಿಗೆ ಚೆನ್ನಾಗಿ ಆಗುತ್ತದೆ ಎಂದು ಅದುವರೆಗೆ ಯಾರೂ ಕೇಳದಿದ್ದ ಅಂಬಟೆ, ಬೀಂಪುಳಿ ಮುಂತಾದ ಕಾಯಿಗಳಿಗೂ ಕಟೀಲು, ಮೂಡಬಿದಿರೆಯ ಹೋಟೆಲ್‌ಗಳಲ್ಲಿ ಪರಿಚಯಿಸಿದರು. ಈ ನಡುವೆ ವಿಜಯ ಬ್ಯಾಂಕ್‌ನವರು ಭಟ್ಟರ ವಹಿವಾಟು ವಿಸ್ತರಣೆಗೆ ನೆರವು ನೀಡಿದರು.
ಇಂದು -
ಕಟೀಲು ದೇವಸ್ಥಾನಕ್ಕೆ ಪ್ರತಿ ತಿಂಗಳು ಒಂದೂ ಕಾಲು ಲಕ್ಷ ಬಾಳೆ ಎಲೆಗಳನ್ನು ಶಂಕರ ನಾರಾಯಣ ಭಟ್ಟರು ಪೂರೈಸುತ್ತಾರೆ. ಪುತ್ತೂರು, ಉಪ್ಪಿನಂಗಡಿ, ಮಾಣಿ ಮತ್ತು ನೆಲ್ಯಾಡಿಯಲ್ಲಿ ಅನುಕ್ರಮವಾಗಿ ಸೋಮವಾರ, ಗುರುವಾರ, ಶನಿವಾರ ಮತ್ತು ಬುಧವಾರ ನಡೆಯುವ ನಾಲ್ಕು ಸಂತೆಗಳಲ್ಲಿ ಖುದ್ದು ಭಟ್ಟರು ವ್ಯಾಪಾರ ನಡೆಸುತ್ತಾರೆ. ಪ್ರತಿ ತಿಂಗಳು ಅವರ ವಹಿವಾಟು ನಾಲ್ಕು ಲಕ್ಷ ರೂ. ನಾಲ್ಕು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಮನೆ, ಕಾರು, ಮಹೀಂದ್ರಾ ವೆಹಿಕಲ್ ಇದೆ.
ಬಾಳೆ ಎಲೆ ವ್ಯಾಪಾರಕ್ಕೆ ಹೆಚ್ಚು ಬಂಡವಾಳ ಬೇಡ. ಆದರೆ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಮುಟ್ಟಿಸಬೇಕು. ಸಾಕಷ್ಟು ಪರಿಶ್ರಮ ಪಡಬೇಕು. ಇಷ್ಟಿದ್ದರೆ ಇಲ್ಲಿ ನಷ್ಟವೆನ್ನುವುದಿಲ್ಲ. ಇಪ್ಪತ್ತೈದು ವರ್ಷಗಳ ಬಾಳೆಲೆ, ಗೊನೆ ವ್ಯಾಪಾರದಲ್ಲಿ ಶಂಕರನಾರಾಯಣ ಭಟ್ಟರಿಗೆ ಒಂದೆರಡು ಸಲ ನಷ್ಟವಾಗಿದ್ದಿದೆ. ಅಷ್ಟೇ.
ಓದಿದ್ದು ಮೂರನೇ ಕ್ಲಾಸು, ವಹಿವಾಟು ಲಕ್ಷಗಟ್ಟಲೆ :
ಬೆಳ್ತಂಗಡಿಯ ಅಣವು ಸಂಜೀವ ಗೌಡರದ್ದು (೫೨) ಇನ್ನೂ ರೋಚಕ ಸಾಧನೆ. ೧೯೮೮ರಲ್ಲಿ ನೂರೈವತ್ತು ರೂಪಾಯಿ ಬಂಡವಾಳದಲ್ಲಿ ಬಾಳೆ ಎಲೆ ವ್ಯಾಪಾರ ಆರಂಭಿಸಿದರು. ಪ್ರತಿ ದಿನ ೭೦ರಿಂದ ೯೦ ಕೆಜಿ ಭಾರದ ಬಾಳೆ ಎಲೆಗಳ ಕಟ್ಟವನ್ನು ಹೊತ್ತು ಸಾಗಿಸುತ್ತಿದ್ದರು. ವಾರಕ್ಕೆ ೧೦ ಸಾವಿರ ಎಲೆಗಳನ್ನು ಧರ್ಮಸ್ಥಳಕ್ಕೆ ಮಾರಾಟ ಮಾಡುತ್ತಿದ್ದರು.
ಪ್ರತಿವಾರ ೨೦ರಿಂದ ೩೦ ಸಾವಿರ ಬಾಳೆ ಕಾಯಿ, ೫ ಸಾವಿರ ಬಾಳೆ ಎಲೆಯನ್ನು ಮಾರಾಟ ಮಾಡುತ್ತಾರೆ. ವಾರಕ್ಕೆ ೫೦ ಸಾವಿರ ರೂ. ವಹಿವಾಟು ದೆ. ಸ್ವಂತ ಮನೆ, ಜೀಪು, ಬೈಕ್ ಇದೆ. ಮಗ ಎಸ್ಸೆಸ್ಸೆಲ್ಸಿ ಮುಗಿಸಿ ತಂದೆಯ ಜತೆ ವ್ಯಾಪಾರಕ್ಕಿಳಿದಿದ್ದಾನೆ. ಈಗಲೂ ಸ್ವತಃ ಗೌಡರೇ ಜೀಪಿನಲ್ಲಿ ಬಾಳೆಲೆ, ಕಾಯಿಗಳನ್ನು ಹೇರಿಕೊಂಡು ಧರ್ಮಸ್ಥಳಕ್ಕೆ ಕೊಂಡೊಯ್ಯುತ್ತಾರೆ.
ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ಮಾಣಿಯಲ್ಲಿ ನಡೆಯುವ ಸಂತೆಯಲ್ಲಿ ಬ್ಯುಸಿಯಾಗಿ ಕಾಣಲು ಸಿಗುವ ಬಾಳೆಲೆ ವ್ಯಾಪಾರಿಗಳಲ್ಲಿ ಒಬ್ಬೊಬ್ಬರದ್ದೂ ಇಂಥ ಅಪರೂಪದ ಹಿನ್ನೆಲೆ ಇದೆ. ಆದರೆ ಅವರನ್ನು ಎಂಬಿಎ ವಿದ್ಯಾರ್ಥಿಗಳು ಸಂದರ್ಶಿಸಿ ವ್ಯವಹಾರ ಸೂತ್ರವನ್ನು ಅಧ್ಯಯನ ಮಾಡುವುದಿಲ್ಲ. ಹೀಗಾಗಿ ಬಾಳೆ ಎಲೆಯ ಮರೆಯಲ್ಲಿರುವ ಕಾಯಿಯಂತೆ ಅವರಿದ್ದಾರೆ. ಎರೆಡೆರಡು ಪದವಿ ಪಡೆದರೂ ನಿರುದ್ಯೋಗಿಗಳಾಗಿ ಕೊರಗುತ್ತಿರುವವರೂ ಅವರನ್ನು ಕಂಡು ಕಲಿಯಬಹುದಾದ ವಿಷಯ ಸಾಕಷ್ಟಿದೆ.

No comments:

Post a Comment