ಜೆಡಿಎಸ್ನ ಕೆ.ಟಿ. ಶ್ರೀಕಂಠೇ ಗೌಡರು ವಿಧಾನ ಪರಿಷತ್ ಅಧ್ಯಕ್ಷರು. ವಿಧಾನ ಪರಿಷತ್ ನಲ್ಲಿ ನಿನ್ನೆ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಾದ ಮಂಡಿಸಿದ್ದರು. ಕೃಷಿ ಕ್ಷೇತ್ರವನ್ನು ಉದ್ಯಮವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು. ಅವರ ವಾದ ಸರಣಿ ಚೆನ್ನಾಗಿತ್ತು ಹೀಗಾಗಿ ಈವತ್ತು ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿ ಅಭಿನಂದಿಸಿದೆ. ಅವರೂ ವಿಜಯ ಕರ್ನಾಟಕದಲ್ಲಿ ತಮ್ಮ ಭಾಷಣದ ಬಗ್ಗೆ ವರದಿ ಬಂದಿರುವ ಬಗ್ಗೆ ಖುಶಿಯಲ್ಲಿದ್ದರು.
ಮಾತನಾಡುವ ವೇಳೆ ಅವರಂದರು- ಕೇಶವ ಪ್ರಸಾದ್ ಅವರೇ, ಮಂಡ್ಯದಲ್ಲಿ ಪತ್ರಿಕೆ ತಿರುವಿ ನೋಡಿದೆ. ಇಲ್ಲಿ ಬಂದಿರಲಿಲ್ಲ ಇಲ್ಲಿಯೂ ಬರುವಂತೆ ಮಾಡಿ. ಬೆಂಗಳೂರಲ್ಲಿ ಭರ್ಜರಿಯಾಗಿ ಬಂದಿದೆಯಂತೆ. ಈವತ್ತು ಬೆಳಗ್ಗೆ ಐಎಎಸ್ ಅಕಾರಿಯೊಬ್ಬರೂ ಫೋನ್ ಮಾಡಿ ತಿಳಿಸಿದರು ಎಂದರು. ಬಹುಶಃ ಆ ಭಾಗದ ಆವೃತ್ತಿಯಲ್ಲಿ ಸುದ್ದಿ ಪ್ರಕಟವಾಗಿಲ್ಲ ಅಂತನ್ನಿಸುತ್ತೆ ಎಂದೆ. ಆದರೆ ಅವರು ತಮ್ಮ ಭಾಷಣ ಮಂಡ್ಯದಲ್ಲಿ ಪತ್ರಿಕೆ ಮೂಲಕ ಪ್ರಸಾರ ಆಗಬೇಕಿತ್ತು ಎಂಬ ತುಡಿತ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
ವಿಧಾನ ಪರಿಷತ್ತಿನಲ್ಲಿ ರೈತರ ಸಮಸ್ಯೆಗಳ ಬಗ್ಗೆ ಭಾಷಣ ಮಾಡುವಾಗ ಸಂಪಾದಕರು ಇತ್ತೀಚೆಗೆ ಕನಕಾಂಬರ ಹೂವುಗಳ ಬಗ್ಗೆ ಬರೆದಿದ್ದ ಲೇಖನವನ್ನು ಕೂಡ ಪ್ರಸ್ತಾಪಿಸಿದ್ದೇನೆ ಎಂದು ಗೌಡರು ಹೇಳಲು ಮರೆಯಲಿಲ್ಲ.ಅವರ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆಂದು ಅನ್ನಿಸಿತು.
ನಿನ್ನೆ ಬಂಟ್ವಾಳ ತಾಲ್ಲೂಕಿನ ಇಡ್ಕಿದು ಗ್ರಾಮದ ಪಶು ವೈದ್ಯ ಡಾ. ಕೃಷ್ಣ ಭಟ್ ಅವರ ಜೊತೆ ಮಾತನಾಡಿದ್ದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪಶು ವೈದ್ಯ, ಸಮಾಜಸೇವೆಯಲ್ಲಿ ನಿರತರಾಗಿರುವ ಸಜ್ಜನ. ಇಡ್ಕಿದು ಗ್ರಾಮದಲ್ಲಿ ಗೋ ಸಂಪತ್ತಿನ ರಕ್ಷಣೆ, ಬಯೋಗ್ಯಾಸ್ ಅಭಿವೃದ್ಧಿ, ಜಲ ಸಾಕ್ಷರತೆಯಲ್ಲಿ ಅವರ ಕೊಡುಗೆ ಗಣನೀಯ. ಸದ್ದಿಲ್ಲದೆ ಅವರು ಸಲ್ಲಿಸಿರುವ ಕೊಡುಗೆಯನ್ನು ಗಮನಿಸಿ, ಅವರ ಸಾಧನೆಯ ಬಗ್ಗೆ ವರದಿ ಬರೆಯೋಣವೆಂದು ಭಾವಿಸಿ ಪ್ರಸ್ತಾಪಿಸಿದ್ದೆ. ಆದರೆ ಅವರು ವಿನಯಪೂರ್ವಕ ವಾಗಿ ಹೇಳಿದರು-
ನಾವು ಗ್ರಾಮಸ್ಥರು ಎಲ್ಲ ಸಂಘಟಿಒತರಾಗಿ ಸಮಾಜಕ್ಕೋಸ್ಕರ ಕೆಲಸ ಮಾಡಿದ್ದೇವೆ. ಸಿದ್ಧಾಂತದ ಅಡಿಯಲ್ಲಿ ದುಡಿದಿದ್ದೇವೆ. ಇಲ್ಲಿ ನನ್ನದು ಎಂದು ಹೇಳಿಕೊಳ್ಳುವುದು ಇಷ್ಟವಾಗುತ್ತಿಲ್ಲ ಎಂದರು. ನಾನು ಆಯಿತು ಎಂದೆ. ಈ ಎರಡು ಉದಾಹರಣೆಗಳಲ್ಲಿ ಒಬ್ಬರು ವರದಿ ಮತ್ತಷ್ಟು ಹೆಚ್ಚು ಬರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಭಟ್ ತಾವು ಸುದ್ದಿಯಾಗಲು ಅರ್ಹತೆ ಇದ್ದರೂ ಪ್ರಚಾರ ಬಯಸಲಿಲ್ಲ.
ಸಮ್ಮನಸ್ಸಿಗೆ ಶರಣು
6 months ago
No comments:
Post a Comment