Monday 14 September 2009

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜೈತ್ರಯಾತ್ರೆ

ಅತ್ಯಂತ ಪ್ರಬಲ ಇಚ್ಛಾಶಕ್ತಿ, ಕಠಿಣ ಪರಿಶ್ರಮ ಮತ್ತು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಸತತ ಅನ್ವೇಷಣೆ ಇದ್ದಲ್ಲಿ ಬಡತನ ಅಡ್ಡಿಯಾಗುವುದಿಲ್ಲ, ಅಕಾರಶಾಹಿ ವ್ಯವಸ್ಥೆಯ ತೊಡಕುಗಳು ಶಾಶ್ವತ ನಿಲ್ಲುವುದಿಲ್ಲ ಎಂಬುದಕ್ಕೆ ಇದೋ ಇಲ್ಲಿದೆ ಈ ಅಪರೂಪದ ವಿಜ್ಞಾನಿಯ ಸಾಕ್ಷಿ !
ಇವರು ಅಪ್ಪಟ ಕನ್ನಡಿಗರೇ ಎಂಬುದು ಹೆಮ್ಮೆಯ ಸಂಗತಿ. ಬೇಕಾದರೆ ನೋಡಿ. ಈ ದೇಶದಲ್ಲಿ ರಾಜಕಾರಣಿಗಳ ಮಕ್ಕಳು ಅಪ್ಪನ ಹೆಸರಿನಲ್ಲಿ ಸುಲಭವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಮಂತ್ರಿಗಳಾಗುತ್ತಾರೆ. ಪ್ರಖ್ಯಾತ ತಾರೆಯರ ನಾಮ ಬಲದ ಮಹಿಮೆಯಿಂದ ಅವರ ಮಕ್ಕಳು ನಟರಾಗುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಯಾಗುತ್ತಾರೆ. ಇದೆಲ್ಲ ವಿಶೇಷವೂ ಅಲ್ಲ. ಆದರೆ ದುರದೃಷ್ಟವಶಾತ್ ಇನ್ನೂ ಲಕ್ಷಾಂತರ ಪ್ರತಿಭಾವಂತ ಬಡ ಮಕ್ಕಳು ಆರ್ಥಿಕ ಅನಾನುಕೂಲದ ಪರಿಣಾಮ ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶದಿಂದ ವಂಚಿತರಾಗಿ ಕೊರಗುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಇಂತಹ ನೋವಿನ ಮೌನವನ್ನು ಆಲಿಸಬಹುದು. ಅಂಥ ಕಣ್ಣೀರ ಕಥೆಗಳನ್ನೇ ಕಿರು ಪರದೆಯಲ್ಲಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸುವ ಟಿ.ವಿ ಚಾನೆಲ್‌ಗಳ ತಂತ್ರಗಾರಿಕೆಗೂ ಈಗ ಬರವಿಲ್ಲ. ಇದೆಂಥಾ ಪ್ರಜಾಪ್ರಭುತ್ವ ಎಂದು ನಿಟ್ಟುಸಿರಿಡಬಹುದು. ಆದರೆ ಅಂತಹ ಅನಾಥ ಪ್ರಜ್ಞೆಯ ಲಕ್ಷಾಂತರ ಮಕ್ಕಳಿಗೆ ಅನನ್ಯ ಸ್ಪೂರ್ತಿಯನ್ನು ತುಂಬಬಲ್ಲ ಅಸದೃಶ ಯಶೋಗಾಥೆ ಇಲ್ಲಿದೆ. ಅವರ ಹೆಸರು ಡಾ. ಶಾಮ ಭಟ್.
ಕಾಸರಗೋಡಿನ ಎಡನೀರು ಸಮೀಪ ಪೊಟ್ಟಿಪ್ಪಲದಲ್ಲಿ ವೆಂಕಟೇಶ್ವರ ಭಟ್ ಮತ್ತು ಗಂಗಮ್ಮ ದಂಪತಿಯ ಪುತ್ರರಾಗಿ ೧೯೪೯ರಲ್ಲಿ ಶಾಮ ಭಟ್ ಜನಿಸಿದರು. ಎಂಟು ಜನ ಮಕ್ಕಳ ಕುಟುಂಬವದು. ಎಡನೀರಿನಂತಹ ಕುಗ್ರಾಮದಲ್ಲಿ ಪ್ರಾಥಮಿಕ , ಪ್ರೌಢ ಶಿಕ್ಷಣದ ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಗಳಿಸಿದರು. ವಿದ್ಯಾಭ್ಯಾಸದ ಅವಯಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪಿಯುಸಿ ನಂತರ ಆರ್ಥಿಕ ಸಂಕಷ್ಟದ ಪರಿಣಾಮ ಮೂರು ವರ್ಷ ಓದು ಮುಂದುವರಿಸಲಾಗದೆ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಒಪ್ಪೊತ್ತಿನ ಅನ್ನಾಹಾರಕ್ಕೂ ಬವಣೆಪಟ್ಟಿರುವ ಭಟ್ಟರ ಅಂದಿನ ದಿನಗಳನ್ನು ವಿವರಿಸುವ ಉದ್ದೇಶವೂ ಇಲ್ಲಿಲ್ಲ.
ಆದರೆ ಗಮನಿಸಲೇಬೇಕಾದ ಅಂಶವೇನೆಂದರೆ ಅಂಥ ದುರ್ಭರ ಸಂದರ್ಭದಲ್ಲಿಯೂ, ಸಹಾಯ ಹಸ್ತ ನೀಡಲು ಕೆಲ ಬಂಧುಗಳು ನಿರಾಕರಿಸಿದಾಗಲೂ, ಉನ್ನತ ಅಧ್ಯಯನದ ಹಂಬಲವನ್ನು ಮಾತ್ರ ಅವರು ಕೈಬಿಟ್ಟಿರಲಿಲ್ಲ. ಅದಕ್ಕಾಗಿ ಅನ್ವೇಷಣೆಯ ಮಾರ್ಗವನ್ನು ಬಲವಾಗಿ ನಂಬಿ ಅಪ್ಪಿಕೊಂಡರು. ಕೊನಗೆ ಅದುವೇ ಫಲ ಕೊಟ್ಟಿತು. ಉಡುಪಿಯಲ್ಲಿ ಶ್ರೀ ಕೃಷ್ಣ ಮಠದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಅಶನ ಸೇರಿದಂತೆ ಅನುಕೂಲ ಮಾಡಿಕೊಡಲಾಗಿತ್ತು. ಅದರ ಸೌಲಭ್ಯವನ್ನು ಪಡೆದ ಭಟ್, ಜತೆಗೆ ಕಲಿಕೆಯಲ್ಲಿ ತಪಸ್ಸಿನಂತೆ ತೊಡಗಿಸಿಕೊಂಡರು. ವಿಜ್ಞಾನ ವಿಚಾರಗಳತ್ತ ಅತೀವ ಆಸಕ್ತಿ ಆಗಲೇ ಅವರಲ್ಲಿತ್ತು. ಈ ಕುರಿತ ಚರ್ಚೆ, ರಸ ಪ್ರಶ್ನೆ, ವಿಚಾರಗೋಷ್ಠಿಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಪ್ರಜಾಮತ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಲೇಖನ, ಕವಿತೆಗಳನ್ನೂ ಬರೆದಿದ್ದರು. ಹರ ಗೋವಿಂದ ಖುರಾನಾ ಅವರ ಪ್ರಖ್ಯಾತ ಸಂಶೋಧನೆಗಳ ಬಗ್ಗೆ ಟೈಮ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದು ಭಟ್ಟರಿಗೆ ಅದಮ್ಯ ಸ್ಪೂರ್ತಿ ನೀಡಿತ್ತು. ಅದನ್ನು ಆಧರಿಸಿ ಪ್ರೊಟೀನ್ ಸಿಂಥೆಸಿಸ್ ಬಗ್ಗೆ ತಾವೇ ಮಾದರಿಯೊಂದನ್ನು ರಚಿಸಿದ ಶಾಮ ಭಟ್ಟರ ಪ್ರತಿಭೆ ಕಾಲೇಜಿನ ಗಮನ ಸೆಳೆದಿತ್ತು. ಈಗಲೂ ಅವರು ಸಿದ್ಧಪಡಿಸಿದ್ದ ಆ ಮಾದರಿ ಪೂರ್ಣಪ್ರಜ್ಞ ಕಾಲೇಜಿನಲ್ಲಿದೆ. ನಂತರ ಮಣಿಪಾಲದ ಕೆಎಂಸಿಯಲ್ಲಿ ಮೂರು ವರ್ಷ ಬಯೋ ಕೆಮಿಸ್ಟ್ರಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಎನ್ನಿಸಿಕೊಂಡರು. ಆಗ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಬಿಟ್ಟರೆ ಬೇರೆ ಯಾವ ಕ್ಷೇತ್ರಕ್ಕೆ ಉತ್ತೇಜನ ಇತ್ತು ಹೇಳಿ ? ಬಯೋ ಕೆಮಿಸ್ಟ್ರಿಯಲ್ಲಿ ಇದ್ದವರು ನಾಲ್ಕೇ ಮಂದಿ. ಸ್ವಂತ ಅಧ್ಯಯನವೇ ಉಳಿದ ದಾರಿಯಾಗಿತ್ತು. ಆದರೆ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಪ್ರವೇಶ ಪಡೆದ ನಂತರ ಶಾಮ ಭಟ್ಟರ ಪ್ರತಿಭೆಗೆ ಪ್ರಜ್ವಲವಾದ ವೇದಿಕೆ ಸಿಕ್ಕಂತಾಯಿತು. ಮುಂದಿನದ್ದೆಲ್ಲ ಜೈವಿಕ ತಂತ್ರಜ್ಞಾನ ಪ್ರಪಂಚದಲ್ಲಿ ಭಟ್ಟರ ಜೈತ್ರಯಾತ್ರೆ.
ಸ್ನೇಹಿತರ ನೆರವು, ಸ್ಕಾಲರ್‌ಶಿಪ್ ಸಹಾಯ ಪಡೆದು ಅಮೆರಿಕಕ್ಕೆ ತೆರಳಿದ ಶಾಮ ಭಟ್ಟರು ಫಿಲಿಡೆಲಿಯಾದ ಪೆನಿನ್ಸುಲ್ವೇನಿಯಾ ವಿಶ್ವ ವಿದ್ಯಾಲಯದ ನ್ಯೂರಾಲಜಿ ವಿಭಾಗದ ಅಭಿವೃದ್ಧಿಗೆ ಶ್ರಮಿಸಿದರು. ೧೯೮೩ರಿಂದ ೧೯೯೪ರ ತನಕ ವೈಜ್ಞಾನಿಕ ಸಂಶೋಧನೆ ನಡೆಸಿದರು. ಆಗತಾನೇ ಎಚ್‌ಐವಿ/ಏಡ್ಸ್ ಕುರಿತ ಸಂಶೋಧನೆಗಳು ಪ್ರವರ್ಧಮಾನವಾಗುತ್ತಿತ್ತು. ಎಚ್‌ಐವಿ ಮಿದುಳಿನ ನರಕೋಶಗಳನ್ನು ಹೇಗೆ ಪ್ರವೇಶಿಸುತ್ತವೆ ಎಂಬ ಮಹತ್ವದ ಸಂಶೋಧನೆಯನ್ನು ಶಾಮ ಭಟ್ಟರು ನಡೆಸಿದರು. ವಿಶ್ವಾದ್ಯಂತ ಈ ಸಂಶೋಧನೆ ಗಮನಸೆಳೆಯಿತು. ಪ್ರತಿಷ್ಠಿತ ಸಯನ್ಸ್ ನಿಯತಕಾಲಿಕದಲ್ಲಿ ಭಟ್ಟರ ಸಂಶೋಧನಾ ಲೇಖನ ಪ್ರಕಟವಾಯಿತು.
ಶಾಮ ಭಟ್ಟರು ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿಯೇ ಮುಂದಿನ ಭವಿಷ್ಯ ಮತ್ತು ಬದುಕು ನಡೆಸಬಹುದಿತ್ತು. ಆದರೆ ಅವರು ಭಾರತಕ್ಕೆ ಮರಳಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಹಲವರು ಭಟ್ಟರ ನಡೆಯನ್ನು ಟೀಕಿಸಿದ್ದರು. ಆದರೆ ಅವರು ನಿಲುವು ಬದಲಿಸಲಿಲ್ಲ. ಅದರಿಂದ ಭಾರತಕ್ಕೆ ಮತ್ತು ಬೆಂಗಳೂರಿಗೆ ಎಷ್ಟು ಉಪಯೋಗವಾಯಿತು ನೋಡಿ.
೧೯೯೩ರಲ್ಲಿ ಭಾರತಕ್ಕೆ ಬಂದಿದ್ದಾಗ ಶಾಮ ಭಟ್ಟರು ಇಲ್ಲಿ ಎಚ್‌ಐವಿ ಸೇರಿದಂತೆ ಅನೇಕ ರೋಗಗಳನ್ನು ಪತ್ತೆ ಹಚ್ಚುವ ಸಲಕರಣೆಗಳಿಗೆ (ಕಿಟ್) ಅಗಾಧ ಕೊರತೆ ಇರುವುದನ್ನು ಕಂಡರು. ಹೀಗಾಗಿ ತಾವೇ ಅಂತಹ ಕಂಪನಿ ಆರಂಭಿಸಲು ನಿರ್ಧರಿಸಿದರು. ಆದರೆ ಅಕಾರಶಾಹಿಯ ಕಪಿಮುಷ್ಠಿಯ ನಡುವೆ ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸಾಲಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಹೋಗಿ ಮನವಿ ಸಲ್ಲಿಸಿದರೆ, ನೀವು ಸಹಭಾಗಿತ್ವದ ಅಡಿಯಲ್ಲಿ ಕಂಪನಿ ಸ್ಥಾಪಿಸಿ ಎಂಬ ಪುಕ್ಕಟೆ ಸಲಹೆ ಬೇರೆ ಕೊಟ್ಟು ಸತಾಯಿಸಿದರು. ಇಲ್ಲ, ಸ್ವತಃ ತಾವೇ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತಜ್ಞರೆಂಬುದನ್ನು ಇಲಾಖಾಕಾರಿಗಳಿಗೆ ಮನವರಿಕೆ ಮಾಡಿಸಲೂ ಹರ ಸಾಹಸಪಡಬೇಕಾಯಿತು. ಆದರೆ ಭಟ್ಟರು ಸುಮ್ಮನಿರಲಿಲ್ಲ. ಕೃಷ್ಣ ಭಟ್, ರಮೇಶ್ ಭಟ್ ಒಳಗೊಂಡಂತೆ ಕೆಲವು ಮಂದಿ ಮಿತ್ರರು, ಸಹಪಾಠಿಗಳು ಕೈಜೋಡಿಸಿದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ೧೯೯೪ರಲ್ಲಿ ಭಟ್ ಬಯೋ-ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಸ್ತಿತ್ವಕ್ಕೆ ಬಂತು.
ಅತ್ಯುನ್ನತ ಗುಣಮಟ್ಟದ ಡಯೋಗ್ನೋಸ್ಟಿಕ್ ಕಿಟ್‌ಗಳು ಮತ್ತು ಜೈವಿಕ ತಂತ್ರಜ್ಞಾನ ಉತ್ಪನ್ನಗಳನ್ನು ಕಂಪನಿ ನಾನಾ ಹಂತಗಳಲ್ಲಿ ಉತ್ಪಾದಿಸುತ್ತಾ ಬಂದಿತು. ಆರಂಭದಲ್ಲಿ ಪ್ರಗ್ನೆನ್ಸಿ ಕಿಟ್‌ಗಳನ್ನು ಉತ್ಪಾದಿಸಲಾಯಿತು. ನಂತರ ಒಂದೊಂದೇ ಉತ್ಪನ್ನಗಳು ಸೇರಿಕೊಂಡವು. ಈಗ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ೪೦ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕಂಪನಿ ಪೂರೈಸುತ್ತಿದೆ. ಕಂಪನಿಯ ಪ್ರೆಗ್ನೆನ್ಸಿ, ಎಚ್‌ಐವಿ, ಹೆಪಟೈಟಿಸ್, ಮಲೇರಿಯಾ, ಡೆಂಗ್ಯು, ಚಿಕೂನ್ ಗೂನ್ಯಾ, ಸಿಫಿಲಿಸ್, ಕ್ಷಯ ಮುಂತಾದ ರೋಗಗಳ ಪತ್ತೆಗೆ ಸಂಬಂದಿಸಿದ ಡಯೋಗ್ನಾಸ್ಟಿಕ್ ಸಾಧನಗಳು ವೈದ್ಯಕೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಒಂದೂವರೆ ಕೋಟಿ ರೂ. ಬಂಡವಾಳದಲ್ಲಿ ಆರಂಭವಾದ ಕಂಪನಿ, ಇಂದು ಹನ್ನೆರಡೂವರೆ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಈ ಮೊತ್ತ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ೨೫೦ಕ್ಕೂ ಹೆಚ್ಚು ಸಿಬ್ಬಂದಿಗೆ ಕಂಪನಿ ಉದ್ಯೋಗ ಒದಗಿಸಿದೆ. ಸುಸಜ್ಜಿತ ಪ್ರಯೋಗಾಲಯವನ್ನು, ಸಂಪರ್ಕ ಜಾಲವನ್ನು, ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದೆ. ಗುಣಮಟ್ಟಕ್ಕಾಗಿ ಐಎಸ್‌ಒ ೯೦೦೧, ಐಎಸ್‌ಒ ೧೩೪೮೫, ಸಿಇ ಮತ್ತು ಜಿಎಂಪಿ ಪ್ರಮಾಣ ಪತ್ರವನ್ನು ಗಳಿಸಿದೆ. ಕಳೆದ ಜೂ. ೧೪ರಂದು ಕಂಪನಿಯ ನೂತನ ಕಟ್ಟಡ ಉದ್ಘಾಟನೆ ಸಂಭ್ರಮದಿಂದ ನಡೆದಿದೆ. ಕಂಪನಿಯ ಸಿಬ್ಬಂದಿಗೆ, ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿಯೂ ದತ್ತಿನಿಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಜತೆಗೆ ಸಂಶೋಧನೆಯೂ ಮುಂದುವರಿದಿದೆ.
ಹಾಗಂತ ಜೈವಿಕ ತಂತ್ರಜ್ಞಾನ ಕ್ಷೇತ್ರ ಕೂಡ ಬೆಳೆಯುತ್ತಿರುವ ವಲಯ. ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಚೀನಾ, ಕೊರಿಯಾ ಇತ್ಯಾದಿ ರಾಷ್ಟ್ರಗಳ ಪೈಪೋಟಿಯೂ ಇದೆ. ಆದರೆ ಇವುಗಳನ್ನೆಲ್ಲ ಮೆಟ್ಟಿ ನಿಂತರೆ ಭವಿಷ್ಯ ಪ್ರಕಾಶಿಸದಿರದು. ಇಂಥ ಸನ್ನಿವೇಶದಲ್ಲಿ ಭಾರತದಲ್ಲಿ ಇದ್ದುಕೊಂಡೇ ಸಾಸಬಹುದು ಎಂಬುದಕ್ಕೆ ಶಾಮ ಭಟ್ಟರೇ ಸಾಕ್ಷಿ. ಪ್ರತಿಭಾ ಪಲಾಯನವಾದ ತದ್ವಿರುದ್ಧವಾದಾಗ ಭಾರತೀಯರಿಗೆ ಅದರ ಪ್ರಯೋಜನ ಸಿಗುತ್ತದೆ. ಅದಕ್ಕೆ ತಕ್ಕ ಬೆಲೆ ಸಾಧಕರಿಗೂ ದೊರೆಯುತ್ತದೆ. ಆದರೆ ಸವಾಲುಗಳನ್ನು ಎದುರಿಸುವ ಛಾತಿ, ಸಮಸ್ಯೆಗಳಿಗೆ ಪರಿಹಾರವನ್ನು ಅನ್ವೇಷಿಸುವ ಗುಣ ಜಾಗೃತವಾಗಿರಬೇಕು. ಹಾಗಿದ್ದಾಗ ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸುವ ತಾಪತ್ರಯ ತಪ್ಪುತ್ತದೆ. ಸ್ವದೇಶಿ ತಂತ್ರಜ್ಞಾನ ಬೆಳೆಯುತ್ತದೆ.
ಓ ದೇವರೇ, ಈ ಜಗತ್ತಿನಲ್ಲಿ ಜೀವನದಲ್ಲಿ ಮುಂದೆ ಬರೋದು ಹೇಗೆ ಎಂದೇ ಗೊತ್ತಾಗುತ್ತಿಲ್ಲ ಎಂದು ಅನವರತ ಕೊರಗುವ ಲಕ್ಷಾಂತರ ಮಂದಿಗೆ ಭಟ್ಟರ ಯಶೋಗಾಥೆ ಅದಮ್ಯ ಸೂರ್ತಿ ನೀಡದಿರದು.

No comments:

Post a Comment